ಗುಳೇದಗುಡ್ಡ
ಬಸವಕೇಂದ್ರದಿಂದ ಹಮ್ಮಿಕೊಂಡ ವಾರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮವು ಶನಿವಾರ ಸಂಜೆ ಶರಣ ಮಲ್ಲಪ್ಪ ಗಡೇದ ಅವರ ಮನೆಯಲ್ಲಿ ಜರುಗಿತು. ಆಯ್ದುಕೊಂಡ ವಚನ ಪುಣ್ಯಸ್ತ್ರೀ ಲಿಂಗಮ್ಮ ತಾಯಿಯವರದು:
ತನು ನಷ್ಟವಾದಡೇನಯ್ಯಾ, ಮನ ನಷ್ಟವಾಗದನ್ನಕ್ಕ?
ವಾಕ್ಕು ನಷ್ಟವಾದಡೇನಯ್ಯಾ, ಬೇಕು ಬೇಡೆಂಬುದಳಿಯದನ್ನಕ್ಕ?
ಅಂಗಸುಖ ನಷ್ಟವಾದಡೇನಯ್ಯಾ, ಪಟಲ ಹರಿಯದನ್ನಕ್ಕ?
ಮನ ಮುಗ್ಧ ವಾದಡೇನಯ್ಯಾ, ಅಹಂ ಎಂಬುದ ಬಿಡದನ್ನಕ್ಕ?
ಇವೆಲ್ಲರೊಳಗಿದ್ದು ವಲ್ಲಭನೆನಿಸಿ ಕೊಂಬವರ ನುಡಿಯ ಬಲ್ಲರು.
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
ವಚನವನ್ನು ಚಿಂತನೆಗೆ ಎತ್ತಿಕೊಂಡ ಪ್ರೊ. ಶ್ರೀಕಾಂತ ಗಡೇದ ಅವರು ಪುಣ್ಯಸ್ತ್ರೀ ಲಿಂಗಮ್ಮ ತಾಯಿಯವರ ಕಿರು ಪರಿಚಯವನ್ನು ಮಾಡಿಕೊಡುತ್ತ, ವಚನ ನಿರ್ವಚನವನ್ನು ಪ್ರಾರಂಭಿಸಿದರು. ತನು-ಮನಗಳ ಹತೋಟಿಯಲ್ಲಿಡಲು ಶಿವಯೋಗ ಸಹಕಾರಿಯಾಗುತ್ತದೆ. ಪ್ರತಿನಿತ್ಯ ಒಂದು ಸಲವಾದರೂ ಇಷ್ಟಲಿಂಗಾನುಸಂಧಾನ ಮಾಡಿಕೊಳ್ಳಬೇಕು. ಮೂಲ ಚೈತನ್ಯದ ಅಂಶದ ಪ್ರತೀಕ ಜೀವ ಚೈತನ್ಯ ಹೊರಗಡೆ ಹುಡುಕುವುದರ ಪರ್ಯಾಯವಾಗಿ ಲಿಂಗಾನುಸಂಧಾನದಿಂದ ಸಾಧ್ಯ. ಅದೇ ನಾವಾಗಬಹುದು. ಬಯಲಿನಲ್ಲಿ ಬಯಲಾಗುವ ರಹಸ್ಯ ಮಾರ್ಗವನ್ನು ವಚನಗಳಲ್ಲಿ ಶರಣರು ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ನಂತರ ಮಹಾಂತೇಶ ಸಿಂದಗಿಯವರು ಮಾತನಾಡುತ್ತ, ಈ ಭುವಿಯಲ್ಲಿ ಸಮಾನತೆ ಮತ್ತು ಸ್ವಾತಂತ್ರ್ಯ ಸ್ತ್ರೀಯರಿಗೆ ಮೊದಲು ಕೊಟ್ಟಿದ್ದು ಶರಣರ ಸಂಗದಲ್ಲಿ ಕಂಡುಬರುತ್ತದೆ. ಶರಣರು ಅದನ್ನು ಹೇಳುವುದರ ಜೊತೆಗೆ ಸಹಜವಾಗಿ ಕಾರ್ಯರೂಪಕ್ಕೆ ತಂದು ತೋರಿಸಿದ್ದಾರೆ. ಇಡೀ ಸ್ತ್ರೀ ಕುಲ ಇದನ್ನು ಅರಿತುಕೊಂಡು ಶರಣ ಸಿದ್ಧಾಂತವನ್ನು ಅಪ್ಪಿಕೊಳ್ಳಬೇಕು. ಬದುಕಿನ ಸದಾ ಸುಖಕ್ಕೆ ಶರೀರ ದಂಡನೆಯಿಂದ ಅಸಾಧ್ಯ, ಮನಕ್ಕೆ ಸತ್ಯದ ಅರಿವನ್ನು ಮಾಡಿಕೊಡುವುದರ ಮೂಲಕ ದಂಡಿಸಿಬೇಕು ಅಂದರೆ ಮಾತ್ರ ಬಯಲ/ಮೂಲ ಸ್ಥಿತಿ ತಲುಪಲು ಸಾಧ್ಯ.

ಲಿಂಗವಂತನಿಗೆ ಛಲವಿರಬೇಕು, ಯಾವುದರಲ್ಲಿ ಅಂದರೆ ತನ್ನ ಕಾಯಕ ಫಲವನ್ನಷ್ಟೇ ಜಂಗಮಕ್ಕೆ ಮತ್ತು ತನ್ನ ಬದುಕಿಗೆ ಬಳಸಬೇಕೆನ್ನುವ ಛಲವಿರಬೇಕು. ದೈವ ಒಂದೇ ಅಂದರೆ ಬಯಲ ಸ್ಥಿತಿ, ತಲುಪುವ ಮಾರ್ಗ ಒಂದೇ, ಬೇರೆ ಮಾರ್ಗವನ್ನು ಅನುಸರಿಸಬಾರದೆಂಬ ಛಲವಿರಬೇಕು.
ದೈಹಿಕ-ಮಾನಸಿಕ ಸುಖವನ್ನು ಹಾತೊರೆಯದೆ, ಆಂತರಿಕ ಸುಖವನ್ನು ಅರಿಯುವ ಮಾರ್ಗ ಹುಡುಕಿ, ತಾನು ಕಂಡುಕೊಂಡ ಸತ್ಯದ ಅರಿವಿನಲ್ಲಿ ದೃಢವಾದ ನಂಬಿಕೆಯಲ್ಲಿರಬೇಕು. ಇದೆಲ್ಲ ಲಿಂಗಮ್ಮ ತಾಯಿಯವರ ವಚನಗಳಲ್ಲಿ ಕಂಡುಬರುತ್ತದೆ ಎಂದು ತಿಳಿಸಿದರು.
ನಂತರ ಮಹಾಮನೆಯವರಾದ ಮಲ್ಲಪ್ಪ ಗಡೇದ ಅವರು ಮಾತನಾಡುತ್ತ, ಪುಣ್ಯಸ್ತ್ರೀ ಲಿಂಗಮ್ಮ ತಾಯಿ ಮತ್ತು ಹಡಪದ ಅಪ್ಪಣ್ಣನವರ ಬದುಕಿನ ಕುರಿತಾಗಿ ಸುಧೀರ್ಘವಾಗಿ ಮಾತನಾಡಿದರು. ಬಸವಕೇಂದ್ರವರು, ಜಿಡ್ಡುಗಟ್ಟಿದ ಆಚರಣೆಗಳ ಆಕರವಾಗಿರುವ ನಮ್ಮ ಸಮಾಜದಲ್ಲಿ ಶರಣರ ಪರಿಚಯ ಮತ್ತು ಅವರು ಬದುಕಿದ ಮಾರ್ಗವನ್ನು ಜನಮನಕ್ಕೆ ತಲುಪುವ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಸಮಾರೋಪವನ್ನು ಅನುಭಾವಿಗಳಾಗಿರುವ ಪ್ರೊ. ಮಹಾದೇವಯ್ಯ ನೀಲಕಂಠಮಠ ಅವರು, ಈವರೆಗೆ ಅನುಭವ ನೀಡಿರುವ ಅನುಭಾವವನ್ನು ಸರಿಪಡಿಸುತ್ತ ಲಿಂಗಮ್ಮ ತಾಯಿಯವರ 113 ವಚನಗಳು ಮತ್ತು ಮಂತ್ರಗೋಪ್ಯ ಲಭ್ಯವಿರುತ್ತವೆ. ಲಿಂಗಮ್ಮ ತಾಯಿಯವರ ವಚನಗಳನ್ನು ಗಮನಿಸಿದಾಗ ಅವರು ಸದಾಸುಖಿ ಹೇಗಾದರು ಎಂಬುದು ಹೇಳಿಕೊಂಡಿದ್ದಾರೆ. ಅವರು ತಾವು ಶರಣರ ಸಂಗದಿಂದ ತಮ್ಮನ್ನು ತಾವು ತಿದ್ದುಕೊಳ್ಳಲು ಶರಣರ ಮಾರ್ಗದರ್ಶನವೇ ಕಾರಣ, ಅನೇಕ ಶರಣರನ್ನು ಸ್ಮರಿಸುವುದರ ಜೊತೆಗೆ ತಮ್ಮ ಅರಿವಿನ ಗುರುವಾಗಿರುವ ಚೆನ್ನಮಲ್ಲೇಶ್ವರರನ್ನು ನೆನೆಯುವುದನ್ನು ಮರೆಯುವದಿಲ್ಲ.
ವಚನದ ಕುರಿತು ಮಾತನಾಡುತ್ತ, ಈ ವಚನ ಹೇಗೆ ಇದೇ ಅಂದರೆ; ‘ಒಂದು ಕ್ರಿಯೆ ನಷ್ಟಮಾಡಿಕೊಂಡೆ ಅಂದರೆ ಸಾಲದು, ಅದಕ್ಕೆ ಪೂರಕವಾಗಿರುವ ಇನ್ನೊಂದು ಕ್ರಿಯೆಯು ನಷ್ಟವಾದರೆ ಅದು ಪೂರ್ಣವಾಗುತ್ತದೆ. ಮೇಲ್ನೋಟಕ್ಕೆ ತನು ನಷ್ಟ ಮಾಡಿಕೊಂಡೆ ಅಂತ ಭಾವಿಸಿಕೊಂಡರೆ ಅದಕ್ಕೆ ಆಧಾರವಾಗಿರುವ ಮನ ಕಲ್ಮಶವಾಗಿ ಹಾಗೆ ಉಳಿದರೆ ಅದು ಅಪೂರ್ಣ. ಮನ ನಷ್ಟವಾಗಬೇಕು ಅಂದರೆ ಮನ ನಿರ್ಲಪ್ತತೆಯಿಂದ ಕೂಡಿರಬೇಕು. ಹಾಗೆ ಮಾತು ಮೌನವಾದರೆ, ನಾವು ಏನೂ ಮಾತನಾಡುವದಿಲ್ಲ ಅಂತ ಅಲ್ಲ, ಮನದಲ್ಲಿ ಬೇಕು ಬೇಡಿಕೆಗಳು ಹುಟ್ಟದೇ ಇರುವುದು ವಾಕ್ಕು ನಷ್ಟವಾದಂತೆ, ಹೀಗೆ ಉಳಿದ ನಷ್ಟಗಳ ಬಗ್ಗೆ ಸವಿಸ್ತಾರವಾಗಿ ಅದ್ಭುತವಾಗಿ ತಿಳಿಸಿಕೊಟ್ಟರು.

ಪ್ರಾರಂಭದಲ್ಲಿ ಶರಣೆ ಜಯಶ್ರೀ ಬ. ಬರಗುಂಡಿ ಮತ್ತು ದಾನಮ್ಮ ಕುಂದರಗಿ ಹಾಗೂ ಸಂಗಡಿಗರಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು. ಕೊನೆಗೆ ಶರಣೆಯರಿಂದ ವಚನ ಮಂಗಲವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಕಾರ್ಯಕ್ರಮದ ಸಂಘಟಕರು ಶರಣು ಸಮರ್ಪಣೆ ಸಲ್ಲಿಸಿದರು.
ಕುಟುಂಬದ ಬಂಧುಗಳಲ್ಲದೆ ರಾಚಣ್ಣ ಕೆರೂರ, ಚಂದ್ರಶೇಖರ ತೆಗ್ಗಿ, ಹಡಪದ ಸಮಾಜದ ಕಾರ್ಯದರ್ಶಿ ಶಂಕ್ರಪ್ಪ ಐಹೊಳ್ಳಿ, ಶಶಿ ಪತ್ತಾರ, ಸಂಗನಬಸಪ್ಪ ಹಡಪದ, ಹಡಪದ ಸಮಾಜದ ಹಿರಿಯರಾದ ರವಿ ಹಡಪದ, ಸಂಗಮೇಶ ಹಡಪದ, ಪಾಂಡಪ್ಪ ಕಳಸಾ, ಪುತ್ರಪ್ಪ ಬೀಳಗಿ, ಸುರೇಶ ರಾಜನಾಳ, ಜೀವನ್ ರಾಠೋಡ, ಹಡಪದ ಸಮಾಜದ ಉಪಾಧ್ಯಕ್ಷರಾದ ಸಂಗಪ್ಪ ಮೇಸ್ತ್ರಿ, ಕಂಬಾಳಿಮಠ ಸರ್, ಪ್ರೊ. ಗಾಯತ್ರಿ ಕಲ್ಯಾಣಿ, ನೇತ್ರಾ ರಕ್ಕಸಗಿ, ದಾಕ್ಷಾಯಣಿ ತೆಗ್ಗಿ, ಕಸ್ತೂರಿ ಹಡಪದ, ಸಾವಿತ್ರಿ ಗಡೇದ, ಸಂಗಮ್ಮ ಬೇವೂರ, ಸುರೇಖಾ ಗೆದ್ದಲಮರಿ, ಸುಹಾಸಿನಿ ಬೀಳಗಿ, ಶ್ರೀದೇವಿ ಶೇಖಾ, ವಿಶಾಲಕ್ಷಿ ಗಾಳಿ ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.