ಅಭಿಯಾನದ 11ನೇ ದಿನದ ಲೈವ್ ಬ್ಲಾಗ್
ಜಯಕಲ್ಯಾಣಕೆ ಗೀತೆಯೊಂದಿಗೆ ಕಾರ್ಯಕ್ರಮ ಸಮಾರೋಪ.

ಬಸವರಾಜ ರೊಟ್ಟಿಗೂ ಸಮಾರೋಪದ ಜವಾಬ್ದಾರಿ
ಬೆಂಗಳೂರಿನಲ್ಲಿ ನಡೆಯುವ ಸಮಾರೋಪವನ್ನು ಆಯೋಜಿಸುವ ಜವಾಬ್ದಾರಿಯನ್ನು ಬಸವರಾಜ ರೊಟ್ಟಿಯವರಿಗೂ ಮಠಾಧಿಪತಿಗಳು ನೀಡಿದ್ದಾರೆ. ಈ ಸಂದರ್ಭದಲ್ಲಿ ರೊಟ್ಟಿಯವರನ್ನು ಶ್ರೀಗಳು ಸನ್ಮಾನಿಸಿದರು.

‘ನಾಡಿನಲ್ಲಿ ಬಸವ ತತ್ವ ಪಸರಿಸುತ್ತಿರುವ ಅಭಿಯಾನ’
ಗದಗ ಶ್ರೀಗಳ ಆಶೀರ್ವಚನ

ಇಂದಿನ ಅಭಿಯಾನವು ಬಹಳ ಸಂತಸ ತಂದಿದೆ. ಬೆಳಗಾವಿಯ ಅಭಿಯಾನ ಇತಿಹಾಸ ಪುಟದಲ್ಲಿ ಸೇರ್ಪಡೆಯಾವಗುವಂತೆ ಆಗಿದೆ. ಬಸವ ಸಂಸ್ಕೃತಿಯನ್ನು ನಾವೆಲ್ಲಾ ಅಪ್ಪಿಕೊಳ್ಳಬೇಕಿದೆ, ಒಪ್ಪಿಕೊಳ್ಳಬೇಕಿದೆ. ಅದು ಮಾತ್ರ ನಮಗೆ ನೆಮ್ಮದಿ ಸಿಗುವ ವಿಷಯ.
ಇವತ್ತು ನಾವೆಲ್ಲಾ ಪ್ರಜಾಪ್ರಭುತ್ವದಲ್ಲಿದ್ದೇವೆ. ಈ ಸಂದರ್ಭದಲ್ಲಿ ಬಸವಾದಿ ಶರಣೆ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಕಾರ್ಯ ಮಾಡಬೇಕಿದೆ. ಪ್ರಜಾ ಪ್ರಭುತ್ವದ ಮೌಲ್ಯಗಳನ್ನು ಜಾರಿಗೆ ತರುವ ಕಾರ್ಯವನ್ನು ಬಸವಣ್ಣನವರು ಆಗಲೇ ಮಾಡಿದರು. ಎಲ್ಲಾ ಕಾಯಕ ಜೀವಿಗಳನ್ನು ಒಟ್ಟುಗೂಡಿಸಿ, ಅವರನ್ನೇ ಹಿರಿಯರನ್ನಾಗಿ ಮಾಡಿದರು. ಅದಕ್ಕೆ ಅವರನ್ನು ಕಾಯಕಜೀವಿಗಳ ನಾಯಕ ಎನ್ನಬಹುದು. ಯಾವ ಪದವಿಯನ್ನೂ ಒಲ್ಲೆ ಎಂದು, ಎನಗಿಂತ ಕಿರಿಯರಿಲ್ಲ ಎಂದು ಬದುಕಿದವರು.
ಬಸವಾದಿ ಶರಣರ ವಿಚಾರಗಳು ಎಲ್ಲಾ ಕಾಲಕ್ಕೂ ಪ್ರಸ್ತುತ ಎಂಬುದು ಗಮನಿಸಬೇಕಾದ ವಿಷಯ. ಅಂದಿಗಿಂತಲೂ ಇಂದು ಶರಣರ ವಿಚಾರಧಾರೆಗಳು ಅತೀ ಅವಶ್ಯಕವಾಗಿವೆ. ಇಂತಹ ವಿಚಾರಗಳನ್ನು ನಾಡಿನ ಉದ್ದಗಲಕ್ಕೂ ಪಸರಿಸುವ ಕಾರ್ಯ ಈ ಅಭಿಯಾನ ಮಾಡುತ್ತಿದೆ. ಸನ್ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯುವ ಸಮಾರೋಪ-ಸಮಾರಂಭವನ್ನು ಯಶಸ್ವಿಗೊಳಿಸಬೇಕಿದೆ.
ಸಚಿವರು ತಮ್ಮ ಕೆಲಸದ ನಾಡುವೆಯೂ ನಮ್ಮ ಅಭಿಯಾನಕ್ಕೆ ಬಂದಿದ್ದಕ್ಕೆ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇನೆ. ವೇದಿಕೆ ಮೇಲಿರುವ ಗಣ್ಯರು, ಪೂಜ್ಯರೆಲ್ಲರ ಮಾತುಗಳನ್ನು ತಾವೆಲ್ಲಾ ಅಳವಡಿಸಿಕೊಳ್ಳಬೇಕು. ನಮ್ಮ ಪೂಜ್ಯರಾದ ಅಲ್ಲಮಪ್ರಭು ಶ್ರೀಗಳು ಒಂದೇ ವಾರದಲ್ಲಿ ಎಲ್ಲ ತಯಾರಿಯನ್ನು ಮಾಡಿಕೊಂಡು, ಈ ಅಭಿಯಾನವನ್ನು ಯಶಸ್ವಿಗೊಳಿಸಿದ್ದಾರೆ. ಬಸವರಾಜ ರೊಟ್ಟಿಯವರು ತುಂಬಾ ಉತ್ತಮ ಕೆಲಸ ಮಾಡಿದ್ದಾರೆ.
ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಸಮಾರೋಪ-ಸಮಾರಂಭದಲ್ಲಿದೆ. ಸಮಾರೋಪದ ಜವಾಬ್ದಾರಿಯನ್ನು, ಜನರನ್ನು ಸೇರಿಸುವ ಹಲವು ಕೆಲಸಗಳ ಜವಾಬ್ದಾರಿಯನ್ನು, ಬಸವರಾಜ ರೊಟ್ಟಿಯವರಿಗೆ ಈ ವೇದಿಕೆ ಮೂಲಕ ಕೊಡುತ್ತದ್ದೇವೆ.
ಬಸವಣ್ಣ ಮತ್ತು ಅಂಬೇಡ್ಕರ್
ಸತೀಶ್ ಜಾರಕಿಹೊಳಿ

ಶರಣರ ಬದುಕು ದಾರ್ಶನಿಕವಾಗಿದೆ, ಅವರ ವಿಚಾರಗಳು ಮರೆತು ಹೋಗದಂತೆ ಕಾಪಾಡಲೆಂದೇ ಈ ಅಭಿಯಾನ ನಾಡಿನ ಎಲ್ಲಾ ಪೂಜ್ಯರು ಹಮ್ಮಿಕೊಂಡಿದ್ದಾರೆ. ಆ ಕಾಲದಲ್ಲಿ ವಚನ ಸಾಹಿತ್ಯ ನಾಶಕ್ಕೆ ಸಕಲ ಪ್ರಯತ್ನ ನಡೆದಿದ್ದವು. ಶರಣರು ವಚನ ಸಾಹಿತ್ಯ ಉಳಿಸಲು ನಾಡಿನೆಲ್ಲೆಡ ಓಡಿಹೋದರು.
ಬಸವಣ್ಣನವರು ಸಾಹಿತ್ಯ ರೂಪದಲ್ಲಿ ಹೇಳಿದರೆ, ಅಂಬೇಡ್ಕರ್ ಅವರು ಸಂವಿಧಾನದ ರೂಪದಲ್ಲಿ ಹೇಳಿದರು. ವಚನ ಸಾಹಿತ್ಯದಲ್ಲೇನಿದೆಯೋ ಅದೆಲ್ಲ ಸಂವಿಧಾನದಲ್ಲಿದೆ. ನೀವು ಸೂಕ್ಷ್ಮವಾಗಿ ಗಮನಿಸಿದರೆ ನಿಮಗೆ ತಿಳಿಯುತ್ತದೆ. ನಮ್ಮ ಸರಕಾರ ಸಾಂಸ್ಕೃತಿಕ ನಾಯಕ ಎಂಬ ಘೋಷಣೆ ಮಾಡಿದ್ದು ನನಗೆ ಹೆಮ್ಮೆ ಎನಿಸುತ್ತದೆ.
ತಡವಾಗಿ ಬಂದ ಸತೀಶ್ ಜಾರಕಿಹೊಳಿ

‘ಪೆನ್ನಿನಿಂದ ಲಿಂಗಾಯತ ಎಂದು ಬರೆಸಿ’
ಪೂಜ್ಯ ನಿಡಸೋಸಿ ಶ್ರೀಗಳು

ಇಂತಹ ಅಭಿಯಾನಗಳು ಕಳೆದ ಸುಮಾರು ನಲವತ್ತು ವರ್ಷಗಳಿಂದ ನಡೆದುಕೊಂಡು ಬಂದಿದೆ. ಹಲವಾರು ಮಠಗಳು ತಮ್ಮ ತಮ್ಮ ಮಠಗಳಲ್ಲಿ ಹಲವಾರು ತತ್ವ ಬೆಳೆಸುವಂತಹ ಕೆಲಸವನ್ನು ಮಾಡಿದ್ದಾರೆ. ಲಿಂಗೈಕ್ಯ ಲಿಂಗಾನಂದ ಮಹಾಸ್ವಾಮಿಗಳು ಹಾಗೂ ಮಾತಾಜಿಯವರು ಇದಕ್ಕಾಗಿ ತುಂಬಾ ಶ್ರಮಿಸಿದ್ದಾರೆ. ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರು ಕೂಡ ಕೇವಲ ಧರ್ಮ ಸಂಸ್ಕಾರ ಅಷ್ಟೇ ಅಲ್ಲ ಗಡಿ ಭಾಗದಲ್ಲಿ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬರೂ ಸರಿಯಾಗಿ ಶರಣ ಸಾಹಿತ್ಯವನ್ನು ಅಭ್ಯಾಸ ಮಾಡಿದರೆ ಬಸವಣ್ಣ ನಮಗೆ ಸರಿಯಾಗಿ ತಿಳಿಯುತ್ತಾರೆ.
ಮುಂಬರುವ ಜನಗಣತಿಯಲ್ಲಿ ಲಿಂಗಾಯತ ಎಂದು ಬರೆಸಿದರೆ ಭದ್ರ ಭವಿಷ್ಯ ನಮಗಾಗಿ ಕಾಯ್ದುಕುಳಿತಿದೆ. ಅಲ್ಲಿ ಪೆನ್ಸಿಲ್ ನಲ್ಲಿ ಬರೆಯುತ್ತಾರೆ. ನಂತರ ಅದನ್ನು ತಿದ್ದುವ ಕೆಲಸ ಆಗುತ್ತದೆ. ಆದರೆ ಪೆನ್ನಿನಿಂದಲೇ ಜಾಗೃತಿ ವಹಿಸಿ ಲಿಂಗಾಯತ ಎಂದು ಬರೆಸಿ.
‘ಬೀದರನ್ನು ಮೀರಿಸಿದ ಬೆಳಗಾವಿ’
ಭಾಲ್ಕಿ ಶ್ರೀಗಳ ಆಶೀರ್ವಚನ

ನಾವೇಕೆ ಇಷ್ಟು ಧೈರ್ಯವಾಗಿದ್ದೇವೆಂದರೆ ನಮ್ಮ ಬೆನ್ನ ಹಿಂದೆ ಬಸವಣ್ಣನವರ ಆಶೀರ್ವಾದ ಇದೆ. ಈ ಅಭಿಯಾನದ ಸಂಕಲ್ಪವೇ ಲಿಂಗಾಯತ ಧರ್ಮದ ಮಾನ್ಯತೆ.
ನೀವೆಲ್ಲಾ ಬಸವಣ್ಣನನ್ನು ಮನದಲ್ಲಿ ಸ್ಥಾಪಿಸಿಕೊಂಡು, ಲಿಂಗಾಯತ ಎಂದು ಬರೆಸಬೇಕು. ಇದನ್ನು ಕಡ್ಡಾಯವಾಗಿ ಮಾಡಿದರೆ ಮಾತ್ರ ಬಸವಾದಿ ಶರಣರ ಋಣ ತೀರಿಸದಂತಾಗುತ್ತದೆ. ಇಲ್ಲವಾದರೆ ಅವರಿಗೆ ಅಪಚಾರ ಮಾಡಿದಂತಾಗುತ್ತದೆ. ಬಸವ ಜಯಂತಿ ಇಡೀ ದೇಶದೆಲ್ಲೆಡೆ ಆಚರಿಸಬೇಕು. ಅಕ್ಟೋಬರ್ ಐದರಂದು ಬೆಂಗಳೂರಿಗೆ ಬಂದರೆ ಬಸವಣ್ಣನ ಋಣ ತೀರಿಸಿದಂತಾಗುತ್ತದೆ. ಬೀದರನ್ನು ಮೀರಿಸಿದ ಬೆಳಗಾವಿ ಎಂದು ಹೆಮ್ಮೆ ಎನಿಸುತ್ತದೆ. ಬೆಳಗಾವಿಯ ಎಲ್ಲ ಶರಣರಿಗೂ ಶರಣು ಶರಣಾರ್ಥಿಗಳು.
‘ಹೋರಾಟ ಮತ್ತೆ ಮುನ್ನೆಲೆಗೆ ಬರುತ್ತಿದೆ’
ಪೂಜ್ಯ ಪಂಡಿತಾರಾಧ್ಯ ಶ್ರೀಗಳು

ನಮ್ಮಲ್ಲಿರುವ ಹುಳುಕನ್ನು ನಾವು ಮೊದಲು ಕಳೆದುಕೊಳ್ಳಬೇಕಿದೆ. ಅರಿಷಡ್ವರ್ಗಗಳಿಂದ ತುಂಬಿದ ಸಮಾಜದಲ್ಲಿ ಪ್ರೀತಿ, ಮಮತೆ, ಉದಾರತೆ ಮಾಯವಾಗಿವೆ. ಈ ಎಲ್ಲಾ ಗುಣಗಳನ್ನು ಕಳೆದುಕೊಂಡು ನಾವು ವಿಶ್ವಮಾನವರಾಗಬೇಕಿದೆ.
ಹಲವಾರು ವರ್ಷಗಳ ಹಿಂದೆ ಈ ಹೋರಾಟಕ್ಕೆ ನಾಂದಿ ಹಾಡಲಾಗಿತ್ತು. ತದನಂತರದಲ್ಲಿ ಮರೆಮಾಚಿದರೂ ಈ ದಿನಗಳಲ್ಲಿ ಅದು ಮುನ್ನೆಲೆಗೆ ಬರುತ್ತಿದೆ. ಮಕ್ಕಳಿಗೆ ವಚನ ಪಠಣ ಮಾಡಿಸಬೇಕು. ನಾವು ಆಚಾರವಂತರಾಗದೇ ವಿಚಾರವಂತರಾದರೇ ಏನೂ ಪ್ರಯೋಜನವಿಲ್ಲ. ಇನ್ನೊಬ್ಬರ ನೋವನ್ನು ನಮ್ಮ ನೋವೆಂದು ಭಾವಿಸಿದಾಗ ಮಾತ್ರ ನಾವು ಉತ್ತಮರಾಗಲು ಸಾಧ್ಯ.
ಮಾತು ಕಡಿಮೆ ಮಾಡಿ ಕೃತಿಯನ್ನು ಹೆಚ್ಚಿಸಬೇಕಿದೆ. ಈ ಅಭಿಯಾನ ದೇಶದೆಲ್ಲೆಡೆ ಸಂಚಲನವನ್ನು ಮೂಡಿಸಿದೆ. ಅದಕ್ಕೆ ಅಲ್ಲಲ್ಲಿ ಟೀಕೆಗಳು ಬರುತ್ತಿವೆ. ಅಂದರೆ ನಾವು ಕೆಲಸ ಮಾಡುತ್ತಿದ್ದೇವೆ ಎಂದರ್ಥ. ಅಲ್ಲಮಪ್ರಭು ಸ್ವಾಮಿಗಳು ಬಹಳ ಅಚ್ಚುಕಟ್ಟಾಗಿ ಎಲ್ಲ ವ್ಯವಸ್ಥೆಯನ್ನು ಮಾಡಿದ್ದಾರೆ.
‘ವೀರಶೈವ ಬಿಟ್ಟರೆ ಮಾತ್ರ ಧರ್ಮದ ಮಾನ್ಯತೆ’
ಪೂಜ್ಯ ಗಂಗಾ ಮಾತಾಜಿ
ಬಹುದಿನದ ಕನಸು ಈಡೇರುವಂತೆ ನಮಗೆ ಕಾಣುತ್ತಿದೆ. ನಾವೆಲ್ಲಾ ಒಟ್ಟಿಗೆ ಸೇರಿ ಮಾಡುತ್ತಿರುವ ಅಭಿಯಾನ ತುಂಬಾ ಯಶಸ್ವಿಯಾಗುವ ಲಕ್ಷಣಗಳು ಕಾಣುತ್ತಿವೆ. ವೀರಶೈವ ಬಿಟ್ಟಾಗ ಮಾತ್ರ ಧರ್ಮದ ಮಾನ್ಯತೆ ಸಿಗಲು ಸಾಧ್ಯ. ಈ ಅಭಿಯಾನ ಮಾನ್ಯತೆ ಸಿಗುವವರೆಗೂ ಹೊರಾಡುತ್ತದೆ.

‘ಬಾಗೇವಾಡಿಯ ಉದ್ಘಾಟನೆಯ ನಂತರ ಚೀರಾಟ ಶುರುವಾಯಿತು’
ಪೂಜ್ಯ ಶಿವಾನಂದ ಶ್ರೀಗಳು, ಹಂದಿಗುಂದ

ರಾಮ-ರಾವಣರ ಯುದ್ಧದಲ್ಲಿ ಮೇಲಿನಿಂದ ದೇವತೆಗಳು ಜೈ, ಜೈ, ಎನ್ನುತ್ತಿದ್ದರು. ಆಗ ಯಾರೋ ಕೇಳಿದರು ನಿಮ್ಮ ಜೈಕಾರ ಯಾರಿಗೆ ಎಂದಾಗ, ನಂತರದಲ್ಲಿ ಹೇಳುತ್ತೇವೆ ಎಂದರು.
ಹಾಗೇ ನಮ್ಮಲ್ಲಿ ಕೆಲವರು ಇದ್ದಾರೆ. ಬಾಗೇವಾಡಿಯ ಉದ್ಘಾಟನೆಯ ನಂತರ ಮಲಗಿದ್ದ ಹಲವರು ಎದ್ದು ಕೂತರು, ಚೀರಾಡಲು ಆರಂಭಿಸಿದರು. ಆದರೆ ಅದ್ಯಾವುದಕ್ಕೂ ನಮ್ಮ ಅಭಿಯಾನ ಜಗ್ಗುವುದಿಲ್ಲ. ಅಭಿಯಾನವೆಂದರೆ ಬುಲೆಟ್ ಟ್ರೇನ್ ಇದ್ದ ಹಾಗೆ.
ಇನ್ನೊಂದು ಆರಂಭವಾಗುವುದಿದೆ ಇದ್ದಿಲು-ನೀರಿನ ಮೇಲೆ ಓಡುವುದು. ಅದಕ್ಕಿನ್ನೂ ಕಾಲ fix ಮಾಡಿಲ್ಲ. ನಿಮಗೆ ಬುಲೆಟ್ ಟ್ರೇನ್ ಬೇಕೋ ಅಥವಾ ಹಳೆಯ ರೈಲು ಬೇಕೋ ನೀವೇ ಹೇಳಬೇಕು. ಹೊಸ ರೇಡಿಯೋ ಹಾಡಲು ಸೆಲ್ ಮೇಲಿರುವ ಕ್ಯಾಪ್ ತೆಗೆಯಬೇಕು. ಹಾಗೇ ಲಿಂಗಾಯತ ಎನ್ನುವ ರೇಡಿಯೋ ಹಾಡಲು ವೀರಶೈವ ಎಂಬ ಕ್ಯಾಪ್ ತೆಗೆಯಬೇಕು.
ಸಾಮಾಜಿಕ ಜಾಲತಾಣಗಳಲ್ಲಿ ನಾವೆಲ್ಲಾ ನೋಡಿದಂತೆ ಧರ್ಮದ ಮಾನ್ಯತೆ ಕೊಡಬೇಡ ಎಂದು ತಾವೇ ಹೇಳಿಕೊಂಡಿದ್ದು. ನಮ್ಮ ಯುವಕರ ಭವಿಷ್ಯಕ್ಕೆ ಮಣ್ಣು ಹಾಕಿದ ಅವರಿಗೆ ಕಲ್ಲು ಹಾಕುವ ಕೆಲಸ ನಮ್ಮದಾಗಬೇಕಿದೆ. ಈ ವರ್ಷದ ಕೊನೆಯಲ್ಲಿ ನಮಗೊಂದು ಒಳ್ಳೆಯ ಸುದ್ದಿ ಬಂದೇ ಬರುತ್ತದೆ ಎಂದು ನನಗೆ ಅನ್ನಿಸುತ್ತಿದೆ.
ನೀವೆಲ್ಲಾ ಬೆಂಗಳೂರಿಗೆ ಬರಲೇಬೇಕು. ಹೆಣ್ಣುಮಕ್ಕಳಿಗಂತೂ ತುಂಬಾ ಲಾಭ ಇದೆ. ನಿಮ್ಮ ಆಧಾರ ಕಾರ್ಡಗಳನ್ನು ತೆಗೆದುಕೊಂಡು ಹೊರಡಿ. ಎಲ್ಲ ಬಸ್ಸುಗಳು ಬಸವ ಭಕ್ತರ ಬಸ್ಸುಗಳಾಗಲಿ. ನಿಮ್ಮೆಲ್ಲರ ವ್ಯವಸ್ಥೆಯ ಜವಾಬ್ದಾರಿ ನಮ್ಮದು.
‘ಅಭಿಯಾನವನ್ನು ಕೆಡಿಸಲು ಚಡಪಡಿಸುತ್ತಿದ್ದಾರೆ’
ಪೂಜ್ಯ ನಿಜಗುಣಾನಂದ ಶ್ರೀಗಳು

ಬಸವ ತತ್ವವನ್ನು ಉಳಿಸಿಕೊಳ್ಳಬೇಕು, ರಾಷ್ಟ್ರಮಾನ್ಯತೆ ಪಡೆಯಬೇಕು ಎಂಬುದೇ ಈ ವೇದಿಕೆಯ ಉದ್ದೇಶ. ಈ ಅಭಿಯಾನವನ್ನು ಕೆಡಿಸಲು ಹಲವರು ಚಡಪಡಿಸುತ್ತಿದ್ದಾರೆ.
ಇದು ಹೇಗೆ ಎಂದರೆ ಪೌರಾಣಿಕ ಕಲ್ಪನೆಯಲ್ಲಿ ಸಮುದ್ರ ಮಂಥನ ನಡೆದಾಗ ಮೊದಲು ಬಂದದ್ದು ವಿಷ. ಹಾಗೆಯೇ ಇವಾಗಿನ ಈ ಅಪಪ್ರಚಾರಗಳು ವಿಷವಿದ್ದಂತೆ, ಕೊನೆಯಲ್ಲಿ ಲಿಂಗಾಯತ ಧರ್ಮಕ್ಕೆ ಅದ್ಭುತ ಅಮೃತ ದೊರಕುವುದು ಖಂಡಿತ. ನಮ್ಮವರೇ ನಮಗೆ ಈ ರೀತಿ ವಿರೋಧಿಸುವಾಗ, ತಾಯ ಮೊಲೆವಾಲು ನಂಜಾಗಿ ಕೊಲುವಡೆ ಎಂಬ ವಚನ ನೆನಪಾಗುತ್ತದೆ.
ಇಲ್ಲಿ ನರೆದಿರುವ ಎಲ್ಲರೂ ಕಡ್ಡಾಯವಾಗಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದೇ ಬರೆಸಬೇಕು. ಎಲ್ಲಾ ಹಿಂದುಳಿದ ಸಮುದಾಯಗಳನ್ನು ಒಟ್ಟಾಗಿ ಕೂಡಿಸಿ, ಇಷ್ಠಲಿಂಗವನ್ನು ಕಟ್ಟಿ, ಬಸವಣ್ಣ ಕಟ್ಟಿದ ಧರ್ಮವೇ ರಾಷ್ಟ್ರಧರ್ಮ ಅದೇ ಲಿಂಗಾಯತ ಧರ್ಮ.
ಎಲ್ಲರೂ ಬೆಂಗಳೂರಿನ ಸಮಾರೋಪ-ಸಮಾರಂಭಕ್ಕೆ ಬರಲೇಬೇಕು. ಪರಮ ಪೂಜ್ಯ ಲಿಂಗಾನಂದ ಸ್ವಾಮೀಜಿ ಹಾಗೂ ಮಾತೆ ಮಹಾದೇವಿಯವರ ಸಂಕಲ್ಪಗಳು ಇವಾಗ ನೇರವೇರುವಂತೆ ಕಾಣುತ್ತಿದೆ. ಅಂತರಂಗದೊಳಗಡೆ ಬಸವಣ್ಣನನ್ನು ತೆಗೆದುಕೊಂಡು, ಬಹಿರಂಗದಲ್ಲಿ ಲಿಂಗಾಯತ ಧರ್ಮ ಎಂದು ಬರೆಸುವಲ್ಲಿ ಕಾರ್ಯರೂಪವಾಗಬೇಕು.
ಚಿಂತನೆ: ಅಂತರಂಗ-ಬಹಿರಂಗ ಶುದ್ಧಿ
ಪೂಜ್ಯ ಸಿದ್ಧಬಸವ ಕಬೀರ ಸ್ವಾಮೀಜಿ, ಚಿಗರಿಹಳ್ಳಿ

ಬಸವಣ್ಣನನ್ನು ತಲೆಯ ಮೇಲೆ ಹೊತ್ತು ಮೆರೆದರೆ ಸಾಲದು, ಅವರನ್ನು ಮನದಲ್ಲಿ ಸ್ಥಾಪಿಸಿಕೊಳ್ಳಬೇಕು ಅಂದಾಗ ಅಂತರಂಗ ಶುದ್ಧಿಯಾಗುತ್ತದೆ. ಕಲ್ಯಾಣಕ್ಕೆ ಶರಣರು ಬಂದಿದ್ದೇ ಅಂತರಂಗ-ಬಹಿರಂಗ ಶುದ್ಧಿ ಮಾಡಿಕೊಳ್ಳಲು. ಅವರ್ಣೀಯ ಮಗುವನ್ನು ಎತ್ತಿ ತಾಯಿಯಂತೆ ಆರೈಕೆ ಮಾಡಿದವರು ಬಸವಣ್ಣನವರು.
ಮಾಂಸಾಹಾರದ ಕಾರಣದಿಂದ ಮನುಷ್ಯರನ್ನು ಮುಟ್ಟದ ನೀವುಗಳು, ನಿಮ್ಮ ಮನೆಯ ಬೆಕ್ಕು-ನಾಯಿಗಳನ್ನು ಮುಟ್ಟುತ್ತೀರಿ ಎಂದು ಧಿಕ್ಕರಿಸುತ್ತಾರೆ.
ಮೋದಿಯವರನ್ನು ಭೇಟಿಯಾಗಲು ಹೋದಾಗ ನಾವು ಬಸವಣ್ಣನವರ ಎರಡು ವಚನಗಳನ್ನು ವಿಶ್ಲೇಷಿಸಿದೆ. ಆಗ ಕೇವಲ ಐದು ನಿಮಿಷ ಸಮಯ ಕೊಟ್ಟ ಮೋದಿ 43 ನಿಮಿಷ ನಮ್ಮೊಂದಿಗೆ ಕುಳಿತು ಮಾತನಾಡಿದರು. ದುಬೈನಲ್ಲೂ ಪ್ರಚಾರ ಮಾಡಲು ಹೋದಾಗ ಇಸ್ಲಾಂ ವ್ಯಕ್ತಿಗಳೆಲ್ಲ ಬಸವಣ್ಣನವರನ್ನು ಒಪ್ಪಿಕೊಂಡರು.
ಎಲ್ಲಾರಿಗೂ ತಿಳಿದ ಬಸವಣ್ಣ ನಮಗೆ ತಿಳಿಯುತ್ತಿಲ್ಲ ಎಂಬುದೇ ಖೇದದ ಸಂಗತಿ. ಚಪ್ಪಲಿಯನ್ನು ಶುದ್ಧೀಕರಿಸಿದ ತಾಯಿಯನ್ನು ಪ್ರಶ್ನಿಸಿದಾಗ ಅವನ್ನು ಶುದ್ಧಿಗೋಳಿಸಿದ್ದೇನೆ ಎಂದು ತಾಯಿ ಉತ್ತರಿಸುತ್ತಾಳೆ. ಆಗ ಬಸವಣ್ಣ ಸತ್ತ ದನದ ಚರ್ಮವನ್ನು ಶುದ್ಧೀಕರಿಸುವ ನೀನು ಅದೇ ಆ ಹುಡುಗನನ್ನು ಶುದ್ಧೀಕರಿಸಿ ಒಳಗಡೆ ಕರೆದುಕೊಳ್ಳಬಹುದಿತ್ತು ಎಂದು ಹೇಳುತ್ತಾರೆ.
ಈ ಅಭಿಯಾನ ಯಶಸ್ವಿಯಾಗಲು ಮಠಾಧೀಶರೆಲ್ಲ ತಮ್ಮ ಮಠಗಳನ್ನು ಬಿಟ್ಟು ಬೀದಿಗಿಳಿದಿದ್ದಾರೆ. ಅವರ ಈ ಪ್ರಯತ್ನ ಸಾಕಾರವಾಗಲು ನಿಮ್ಮ ಪ್ರೋತ್ಸಾಹ ತುಂಬ ಮುಖ್ಯ
ಹಳೇ ಗೋಡೆಯನ್ನು ರಿಪೇರಿ ಮಾಡಲು ಬಸವಣ್ಣ ಬರಲಿಲ್ಲ, ಬದಲಾಗಿ ಆ ಗೋಡೆಯನ್ನು ಕಿತ್ತು ಹೊಸ ಗೋಡೆಯ ನಿರ್ಮಾಣ ಮಾಡಲು ಬಂದವರು ಬಸವಣ್ಣ. ತಂದೆ ತಾಯಂದಿರನ್ನು ಸ್ಮರಿಸಬೇಕಿದ್ದರೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕೆ ಹೊರತು, ಅವರಿಗೆ ಅರ್ಗ್ಯ ಬಿಟ್ಟರೆ ಆಗದು. ಈ ಅಭಿಯಾನ ಒಂದು ಹೊಸ ಇತಿಹಾಸ ಕಲ್ಯಾಣ ಕ್ರಾಂತಿಯು ಮತ್ತೆ ಮರುಕಳಿಸಿದಂತೆ ಆಗಿದೆ. ಪರಿವರ್ತನೆ ನಮ್ಮ ಬದುಕಾಗಬೇಕು.
ಚಿಂತನೆ: ದಯವೇ ಧರ್ಮದ ಮೂಲ
ಡಾ. ಶಿವಲಿಂಗ ಹೇಡೆ, ಬೀದರ

ಎಂದಿಗೂ ನಾಶವಾಗದ ಸಂಸ್ಕ್ರತಿಯೇ ಬಸವ ಸಂಸ್ಕೃತಿ. ಇದರ ಮೂಲ ಸೆಲೆ ಜೀವ ದಯಾ ಪರ ಕಾರುಣ್ಯ. ಜಗತ್ತು ಕಾಣದ ಹಲವು ತತ್ವಗಳನ್ನು ನಾವು ಶರಣರ ಬದುಕಿನಲ್ಲಿ ಕಾಣುತ್ತೇವೆ.
ಸನಾತನ ಸಂಸ್ಕೃತಿಯಲ್ಲಿ ನೆಲ, ನೀರು, ಆಕಾಶ, ವಾಯು ಎಲ್ಲವನ್ನೂ ದೇವರೆಂದು ಕರೆದರು. ಆದರೆ ಮನುಷ್ಯನನ್ನು ದೇವರೆಂದು ಕರೆಯಲಿಲ್ಲ. ಆದರೆ ಮನುಷ್ಯನಲ್ಲಿ ದೇವರನ್ನು ಕಂಡ ಏಕೈಕ ಧರ್ಮ ಅದೇ ಬಸವಧರ್ಮ.
ಸಂಭೋಳಿ ನಾಗಣ್ಣನನ್ನು ಹೊಡೆದಾಗ ಯಾರೂ ಎತ್ತುವುದಿಲ್ಲ, ಆಗ ಬಂದು ಅವನನ್ನು ಮೇಲಕ್ಕೆ ಎತ್ತಿದ ಒಬ್ಬ ವ್ಯಕ್ತಿ ಕಣ್ಣು ಕಾಣದ ಆತ ಬಂದೆಯಾ ಬಸವಾ ಎಂದಾಗ ನಾನೇ ಬಂದೆ ಎಂದು ಹೇಗೆ ಹೇಳಿದಿರಿ ಅಂದಾಗ ಬಿದ್ದವರನ್ನು ಮೇಲೆತ್ತುವ ಏಕೈಕ ಶಕ್ತಿ ಅಂದರೆ ಅದು ನೀನೆ ಅಪ್ಪಾ ಎಂದು ನಾಗಣ್ಣ ಹೇಳುತ್ತಾನೆ.
ಮನುಷ್ಯತ್ವ ಮರೆತು ಮೆರೆಯುವ ಕಾಲದಲ್ಲಿ ಬಂದ ಬೆಳಕೇ ಅದು ಬಸವಣ್ಣ. ನೆಲನೊಂದೇ ಹೊಲಗೇರಿ, ಶಿವಾಲಯಕ್ಕೆ ಎಂದು ಎಲ್ಲದರ ಭೇದ ತೊಡೆದಿಹಾಕಿದರು. ಕಾಶ್ಮೀರದಿಂದ ಹೊರ ದೇಶ ಅಫ್ಘಾನಿಸ್ತಾನದಿಂದಲೂ ಶರಣರು ಓಡೋಡಿ ಬಂದರು. ಕಾರಣ ಬಸವಣ್ಣನಲ್ಲಿರುವ ಕಾರುಣ್ಯ-ದಯೆ. ಶರಣ ತತ್ವ ಮಹತ್ವ ಕೊಟ್ಟಿದ್ದು ಜೀವಪರಾ ದಯಾ ಕಾರುಣ್ಯಕ್ಕೆ. ಎರೆದಡೆ ನೆನೆಯದು, ಮರೆದರೆ ಬಾಡದು, ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ. ಜಂಗಮಕ್ಕೆ ಎರೆದರೆ ಪೂಜೆ ಸಾರ್ಥಕವಾಗುತ್ತದೆ.
ಮಾನವ ಕುಲಂ ತಾನೊಂದೇ ವಲಂ ಎಂದು ಪಂಪ ಹೇಳಿದರೆ, ವೇದಗಳು ಸರ್ವೇ ಜನ ಸುಖಿನೋ ಭವಂತು ಎಂದು ಹೇಳಿದರೆ, ಶರಣರು ಮಾತ್ರ ದಯೆಯೇ ಬೇಕು ಸಕಲ ಪ್ರಾಣಿಗಳೆಲ್ಲರಲಿ ಎಂದು ಹೇಳಿದರು. ಪ್ರಾಣಿ ಬಲಿಗಳನ್ನು ತಡೆದರು. ವೇದವನೋದುವರ ಮುಂದೆ ಅಳುಕಂಡೆಯಾ, ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ. ಇದೇ ಬಸವ ಚಿಂತನೆಯ ತಿರುಳು.
ಸಿರಿಗರ ಬಡೆದವರ ನುಡಿಸಲಾಗದು ಎಂದು ಮನೆ ನೋಡಾ ಬಡವರು ಮನ ನೋಡಾ ಘನಮನ ಸಂಪನ್ನರು ಎಂದು ಬಡವ-ಶ್ರೀಂಮತದ ಅಂತರವನ್ನು ತೊಡೆದುಹಾಕುತ್ತಾರೆ. ಎಲ್ಲಾ ದಿಕ್ಕಿನಲ್ಲಿಯೂ ಕಾರುಣ್ಯ ತೋರಿಸಿದ ಏಕೈಕ ವ್ಯಕ್ತಿ ಬಸವಣ್ಣ. ಇದು ವಿಶ್ವದ ಅದ್ಭುತ ಸಂಸ್ಕೃತಿ. ದಸರಯ್ಯ ಶರಣ ಗಿಡದಿಂದ ಹೂಗಳನ್ನು ಕೀಳಲು ಹೋದಾಗ ಅದಕ್ಕೂ ನೋವಾಗುತ್ತದೆ ಎಂದು ಹೇಳುತ್ತಾರೆ. ಸಸ್ಯಕ್ಕೂ ಜೀವ ಇದೆ ಎಂದು ಹೇಳಿದವರು 12 ನೇ ಶತಮಾನದ ಶರಣರು. ಶರಣರು ನಡೆದ ದಾರಿಯೇ ಬಸವ ಸಂಸ್ಕೃತಿ ಅದೇ ನಮ್ಮ ಜೀವನದ ಮಾರ್ಗವಾಗಬೇಕು.
ಪುಷ್ಪಾರ್ಚನೆ, ಪ್ರಾಸ್ತಾವಿಕ ನುಡಿ
ಬಸವ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮದ ಉದ್ಘಾಟನೆ

ಬಸವರಾಜ ರೊಟ್ಟಿಯವರಿಂದ ಪ್ರಾಸ್ತಾವಿಕ ನುಡಿ
ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಈ ಅಭಿಯಾನವನ್ನು ಹಮ್ಮಿಕೊಳಲಾಗಿದೆ. ಬಸವಣ್ಣನವರು ಆರ್ಥಿಕ, ಸಾಮಾಜಿಕ, ಆಧ್ಯಾತ್ಮಿಕ ಹಾಗೂ ಬೇರೆಲ್ಲ ರಂಗದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದವರು. ರಾಜಸತ್ತೆಯ ಕಾಲದಲ್ಲಿ ಪ್ರಜಾಸತ್ತೆಗೆ ಅನುವು ಮಾಡಿಕೊಟ್ಟವರು.

ಬೆಳಗಾವಿ ಅಭಿಯಾನ: 200 ಗಾಯಕರಿಂದ ಬಸವ ಪ್ರಾರ್ಥನೆ
ಸಾರ್ವಜನಿಕ ಸಮಾವೇಶ
ಶಿವಬಸವನಗರದ ಆರ್.ಎನ್. ಶೆಟ್ಟಿ ಮಹಾವಿದ್ಯಾಲಯದ ಆವರಣದಲ್ಲಿ ಬೃಹತ್ ಸಮಾವೇಶ.




ಮಾತಾಜಿ ಪಾದಯಾತ್ರೆ
ಮಿಂಚಿದ ಶರಣ ಪುಟಾಣಿಗಳು
ಎಲ್ಲ ಸಾಂಸ್ಕೃತಿಕ ವಾದ್ಯ ಮೇಳಗಳೊಂದಿಗೆ, ನಾಡಿನ ಸಕಲ ಪೂಜ್ಯರು, ಸಕಲ ಬಸವ ಪರ ಸಂಘಟನೆಗಳು, ಘೋಷವಾಕ್ಯಗಳೊಂದಿಗೆ, ಬಸವಣ್ಣ, ರಾಣಿ ಚೆನ್ನಮ್ಮನ ವೇಷದಲ್ಲಿ ಹಲವು ಶರಣರು ಮಿಂಚಿದರು. ಶರಣರ ವೇಷ ಹೊತ್ತ ಪುಟಾಣಿಗಳು ಇದ್ದರು. ಬಸವ ರಥ ಈ ಉತ್ಸವದ ಮುಖ್ಯ ಆಕರ್ಷಣೆ.


ಸಾಮರಸ್ಯ ನಡಿಗೆ
ರಾಣಿ ಚೆನ್ನಮ್ಮ ವೃತ್ತದಿಂದ ಶಿವಬಸವನಗರದ ಆರ್.ಎನ್. ಶೆಟ್ಟಿ ಮಹಾವಿದ್ಯಾಲಯದ ಆವರಣದವರೆಗೆ ಸಾಮರಸ್ಯದ ನಡಿಗೆ.


ಸಂವಾದ ಮುಕ್ತಾಯ
ಕಲ್ಯಾಣ ಗೀತೆಯೊಂದಿಗೆ ಸಂವಾದ ಮುಕ್ತಾಯಗೊಂಡಿತು. ಸಾಮರಸ್ಯ ನಡಿಗೆಯಲ್ಲಿ ಎಲ್ಲಾರೂ ಪಾಲ್ಗೊಳ್ಳಲು ಪೂಜ್ಯರು ಕರೆ ನೀಡಿದ್ದಾರೆ.
ಭಾಲ್ಕಿ ಶ್ರೀ ಕೃತಿ ಬಿಡುಗಡೆ
ಭಾಲ್ಕಿ ಶ್ರೀಗಳು ಬರೆದ ‘ವಚನ ಪರಿಮಳ’ ಕೃತಿ ಬಿಡುಗಡೆ

ಪ್ರಶ್ನೆ: ಗಟ್ಟಿಯಾಗಿ ಮಾತನಾಡುವ ಸ್ವಾಮಿಗಳ ಬೆನ್ನಿಗೆ ಯಾರೂ ನಿಲ್ಲುತ್ತಿಲ್ಲ?
(ಶಂಕರ ಗುಡಸ ಅವರ ಪ್ರಶ್ನೆ)
ಮೋಟಗಿ ಶ್ರೀಗಳು: ಹಿಂದೆ ನಿಂತಿಲ್ಲ ಎಂಬ ಚಿಂತೆ ಇದೆ. ಮುಂದೆ ನಿಲ್ಲುತ್ತಾರೆ ಎಂಬ ಭರವಸೆ ಇದೆ.
ಭಾಲ್ಕಿ ಶ್ರೀಗಳು: ನಾವೆಲ್ಲಾ ನಿಲ್ಲಲೇಬೇಕು.
ಬಸವಗೀತಾ ಮಾತಾಜಿ:
ಈ ಮಾತು ಸತ್ಯ. ನಾವು ವಚನ ದರ್ಶನ ಪುಸ್ತಕ ವಿರೋಧಿಸುವ ಸಂದರ್ಭದಲ್ಲಿ ನಮ್ಮ ಮೇಲೆ ದಾಳಿ ಆದಾಗ ಗದುಗಿನ ಸನ್ನಿಧಿಯವರು, ಅನೇಕ ಸ್ವಾಮೀಜಿಗಳು, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಮೀಡಿಯಾ ನಮ್ಮ ಬೆನ್ನಿಗೆ ನಿಂತವು.
ಎಲ್ಲಾ ಧರ್ಮಗಳೂ ಮಾನ್ಯತೆ ಪಡೆದಿರುವಾಗ ನಮಗೆ ಏಕೆ ತೊಂದರೆಯಾಗುತ್ತಿದೆ?
ಬೇರೆಯವರೂ ಹಲವಾರು ವರ್ಷಗಳ ಸಂಘರ್ಷ ಮಾಡಿ ಮಾನ್ಯತೆ ಪಡೆದಿರುತ್ತಾರೆ. ನಮಗೂ ಅದೇ ಸ್ಥಿತಿ. ಆದರೆ ಭವಿಷ್ಯದಲ್ಲಿ ನಮಗೂ ಮಾನ್ಯತೆ ಸಿಗುತ್ತದೆ.
(ಗದಗ ಶ್ರೀಗಳು)
ಪ್ರಶ್ನೆ: ಪ್ರಸ್ತುತ ಸಮಾಜದಲ್ಲಿ ಜಾತಿ ವ್ಯವಸ್ಥೆ ಖೇದನೀಯ.
ನಾವೆಲ್ಲಾ ಅದರ ವಿರುದ್ಧ ಹೋರಾಡುತ್ತಿದ್ದೇವೆ.
(ಮೋಟಗಿ ಶ್ರೀಗಳು)
ಸಾರ್ವಜನಿಕರ ಪ್ರಶ್ನೆ: ಕಾವಿ ಹಾಕಿದ್ದು ಧರ್ಮ ಪ್ರಚಾರಕ್ಕೋ ಅಥವಾ ರಾಜಕೀಯಕ್ಕೋ, ಸಣ್ಣ ಮಠಗಳನ್ನು ಏಕೆ ನಿರ್ಲಕ್ಷ್ಯಿಸುವಿರಿ?
ನಮ್ಮಲ್ಲಿ ಅಂತಹ ವ್ಯವಸ್ಥೆ ಇಲ್ಲ. ಆದರೆ ಎಲ್ಲಾದರೂ ಲೋಪಗಳಿದ್ದರೆ ನಾವು ಸರಿಪಡಿಸಿಕೊಳ್ಳುತ್ತೇವೆ.
(ಉತ್ತರ: ಮೋಟಗಿ ಶ್ರೀಗಳು)
ಪ್ರಶ್ನೆ: ನಿಜಾಚರಣೆಗೆ ಕ್ರಿಯಾ ಮೂರ್ತಿಗಳ ಕೊರತೆಗೆ ಪರಿಹಾರವೇನು?
ಕ್ರಿಯಾ ಮೂರ್ತಿಗಳು ಒಬ್ಬರೇ ಆಗಬೇಕೆಂದಿಲ್ಲ. ನೀವು ಬೇಕಾದರೂ ಅದರ ಅಭ್ಯಾಸವನ್ನು ಮಾಡಿ ಕ್ರಿಯಾಮೂರ್ತಿಗಳಾಗಬಹುದು.
(ಉತ್ತರ: ನಿಜಗುಣ ಶ್ರೀಗಳು)
ಪ್ರಶ್ನೆ: ಈಗಿನ ಸರ್ಕಾರ ಮಕ್ಕಳನ್ನು ಹೊಡೆಯಬೇಡಿ ಎಂಬ ನಿರ್ಧಾರಕ್ಕೆ ಬಂದಿದೆ. ಆದರೆ ಶಿಕ್ಷಕರ ಹೊಡೆತ ಕಡಿಮೆಯಾದಂತೆ ಪೋಲಿಸರ ಹೊಡೆತಗಳು ಹೆಚ್ಚಾದವು?
ಗುರು ಶಿಷ್ಯರನ್ನು ದಂಡಿಸಲೇಬೇಕು.
(ಉತ್ತರ: ಮೋಟಗಿ ಶ್ರೀಗಳು)
ಪ್ರಶ್ನೆ: ಪಾಶ್ಚಿಮಾತ್ಯ ಸಂಸ್ಕೃತಿಗೆ ಯುವಕರು ಮಾರು ಹೋಗುತ್ತಿರುವ ಹಿನ್ನೆಲೆಯಲ್ಲಿ ಅದರ ಉಳಿವಿಗಾಗಿ ಏನು ಮಾಡಬೇಕು?
ಅದರ ಉಳಿವಿಗಾಗಿಯೇ ಈ ಅಭಿಯಾನ. ಕೇವಲ ಪಾಶ್ಚಿಮಾತ್ಯ ಅಲ್ಲಾ ಇಲ್ಲಿನ ವೈದಿಕ ಪರಂಪರೆಗಳೂ ಯುವಕರ ಮೇಲೆ ಪ್ರಭಾವ ಬೀರಿವೆ.
(ಉತ್ತರ: ನಿಜಗುಣ ಶ್ರೀಗಳು)
ಪ್ರಶ್ನೆ: ಇಂದು ಹಲವಾರು ಬಸವ ಸಂಘಟನೆಗಳಲ್ಲಿ ಕೆಲವರು ಕರ್ಮ ಸಿದ್ಧಾಂತ ಒಪ್ಪಿದ್ದರೆ, ಕೆಲವರು ಒಪ್ಪಿಲ್ಲ. ಯಾವುದು ಸರಿ?
ಜಗತ್ತಿನ ಹಲವು ದಾರ್ಶನಿಕರು ಒಪ್ಪಿದ್ದಾರೆ. ಆದರೆ ಬಸವ ಧರ್ಮದಲ್ಲಿ ಅದನ್ನು ಒಪ್ಪಿಲ್ಲ. ಲಿಂಗ ಧರಿಸಿದ ಮೇಲೆ ಕರ್ಮದ ಫಲ ಬರುವುದೇ ಇಲ್ಲ. ನಾವೇ ಲಿಂಗಾನುಸಂಧಾನ ಮಾಡಿದ ಮೇಲ ಕರ್ಮದ ಬಾಧೆ ಇರುವುದಿಲ್ಲ.
(ಉತ್ತರ ಗದಗ ಶ್ರೀಗಳು)
ಪ್ರಶ್ನೆ: ನಮ್ಮ ಹಿರಿಯರು ಹಿಂದೂ ಲಿಂಗಾಯತರು ಅಂತ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಈಗ ನಾವು ಲಿಂಗಾಯತ ಅಂತಾ ಬರೆಸಿದರೆ ನಮಗೆ ಸೌಲಭ್ಯಗಳು ಸಿಗುತ್ತವೆಯೇ?
ಸ್ವಾತಂತ್ರ್ಯ ಪೂರ್ವದಲ್ಲಿ ಲಿಂಗಾಯತ ಒಂದೇ ಧರ್ಮವಿತ್ತು. ನಂತರ ಯಾರದೋ ಕುತಂತ್ರದಿಂದ ಹಿಂದೂ ಸೇರ್ಪಡೆಯಾಯಿತು. ಅದನ್ನು ತೆಗೆದು ಹಾಕಲೇ ನಾವಿಂದು ಹೋರಾಡುತ್ತಿದ್ದೇವೆ. ಲಿಂಗಾಯತ ಎಂದು ಬರೆಸಿದರೆ ಎಲ್ಲಾ ಸೌಲಭ್ಯಗಳೂ ದೊರೆಯುತ್ತವೆ.
(ಉತ್ತರ ಗದಗ ಶ್ರೀಗಳು)
ಪ್ರಶ್ನೆ: 12ನೇ ಶತಮಾನದ ಬಸವಣ್ಣನವರಿಗೆ 16ನೇ ಶತಮಾನದ ಮಾರ್ಟಿನ್ ಲೂಥರ್ ನನ್ನು ಹೋಲಿಸುವುದು ಸರಿಯೇ?
ಬುದ್ಧ, ಅಂಬೇಡ್ಕರ್ ಹಾಗೂ ಹಲವಾರು ದಾರ್ಶನಿಕರನ್ನ ಪ್ರೇರಣೆಯಾಗಿ ತೆಗೆದುಕೊಂಡು ಹೇಳುತ್ತೇವೆ. ಆದರೆ ಅದು ಹೋಲಿಕೆ ಅಲ್ಲಾ.
(ಉತ್ತರ ನಿಜಗುಣ ಶ್ರೀಗಳು)
ವಿಡಿಯೋ, ಫೋಟೋಗಳಲ್ಲಿ ಸಂವಾದ


ಪ್ರಶ್ನೆ: ವಿರಕ್ತ ಮಠಾಧೀಶರು ರೇಣುಕರ ಜಯಂತಿಯನ್ನು ಏಕೆ ಆಚರಿಸುತ್ತಿದ್ದಾರೆ?
ಅದು ಅವರ ಅಜ್ಞಾನವೇ ಹೊರತು ಬೇರೆಯಿಲ್ಲ.
ಹಂದಿಗುಂದ ಶ್ರೀಗಳು
ಪ್ರಶ್ನೆ: ಜಾತಿಯನ್ನು ವಿರೋಧಿಸಿದ ತತ್ವದಲ್ಲೇ 99 ಉಪಪಂಗಡಗಳು ಇದ್ದಾವೆ ಹೇಗೆ?
ಅವು ಉಪಪಂಗಡಗಳೇ ವಿನಃ ಜಾತಿಗಳಲ್ಲ. ಬಸವಧರ್ಮದಲ್ಲಿ ಕಾಯಕಕ್ಕೆ ಮಹತ್ವ ಕೊಟ್ಟರೇ ವಿನಃ ಜಾತಿಗಲ್ಲ.
ವಾಗ್ದೇವಿ ತಾಯಿ
ಪ್ರಶ್ನೆ: ಬಸವ ಧರ್ಮ ಶೈಕ್ಷಣಿಕ ರಂಗದಲ್ಲಿ ಹೇಗೆ ಸಹಾಯಕ?
ಶಿಕ್ಷಣ ರಂಗದಲ್ಲಿ ಕಡ್ಡಾಯವಾಗಿ ಬಸವ ಧರ್ಮ ಬರಲೇಬೇಕು. ಶಿಕ್ಷಣ ಎಂದರೇ ನೈತಿಕತೆ. ಅದು ಬಸವಧರ್ಮದಲ್ಲಿ ಅಪಾರವಾಗಿದೆ.
ವಾಗ್ದೇವಿ ತಾಯಿ
ಪ್ರಶ್ನೆ: ರಾಜಕೀಯ ನಾಯಕರು ಧರ್ಮಕ್ಕಾಗಿ ಒಂದಾಗುತ್ತಾರೋ ಅಥವಾ ಅಧಿಕಾರಕ್ಕಾಗಿಯೋ?
ರಾಜಕಾರಣಿಗಳು ಇದುವರೆಗೂ ಅಧಿಕಾರಕ್ಕಾಗಿಯೇ ಒಂದಾಗಿದ್ದಾರೆಯೇ ವಿನಃ ಧರ್ಮಕ್ಕಾಗಿ ಅಲ್ಲಾ. ನೀವೆಲ್ಲಾ ಜಾಗೃತಾರದರೆ ಮುಂದೊಂದು ದಿನ ಧರ್ಮಕ್ಕಾಗಿ ಒಂದಾಗಬಹುದು.
ಹಂದಿಗುಂದ ಶ್ರೀಗಳು
ಪ್ರಶ್ನೆ: ವಚನ ಸಾಹಿತ್ಯಕ್ಕೂ-ಉಪನಿಷತ್ತಿಗೂ ವ್ಯತ್ಯಾಸವೇನು?
ಉಪನಿಷತ್ತುಗಳಲ್ಲಿರುವುದೆಲ್ಲಾ ವಚನಗಳಲ್ಲಿದೆ. ಆದರೆ ವಚನಗಳಲ್ಲಿರುವುದು ಉಪನಿಷತ್ತಿನಲ್ಲಿಲ್ಲ.
ಸಾಣೇಹಳ್ಳಿ ಶ್ರೀಗಳು
ಪ್ರಶ್ನೆ: ನಿಮ್ಮದೇ ರಕ್ತ ಸಂಬಂಧಿಗಳನ್ನು ಮಠಗಳಲ್ಲಿ ನೇಮಿಸುವುದು ಸರಿಯೇ?
ನಮ್ಮಲ್ಲಿ ಎರಡು ರೀತಿಯ ಮಠಗಳಿವೆ. ಒಂದು ಇತಿಹಾಸದಿಂದಲೂ ತಮ್ಮ ಮುಂದಿನ ಮರಿಗಳನ್ನು ತಮ್ಮದೇ ಕುಟುಂಬದವರನ್ನು ಮಾಡಿಕೊಳ್ಳುವುದು. ಕೆಲವು ಕಡೆ ಭಕ್ತ ವರ್ಗದಿಂದ ಮಾಡಿಕೊಳ್ಳಬಹುದು.
ಸಾಣೇಹಳ್ಳಿ ಶ್ರೀಗಳು
ಪ್ರಶ್ನೆ: ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಕ್ಕಿದೆಯೇ?
ನಾವೆಲ್ಲಾ ಅದರ ಹೋರಾಟದಲ್ಲೇ ಭಾಗಿಯಾಗಿದ್ದೇವೆ. ನಮ್ಮ ಮನವಿ ಭಾರತ ಸರ್ಕಾರದ ಹತ್ತಿರ ಇದೆ. ಇನ್ನೂ ಮಾನ್ಯತೆ ದೊರೆತಿಲ್ಲ.
ಗದಗ ಶ್ರೀಗಳು
ಪ್ರಶ್ನೆ: ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಬಸವಾದಿ ಶರಣರು ಹಿಂದೂ ಧರ್ಮವನ್ನೇಕೆ ವಿರೋಧಿಸಿದರು?
ಹಿಂದೂ ಒಂದು ಬದುಕಿನ ಪದ್ಧತಿ. ಅದನ್ನು ಪ್ರಧಾನಿಯವರೇ ಒಪ್ಪಿದ್ದಾರೆ. ಅಲ್ಲಿರುವ ವರ್ಣ ಪದ್ಧತಿ ಮತ್ತು ಅಸಮಾನತೆಯ ವಿರುದ್ಧ ಹೋರಾಡಿದರು. ಯಾವುದನ್ನೂ ವಿರೋಧಿಸಲಿಲ್ಲ.
(ಉತ್ತರ ಗದಗ ಶ್ರೀಗಳು)
ಪ್ರಶ್ನೆ: 15-16 ನೇ ಶತಮಾನವನ್ನು ಅಂಧಕಾರ ಯುಗ ಎನ್ನುತ್ತಾರೆ. ಅದಕ್ಕೂ ಮುಂಚೆ ಇದ್ದ ಲಿಂಗಾಯತ ಧರ್ಮ ಈ ಶತಮಾನಗಳ ಮೇಲೆ ಏಕೆ ಬೆಳಕು ಬೀರಲಿಲ್ಲ.
12 ನೇ ಶತಮಾನದ ನಂತರ ಬಿಜ್ಜಳನ ದುರಾಡಳಿತಕ್ಕೆ ಸಿಲುಕಿ ವಚನಗಳ ಪ್ರಭಾವ ಕಡಿಮೆಯಾಗಿತ್ತು. ಕಲ್ಯಾಣ ಕ್ರಾಂತಿಯ ನಂತರ ಶರಣರ-ವಚನಗಳ ಹತ್ಯೆಯಾಯಿತು. ಆಗ ಬೇರೆ ಧರ್ಮದ ಪ್ರಭಾವ ಲಿಂಗಾಯತರ ಮೇಲಿತ್ತು. ನಂತರ 17ನೇ ಶತಮಾನದಲ್ಲಿ ಬಂದ ಎಡೆಯೂರು ಸಿದ್ಧಲಿಂಗೇಶ್ವರರು ವಚನಗಳನ್ನು ಬೆಳಕಿದೆ ತಂದರು.
(ಉತ್ತರ ಗದಗ ಶ್ರೀಗಳು)
ಪ್ರಶ್ನೆ: ಬಸವಣ್ಣನವರ ಮುಂಚೆ ಇದ್ದ ಧರ್ಮ ಯಾವುದು ಮತ್ತು ಅದಕ್ಕೂ ಇದಕ್ಕೂ ಇರುವ ವ್ಯತ್ಯಾಸಗಳೇನು?
ಅಲ್ಲಿ ಎಲ್ಲಾ ವೈದಿಕ ಆಚರಣೆಗಳಿದ್ದವು. ಸಮಾನತೆ ಇರಲಿಲ್ಲ. ಅದರ ವಿರುದ್ಧ ಹುಟ್ಟಿದ್ದೇ ಬಸವ ಧರ್ಮ
(ಉತ್ತರ ಭಾಲ್ಕಿ ಶ್ರೀಗಳು)
ಪ್ರಶ್ನೆ: ಅಧ್ಯಯನದಲ್ಲಿ ಎಲ್ಲಾ ಮಕ್ಕಳೂ ಜಾಣರೇ. ಆದರೆ ಆಧ್ಯಾತ್ಮದಲ್ಲಿ ಹಿಂದೆ ಉಳಿದಿದ್ದಾರೆ. ಅದಕ್ಕೆ ಪರಿಹಾರವೇನು.
ಪಾಲಕರು, ಶಿಕ್ಷಕರು ಸಣ್ಣ ವಯಸ್ಸಿನ ಮಕ್ಕಳಿದ್ದಾಗಿನಿಂದಲೇ ನಾವು ಸಂಸ್ಕಾರ ಕೊಡಬೇಕು
(ಉತ್ತರ ಗದಗ ಶ್ರೀಗಳು)
ಪ್ರಶ್ನೆ: ಬಸವಣ್ಣನವರು ಮೂಲತಃ ಭ್ರಾಹ್ಮಣರೆಂದು ತಿಳಿದಿದ್ದೇವೆ. ಅವರು ಲಿಂಗಾಯತ ಧರ್ಮವನ್ನು ಸ್ಥಾಪಿಸುವ ಕಾರಣವೇನಿತ್ತು?
ಬಸವಣ್ಣನವರು ಆ ಕುಲದಲ್ಲಿ ಜನಿಸಿದ್ದರೂ ಅಲ್ಲಿರುವ ಮೇಲು ಕೀಳುಗಳು ಅವರಿಗೆ ಹಿಡಿಸಲಿಲ್ಲ. ಸ್ತ್ರೀಯರಿಗೆ ಧರ್ಮದ ಸಂಸ್ಕಾರ ಕೊಡದ ಈ ವ್ಯವಸ್ಥೆ ಬೇಡ ಎಂದು, ಇಲ್ಲಿದ್ದರೆ ಸಾಮಾಜಿಕ ಅನಿಷ್ಟಗಳನ್ನು ದೂರ ಮಾಡಲು ಸಾಧ್ಯವಿಲ್ಲ ಎಂದು ಅಲ್ಲಿಂದ ಹೊರಗಡೆ ಬಂದು ಲಿಂಗಾಯತ ಧರ್ಮ ಸ್ಥಾಪಿಸಿದರು.
(ಉತ್ತರ ಗದಗ ಶ್ರೀಗಳು)
ಪ್ರಶ್ನೆ: ಲಿಂಗಾಯತ ಧರ್ಮವನ್ನು ಕೆಲವರು ಬಸವ ಧರ್ಮ ಎಂದು ಕರೆಯುತ್ತಾರೆ. ಅದು ಎಷ್ಟು ಸೂಕ್ತ.?
ಲಿಂಗಾಯತ ಧರ್ಮವನ್ನು ಸ್ಥಾಪಿಸಿದವರು ವಿಶ್ವಗುರು ಬಸವಣ್ಣನವರು. ಅದಕ್ಕಾಗಿ ಅದನ್ನು ಬಸವ ಧರ್ಮ ಎಂದು ಕರೆಯುತ್ತಾರೆ. ಲಿಂಗಾಯತ-ಬಸವಧರ್ಮ ಎರಡೂ ಒಂದೇ.
(ಉತ್ತರ ಗದಗ ಶ್ರೀಗಳು)
ಬೆಳಗಾವಿ
ಪ್ರಶ್ನೆ: ಪ್ರಸ್ತುತ AI ಯುಗದಲ್ಲಿ ಮಕ್ಕಳಲ್ಲಿ ಹೇಗೆ ಆಧ್ಯಾತ್ಮಿಕತೆಯನ್ನು ಬೆಳೆಸಬೇಕು?
ಇಡೀ ವಿಶ್ವದಲ್ಲಿ ಸಂಚಲನ ಮೂಡಿಸಿದ AI, ಇದು ಒಂದು ತಂತ್ರಾಂಶ. ಅದರಿಂದ ಮಾಹಿತಿ ಪಡೆಯಬಹುದೇ ಹೊರತು ಗುರು ಸನ್ನಿಧಾನ ಸಿಗುವುದಿಲ್ಲ. ಗುರುವಿನ ಸಾನಿಧ್ಯ ಬೇಕೆಂದರೆ ಅವರ ಬಳಿಯೇ ಬರಬೇಕು, ದೀಕ್ಷೆಯನ್ನೇ ಪಡೆದುಕೊಳ್ಳಬೇಕು. ಅದು ಒಂದು ಗೊಂಬೆ ಮಾತ್ರ. ಅದು ಪ್ರಭಾವಳಿ ಗ್ರಹಿಸಲು ಅಥವಾ ಬೀರಲು ಸಾಧ್ಯವಿಲ್ಲ.
(ಶೇಗುಣಸಿ ಮಹಾಂತ ಶ್ರೀಗಳು)
ಪ್ರಶ್ನೆ: ಅಂತರ್ಜಾತಿ ವಿವಾಹ ಒಪ್ಪುತ್ತೀರಾ ಇಲ್ಲವಾ?
ಜಾತಿಗಳು ಎರಡೇ ಒಂದು ಹೆಣ್ಣು-ಒಂದು ಗಂಡು. ಅಂತರ್ಜಾತಿ ಎಂಬುದಿಲ್ಲ. ಯಾವ ಸಮುದಾಯದವರೂ ಲಿಂಗ ಕಟ್ಟಿಕೊಂಡರೂ ಯಾರು ಯಾರನ್ನು ಬೇಕಾದರೂ ವಿವಾಹವಾಗಬಹುದು.
(ನಿಜಗುಣ ಶ್ರೀಗಳು)
ಪ್ರಶ್ನೆ: ಜಾತಿ ಗಣತಿ ಕಾಲಂನಲ್ಲಿ ಏನೆಂದು ನೊಂದಾಯಿಸಬೇಕು?
ಧರ್ಮದ ಕಾಲಂನಲ್ಲಿ ಲಿಂಗಾಯತ, ನಂತರ ಜಾತಿ, ಒಳಪಂಗಡವನ್ನು ಬರೆಸಬೇಕು. ಸ್ಪಷ್ಟವಾಗಿ ಬರೆಸಬೇಕು.
(ಸಾಣೇಹಳ್ಳಿ ಶ್ರೀಗಳು)
ಪ್ರಶ್ನೆ: ಬಸವ ತತ್ವದಿಂದ ವಿಮುಖವಾಗುತ್ತಿರುವ ಯುವಕರನ್ನು ಹೇಗೆ ತತ್ವಕ್ಕೆ ಕರೆತರುತ್ತೀರಿ?
ವಚನ ಪಠಣ, ಧರ್ಮದ ಪರಿಚಯ ಮಾಡಿಸಬೇಕು. ಕೇವಲ ಪಠ್ಯಕ್ಕೆ ಸೀಮಿತವಾದ ವಚನಗಳನ್ನು ಅಭ್ಯಾಸಕ್ಕೆ ತರಬೇಕು. ಅವಾಗ ಅವರು ಬಸವ ತತ್ವಕ್ಕೆ ವಾಲುತ್ತಾರೆ.
(ಉತ್ತರ ಭಾಲ್ಕಿ ಶ್ರೀಗಳು)
ಪ್ರಶ್ನೆ: ವೀರಶೈವ-ಲಿಂಗಾಯತ ಬೇರೆ ಬೇರೆ ಹೇಗೆ?
ಕೆಲವು ವೈದಿಕ ಧರ್ಮಗಳು, ಕೆಲವು ಅವೈದಿಕ. ವೇದ ಒಪ್ಪದ ಧರ್ಮಗಳಲ್ಲಿ ಜೈನ, ಬೌದ್ಧ, ಲಿಂಗಾಯತ. ವೇದ ಒಪ್ಪುವ ಧರ್ಮಗಳು ಶೈವ ಮುಂತಾದವು. ವೀರಶೈವ ಶೈವದ ಒಂದು ಶಾಖೆ. ಕೆಲವರು ಬಸವಣ್ಣನವರ ಕಾಲದಲ್ಲಿ ವೀರಶೈವರು ಅವರ ಅನುಯಾಯಿಗಳಾದರು. ಬಸವತತ್ವ ಆಚರಣೆ ಮಾಡುವವರು ಲಿಂಗಾಯತರು. ಮಾಡದವರು ವೀರಶೈವರು. ಕೆಲವೊಮ್ಮೆ ಎರಡೂ ಒಂದೇ ಎನ್ನುವುದೂ ಸತ್ಯ, ಕೆಲವೊಮ್ಮೆ ಎರಡೂ ಬೇರೆ ಎಂಬುವುದು ಸತ್ಯ.
(ಉತ್ತರ ಗದಗ ಶ್ರೀಗಳು)
ಪ್ರಾಸ್ತಾವಿಕ ನುಡಿ: ಮೋಟಗಿ ಮಠದ ಪೂಜ್ಯ ಪ್ರಭುಚನ್ನಬಸವ ಸ್ವಾಮೀಜಿ
ಬೀದರಿನಿಂದ ಶುರುವಾದ ಈ ಅಭಿಯಾನ ಇಂದು 11 ನೇ ದಿನಕ್ಕೆ ಬಂದು ತಲುಪಿದೆ.
ಶ್ರೀಗಳು ಇಷ್ಟು ಉತ್ಸಾಹ ತೋರಿಸುತ್ತಿರುವುದು ಭವಿಷ್ಯದ ಪ್ರಜೆಗಳಾದ ನಿಮಗೋಸ್ಕರ. ಈ ದೇಶ, ನಾಡು, ತಂದೆ-ತಾಯಿ, ವಚನ ಸಾಹಿತ್ಯದ ಋಣವನ್ನು ತೀರಿಸಲು ನಾನು ಪೊರಕೆಯಾಗುತ್ತೇನೆ ಎನ್ನುವ ಯುವಕರಿಂದ ಮಾತ್ರ ಈ ನಾಡು ಕಟ್ಟಲು ಸಾಧ್ಯ.
ಇಂದು ಎಲ್ಲಾರೂ ಡಾಕ್ಟರ್, ಇಂಜಿನಿಯರ್ ಆಗಿ, ಬೇರೆ ನಾಡುಗಳಿಗೆ ನೀವು ಪಲಾಯನವಾದ ಮಾಡಿದರೆ, ನಿಮ್ಮ ಹೆತ್ತವರಿಗಾಗಿ, ಈ ನಾಡು-ನುಡಿಗಾಗಿ ಶ್ರಮಿಸುವವರು ಯಾರು? ಈ ಅಭಿಯಾನದ ಸಂಕಲ್ಪವೇ ಕಳಚುತ್ತಿರುವ ಯುವಕರ ಕೊಂಡಿಯನ್ನು ಬಂಗಾರ ಬೆಸುಗೆ ಹಾಕಿ ಒಂದುಗೂಡಿಸುವುದಾಗಿದೆ.
ಸಮಾಜದ ಲೆಕ್ಕ ತಪ್ಪಿಹೋಗಿದೆ. ಅದನ್ನು ಸರಿಪಡಿಸಲೋಸುವಲಗವೇ ಈ ಸಂವಾದ. ನಕಾರಾತ್ಮಕ ವಿಚಾರಗಳನ್ನು ತೆಗೆದು, ಸಕಾರಾತ್ಮಕ ಭಾವವನ್ನು ಬೆಳೆಸಿಕೊಳ್ಳಿ.

ವಿದ್ಯಾರ್ಥಿಗಳೊಂದಿಗೆ, ಸಾರ್ವಜನಿಕರೊಂದಿಗೆ ಸಂವಾದ


ವಾಗ್ದೇವಿ ಮಾತಾಜಿ ಅವರಿಂದ ಷಟಸ್ಥಲ ಧ್ವಜಾರೋಹಣ

ಜ್ಯೋತಿ ಬೆಳಗಿಸಿ ಮೂಲಕ ಸಂವಾದದ ಉದ್ಘಾಟನೆ

ಪ್ರಾರ್ಥನೆ, ಪುಷ್ಪಾರ್ಚನೆ
ಪ್ರಭುದೇವ ಪ್ರತಿಷ್ಠಾನ ಮಾತೃ ಮಂಡಳಿ ತಾಯಂದಿರು ಪ್ರಾರ್ಥನೆ. ಬಸವರಾಜ ರೊಟ್ಟಿ, ಚಂದ್ರಶೇಖರ ಗುಡಸಿ ಗ್ರಂಥ-ಪುಷ್ಪ ಸಮರ್ಪಣೆ.

ಶ್ರೀಗಳ ಸ್ವಾಗತಿಸಿದ ವಿದ್ಯಾರ್ಥಿಗಳು
ವಾದ್ಯ ಮೇಳದೊಂದಿಗೆ ಶ್ರೀಗಳು ಮತ್ತು ಸಾರ್ವಜಾನಿಕರನ್ನು ಸ್ವಾಗತಿಸಿದ ವಿದ್ಯಾರ್ಥಿಗಳು.

ಬೆಳಗಾವಿ ಬಸವ ಸಂಸ್ಕೃತಿ ಅಭಿಯಾನ ವೇದಿಕೆ ಸಜ್ಜು
11 ಗಂಟೆಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ನಡೆಯುವ ಸಂವಾದ ಕಾರ್ಯಕ್ರಮಕ್ಕೆ ಎಸ್ಜಿಐಐಟಿ ತಾಂತ್ರಿಕ ಮಹಾವಿದ್ಯಾಲಯದ ಶ್ರೀ ಶಿವಕುಮಾರ ಸಂಬರಗಿಮಠ ಸಭಾಭವನ ಶೃಂಗಾರಗೊಂಡಿದೆ.
ಇವತ್ತಿನ ಕಾರ್ಯಕ್ರಮಗಳು
11 ಗಂಟೆಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯುವ ಎಸ್ಜಿಐಐಟಿ ತಾಂತ್ರಿಕ ಮಹಾವಿದ್ಯಾಲಯದ ಶ್ರೀ ಶಿವಕುಮಾರ ಸಂಬರಗಿಮಠ ಸಭಾಭವನ ಶೃಂಗಾರಗೊಂಡಿದೆ.
10:30ಕ್ಕೆ ಡಾ. ಶಿವಬಸವ ಮಹಾಸ್ವಾಮಿಗಳವರ ವೃತ್ತದಲ್ಲಿ ಬಸವ ರಥಕ್ಕೆ ಸ್ವಾಗತ.
11:00ಗೆ ಎಸ್.ಜಿ.ಬಿ.ಐ.ಟಿ. ತಾಂತ್ರಿಕ ಮಹಾವಿದ್ಯಾಲಯದ ಶ್ರೀ ಶಿವಕುಮಾರ ಸಂಬರಿಗಿಮಠ ಸಭಾಭವನದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ.
4 ಗಂಟೆಗೆ ಅಭಿಯಾನದ ಸಾಮರಸ್ಯ ನಡಿಗೆ, ರಾಣಿ ಚೆನ್ನಮ್ಮ ವೃತ್ತದಿಂದ ಆರಂಭವಾಗಿ ಶಿವಬಸವನಗರದ ಆರ್.ಎನ್. ಶೆಟ್ಟಿ ಮಹಾವಿದ್ಯಾಲಯದ ಆವರಣದವರೆಗೆ.
ಸಂಜೆ 6 ಗಂಟೆಗೆ ಸಾರ್ವಜನಿಕ ಸಮಾವೇಶ – ಶಿವಬಸವನಗರದ ಆರ್.ಎನ್. ಶೆಟ್ಟಿ ಮಹಾವಿದ್ಯಾಲಯದ ಆವರಣದಲ್ಲಿ.
ರಾತ್ರಿ 8 ಗಂಟೆಗೆ ಶಿವಸಂಚಾರ ಕಲಾತಂಡ ಸಾಣೇಹಳ್ಳಿ ‘ಜಂಗಮದೆಡೆಗೆ’ ನಾಟಕ ಪ್ರದರ್ಶನ.
ರಾತ್ರಿ 9 ರ ನಂತರ ಪ್ರಸಾದ ದಾಸೋಹ.
ಅಭಿಯಾನದ ವರದಿಗಳನ್ನು ಕ್ಷಣ ಕ್ಷಣಕ್ಕೂ ಮಾಡುತ್ತಿರುವ ಬಸವ ಮೀಡಿಯಾದವರಿಗೆ ಧನ್ಯವಾದ. ನಿಮ್ಮ ಮೇಲೆ ಬಸವಣ್ಣನವರ ಆಶೀರ್ವಾದವಿದೆ.