ಬಸವ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಷರತ್ತುಬದ್ಧ ಅನುಮತಿ ನೀಡಿದ ಹೈ ಕೋರ್ಟ್
ಕಲಬುರಗಿ
ಬಸವ ಕಲ್ಯಾಣದಲ್ಲಿ ಜೂನ್ 28ರಂದು ಆಯೋಜಿಸಲಾಗಿರುವ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ಕಲಬುರಗಿ ಹೈ ಕೋರ್ಟ್ ಪೀಠದಿಂದ ಕೆಲವು ಷರತ್ತುಗಳೊಂದಿಗೆ ಅನುಮತಿ ದೊರತಿದೆ.
ಈ ಮುಂಚೆ ಸಮಾವೇಶಕ್ಕೆ ತಾಲ್ಲೂಕು ಆಡಳಿತ ಅನುಮತಿ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಆಯೋಜಕರು ಕಲಬುರಗಿ ಹೈ ಕೋರ್ಟ್ ಮೊರೆ ಹೋಗಿದ್ದರು.
ಈ ವಿಷಯವಾಗಿ ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಆರ್. ಕೃಷ್ಣಕುಮಾರ್ ಇಂದು ಮಧ್ಯಾಹ್ನ ಆದೇಶ ನೀಡಿದರು.
ನ್ಯಾಯಮೂರ್ತಿಗಳು ಸಮಾವೇಶಕ್ಕೆ ಕೆಲವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ.
ಕನ್ನೇರಿ ಸ್ವಾಮಿ ಕಾರ್ಯಕ್ರಮ ಸೇರಿದಂತೆ ಯಾವುದೇ ಮಾಧ್ಯಮಗಳಲ್ಲಿ ಮಾತಾಡುವಂತಿಲ್ಲ. ಅಲ್ಲದೆ ಬೇರೆಯವರು ಕೂಡ ಪ್ರಚೋದನಕಾರಿಯಾಗಿ ಮಾತನಾಡುವಂತಿಲ್ಲ ಎಂದು ಷರತ್ತು ಹಾಕಿದೆ.
ಅಷ್ಟೇ ಅಲ್ಲದೆ ಅರ್ಜಿದಾರಿಂದ ಒಂದು ಪ್ರಮಾಣ ಪತ್ರ ಹಾಗೂ ಕನ್ನೇರಿ ಸ್ವಾಮಿಯಿಂದಲೂ ಎರಡು ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಲಾಗಿದೆ.
ಬಸವ ಅನುಯಾಯಿಗಳನ್ನು, ಲಿಂಗಾಯತ ಮಠಾಧೀಶರನ್ನು ನಿಂದಿಸಿದ್ದ ಕನ್ನೇರಿ ಸ್ವಾಮಿಯನ್ನು ಬಸವ ಕಲ್ಯಾಣ ಪ್ರವೇಶಿಸಲು ಬಿಡುವುದಿಲ್ಲ ಎಂದು ಬಸವ ಸಂಘಟನೆಗಳು ಹಲವಾರು ಪೂರ್ವಭಾವಿ ಸಭೆಗಳನ್ನು ಮಾಡಿ ಹೋರಾಟ ಶುರು ಮಾಡಿದ್ದವು.
ನೆನ್ನೆ ಔರಾದಿನಲ್ಲಿ ಬಸವಾದಿ ಶರಣರನ್ನು ಅವಹೇಳನ ಮಾಡಿದವರನ್ನು ಹಿಂದೂ ಸಮಾವೇಶಕ್ಕೆ ಬರಲು ಅವಕಾಶ ನೀಡುವುದಿಲ್ಲ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಗುರುಬಸವ ಪಟ್ಟದ್ದೇವರು ಎಚ್ಚರಿಕೆ ನೀಡಿದ್ದರು.
ಸರ್ಕಾರದ ಪರ ಮಂಗಳವಾರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಕನ್ನೇರಿ ಸ್ವಾಮಿ ಬಸವಾನುಯಾಯಿಗಳನ್ನು ಬಸವ ತಾಲಿಬಾನಿಗಳೆಂದು ನಿಂದಿಸಿ ಬಸವಣ್ಣನರ ಕರ್ಮಭೂಮಿಗೆ ಬರುತ್ತಿದ್ದಾರೆ. ಇದರಿಂದ ಕಾನೂನು-ಸುವ್ಯವಸ್ಥೆ ಸಮಸ್ಯೆ ಹುಟ್ಟುಹಾಕುವ ಸಾಧ್ಯತೆಗಳಿವೆ ಎಂದು ಅಲ್ಲಿನ ಸ್ಥಳೀಯ ಆಡಳಿತದ ಆತಂಕವಾಗಿದೆ ಎಂದಿದ್ದರು.
ಈಗ ವಿರೋಧದ ನಡುವೆಯೂ ಕನ್ನೇರಿ ಸ್ವಾಮಿಯ ಉಪಸ್ಥಿತಿಯಲ್ಲಿಯೇ ಕಾರ್ಯಕ್ರಮ ನಡೆಯುವುದು ಖಚಿತವಾದಂತಾಗಿದೆ.

ಲಿಂಗಾಯತ ಪ್ರತಿಪಾದನೆಯ ಹಿಂದೂ ಲಿಂಗಾಯತ ಜನರು ಅಲ್ಲಿ ಇದ್ದರೆ ಯಾವ ರೀತಿ ಹೇಳುತ್ತಾರೆ ಎಂಬುದು ಅರಿತು ಮುಂದೆ ನಡೆ ಇಡುವದು ಸರಿಯಾದ ಕ್ರಮ ಅನುಸರಿಸಿ ಪ್ರತಿ ವಿಚಾರ ಮಂಡಿಸಿ ಅವರನ್ನು ನಮ್ಮ ದಾರಿಗೆ ತರೋದು, ಇಲ್ಲದಿರೆ ದಂಡೋಪಾಯ ಜಾರಿಗೆ ತರೋದು. ಶರಣು 👏🏻👏🏻
ಕಾರ್ಯಕ್ರಮ ಮುಂದೂಡುತ್ತಾರೆ. ಪ್ರಮಾಣ ಪತ್ರ ಸಲ್ಲಿಸಿರುವುದರಿಂದ ಮೇಲ್ಮನವಿ ಅವಕಾಶವನ್ನು ಕಳೆದುಕೊಂಡಿರುತ್ತಾರೆ. ಆದರೆ ಅವರು ಈ ಕಾರ್ಯಕ್ರಮ ಮಾಡದಿದ್ದರೆ ನಂತರದಲ್ಲಿ ದಿನಗಳಲ್ಲಿ ಬೇರೆಕಡೆ ಮಾಡಲು ತೊಂದರೆಯಾಗುತ್ತದೆ.