ಧಾರವಾಡ
ಬಸವಾದಿ ಶರಣ ಕುಂಬಾರ ಗುಂಡಯ್ಯನವರ ಸ್ಮರಣೋತ್ಸವ ಕಾರ್ಯಕ್ರಮ ಬುಧವಾರ ನಡೆಯಿತು. ಕಲಾಭವನದ ಆವರಣದಲ್ಲಿರುವ ಬಸವ ಕೇಂದ್ರದ ಕಾರ್ಯಾಲಯದಲ್ಲಿ, ಕರ್ನಾಟಕ ಪ್ರದೇಶ ಕುಂಬಾರ ಸಂಘ ಜಿಲ್ಲಾ ಘಟಕ, ಬಸವಕೇಂದ್ರ ಧಾರವಾಡ ಇವುಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮೊದಲಿಗೆ ವಿಶ್ವಗುರು ಬಸವಣ್ಣನವರು ಹಾಗೂ ಶರಣ ಕುಂಬಾರ ಗುಂಡಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಕುಂಬಾರ ಗುಂಡಯ್ಯನವರ ಕುರಿತು ಅನುಭಾವವನ್ನು ಶರಣೆ ಸರೋಜಮ್ಮ ಹುನಗುಂದ ನೀಡಿ, ನಂತರ ಗುಂಡಯ್ಯನವರ ಕುರಿತು ಸ್ವರಚಿತ ಕವನವನ್ನು ಹಾಡಿದರು. ಕ.ರಾ. ನೌಕರರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಬಸವರಾಜ ಚಕ್ರಸಾಲಿ ಮುಖ್ಯ ಅತಿಥಿಯಾಗಿದ್ದರು. ಬಸವ ಕೇಂದ್ರದ ಕಾರ್ಯದರ್ಶಿ ಬಸವಂತ ತೋಟದ, ಕುಂಬಾರ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಚಕ್ರಸಾಲಿ, ಪ್ರದೇಶ ಕುಂಬಾರ ಸಂಘದ ಬಸವರಾಜ ಕುಂಬಾರ ವೇದಿಕೆಯಲ್ಲಿದ್ದರು.

ಅಧ್ಯಕ್ಷತೆಯನ್ನು ನಿವೃತ್ತ ಜಿಲ್ಲಾ ನ್ಯಾಯಾಧೀಶ ಜಿ.ಎಂ. ಕುಂಬಾರ ವಹಿಸಿ ಮಾತನಾಡುತ್ತ, ಬಸವಾದಿ ಶರಣರ ಆಶಯದಂತೆ ನಾವೆಲ್ಲ ಒಂದಾಗಿ ಬದುಕಬೇಕಾದ ಅವಶ್ಯಕತೆಯಿದೆ ಎಂದರು.
ಕುಂಬಾರ ಸಮಾಜದ ಮೂವರು ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಿಶೇಷ ಅಹ್ವಾನಿತರಾಗಿ ಹಡಪದ ಅಪ್ಪಣ್ಣ ಸಮಾಜದ ಶರಣ ಗಂಗಾಧರ ಹಡಪದ, ಮೇದಾರ ಸಂಘದ ಶರಣ ಅರವಿಂದ ಶಿರಹಟ್ಟಿ, ಮಡಿವಾಳ ಮಾಚಿದೇವರು ಸಂಘದ ಶರಣೆ ಶುಭಂ ಪರೀತ, ಧಾರವಾಡ ನ್ಯೂಸ್ ಸಂಪಾದಕ ಶರಣ ಬಸವರಾಜ ಆನೆಗುಂದಿ, ಮಾಜಿ ಸೈನಿಕ ಶರಣ ಶಿವಾನಂದ ಸಲಕಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದರು.
ಧರ್ಮಣ್ಣ ಕುಂಬಾರ, ಬಿ.ಎಂ. ಕುಂಬಾರ, ಶಂಕರ ಕುಂಬಾರ ಕಾರ್ಯಕ್ರಮದ ದಾಸೋಹಿಗಳಾಗಿದ್ದರು.

ಡಾ. ರಾಜಶೇಖರ ಕುಂಬಾರ ಸ್ವಾಗತವನ್ನು, ಬೇಬಿನಂದಾ ನಿರೂಪಣೆಯನ್ನು, ಬಸವರಾಜ ಚಕ್ರಸಾಲಿ ಶರಣು ಸಮರ್ಪಣೆ ಮಾಡಿದರು. ಅನೇಕ ಶರಣ ಶರಣೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
💐