ಬೆಳಗಾವಿ
ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಗುರುಬಸವ ಬಳಗ ಮತ್ತು ತಾಲೂಕು ಜಾಗತಿಕ ಲಿಂಗಾಯತ ಮಹಾಸಭೆ ಸಹಯೋಗದಲ್ಲಿ ತಿಂಗಳ 3ನೆಯ ರವಿವಾರದ ಮಾಸಿಕ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮ ನಡೆಯಿತು.
19ನೆಯ ಮಾಸಿಕ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮ ಇದಾಗಿದ್ದು ಶ್ರೀ ನಿಜಗುಣ ಶಿವಯೋಗಿಗಳ ಮಠದಲ್ಲಿ ಆಯೋಜಿಸಲಾಗಿತ್ತು. ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆಯನ್ನು ಮಹಾಂತೇಶ ತೋರಣಗಟ್ಟಿ, ಜಿಲ್ಲಾ ಸಂಚಾಲಕರು ಸಂಚಾರಿ ಗುರುಬಸವ ಬಳಗ ಬೆಳಗಾವಿ ಇವರು ನೆರವೇರಿಸಿಕೊಟ್ಟರು.

ಧಾರವಾಡ ತಪೋವನದ ಕುಮಾರಸ್ವಾಮಿಗಳ ಶಿಷ್ಯರಾದ ಸತೀಶ ಸವದಿ ಅವರು ಇಷ್ಟಲಿಂಗ ಪೂಜಾ ಹಾಗೂ ಶಿವಯೋಗದಿಂದ ಶರೀರ ಮತ್ತು ಮನಸ್ಸಿನ ಮೇಲೆ ಆಗುವ ಪರಿಣಾಮಗಳ ಬಗ್ಗೆ ವೈಜ್ಞಾನಿಕವಾಗಿ ತಿಳಿಸುತ್ತಾ, ಶಿವಯೋಗ ಒಂದು ಪರಿಪೂರ್ಣ ಯೋಗ, ಇದರಿಂದ ಪಂಚೇಂದ್ರಿಯಗಳನ್ನು ನಿಗ್ರಹಿಸುತ್ತಾ ಗ್ರಹಸ್ಥರು ಕೂಡ ಲಿಂಗಾಂಗಯೋಗದ ಸಾಮರಸ್ಯವನ್ನು ಅರಿತುಕೊಂಡು ಕುಂಡಲಿನಿ ಶಕ್ತಿಗಳನ್ನ ಜಾಗೃತಿಗೊಳಿಸಿಕೊಂಡು ಅಂತರಾತ್ಮ ಶುದ್ಧೀಕರಣಗೊಳಿಸಿಕೊಂಡು ಅರಿವಿನಡಿಗೆ ನಡೆಯುವುದೇ ಶಿವಯೋಗ ಎಂದರು. ಜೊತೆಗೆ ಅಲ್ಲಮ ಪ್ರಭುಗಳ ಕಾಲಜ್ಞಾನ ವಚನಗಳ ಕುರಿತಾಗಿ ಮಾಹಿತಿ ನೀಡಿದರು.

ಸತೀಶ ಸವದಿ ಅವರನ್ನು ಬಳಗದ ವತಿಯಿಂದ ಸತ್ಕರಿಸಲಾಯಿತು. ಚಂದ್ರಶೇಖರ ಹುಬ್ಬಳ್ಳಿ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ ರೊಟ್ಟಿ ಸ್ವಾಗತಿಸಿದರು. ಬಿ.ಜಿ.ವಾಲಿಇಟಗಿ ಶರಣು ಸಮರ್ಪಿಸಿದರು.
ಈ ಸಂದರ್ಭದಲ್ಲಿ ಎನ್.ಪಿ. ಉಪ್ಪಿನ, ಆನಂದ ಕೊಂಡಗುರಿ, ದಯಾನಂದ ಹಂಚಿನಮನಿ, ಶಿವಪುತ್ರ ಇಟಗಿ, ಅಶೋಕ ಪಾಚ್ಚಾಪುರ, ನಾಗನಗೌಡ ಹಾದಿಮನಿ, ಶ್ರೀಕಾಂತ ಪಡಗಲ್, ಬಸನಗೌಡ ಹಾದಿಮನಿ, ಗುರುಬಸವ ಬಳಗ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ, ಅಕ್ಕನ ಬಳಗದ ಸದಸ್ಯರು ಉಪಸ್ಥಿತರಿದ್ದರು.