ಕೊಪ್ಪಳ ಕಾರ್ಖಾನೆ ವಿರೋಧಿ ಹೋರಾಟಕ್ಕೆ ಗದಗ ಶ್ರೀಗಳ ಬೆಂಬಲ

ಬಸವ ಮೀಡಿಯಾ
ಬಸವ ಮೀಡಿಯಾ

ಕೊಪ್ಪಳ:

ಕೊಪ್ಪಳ ನಗರವನ್ನು ಸುತ್ತುವರೆದು ಕಾರ್ಖಾನೆ ಸ್ಥಾಪನೆ ಮತ್ತು ವಿಸ್ತರಣೆಯನ್ನು ವಿರೋಧಿಸಿ ಕೊಪ್ಪಳ ಜಿಲ್ಲಾ ಬಚಾವೊ ಆಂದೋಲನ ಸಮಿತಿ, ಪರಿಸರ ಹಿತರಕ್ಷಣಾ ಸಮಿತಿ (ಜಂಟಿ ಕ್ರಿಯಾ ವೇದಿಕೆ)ಯ ಅನಿರ್ಧಿಷ್ಟಾವಧಿ ಧರಣಿಯ 18ನೇ ದಿನ ಸೋಮವಾರ ಗದಗ ತೋಂಟದಾರ್ಯ ಮಠದ ಸಿದ್ದರಾಮ ಶ್ರೀಗಳು ಧರಣಿ ಸ್ಥಳಕ್ಕೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಠದ ಸ್ವಾಮಿಗಳಾದವರು ತಮ್ಮನ್ನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳದಿದ್ದಲ್ಲಿ ಅವರ ಬದುಕು ನಿಷ್ಫಲವಾಗಲಿದೆ ಎಂದರು.

ಜನರ ಉಸಿರಾಟಕ್ಕೆ ಬಹುಮುಖ್ಯವಾಗಿ ಮನುಷ್ಯನಿಗೆ ಬೇಕಾದದ್ದು, ಪರಿಶುದ್ಧವಾದ ಗಾಳಿ ಹಾಗೂ ಕುಡಿಯುವ ನೀರು. ಇದು ಇದ್ದರೆ ಮಾತ್ರ  ಆರೋಗ್ಯಕರವಾಗಿರಲು ಸಾಧ್ಯ. ಕೊಪ್ಪಳ ಜಿಲ್ಲೆ ಕಾರ್ಖಾನೆಗಳಿಂದ ಆವರಿಸಿರುವುದರಿಂದ ಎಲ್ಲವೂ ಅಶುದ್ಧವಾಗಿದೆ. ಹಿರೇಬಗನಾಳ, ಚಿಕ್ಕಬಗನಾಳ, ಕಾಸನಕಿಂಡಿ, ಅಲ್ಲನಗರ ಹಾಗೂ ಗಿಣಿಗೇರಾ ಮುಂತಾದ ಹಳ್ಳಿಗಳಿಗೆ ಹೋಗಿ ಬಂದೆ, ಅಲ್ಲಿಯ ವಾತಾವರಣ ಗಮನಿಸಿದಾಗ ನನಗೆ ಭಯವಾಯ್ತು. ಬೇರೆ ಬೇರೆ ಮಾರಕ ರೋಗಗಳಿಗೆ ತುತ್ತಾದ ಜನರನ್ನೂ ಮಾತಾಡಿಸಿದಾಗ ಅವರ ನೋವು, ಸಂಕಟ ವ್ಯಕ್ತವಾದದ್ದು ಕೇಳಿ ಭಯವೆನಿಸಿತು ಎಂದು ಆತಂಕ ವ್ಯಕ್ತಪಡಿಸಿದರು.

ಕಾರ್ಖಾನೆ ವಾಹನಗಳು, ಅವುಗಳ ಹೊಗೆದಟ್ಟಣೆಯಿಂದ ಜನ ಕಂಗೆಟ್ಟಿದ್ದಾರೆ. ಜನಪ್ರತಿನಿಧಿಗಳು ಬಂಡವಾಳಶಾಹಿಗಳ ಹಿಡಿತದಲ್ಲಿದ್ದಾರೆ. ಮಠಾಧೀಶರು ಇಂತಹ ಜನರ ಬದುಕಿಗಾಗಿ ಹೋರಾಟದ ಮುನ್ನಲೆಗೆ ಬಂದರೆ ‘ಅವರಿಗ್ಯಾಕೆ ಬೇಕು ಇದೆಲ್ಲ?’ ಎಂದು ವ್ಯಂಗವಾಡುತ್ತಾರೆ. ಆದರೆ, ತಾವೂ ಕೂಡ ಇದೆ ಅಶುದ್ಧ ಗಾಳಿಯನ್ನೇ ಸೇವಿಸುತ್ತಿದ್ದೇವೆ ಎಂಬುದನ್ನು ಅವರು ಮರೆಯಬಾರದು.

‘ಕೊಪ್ಪಳ ಪರಿಶುದ್ಧ ಗಾಳಿಯನ್ನು ಸೂಸುವಲ್ಲಿ 4ನೇ ಸ್ಥಾನ’ದಲ್ಲಿದೆ ಎಂದು ಪತ್ರಿಕೆಯಲ್ಲಿ ಸುದ್ದಿ ಬಂದಿದೆ. ಆದರೆ, ರಾಷ್ಟ್ರೀಯ ಮಾಧ್ಯಮಗಳು ಬಾಧಿತ ಗ್ರಾಮಗಳಿಗೆ  ಹೋಗಿಲ್ಲ;  ಹೋಗಿದ್ದರೆ ಇಂತಹ ಸುದ್ದಿ ಪ್ರಕಟಿಸುತ್ತಿರಲಿಲ್ಲ. ಈ ಹೋರಾಟ ಜನಾಂದೋಲನವಾಗಗಬೇಕು ಎಂದರು.

ಜಿಲ್ಲೆಯ ನಾಗರಿಕರ ಹಿತಕ್ಕಾಗಿ, ಆರೋಗ್ಯಕ್ಕಾಗಿ ನಡೆಯುತ್ತಿರುವ ಈ ಹೋರಾಟವನ್ನು ವ್ಯಾಪಕವಾಗಿ ಮಾಧ್ಯಮಗಳು ಸುದ್ದಿ ಮಾಡಬೇಕು. ಇದರಿಂದ ಮಾಧ್ಯಮಗಳು ಜನರಪರವಾಗುತ್ತವೆ. ಪರಿಸರದ ಬಗ್ಗೆ ಕಾಳಜಿ ಉಳ್ಳವರು ಸಾತ್ವಿಕ ಶಕ್ತಿಯಾಗಿ, ಜೀವಪರ ಕಾಳಜಿ ಹಾಗೂ ಪರಿಸರ ಕಾಳಜಿವುಳ್ಳವರು ಒಟ್ಟಾಗಿ ಬೃಹತ್ ಜನಾಂದೋಲನ ಕಟ್ಟಬೇಕು ಎಂದರು.

ಗವಿಮಠದ ಗವಿಸಿದ್ದೇಶ್ವರ ಶ್ರೀಗಳನ್ನು ಭೇಟಿಯಾಗಿ ಹೊಗೆಸೂಸುವ ಕಾರ್ಖಾನೆಗಳ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ಮತ್ತೊಮ್ಮೆ ಹಮ್ಮಿಕೊಳ್ಳಲು ಆಹ್ವಾನ ನೀಡೋಣ, ಅವರ ಮುಂದಾಳತ್ವದಲ್ಲಿಯೇ ಈ ಹೋರಾಟ ಸಜ್ಜುಗೊಳಿಸೋಣ. ಎಲ್ಲ ಮಠಾಧೀಶರನ್ನು ಕರೆದುಕೊಂಡು ಬರುವ ಕೆಲಸ ಮಾಡೋಣ. ಅದರ ಜವಾಬ್ದಾರಿ ನಾನೂ ವಹಿಸಿಕೊಳ್ಳುತ್ತೇನೆ ಎಂದರು.

ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬೇಕು. ಹೋರಾಟಗಾರರನ್ನು ಕಂಪನಿಗಳು ಗುಂಡಾಗಳ ಮೂಲಕ ಹತ್ತಿಕ್ಕುವ ಕೆಲಸ ಮಾಡುತ್ತಿವೆ; ಒಬ್ಬ ರೈತನ ಕಾಲು ಮುರಿದಿರುವ ಘಟನೆ ಕೇಳಿದೆ ಇದರಿಂದ ಕುಗ್ಗಬೇಡಿ ಎಂದು ಹೋರಾಟಗಾರರಿಗೆ ಆತ್ಮಸ್ಥೈರ್ಯ ತುಂಬಿದರು.

ಧರಣಿ ಸ್ಥಳಕ್ಕೆ ಬರುವ ಮೊದಲು ಶ್ರೀಗಳು ಕಾರ್ಖಾನೆಗಳಿಂದ ಸೂಸುವ ಹೊಗೆ ಹಾಗೂ ಧೂಳಿನಿಂದ ನರಕಯಾತನೆ ಅನುಭವಿಸುತ್ತಿರುವ ಗ್ರಾಮಗಳಿಗೆ ಭೇಟಿ ನೀಡಿ ಜನರೊಂದಿಗೆ ಸಂವಾದ ಮಾಡಿದರು.

ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಕಾರ್ಖಾನೆ ಸ್ಥಾಪನೆ ಮತ್ತು ವಿಸ್ತರಣೆ ವಿರೋಧಿಸಿ ಈಗಾಗಲೇ ಹೋರಾಟ ಆರಂಭಿಸಿದ್ದೇವೆ. ಇದು ಹಿಂಸಾರೂಪ ತಾಳುವ ಮುನ್ನವೇ ಸರಕಾರ ಎಚ್ಚೆತ್ತು ಕ್ರಮ ವಹಿಸಬೇಕು ಎಂದರು.

ಜ್ಯೋತಿ ಗೊಂಡಬಾಳ, ಮಂಜುನಾಥ ಗೊಂಡಬಾಳ, ಕೆ.ಬಿ. ಗೋನಾಳ, ಗಾಳೆಪ್ಪ ಮುಳಗಿ, ಶಿವಪ್ಪ ಹಡಪದ, ಬಸವರಾಜ್ ಶೀಲವಂತರ, ಮಂಗಳೇಶ ರಾಠೋಡ್, ಮೆಹಬೂಬ್ ರಾಯಚೂರು, ಮಾದೇವಪ್ಪ, ಶರಣು ಗಡ್ಡಿ, ಶರಣು ಪಾಟೀಲ, ವಿಜಯ ಲಕ್ಷ್ಮೀ ಮತ್ತಿತರರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
5 Comments
  • ಕೖಗಾರಿಕಾ ಕ್ರಾಂತಿ ಈಗ ಜನಮಾನಸಕ್ಕೆ ಉರುಳಾಗಿ ಪರಿಣಾಮಿಸುತ್ತಲಿದೆ. ನಾವು ಆರೋಗ್ಯವಂತರಾಗಿ ಬದುಕಬೇಕಾಗಿದೆ. ನಾವು ನಮ್ಮ ಪರಿಸರವನ್ನು ಕಾಪಾಡಿಕಳ್ಳಬೇಕಾಗಿದೆ.

  • ಕೊಪ್ಪಳ ಜಿಲ್ಲೆಯಲ್ಲಿ ಕೈಗಾರಿಕೆಗಳು ಸ್ಥಾಪನೆ ಮಾಡಿದರೆ ಪರಿಸರ ನಾಶ ಆಗುತ್ತೆ ಒಪ್ಪೋಣ. ನಿಮ್ಮ ಜಿಲ್ಲೆಯ ವಿದ್ಯಾವಂತ ಜನರು ಉದ್ಯೋಗ ಅರಸಿ ಬೇರೆ ಜಿಲ್ಲೆ ಗಳಿಗೆ ಹೋಗದೆ ಎಲ್ಲರೂ ನಿಮ್ಮ ಜಿಲ್ಲೆಯಲ್ಲೇ ವ್ಯವಸಾಯ ಮಾಡಿಕೊಂಡು ಇದ್ದಾರೆಯೇ? ನಿಮ್ಮ ಜಿಲ್ಲೆಯಲ್ಲಿ ಮಾತ್ರ ಕೈಗಾರಿಕೆಗಳು ಬೇಡ ಆದರೆ ನಿಮ್ಮ ಜನರಿಗೆ ಬೇರೆ ಜಿಲ್ಲೆಗಳಲ್ಲಿ ಉದ್ಯೋಗ ಬೇಕು. ಇದು ಯಾವ ನ್ಯಾಯ ಹೇಳಿ?

    • ನಿಮಗೆ …. ಕೊಪ್ಪಳ ಸುತ್ತಮುತ್ತಲಿನ ಹಳ್ಳಿಗಳ ಹಾಳಾದ ಬದುಕು / ವ್ಯವಸಾಯದ ಅರಿವಿಲ್ಲ…

      • There is a point that the baldota gruop is already taken a permission of environmental dept, so they can start the work so, what is your problem.

  • It’s not one man’s problem. It’s problem of entire generation. It’s problem of air pollution. It’s problem of water pollution.. It’s problem of the people residing in the neighborhood of factory. It’s problem of unseen consequences of future. The question is whether the system has facilitated the healthy environment in the previous cases. Does the system provide the required healthy environment. Does approval from any body do provide anything required for human living. All in paper

    Expert n honest People from all fields need to sit n resolve the issues.
    Koppal people n the people of nearby area should be consulted.

Leave a Reply

Your email address will not be published. Required fields are marked *