ವಚನ ವಿಜಯೋತ್ಸವ ಯಶಸ್ಸಿಗೆ ಗಂಗಾಂಬಿಕೆ ಅಕ್ಕ ಮನವಿ

ಬಸವ ಮೀಡಿಯಾ
ಬಸವ ಮೀಡಿಯಾ

ಮೂರು ದಿನಗಳ ಕಾರ್ಯಕ್ರಮ ಉದ್ಘಾಟಿಸಲಿರುವ ಆರೆಸ್ಸೆಸ್ ನಾಯಕ ಬಸವರಾಜ ಸೇಡಂ

ಬೀದರ್

ನಗರದಲ್ಲಿ ಜನವರಿ 30, 31 ಮತ್ತು ಫೆಬ್ರವರಿ 1 ನಡೆಯಲಿರುವ 24ನೇ ವಚನ ವಿಜಯೋತ್ಸವಕ್ಕೆ ಅಗತ್ಯ ಸಿದ್ಧತೆಗಳು ಭರದಿಂದ ಸಾಗುತ್ತಿವೆ ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಗಂಗಾಂಬಿಕೆ ಅಕ್ಕ ನುಡಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಬಸವ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಜನವರಿ 30
ಜ. 30ರಂದು ಬೆಳಿಗ್ಗೆ 8ಕ್ಕೆ ಸಾಮೂಹಿಕ ಇಷ್ಟಲಿಂಗ ಪೂಜಾ ಯೋಗವು ಸಿದ್ಧರಾಮ ಶರಣರು ಬೆಲ್ದಾಳ ಹಾಗೂ ಇನ್ನಿತರ ಪೂಜ್ಯರ ಸಾನಿಧ್ಯದಲ್ಲಿ ನಡೆಯಲಿದ್ದು, ಬಸವಕಲ್ಯಾಣ ಕ್ಷೇತ್ರ ಸಮಿತಿ ಸಂಯೋಜಕ ಬಸವರಾಜ ಪಾಟೀಲ ಸೇಡಂ ಉದ್ಘಾಟಿಸುವರು.

ಅಂದು ಬೆಳಿಗ್ಗೆ 11ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷರಾದ ನಾಡೋಜ ಬಸವಲಿಂಗ ಪಟ್ಟದ್ದೇವರು ಹಾಗೂ ಹುಲಸೂರಿನ ಶಿವಾನಂದ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ತಮ್ಮ ನೇತೃತ್ವದಲ್ಲಿ ತೆಲಂಗಾಣ ರಾಜ್ಯದ ವಾರಂಗಲದ ಪಾಲಕುರಿಕೆ ಸೋಮನಾಥ ಕಲಾಪೀಠದ ಅಧ್ಯಕ್ಷ ಡಾ.ರೂಪಾಲು ಸತ್ಯನಾರಾಯಣ ಉದ್ಘಾಟಿಸುವರು.

ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ವಿಜಯೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸಿಕೊಳ್ಳುವರು.

ಹಿರಿಯ ಸಾಹಿತಿ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಅನುಭಾವ ನೀಡುವರು. ಸಾಹಿತಿ ಡಾ.ಬಸವರಾಜ ಸಬರದ ಸೇರಿದಂತೆ ಅನೇಕ ಪ್ರಮುಖರು ಇರಲಿದ್ದಾರೆ.

ಮಧ್ಯಾಹ್ನ 3ಕ್ಕೆ ಸ್ತ್ರೀ ಶಕ್ತಿ ಸಮಾವೇಶ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಖ್ಯಾತ ವೈದ್ಯರಾದ ಡಾ.ವಿಜಯಲಕ್ಷ್ಮಿ ದೇಶಮಾನೆ ಸ್ತ್ರೀ ಶಕ್ತಿ ಸಮಾವೇಶ ಉದ್ಘಾಟಿ ಸುವರು. ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಾ. ಗೀತಾ ಖಂಡ್ರೆ ಗುರುಪೂಜೆ ನೇರವೇರಿಸುವರು. ಡಾ.ಗುರಮ್ಮಾ ಸಿದ್ದಾರೆಡ್ಡಿ ಅಧ್ಯಕ್ಷತೆ ವಹಿಸಿ ಕೊಳ್ಳುವರು.

ಚಿತ್ರದುರ್ಗದ ಬಸವತತ್ವ ಚಿಂತಕಿ ಡಿ.ಶಬ್ರಿನಾ ಅನುಭಾವ ನೀಡುವರು. ಸಂಜೆ 6ಕ್ಕೆ ಶರಣ ಕಲಾವೈಭವವನ್ನು ಮಾತೆ ಮೈತ್ರಾದೇವಿ ಸಾನ್ನಿಧ್ಯದಲ್ಲಿ ಪ್ರೊ. ಸಿದ್ರಾಮಪ್ಪಾ ಮಾಸಿಮಡೆ ಉದ್ಘಾಟಿಸುವರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ಮಕ್ಕಳಿಂದ ಶಿವಯೋಗಿ ಸಿದ್ಧರಾಮೇಶ್ವರ ನಾಟಕ ನಡೆಯಲಿದೆ.

ಜನವರಿ 31

ಬೆಳಗ್ಗೆ 8ಕ್ಕೆ ಸಾಮೂಹಿಕ ವಚನ ಪಾರಾಯಣ ನಡೆದರೆ 11ಕ್ಕೆ ಯುವ ಶಕ್ತಿ ಸಮಾವೇಶ ನಡೆಯಲಿದ್ದು ಇಸ್ರೋ ಉಪನಿರ್ದೇಶಕಿ ಕೆ.ಎಲ್‌ ಶಿವಾನಿ ಇವರಿಗೆ ಶರಣ ವಿಜ್ಞಾನಿ ಪುರಸ್ಕಾರ ಪ್ರದಾನ ಮಾಡಲಾಗುವುದು.

ಮಧ್ಯಾಹ್ನ 2.30ಕ್ಕೆ 24ನೇ ವಚನ ವಿಜಯೋತ್ಸವ ನಿಮಿತ್ತ 24 ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕ ಹಿರಿಯರನ್ನು ಪೂಜ್ಯರ ಸಾನ್ನಿಧ್ಯದಲ್ಲಿ ಗೌರವ ಸಮರ್ಪಣೆ ಮಾಡಲಾಗುವುದು. ಮಧ್ಯಾಹ್ನ 3ಕ್ಕೆ ಧರ್ಮ ಚಿಂತನಗೋಷ್ಠಿ ನಡೆಯಲಿದೆ.

ಫೆಬ್ರವರಿ 1

ಬೆಳಿಗ್ಗೆ 9ಕ್ಕೆ ನಗರದ ಬಸವೇಶ್ವರ ವೃತ್ತದಿಂದ ಬಸವಗಿರಿ ವರೆಗೆ ಲಿಂಗಾಯತ ಧರ್ಮ ವಚನ ಸಾಹಿತ್ಯದ ಭವ್ಯ ಮೆರವಣಿಗೆ ನಡೆಯಲಿದೆ. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮೆರವಣಿಗೆಗೆ ಚಾಲನೆ ನೀಡುವರು. ನ್ಯೂಜಲ್ಯಾಂಡ್ ಬಸವ ಸಮಿತಿ ಸಂಸ್ಥಾಪಕ ಲಿಂಗಣ್ಣ ಕಲಬುರಗಿ ಧ್ವಜಾರೋಹಣಗೈಯುವರು.

ಮಧ್ಯಾಹ್ನ 2.30ಕ್ಕೆ ವಚನ ಸಾಹಿತ್ಯಕ್ಕೆ ಪಟ್ಟಾಭಿಷೇಕ ನಡೆಯಲಿದೆ. ನಾಡಿನ ಮಠಾಧೀಶರುಗಳು, ಸಚಿವರು, ಶಾಸಕರು ಇರಲಿದ್ದಾರೆ.

ಮೂವರು ಹಿರಿಯ ಸಾಧಕರಿಗೆ ಗುರುಬಸವ ಪುರಸ್ಕಾರ ಪ್ರದಾನ

ಪ್ರತಿ ವರ್ಷ ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ಗುರುಬಸವ ಪುರಸ್ಕಾರ ನೀಡಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಗುರುಬಸವ ಪುರಸ್ಕಾರವನ್ನು ನಾಡಿನ ಪತ್ರಕರ್ತರು ಹಾಗೂ ಹರಳಯ್ಯ ಸಮಾಜದ ಮುಖಂಡರಾದ ಡಾ. ಮಾರ್ಕಂಡೇಯ ದೊಡಮನಿ, ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖುಬಾ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ, ನಿವೃತ್ತ ಐಎಎಸ್‌ ಅಧಿಕಾರಿಯಾದ ಡಾ. ಸಿ. ಸೋಮಶೇಖರ ಅವರಿಗೆ ಪ್ರದಾನ ಮಾಡಲಾಗುತ್ತಿದೆ.

ಶರಣ ಸೇವಾ ಪುರಸ್ಕಾರ:

ವಚನ ವಿಜಯೋತ್ಸವ ಕಾರ್ಯಕ್ರಮದಲ್ಲಿ ಈ ವರ್ಷ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 14 ಜನರನ್ನು ಶರಣ ಸೇವಾ ಪುರಸ್ಕಾರ ನೀಡಿ ಗೌರವಿಲಾಗುತ್ತಿದೆ.

ಜ. 25ರಿಂದ 29ರ ವರೆಗೆ ಶರಣ ಉದ್ಯಾನದಲ್ಲಿ ಸಂಜೆ 6ರಿಂದ ಪ್ರೊ. ಸಿದ್ಧಣ್ಣ ಲಂಗೋಟಿ ಅವರಿಂದ ಚನ್ನಬಸವಣ್ಣನವರ ಕರಣ ಹಸಿಗೆ ತಾತ್ವಿಕ ಚಿಂತನ ಕುರಿತು ಪ್ರವಚನ ನಡೆಯುತ್ತಿದೆ. ಸುದ್ದಿಗೋಷ್ಟಿಯಲ್ಲಿ ಹಿರಿಯ ಚಿಂತನಕಾರರಾದ ಸಿದ್ದಣ್ಣ ಲಂಗೋಟಿ, ಹಿರಿಯರಾದ ಬಸವರಾಜ ಬುಳ್ಳಾ, ಸೋಮಶೇಖರ ಪಾಟೀಲ್‌ ಗಾದಗಿ, ರಾಜೇಂದ್ರಕುಮಾರ ಗಂದಗೆ, ಶರಣಪ್ಪ ಮಿಠಾರೆ, ಚಂದ್ರಕಾಂತ ಮಿರ್ಚೆ, ಸುರೇಶ ಚನಶೆಟ್ಟಿ, ಬಾಬು ವಾಲಿ, ರಾಜಕುಮಾರ ಟಿಳ್ಳೆಕರ್‌, ಆದೀಶ ವಾಲಿ, ವಿಶ್ವನಾಥ ಕಾಜಿ, ಜಯರಾಜ ಖಂಡ್ರೆ, ವಿಜಯಲಕ್ಷ್ಮೀ ಸುಲೇಪೇಟ್‌ ಹಾಗೂ ಶಿವಶಂಕರ ಟೋಕರೆ ಹಾಗೂ ಇತರರಿದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *