ಯಶಸ್ವಿ ಯುರೋಪ್ ಪ್ರವಾಸಕ್ಕೆ ಸಾಣೇಹಳ್ಳಿಯಲ್ಲಿ ಅಭಿನಂದನಾ ಸಮಾರಂಭ

‘ನಾವು ಬಾಲ್ಯದಲ್ಲಿ ರಾಣೇಬೆನ್ನೂರು ಸಹ ನೋಡಿರಲಿಲ್ಲ.’

ಸಾಣೇಹಳ್ಳಿ

ಇಲ್ಲಿನ ಎಸ್ಸೆಸ್ ರಂಗಮಂದಿರದಲ್ಲಿ ನಡೆದ ರಾಷ್ಟ್ರೀಯ ಬಸವ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಂ. ಸುರೇಶ ಅವರು ಮೇ ೮ರಿಂದ ೨೯ರವರೆಗೆ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ‘ವಚನ ಸಂಸ್ಕೃತಿ’ ಪ್ರಸಾರದ ಹಿನ್ನಲೆಯಲ್ಲಿ ನೂರು ಜನರ ಯುರೋಪ್ ಪ್ರವಾಸವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಅಭಿನಂದನಾ ಸಮಾರಂಭ ನಡೆಯಿತು.

ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು; ನಾವು ಬಾಲ್ಯದಲ್ಲಿ ರಾಣೇಬೆನ್ನೂರು ಸಹ ನೋಡಿರಲಿಲ್ಲ. ಆದರೆ ಇಷ್ಟೆಲ್ಲಾ ವಿದೇಶದ ಪ್ರವಾಸ ಆಗಿದ್ದು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಕೃಪಾಶೀರ್ವಾದದಿಂದ. ಅವರಿಲ್ಲದಿದ್ದರೆ ಯಾರದೋ ಮನೆಯಲ್ಲಿ ಸಗಣಿ ಬಾಚಿ, ದನ ಕಾಯುವ ಪರಿಸ್ಥಿತಿ ಬರುತ್ತಿತ್ತು.

ನಮ್ಮ ಗುರುಗಳು ಪ್ರವಾಸಪ್ರಿಯರು. ಅವರ ಪ್ರವಾಸ ಶರಣ ತತ್ವದ ಚಿಂತನೆಯಲ್ಲಿ ನಡೀತಾ ಇತ್ತು. ಆ ಪ್ರವಾಸದಲ್ಲಿ ನಾಟಕ, ವಚನಗೀತೆಗಳನ್ನಾಡಿಸುತ್ತಿದ್ದರು. ಅದು ನಮ್ಮ ಮೇಲೆ ಪ್ರೇರಣೆ ನೀಡ್ತು. ಸ್ವಾಮಿಗಳಾದಮೇಲೆ ಬೇರೆ ಬೇರೆ ದೇಶಗಳಲ್ಲಿ ಪ್ರವಾಸ ಮಾಡಿದ್ದಿದೆ. ಈ ಪ್ರವಾಸಕ್ಕೆ ಘನತೆಯನ್ನು ತಂದುಕೊಟ್ಟವರು ಸುರೇಶ. ಅಲ್ಲಿ ನಮ್ಮ ಕಲಾವಿದರನ್ನು ಕರೆದುಕೊಂಡು ಹೋಗಿ ಕಾರ್ಯಕ್ರಮ, ನಾಟಕ, ಸಂಗೀತ ಕಾರ್ಯಕ್ರಮ ಏರ್ಪಡಿಸಿದ್ದು ಹೆಮ್ಮೆಯ ವಿಷಯ. ಪ್ರವಾಸ ಉಣ್ಣಲಿಕ್ಕಾಗಿ, ಮಜಾಮಾಡಲಿಕ್ಕಾಗಿ ಅಲ್ಲ. ಅದರ ಮೂಲಕ ನಮ್ಮ ಬದುಕನ್ನು ಬದಲಾಯಿಸುವುದಕ್ಕಾಗಿ. ನಮ್ಮ ಅಂತರಂಗದ ಕದವನ್ನು ಹೇಗೆ ತೆರೆದುಕೊಳ್ಳಬೇಕು ಎನ್ನುವುದೇ ಈ ಪ್ರವಾಸದ ಉದ್ದೇಶ.

ಪ್ರವಾಸಕ್ಕೆ ಹೋಗುವುದು ವ್ಯಕ್ತಿಗತ ಪ್ರತಿಷ್ಠೆಯನ್ನು ಮೆರೆಯುವುದಕ್ಕಲ್ಲ. ವ್ಯಕ್ತಿತ್ವವನ್ನು ವಿಕಾಸಗೊಳಿಸುವುದಕ್ಕಾಗಿ. ಮನುಷ್ಯ ತಪ್ಪು ಮಾಡುವುದು ಸಹಜ. ಆ ತಪ್ಪನ್ನು ತಿದ್ದಿಕೊಂಡರೆ ಅವನು ದೊಡ್ಡ ವ್ಯಕ್ತಿಯಾಗುವನು. ಮನುಷ್ಯನಿಗೆ ಶ್ರದ್ಧೆ ಮತ್ತು ಸದ್ಭಾವನೆ ಇದ್ದರೆ ಸುಲಭವಾಗಿ ಸವಾಲುಗಳನ್ನು ಎದುರಿಸಬಹುದು.

ಸಾನ್ನಿಧ್ಯ ವಹಿಸಿ ಬೆಟ್ಟಹಳ್ಳಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ; ನಾವು ಅದ್ಭುತವಾದ ದೇಶವನ್ನು ನೋಡಿಕೊಂಡು ಬಂದಿದ್ದೇವೆ. ಹೊಸ ದೇಶಗಳನ್ನು ನೋಡಿದಾಗ ಹೊಸ ಆಲೋಚನೆ, ಹೊಸ ಅನುಭವ, ಹೊಸ ವಿಚಾರಗಳು ಬರುತ್ತವೆ. ಯಾರು ಚೆನ್ನಾಗಿ ಪ್ರವಾಸ ಮಾಡುವರೋ ಅವರು ಚೆನ್ನಾಗಿ ಸಂಪಾದನೆ ಮಾಡುವರು. ವಿದೇಶದ ಅಭಿವೃದ್ಧಿಗೆ ಭಾರತ ದೇಶದ ಕೊಡುಗೆ ಅಪಾರ. ವಿದೇಶದಲ್ಲಿ ಮಾನವೀಯ ಮೌಲ್ಯಗಳಿಗೆ ಬೆಲೆಗಳಿಲ್ಲ. ಮಾನವೀಯತೆಗೆ, ಪ್ರೀತಿಗೆ ಹೆಚ್ಚು ಬೆಲೆ ಕೊಡುವುದು ನಮ್ಮ ಭಾರತ. ನಮ್ಮ ದೇಶವನ್ನು ಹೆಚ್ಚು ಪ್ರೀತಿಸೋಣ. ಅಲ್ಲಿನ ವಾಸ್ತುಶಿಲ್ಪಗಳಿಗಿಂತ ಭಾರತ ದೇಶದ ವಾಸ್ತುಶಿಲ್ಪ ತುಂಬಾ ಅದ್ಭುತ. ವೈಯಕ್ತಿಕ ಪ್ರವಾಸವೇ ಬೇರೆ. ಸಮೂಹ ಪ್ರವಾಸವೇ ಬೇರೆ. ಇದರ ಬಗ್ಗೆ ಪ್ರತಿಯೊಬ್ಬರಿಗೂ ತರಬೇತಿ ಮುಖ್ಯ. ಯಾವುದೇ ಪ್ರವಾಸ ಮಾಡಿದರೂ ಒಂದು ಚೌಕಟ್ಟಿನೊಳಗೆ ಇರಬೇಕು. ನೆಲದ ಕಾನೂನಿಗೆ ಗೌರವ ಕೊಟ್ಟು ನಡೆಯಬೇಕು. ಪ್ರವಾಸದಲ್ಲಿ ಖುಷಿ ಅನುಭವಗಳನ್ನು ಕಟ್ಟಿಕೊಂಡು ಬಂದಿದ್ದೇವೆ. ಈ ಪ್ರವಾಸದ ಸಮರ್ಥ ಚಾಲಕರು ಪಂಡಿತಾರಾಧ್ಯ ಶ್ರೀಗಳು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಜಾಗತಿಕ ಲಿಂಗಾಯತ ಮಹಾಸಭಾದ ಬೆಳಗಾವಿ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ, ಯುರೋಪ್ ಪ್ರವಾಸ ಮೋಜು ಮಸ್ತಿಗಾಗಿ ಮಾಡಿದ್ದಲ್ಲ. ವಚನ ಸಾಹಿತ್ಯ ಹಾಗೂ ಬಸವತತ್ವವನ್ನು ಹಬ್ಬಿಸಬೇಕು ಎನ್ನುವ ಕಾರಣಕ್ಕಾಗಿ. ಈ ಪ್ರವಾಸ ಅತ್ಯಂತ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಸೌಲಭ್ಯವನ್ನು ಒದಗಿಸಿದರು. ವಿದೇಶದಲ್ಲಿ ನಾಲ್ಕೈದು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಹೆಮ್ಮೆಯ ವಿಷಯ. ವಿದೇಶದಲ್ಲಿನ ಶಿಸ್ತು, ಸ್ವಚ್ಛತೆ ನೋಡಿ ನಾವು ಕಲಿಯುವಂಥ ಪಾಠ ಸಾಕಷ್ಟಿದೆ ಎಂದರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸಾಹಿತಿ ಬಿ.ಆರ್. ಪೋಲೀಸಪಾಟೀಲ; ಪ್ರತಿಯೊಬ್ಬರು ಹೊರ ದೇಶದ ವೈಶಿಷ್ಟ್ಯತೆಯನ್ನು ತಿಳಿದುಕೊಳ್ಳಲು ಹಾಗೂ ನಮ್ಮ ಸಂಸ್ಕೃತಿ ವೈಶಿಷ್ಟ್ಯತೆಯನ್ನು ಅವರಿಗೆ ತಿಳಿಸಲು ವಿದೇಶ ಪ್ರವಾಸ ಅನುಕೂಲವಾಗುವುದು. ಯುರೋಪ್ ದೇಶದವರಿಗಿಂತ ನಾವು ಆರ್ಥಿಕವಾಗಿ ನೂರು ವರ್ಷ ಹಿಂದೆ ಇದ್ದೇವೆ. ಆದರೆ ನೈತಿಕವಾಗಿ ಸಾವಿರ ವರ್ಷ ನಾವು ಮುಂದಿದ್ದೇವೆ. ಯಾವ ದೇಶದಲ್ಲಿ ಸ್ವಾಭಿಮಾನಿಗಳಿರುವರೋ ಆ ದೇಶ ಮುಂದುವರಿಯುವುದು. ಯುರೋಪ್ ದೇಶಕ್ಕೆ ಹೋಗಿ ದೇಶದ ಮೂಗಿಗೆ ಮುಕ್ಕಾಗದಂತೆ ನೋಡಿಕೊಳ್ಳಬೇಕು, ಎಲ್ಲರನ್ನು ಪ್ರೀತಿಸಬೇಕು ಎನ್ನುವುದನ್ನು ನೋಡಿ ಕಲಿತುಕೊಂಡು ಬಂದಿದ್ದೇವೆ. ಹೊರದೇಶದಲ್ಲಿ ಇರುವುದೆಲ್ಲವೂ ಚೆಂದ ಎನ್ನುವುದು ಒಂದು ಭ್ರಮೆ. ಮರ್ಯಾದೆ ಎನ್ನುವಂಥದ್ದು ಯಾರಾದರೂ ಕಲಿಯಬೇಕಾದರೆ ಭಾರತವನ್ನು ನೋಡಿ ಕಲಿಯಬೇಕು ಎಂದರು.

ವಚನ ಟಿವಿಯ ನಿರ್ದೇಶಕರಾದ ಸಿದ್ದು ಯಾಪಲಪರವಿ ಮಾತನಾಡಿ; ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣ ಪಂಡಿತಾರಾಧ್ಯ ಶ್ರೀಗಳು. ನಮ್ಮ ಬದುಕು ಅಸ್ತಿರ. ಬದುಕು ಅಸ್ತಿರವಾಗುವುದಕ್ಕಿಂತ ಪೂರ್ವದಲ್ಲಿ ಪ್ರತಿಯೊಬ್ಬರು ವಿದೇಶ ಪ್ರವಾಸ ಮಾಡಬೇಕು. ಯಾರು ಆ ದೇಶದ ಕಾನೂನನ್ನು ಪರಿಪಾಲಿಸುವರೋ ಅವರು ಮಾತ್ರ ವಿದೇಶ ಪ್ರವಾಸ ಮಾಡಬೇಕು. ಗುರುಗಳ ಸಾನ್ನಿಧ್ಯದಲ್ಲಿ ಪ್ರವಾಸ ಮಾಡುವ ಉದ್ದೇಶ ಶಿಸ್ತು, ಸಮಯ ಪಾಲನೆ, ಬಸವಾದಿ ಶಿವಶರಣರ ತತ್ವ ಪ್ರಚಾರಕ್ಕಾಗಿ. ಈ ಪ್ರವಾಸದಲ್ಲಿ ೬೫ಕ್ಕಿಂತ ಹೆಚ್ಚು ವಯಸ್ಸಿನವರು ಬಂದಿದ್ದರು. ಓಡಾಡೋದಕ್ಕೆ ಆಗದೇ ಇದ್ದರೂ ‘ರೊಕ್ಕ ಕೊಟ್ಟ ಛಲ, ನೋಡಬೇಕು ಎನ್ನುವ ಚಟದಿಂದ’ ಪ್ರವಾಸವನ್ನು ಮಾಡಿಕೊಂಡು ಬಂದ್ವಿ.

ವಿದೇಶದ ಸಂಸ್ಕೃತಿ ಮಾತಿನಂತೆ ನಡೆ ನಡೆಯಂತೆ ಮಾತು. ನಿಜವಾದ ಬಸವತತ್ವಕ್ಕೆ ಅನುಗುಣವಾಗಿ ಬದುಕುವಂಥವರು. ಕೊರೋನಾ ಎನ್ನುವುದು ಒಂದು ಕುತಂತ್ರ. ಮೊನ್ನೆ ಬೆಂಗಳೂರಿನಲ್ಲಿ ನಡೆದ ಕ್ರಿಕೇಟ್ ವಿಜಯದುಂದುಬಿಯಲ್ಲಿ ಕೋರೋನ ದಿಕ್ಕಾಪಾಲಾಯಿತು. ವಿದೇಶದಲ್ಲಿ ಭಾರತಕ್ಕೆ ವಿಶೇಷ ಮಾನ್ಯತೆ ಇದೆ. ವಿದೇಶ ನೋಡೋದ್ರಲ್ಲಿ ಭಾರತೀಯರು ನಿಸ್ಸೀಮರು. ಉಸಿರು ನಿಲ್ಲುವವರೆಗೆ ಹೊಸದನ್ನು ಓದಬೇಕು, ನೋಡಬೇಕು, ಅನುಭವಿಸಬೇಕು. ಎಚ್ಚರವಿದ್ದು ಬದುಕಿನ ಕ್ಷಣವನ್ನು ಅನುಭವಿಸಬೇಕು. ಸೂಕ್ಷ್ಮತೆ ಐತಿಹಾಸಿಕ ಪ್ರಜ್ಞೆಯುಳ್ಳವನಿಗೆ ಬರಬೇಕು. ಅವನಿಗೆ ಅನುಭೂತಿ ಇರಬೇಕು. ಗುಣಸ್ವಭಾವದಿಂದ, ಆತ್ಮವಿಶ್ವಾಸ, ಸದಾಶಯ, ಎಲ್ಲರ ಹಾರೈಕೆಯಿಂದ ಸುರೇಶ ಬದುಕುಳಿದಿದ್ದಾರೆ ಎಂದರು.

ಅಭಿನಂದನೆ ಸ್ವೀಕಾರ ಮಾಡಿ ಮಾತನಾಡಿದ ಟಿಸಿಎಸ್ ಡ್ರೀಮ್‌ನ ಮುಖ್ಯಸ್ಥ ಎಸ್.ಎಂ. ಸುರೇಶ್ ಮಾತನಾಡಿ; ನನಗೆ ಮೇ ೨೪ರಂದು ಹೃದಯಘಾತ ಆಯಿತು. ವೈದ್ಯರ ಬಳಿ ಹೋದಾಗ ಇನ್ನು ಎರಡು ಗಂಟೆ ಮಾತ್ರ ಬದುಕುಳಿಯುವುದು, ಆದ್ದರಿಂದ ತುರ್ತಾಗಿ ಆಪರೇಷನ್ ಮಾಡಿಸಲು ತಿಳಿಸಿದರು. ಆದರೆ ಅದನ್ನು ತಿರಸ್ಕರಿಸಿದೆ. ಕಾರಣ ಭಾರತೀಯರ ವೈದ್ಯರ ಮನಸ್ಥಿತಿ ಇಟಲಿಯ ವೈದ್ಯರಲ್ಲಿ ಇರುತ್ತದೆ ಎನ್ನುವ ಕಾರಣಕ್ಕಾಗಿ. ಆದ್ದರಿಂದ ಪರಮಪೂಜ್ಯರ ಆಶೀರ್ವಾದದಿಂದ ಬದುಕಿ ಇಂದು ನಿಮ್ಮ ಮುಂದೆ ನಿಂತು ಮಾತನಾಡಿದ್ದೇನೆ ಎಂದರು.

ಆರಂಭದಲ್ಲಿ ಶಿವಸಂಚಾರದ ಕಲಾವಿದರಾದ ನಾಗರಾಜ ಹೆಚ್.ಎಸ್, ಜ್ಯೋತಿ ಕೆ. ಹಾಗೂ ಶರಣಕುಮಾರ ವಚನಗೀತೆಗಳನ್ನು ಹಾಡಿದರು. ರವಿಕುಮಾರ ಸ್ವಾಗತಿಸಿದರೆ ರಾಜು ಬಿ. ನಿರೂಪಿಸಿದರು. ಅನ್ನಪೂರ್ಣ ಮೊಳಗಲಿ ವಚನಗೀತೆಗಳನ್ನು ಹಾಡಿದರು. ವಿದ್ಯಾರ್ಥಿ ಅದಿತಿ ಭರತನಾಟ್ಯ ಪ್ರದರ್ಶಿಸಿದರು.

ಪ್ರವಾಸದ ಅನುಭವಗಳನ್ನು ರಾಮಲಿಂಗಪ್ಪ, ನಾ ರೇವಣ್ಣ, ಅಶೋಕ ಮಳಗಲಿ, ಪುರದಾಳ, ರವಿಕುಮಾರ ಹಂಚಿಕೊಂಡರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Dv8eAoC8n2rJOtZKYt4o86

Share This Article
Leave a comment

Leave a Reply

Your email address will not be published. Required fields are marked *