‘ಐತಿಹಾಸಿಕ ಹಿನ್ನೆಲೆಯಲ್ಲಿ ವಚನ ಸಾಹಿತ್ಯ ಅಧ್ಯಯನವಾಗಲಿ’

ರಾಯಚೂರು

ಸಾಹಿತ್ಯ ಮತ್ತು ಸಂಗೀತ ಹಿನ್ನೆಲೆಯಲ್ಲಿ ವಚನ ಸಾಹಿತ್ಯವನ್ನು ಸೀಮಿತಗೊಳಿಸದೆ ಐತಿಹಾಸಿಕ ಹಿನ್ನೆಲೆಯಲ್ಲಿ ವಚನ ಸಾಹಿತ್ಯ ಅಧ್ಯಯನದ ಅವಶ್ಯಕತೆ ಇದೆ. ಪ್ರಶ್ನೆ ಮಾಡುವ ಸಂಸ್ಕೃತಿ ನೀಡಿದವರು, ಜೀವ ಸಂಸ್ಕೃತಿ ಪರಿಕಲ್ಪನೆ ನೀಡಿದವರು ವಚನಕಾರರು ಎಂದು ವಿಶ್ರಾಂತ ಇತಿಹಾಸ ಪ್ರಾಧ್ಯಾಪಕರಾದ ಡಾ. ಬಿ.ಸಿ. ಮಹಾಬಲೇಶ್ವರಪ್ಪ ಹೇಳಿದರು.

ಅವರು ನಗರದ ಕನ್ನಡ ಭವನದಲ್ಲಿ ನಡೆದ ಡಾ. ರೇಖಾ ಪಾಟೀಲ ಅವರ ‘ಚರಿತ್ರೆಯ ಹುಡುಕಾಟ’ ಕೃತಿ ಲೋಕಾರ್ಪಣೆಗೊಳಿಸಿ ವಿಶ್ಲೇಷಣಾತ್ಮಕವಾಗಿ ಇತಿಹಾಸದ ಮೇಲೆ ಬೆಳಕು ಚೆಲ್ಲಿ ಮಾತನಾಡಿದರು.

12ನೇ ಶತಮಾನದ ಅನುಭವ ಮಂಟಪ ಪ್ರಜಾಪ್ರಭುತ್ವದ ಪರಿಕಲ್ಪನೆಗೆ ನಾಂದಿಯಾಗಿದೆ. ರಾಜಪ್ರಭುತ್ವದ ಯುಗದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜಗತ್ತಿಗೆ ಸಾರಿದವರು. ಗುರು, ಲಿಂಗ, ಜಂಗಮ, ಕಾಯಕ, ದಾಸೋಹ ತತ್ವಗಳನ್ನು ನಿತ್ಯ ಬದುಕಿಗೆ ತಂದವರು ವಚನಕಾರರು. ಗುರುವೆಂದರೆ ಕಲಿಸುವವನು, ಅರಿಯದುದನ್ನು ಕಲಿಸುವವನು, ಅರಿತು ನಡೆಯುವುದನ್ನು ಅನುಭವ ಮಂಟಪದ ಎಲ್ಲರು ಪ್ರತಿಪಾದಿಸಿದ ವಿಚಾರಗಳಿಗೆ ಅಲ್ಲಮಪ್ರಭುಗಳ ಮುದ್ರೆಯೊಂದಿಗೆ ಸಾರ್ವಜನಿಕವಾಗಿ ಸಮಾಜದಲ್ಲಿ ಜಾರಿಯಾಗುತ್ತಿತ್ತು. ಅವುಗಳಿಗೆ ವಚನಗಳೇ ಸಾಕ್ಷಿ. ವಚನಕಾರರು ಸಾಮಾನ್ಯರೊಂದಿಗೆ ಬೆರೆತವರು.

ಪ್ರಜಾಪ್ರಭುತ್ವದ ಪರಿಕಲ್ಪನೆ ಯುರೋಪ್ ಇಂಗ್ಲೆಂಡ್ ದೇಶಗಳಿಂದ ಬಂದುದಲ್ಲ. ಅದಕ್ಕಿಂತ ಮುಂಚಿತವಾಗಿಯೇ ಕರ್ನಾಟಕದ ಬಸವಾದಿ ಶರಣರು ಅನುಭವ ಮಂಟಪದ ಮೂಲಕ ಕಾರ್ಯರೂಪಕ್ಕೆ ತಂದರು. ನೈಜ ಮತ್ತು ಸತ್ಯದ ಬೆಳಕಿನಲ್ಲಿ ಇತಿಹಾಸ ಪುನರ್ ರಚನೆಯ ಅಗತ್ಯತೆ ಅತಿ ಅವಶ್ಯವಾಗಿದೆ. ಇತಿಹಾಸ ಕೇವಲ ಆಕರಗಳ ಸಂಗ್ರಹವಲ್ಲ. ಲಭ್ಯವಿರುವ ಆಧಾರಗಳನ್ನು ಅಧ್ಯಯನ ಮಾಡಿ ಸತ್ಯ, ನೈಜ ಸಂಗತಿಗಳು ಇತಿಹಾಸದಲ್ಲಿ ಬರಬೇಕು. ಗಾಂಧೀಜಿಯವರ ಅಸಹಕಾರ ಚಳುವಳಿ, ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣೆ ಚಳುವಳಿ ಸ್ವಾತಂತ್ರ್ಯ ಚಳುವಳಿಗಷ್ಟೇ ಸೀಮಿತವಾಗದೆ ಭಾರತೀಯ ಸಂಸ್ಕೃತಿಯನ್ನು ಪುನರಜ್ಜೀವನಗೊಳಿಸುವ, ಸಮಾಜ ಸುಧಾರಣೆಯತ್ತ ಸಾಗಲು ಅಸ್ತ್ರವಾಗಿವೆ. ಇತಿಹಾಸ ಭವಿಷ್ಯದ ಸುಭದ್ರ ಸಮಾಜಕ್ಕೆ ಬೆಳಕಾಗಲೆಂದು ಮಹಾಬಲೇಶ್ವರಪ್ಪ ತಮ್ಮ ಉದ್ಘಾಟನಾ ಮಾತುಗಳನ್ನು ಆಡಿದರು.

ಕೃತಿ ಕುರಿತು ಪರಿಚಯ ಮಾಡಿದ ಇತಿಹಾಸ ಉಪನ್ಯಾಸಕರಾದ ಡಾ. ಪದ್ಮಜಾ ದೇಸಾಯಿ, ಸ್ಥಳೀಯ ಇತಿಹಾಸ ಸಂಶೋಧಕರಿಗೆ ಈ ಕೃತಿ ಉತ್ತಮ ಆಕರವಾಗಲಿದೆ. ಪ್ರತಿಯೊಂದು ಲೇಖನಗಳು ಐತಿಹಾಸಿಕ ವಿಷಯಗಳ ಮಹತ್ವವನ್ನು ಎತ್ತಿ ಹಿಡಿಯುತ್ತವೆ ಎಂದು ಪರಿಚಯಿಸಿದರು.

ಮುಖ್ಯ ಅತಿಥಿಗಳಾಗಿದ್ದ ಡಾ. ಚನ್ನಬಸವ ಹಿರೇಮಠ ಮಾತನಾಡಿ, ಭಾಷೆ ಮತ್ತು ಇತಿಹಾಸ ಬರಹಗಾರರಿಗೆ ಸಾಧನಗಳು. ಈ ಕೃತಿಯಲ್ಲಿ ಸಾಮಾನ್ಯ ಓದುಗರನ್ನು ಮನಮುಟ್ಟುವಂತೆ ಜನ ಭಾಷೆಯಲ್ಲಿ ಕೃತಿ ಒಡಮೂಡಿದೆ. ಇತಿಹಾಸದಲ್ಲಿ ಹೊಸ ವಿಷಯಗಳಿಗೆ ಉತ್ತರ ಹುಡುಕುವ ಪ್ರಯತ್ನಗಳು ಸಾಗಬೇಕು ಎಂದು ಕೃತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಸಪ್ಪ ಎಂ. ತಿಪ್ಪಾರೆಡ್ಡಿ ಮಾತನಾಡಿ, ರೈತ ಕುಟುಂಬದಲ್ಲಿ ಜನಿಸಿದ ರೇಖಾ ಪಾಟೀಲ ಅವರು ಇಂದು ಲೇಖಕರಾಗಿ ಹೊರಹೊಮ್ಮಿರುವುದು ಅತೀವ ಸಂತಸ ತಂದಿದೆ. ಇಂತಹ ಮತ್ತಷ್ಟು ಕೃತಿಗಳು ಅವರಿಂದ ಹೊರಬರಲಿ ಎಂದು ಹಾರೈಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವೆಂಕಟೇಶ ಬೇವಿನಬೆಂಚಿ ಮಾತನಾಡಿ, ಭಾರತದ ಇತಿಹಾಸ ಕೊಂಡಿಗಳು ಬಿಚ್ಚಿ ಹೋಗಿವೆ. ಅವುಗಳನ್ನು ಜೋಡಿಸುವ ಕಾರ್ಯ ನಡೆಯಬೇಕಿದೆ. ಚರಿತ್ರೆಯ ಹುಡುಕಾಟ ಉತ್ತಮ ಕೃತಿಯಾಗಿದ್ದು ಯುವ ಇತಿಹಾಸಕಾರರನ್ನು ಪ್ರೇರೇಪಿಸುತ್ತದೆ ಎಂದರು. ಹಿರಿಯ ಸಾಹಿತಿ ವೀರ ಹನುಮಾನ ಅವರು ಸಹ ಮಾತನಾಡಿದರು.

ಕೃತಿ ಲೇಖಕರಾದ ರೇಖಾ ಪಾಟೀಲ ತಮ್ಮ ಬರಹದ ಹೆಜ್ಜೆಗಳನ್ನು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಂಗಣ್ಣ ಪಾಟೀಲ ಅಳ್ಳುಂಡಿ ಮಾತನಾಡಿ, ಸಾಹಿತ್ಯ ಸರ್ವರನ್ನು ಬೆಳೆಸುತ್ತದೆ. ಸಾಹಿತ್ಯದಲ್ಲಿ ನೈಜತೆ ಅವಶ್ಯಕತೆ ಇದೆ. ಯುವ ಬರಹಗಾರರಿಂದ ಉತ್ತಮ ಕೃತಿಗಳು ಹೊರಬರಲಿ ಎಂದು ಶುಭ ಹಾರೈಸಿದರು.

ಪ್ರತಿಭಾ ಗೋನಾಳ ಅವರ ಪ್ರಾರ್ಥನೆ, ರಾವುತರಾವ್ ಬರೂರ ಸ್ವಾಗತ, ವಿಜಯಲಕ್ಷ್ಮಿ ವಂದಿಸಿದರು. ಸಾಹಿತಿಗಳು, ಆಸಕ್ತರು, ಉಪನ್ಯಾಸಕ ಬಳಗ ಮತ್ತು ರೇಖಾ ಪಾಟೀಲರ ಬಂಧು ಬಳಗದವರು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FgE69G06eauFQg8Bv3ecgq

Share This Article
Leave a comment

Leave a Reply

Your email address will not be published. Required fields are marked *