ಗದಗ
ಭಾರತದ ಯೋಗ ಶಾಸ್ತ್ರವು ಜಗತ್ತಿಗೆ ವ್ಯಾಪಿಸಿದ್ದಲ್ಲದೆ, ಜಗತ್ತನ್ನು ಒಂದುಗೂಡಿಸುವ ಕೆಲಸವನ್ನು ಯೋಗ ಮಾಡುತ್ತಿದೆ. ೨೦೦೦ ವರ್ಷಗಳ ಹಿಂದೆ ಪತಂಜಲಿ ಯೋಗ ಸೂತ್ರವನ್ನು ಕೊಟ್ಟರು. ಮಾನವನ ಮನಸ್ಸು ದೇಹ ಮತ್ತು ಆತ್ಮದ ಸಮತೋಲನವನ್ನು ಯೋಗ ಮಾಡುತ್ತದೆ. ಭಾರತೀಯ ದರ್ಶನದಲ್ಲಿ ಯೋಗ ತುಂಬಾ ಮಹತ್ವದ್ದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರು ಮಾತನಾಡಿದರು.
ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ ೨೭೫೧ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಅಂಗ ಲಿಂಗ ಸಂಯೋಗವೇ ಯೋಗ. ಅಂಗವೇ ಆತ್ಮ. ಲಿಂಗವೇ ಪರಮಾತ್ಮ. ದೈಹಿಕವಾಗಿ ಮಾನಸಿಕವಾಗಿ ಆರೋಗ್ಯವನ್ನು ಪಡೆಯುವಂತದ್ದು ಯೋಗ. ಸಾಮರಸ್ಯದ ಕೆಲಸ ಯೋಗ ಮಾಡುತ್ತದೆ. ಯೋಗದ ಬೇರು ಭಾರತ. ಅತ್ಯಂತ ಹಳೆಯ ವಿಜ್ಞಾನದಲ್ಲಿ ಯೋಗವು ಒಂದು. ದೈಹಿಕ ಮಾನಸಿಕ ಯೋಗಕ್ಷೇಮದೊಂದಿಗೆ ಆಧ್ಯಾತ್ಮಿಕ ವಿಕಸನ ಸಂರಕ್ಷಣೆಯಲ್ಲಿಯೂ ಯೋಗ ಉಪಯುಕ್ತವಾಗಿದೆ ಎಂದು ಆಶೀರ್ವಚನ ನೀಡಿದರು.
ಉಪನ್ಯಾಸಕರಾಗಿ ಆಗಮಿಸಿದ ಡಾ. ಚಂದ್ರಮೌಳಿ ನಾಯ್ಕರ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು ಕ.ವಿ.ವಿ. ಧಾರವಾಡ ಇವರು ಮಾತನಾಡಿ, ಆರೋಗ್ಯ ಭಾಗ್ಯಕ್ಕೆ ಯೋಗ ಒಂದು ಸಾಧನ. ಅನೇಕ ಮಹಾತ್ಮರು ಯೋಗ, ತ್ಯಾಗ ಮತ್ತು ಸಾಧನೆ ಮಾಡಿದ್ದರಿಂದ ಅವರಿಗೆ ಗೌರವ ಕೊಡುತ್ತೇವೆ. ಮನೆಯಲ್ಲಿದ್ದುಕೊಂಡು ಯೋಗ ಮಾರ್ಗದಲ್ಲಿ ಇರುವುದು, ಒಳ್ಳೆಯದಾಗಲಿ ಎನ್ನುವುದೇ ಅಹಿಂಸಾ ಸಂಕಲ್ಪ. ಯೋಗ ಸಾಧನೆ ಮಾಡಿ ಹೆಸರು ಉಳಿಯುವಂತೆ ಬದುಕಬೇಕು ಎಂದು ತಿಳಿಸಿದರು.
ಡಾ. ಚಂದ್ರಮೌಳಿ ನಾಯ್ಕರ ಅವರ “ಗೋರಕ್ಷ ಸಂಹಿತೆ ಹಾಗೂ ಯೋಗ ಬೀಜ” ಪುಸ್ತಕ ಬಿಡುಗಡೆ ಮಾಡಲಾಯಿತು. ನೀಟ್ ಪರೀಕ್ಷೆಯಲ್ಲಿ ಎಐಆರ್ ನಲ್ಲಿ ಉತ್ತಮ ರ್ಯಾಂಕ ಪಡೆದ ಸೃಜನ್ ವೀರಬಸಪ್ಪ ಮುರಗಿ ಅವರನ್ನು ಸನ್ಮಾನಿಸಲಾಯಿತು. ಯೋಗಾಚಾರ್ಯರಾದ ಕೆ.ಎಸ್. ಪಲ್ಲೇದ ನೆತೃತ್ವದಲ್ಲಿ ಎಸ್.ವಾಯ್.ಬಿ.ಎಂ.ಎಸ್. ಯೋಗ ಪಾಠಶಾಲಾ ಪ್ರಶಿಕ್ಷಣಾರ್ಥಿಗಳಿಂದ ಆಕರ್ಷಕವಾದ ಯೋಗಾಸನ ಪ್ರದರ್ಶನ ನಡೆಯಿತು.
ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಅವರು ವಚನ ಸಂಗೀತ ಸೇವೆಯನ್ನು ನಡೆಸಿಕೊಟ್ಟರು. ಧಾರ್ಮಿಕ ಗ್ರಂಥ ಪಠಣವನ್ನು ಕುಮಾರಿ ವರ್ಷಾ ಆರ್. ಮಳಜಿ ಹಾಗೂ ವಚನ ಚಿಂತನವನ್ನು ಸಾನ್ವಿ ಆರ್. ಪಾಟೀಲ ನಡೆಸಿಕೊಟ್ಟರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮು ಪುರಾಣಿಕ, ನಾಗರಾಜ ಹಿರೇಮಠ ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹಚೇರ್ಮನ್ ಶಿವಾನಂದ ಹೊಂಬಳ ಹಾಗೂ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.
ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು. ದಾಸೋಹ ಸೇವೆಯನ್ನು ಶರಣ ವೀರಬಸಪ್ಪ ಬಸಪ್ಪ ಮುರಗಿ ಹಾಗೂ ಕುಟುಂಬ ವರ್ಗದವರು ವಹಿಸಿದ್ದರು.