‘ಬದುಕು ಸುಧಾರಿಸಲು ಬಸವಣ್ಣನವರ ಒಂದು ವಚನ ಸಾಕು’

ಶಹಾಪುರ

ಬಸವಣ್ಣನವರ ಒಂದು ವಚನವನ್ನು ನಾವುಗಳು ಅಳವಡಿಸಿಕೊಂಡು ಬದುಕಿದರೆ ಸಾಕು. ಸಮಾಜದಲ್ಲಿ ತಂತಾನೆ ಶಾಂತಿ ನೆಲೆಸುತ್ತದೆ. ಹಣ, ಅಂತಸ್ತು, ವ್ಯಾಮೋಹಗಳಿಂದ ನಾವು ದೂರ ಸರಿದು ನಿಜದ ನಿಲುವನ್ನು ಹೊಂದುತ್ತೇವೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ, ಸಾಹಿತಿ ಡಾ. ಸಿದ್ಧರಾಮ ಹೊನ್ಕಲ್ ಅಭಿಪ್ರಾಯಪಟ್ಟರು.

ಬಸವಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ಏರ್ಪಡಿಸಿದ್ದ , ತಿಂಗಳ ಬಸವ ಬೆಳಕು -೧೨೫ ರ ಸಭೆಯಲ್ಲಿ ಗುರಪ್ಪ ಯಜಮಾನ, ಶಿವಮ್ಮ ಮತ್ತು ಲಿಂಗಣ್ಣ ಸತ್ಯಂಪೇಟೆಯವರ ಸ್ಮರಣೋತ್ಸವ ನಿಮಿತ್ತ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ವಚನಗಳ ಶಕ್ತಿ ಎಂಬ ವಿಷಯ ಕುರಿತು ಮಾತನಾಡಿದರು.

ಬಸವ ಜ್ಯೋತಿಯನ್ನು ಬೆಳಗುವ ಕೆಲಸವನ್ನು ಸತ್ಯಂಪೇಟೆಯ ಕುಟುಂಬದವರು ಮಾಡುತ್ತಿದ್ದಾರೆ. ಸಮಾಜದಲ್ಲಿನ ಕತ್ತಲೆಯನ್ನು ತೊಡೆಯದೆ ಹೋದರೂ ಬದುಕು ಇರುವವರೆಗೂ ನನ್ನ ಮುಖ ನೀ, ನಿನ್ನ ಮುಖ ನಾ ನೋಡಬೇಕೆಂಬ ಹಂಬಲದಿಂದ ನಿರಂತರವಾಗಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಆತ್ಮತೃಪ್ತಿಗಾಗಿ ನಡೆಯುವ ತಿಂಗಳ ಬಸವ ಬೆಳಕು ಎಲ್ಲರ ಬದುಕಿನಲ್ಲೂ ಆಶಾಕಿರಣ ಮೂಡಿಸಿದೆ. ಗುರಪ್ಪ ಯಜಮಾನ, ಶಿವಮ್ಮ ತಾಯಿ, ಲಿಂಗಣ್ಣ ಸತ್ಯಂಪೇಟೆ ಹಾಗೂ ಸತ್ಯಂಪೇಟೆ ಪರಿವಾರದವರ ಸಾಮಾಜಿಕ ತುಡಿತ ಶ್ಲಾಘನೀಯ ಎಂದರು.

ಶರಣ ಸಾಹಿತ್ಯದಲ್ಲಿ ಲಿಂಗಣ್ಣ ಸತ್ಯಂಪೇಟೆಯವರು ಆಳವಾದ ಅಭ್ಯಾಸ ಮಾಡಿದ್ದರು. ಅವರಿಂದ ಹಲವಾರು ಮೌಲಿಕ ಕೃತಿಗಳು ಹೊರಬಂದಿವೆ. ಬಸವಮಾರ್ಗ, ಅಗ್ನಿ ಅಂಕುರ ಹಾಗೂ ಲಂಕೇಶ್ ಪತ್ರಿಕೆಗಳ ಮೂಲಕ ತಮ್ಮ ಅದ್ಭುತವಾದ ನಿಲುವುಗಳನ್ನು ತೋರಿದರು. ಅವರ ಒಡನಾಟ ಮತ್ತು ಪ್ರಭಾವದಲ್ಲಿ ಬೆಳೆದವನು ನಾನು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾಖಂಡಕಿ ಸದ್ಗುರು ಮಲ್ಲಪ್ಪ ತಾತ ಎಂಬ ರುದ್ರಗೌಡ ಪಾಟೀಲರು ಬರೆದ ಕೃತಿಯ ಕುರಿತು ಮಾತನಾಡುತ್ತ, ಸಂಶೋಧಕರಲ್ಲದ, ಸಾಹಿತಿಯೂ ಅಲ್ಲದ ರುದ್ರಗೌಡರು ತಮ್ಮ ಮನೆತನದ ಮಲ್ಲಪ್ಪ ತಾತನ ಕುರಿತು ನಿಖರ ವಿಷಯಗಳೊಂದಿಗೆ ಪುಸ್ತಕವನ್ನು ರಜಿಸಿದ್ದಾರೆ. ೧೭ನೇ ಶತಮಾನದ ಶರಣರ ಜೀವನವೊಂದನ್ನು ಇಲ್ಲಿ ಚರಿತ್ರೆಯ ಪುಟಗಳಿಂದ ತೆಗೆದು ತೋರಿಸಿದ್ದಾರೆ. ನಾಲವಾರದ ಕೋರಿಸಿದ್ದೇಶ್ವರರ ಗುರು ಮಲ್ಲಪ್ಪ ತಾತ ಎಂಬ ಬಗೆಗೆ ಇನ್ನೂ ಹೆಚ್ಚಿನ ಸಂಶೋಧನೆ ಆಗಬೇಕಿದೆ ಎಂದು ಹೊನ್ಕಲ್ ನುಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FgE69G06eauFQg8Bv3ecgq

Share This Article
Leave a comment

Leave a Reply

Your email address will not be published. Required fields are marked *