ಅರಕೇರಿ
ತಾಲೂಕಿನ ಜಾಗೀರಜಾಡಲದಿನ್ನಿಯ ನೀಲಾಂಬಿಕಾ ಬಸವ ಯೋಗಾಶ್ರಮದಲ್ಲಿ ರವಿವಾರ ಬಸವತತ್ವ ಚಿಂತನಾಗೋಷ್ಠಿ ನಡೆಯಿತು.
ಸಾನಿಧ್ಯವನ್ನು ಯೋಗಾಶ್ರಮದ ಅಧ್ಯಕ್ಷರಾದ ಪೂಜ್ಯ ವೀರಭದ್ರ ಸ್ವಾಮಿಗಳು ವಹಿಸಿ, ಬಸವಾದಿ ಶರಣ ಅಂಬಿಗರ ಚೌಡಯ್ಯ ಹಾಗೂ ಶರಣ ಕುಂಬಾರ ಗುಂಡಯ್ಯನವರ ಕುರಿತು ಅನುಭಾವದ ನುಡಿಗಳನ್ನು ಆಡಿದರು.
ಶರಣ ಅಂಬಿಗರ ಚೌಡಯ್ಯನವರ ಊರು ಚೌಡದಾನಪುರ, ರಾಣೆಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ. ಹಾಗೂ ಅವರ ಜನನ 1120 ಜನವರಿ 21 ನೇ ತಾರೀಕು. ವಿಶ್ವಗುರು ಬಸವಣ್ಣನವರ ಸಮಕಾಲಿನರು. ತಂದೆ ವಿರುಪಾಕ್ಷಿ ತಾಯಿ ಪಂಪಾದೇವಿ. ಇವರ ಮೂಲ ಹೆಸರು ಚೌಡೇಶ. ಹೆಂಡತಿ ಸುಲೋಚನ. ಇವರ ಕಾಯಕ ದೋಣಿಯನ್ನು ನಡೆಸುವುದು. ಇವರು 330 ವಚನಗಳನ್ನು ಬರೆದಿದ್ದಾರೆ. ವೀರಗಣಾಚಾರಿ, ನಿಜಶರಣ ಎಂದು ಹೆಸರು ಪಡೆದವರು.

ಇವರ ವಚನಗಳು ಅದರಕ್ಕೆ ಕಹಿ, ಉದರಕ್ಕೆ ಸಿಹಿಯಾಗಿವೆ. ಇವರ ಒಂದು ವಚನದಲ್ಲಿ ಕಟ್ಟಿದ ಲಿಂಗವ ಬಿಟ್ಟು, ಬೆಟ್ಟದ ಲಿಂಗಕ್ಕೆ ಹೋಗಿ ಹೊಟ್ಟೆ ಅಡಿಯಾಳಾಗಿ ಬೀಳುವ ಲೊಟ್ಟೆಮೂಳರ ಕಂಡು, ಎಡಪಾದ
ರಕ್ಷೆಯನ್ನು ತೆಗೆದುಕೊಂಡು ಲೊಟಲೊಟನೆ ಹೊಡಿ ಎಂದಾತ ನಮ್ಮ ವೀರ ಅಂಬಿಗರ ಚೌಡಯ್ಯ ನಿಜಶರಣ ಎಂದು ಕಠೋರವಾಗಿ ಬರೆದಿದ್ದಾರೆ. ಇಷ್ಟಲಿಂಗವನ್ನು ಕಟ್ಟಿಕೊಂಡ ಬಳಿಕ ಸ್ಥಾವರ ಲಿಂಗವನ್ನು ಪೂಜೆ ಮಾಡಬಾರದು ಎಂದವರು ಹೇಳಿದ್ದಾರೆ.
ಶರಣ ಕುಂಬಾರ ಗುಂಡಯ್ಯನವರ ಜನ್ಮಸ್ಥಳ ಬೀದರ್ ಜಿಲ್ಲೆಯ ಭಾಲ್ಕಿ. ಇವರು ಸಹ ಬಸವಣ್ಣನವರ ಕಾಲದ ಶರಣರು, ಎಂಬುದನ್ನು ಹರಿಹರ ತಮ್ಮ ರಗಳೆಯಲ್ಲಿ ಬರೆಯುತ್ತಾರೆ. ಇವರ ತಂದೆ ತಂದೆ ಸತ್ಯಣ್ಣ, ತಾಯಿ ಸಂಗಮ್ಮ. ಇವರಿಗೊಬ್ಬ ಸಹೋದರಿ ನೀಲಾಲೋಚನೆ ಹೆಂಡತಿ ಕೇತಲಾದೇವಿ. ಇವರ ವಚನಗಳು ದೊರೆಕಿಲ್ಲ. ಇವರ ಹೆಂಡತಿಯ ಎರಡು ವಚನಗಳು ದೊರಕಿವೆ ಎಂದು ತಮ್ಮ ಆಶೀರ್ವಚನ ಮೂಲಕ ಹೇಳಿ, ಶರಣರ ದಾರಿಯಲ್ಲಿ ನಾವೆಲ್ಲ ಸಾಗೋಣ ಎಂದು ವೀರಭದ್ರ ಸ್ವಾಮೀಜಿ ಹೇಳಿದರು.
ಬಸವಾದಿ ಶಿವಶರಣರ ಪ್ರಾರ್ಥನೆಯನ್ನು ಶರಣ ಬೆಟ್ಟಪ್ಪ ಕಸ್ತೂರಿ ಹತ್ತನೂರು ಹಾಗೂ ಶರಣ ಹನುಮಂತ ವಾಲೇಕಾರ್ ಜಾಗೀರ ಜಾಡಲದಿನ್ನಿ, ಶರಣ ವಿನೋದಕುಮಾರ್ ಹತ್ತನೂರು ನಡೆಸಿಕೊಟ್ಟರು.

ನಿರೂಪಣೆಯನ್ನು ಶರಣ ಚಂದ್ರು ಅತಿಥಿ ಉಪನ್ಯಾಸಕರು ನಿಲೊಗಲ್ ಸ.ಪಪೂ ಕಾಲೇಜು, ಸಿರವಾರ ಇವರು ವಚನಗಳ ಮೂಲಕ ಬಹಳ ನಡೆಸಿಕೊಟ್ಟರು. ಸಂಗೀತವನ್ನು ಶರಣ ಮಸ್ತಾನಸಾಬ್ ಸಿರವಾರ ಹಾಗೂ ದಾಸೋಹವನ್ನು ಶರಣ ಡಾ. ನಬೀಸಾಬ ಹಿರೇದನ್ನಿ ಕೌತಾಳ್ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಜಾಗೀರ ಜಾಡಲದಿನ್ನಿ, ಮರಾಠ ದೇವತಗಲ್ಲ, ಅತ್ತನೂರು, ನಿಲೊಗಲ್ಲು, ಸಿರವಾರ ಗ್ರಾಮಗಳ ಊರಿನ ಶರಣ ಶರಣೆಯರು ಭಾಗವಹಿಸಿದ್ದರು.