ಧಾರವಾಡ
ನಗರದ ಕೃಷಿ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗಾಗಿ ಬುದ್ಧ ಬಸವ ಅಂಬೇಡ್ಕರ್ ವಿಚಾರ ಸಂಕಿರಣ ರವಿವಾರ ನಡೆಯಿತು.
ಸಂತೋಷ್ ಲಾಡ್ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಲವಾರು ಪೂಜ್ಯರು ಮತ್ತು ಚಿಂತಕರು ವಿವಿಧ ಗೋಷ್ಠಿಗಳಲ್ಲಿ ಮಾತನಾಡಿದರು. ಇದರಲ್ಲಿ ಮೂವರು ಮಹಾನ್ ಚಿಂತಕರ ತತ್ವಗಳನ್ನು ಸಮಕಾಲೀನ ಸಂದರ್ಭದಲ್ಲಿ ಚರ್ಚಿಸಲಾಯಿತು.

ವಿಚಾರ ಸಂಕಿರಣವನ್ನು ಸಂತೋಷ್ ಲಾಡ್ ಫೌಂಡೇಶನ್ನ ಸಂಸ್ಥಾಪಕ ಸಂತೋಷ್ ಲಾಡ್ ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ , ಬುದ್ಧ, ಬಸವ ಮತ್ತು ಅಂಬೇಡ್ಕರ್ ತಮ್ಮ ಕಾಲದಲ್ಲಿ ಸಮಾಜದ ದುಷ್ಟ ರೂಢಿಗಳ ವಿರುದ್ಧ ಹೋರಾಡಿದರು. ಇಂದಿನ ಯುವಜನರು ಈ ಚಿಂತನೆಗಳನ್ನು ಅರ್ಥಮಾಡಿಕೊಂಡು, ಸಾಮಾಜಿಕ ಸಾಮರಸ್ಯದ ಕನಸನ್ನು ಸಾಕಾರಗೊಳಿಸಬೇಕು ಎಂದು ಕರೆ ನೀಡಿದರು.

ಹೊಸದುರ್ಗದ ಕುಂಚಿಟಗಮಠ ಶಾಂತವೀರ ಸ್ವಾಮೀಜಿ ಮಾತನಾಡುತ್ತ ಬಸವಣ್ಣನವರ ವಿಚಾರಗಳು ವೇದಿಕೆಗೆ ಸೀಮಿತ ಮಾಡಬಾರದು. ಇವ ನಮ್ಮವ ಇವ ನಮ್ಮವ ಎಂದು ವೇದಿಕೆ ಮೇಲೆ ಹೇಳಿ ಕೆಳಗಿಳಿದ ಮೇಲೆ ಇವ ಯಾವ ಜಾತಿ ಎಂದು ಕೇಳತಾರೆ, ಈ ಪಿಡುಗು ಹೋಗಬೇಕು ಅಂದಾಗ ಬಸವಣ್ಣನ ಸಾಮಜಿಕ ನ್ಯಾಯಕ್ಕೆ ಬೆಲೆ ಬರತ್ತದೆ. ಜಾತಿ ವ್ಯವಸ್ಥೆಯಲ್ಲಿ ನೊಂದು ಬೆಂದು ಎಲ್ಲ ದಲಿತ, ಹಿಂದುಳಿದ, ಶೋಷಿತ ಸಮುದಾಯದ ಸ್ವಾಮಿಗಳಾದ ನಾವು ಸಾಮರಸ್ಯದಿಂದ ಬದುಕಬೇಕೆಂದು ಇಲ್ಲಿ ಸೇರಿದ್ದೇವೆ ಎಂದರು.

ಕಾಯಕ ಮತ್ತು ದಾಸೋಹ ವಿಷಯದ ಮೇಲೆ ಮಾತನಾಡಿದ ಚಿಂತಕ ರಂಜಾನ್ ದರ್ಗಾ ಸಮಾಜದ ಕಟ್ಟಕಡೆಯ ಮನುಷ್ಯನನ್ನು ಮೊಟ್ಟಮೊದಲು ಗುರುತಿಸಿದ್ದು, ಕಾಯಕದ ಮಹತ್ವವನ್ನು ಜಗತ್ತಿಗೆ ತೋರಿಸಿದ್ದು ಬಸವಣ್ಣ ಎಂದರು.
‘ಸಮಾನತೆ ಮತ್ತು ಅಂತರ್ಜಾತಿ ವಿವಾಹ’ ವಿಷಯದ ಮೇಲೆ ಪ್ರೊ. ವಿನಯಾ ಒಕ್ಕುಂದ ಮಾತನಾಡುತ್ತ ಅಸ್ಪೃಶ್ಯರು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದಾಗ ಸ್ವಾತಂತ್ರ್ಯ, ಸಮಾನತೆಯೆ ನಮ್ಮ ಜನ್ಮಸಿದ್ಧ ಹಕ್ಕು ಎಂದ ಬಸವಣ್ಣ ವಚನ ಚಳುವಳಿಯ ನೇತಾರರಾಗಿ ನಮಗೆ ಕಂಡುಬರುತ್ತಾರೆ ಎಂದರು.

“ಶರಣರ ಷಟ್ಸ್ಥಲ – ವೈಜ್ಞಾನಿಕ ನೋಟ’ ಕುರಿತು ವೈದ್ಯ ಅವಿನಾಶ ಕವಿ ಮಾತನಾಡುತ್ತ, ಷಟ್ಸ್ಥಲಗಳ ಮಹತ್ವವನ್ನು ವೈಜ್ಞಾನಿಕವಾಗಿ ನೋಡಬೇಕು ಮತ್ತು ನಮ್ಮ ಮನಸ್ಸು ವಿಕಾಸವಾಗಬೇಕಾದರೆ ಅದನ್ನು ಅಳವಡಿಸಿಕೊಳ್ಳಬೇಕು ಎಂದರು.
ಬುದ್ಧನ ಬೋಧನೆಯಲ್ಲಿ ಮಹಿಳೆಯರ ಸ್ಥಾನಮಾನ ಕುರಿತು ಉಪನ್ಯಾಸಕಿ ಅನಸೂಯಾ ಕಾಂಬಳೆ ಮಾತನಾಡುತ್ತ, ಬುದ್ಧರ ಬೋಧನೆಗಳು ಮಹಿಳೆಯರ ಜೀವನದಲ್ಲಿ ಬದಲಾವಣೆಗಳನ್ನು ತಂದವು ಎಂದರು. ಡಾ. ಸದಾಶಿವ ಮಿರ್ಜಿ ಮಾತನಾಡುತ್ತಾ, ಈ ದೇಶದಿಂದ ಶಾಸ್ತ್ರಗಳು ಹೋದಾಗ ಮಾತ್ರ ಜಾತಿವಿನಾಶ ಸಾಧ್ಯ ಎಂದರು.

ಶೀಲಾಧರ ಮುಗಳಿ, ಎಂ. ವಿಶ್ವನಾಥ , ಸದಾನಂದ ಸುಗಂಧಿ, ಹರಿಹರ ಕನಕಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಡಾ. ಸಂಜೀವ ಕುಲಕರ್ಣಿ ಮುಂತಾದವರೂ ಮಾತನಾಡಿದರು.
ಚಿತ್ರದುರ್ಗದ ಭೋವಿ ಗುರುಪೀಠದ ಶ್ರೀ ಸಿದ್ಧರಾಮೇಶ್ವರ ಮಹಾಸ್ವಾಮಿಗಳು
ಸಮಾರೋಪದ ನುಡಿಗಳನ್ನು ಹೇಳುತ್ತಾ, ಬುದ್ಧ ಬಸವ ಅಂಬೇಡ್ಕರ್ ವಿಚಾರ ಸಂಕಿರಣದಲ್ಲಿ ನಮಗೆ ಗೊತ್ತಿರದ ಎಷ್ಟೊ ವಿಚಾರಗಳು ತಿಳಿದವು. ಸಂತೋಷ ಲಾಡ್ ಅವರ ಈ ಸಾಹಸ ಎಲ್ಲರಲ್ಲೂ ಉತ್ಸಾಹ ತುಂಬಿದೆ. ಮುಂದಿನ ಕಾರ್ಯಕ್ರಮ ಎಲ್ಲಿ ಮಾಡೋಣ ಎಂದು ಲಾಡ್ ಅವರು ಈಗಾಗಲೆ ನಮಗೆ ಕೇಳಿದ್ದಾರೆ. ಮೂವರು ಮಹಾಪುರುಷರ ವಿಚಾರಗಳನ್ನು ಮುಖ್ಯವಾಗಿ ವಿದ್ಯಾರ್ಥಿಗಳು ತಿಳಿದುಕೊಂಡರೆ ಅವರ ಶ್ರಮ ಸಾರ್ಥಕ ಎಂದರು.

ವಾಲ್ಮೀಕಿ ಪ್ರಸನ್ನಾನಂದ ಮಹಾ ಸ್ವಾಮಿಗಳು, ಬಸವ ಮಾಚಿದೇವ ಮಹಾಸ್ವಾಮಿಗಳು, ಬಸವ ಕುಂಬಾರ ಗುಂಡಯ್ಯ ಮಹಾಸ್ವಾಮಿಗಳು, ಇಮ್ಮಡಿ ಬಸವಪ್ರಭು ಕೇತೇಶ್ವರ ಸ್ವಾಮೀಜಿ, ವೇಮಾನಾನಂದ ಮಹಾಸ್ವಾಮಿಗಳು, ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು, ಜಗದ್ಗುರು ಶ್ರೀ ಭಾರತೀ ಅಪ್ಪಣ್ಣ ಮಹಾಸ್ವಾಮಿಗಳು, ಶ್ರೀ ಬಸವ ಬೃಂಗೇಶ್ವರ ಮಹಾಸ್ವಾಮಿಗಳು ಉಪಸ್ಥಿತರಿದ್ದರು.
ಈ ವಿಚಾರ ಸಂಕಿರಣದಲ್ಲಿ ಶಾಸಕ ಎನ್.ಎಚ್. ಕೋನರೆಡ್ಡಿ, ವಿವಿಧ ಮಠಾಧೀಶರು, ಕ್ರೈಸ್ತ ಪಾದ್ರಿಗಳು ಸಾನಿಧ್ಯ ವಹಿಸಿದ್ದರು. ಧಾರವಾಡ ಜಿಲ್ಲಾಧಿಕಾರಿ ಶ್ರೀಮತಿ ದಿವ್ಯಪ್ರಭು ಉಪಸ್ಥಿತರಿದ್ದರು. ಶಿಕ್ಷಣ ತಜ್ಞರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಚಿಂತಕರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
*ಸಚಿವ ಸಂತೋಷ ಲಾಡ್ ಅವರು ಸಾವಿರಾರು ವಿದ್ಯಾರ್ಥಿಗಳನ್ನು ಸೇರಿಸಿ ಬಸವಣ್ಣನವರ ವಿಚಾರಗಳನ್ನು ತಿಳಿಸಲು ಸಾಧ್ಯವಾಗುತ್ತದೆಯಾದರೆ ಲಿಂಗಾಯತ ರಾಜಕಾರಿಣಿಗಳಿಗೆ ಜಗದ್ಗುರುಗಳಿಗೆ ಯಾಕೆ ಸಾಧ್ಯವಾಗೋದಿಲ್ಲ ?*