ಬೀದರ:
ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ನಗರದ ಶರಣ ಉದ್ಯಾನವನದಲ್ಲಿ ಮಹಾಶಿವರಾತ್ರಿ ನಿಮಿತ್ಯ ಸರ್ವ ಶರಣರ ಸ್ಮರಣೋತ್ಸವ ಹಾಗೂ ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಯಿತು.
ಪ್ರತಿಷ್ಠಾನದ ಅಧ್ಯಕ್ಷರಾದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಅವರ ಸಾನಿಧ್ಯದಲ್ಲಿ ರವಿವಾರ ಸಾಯಂಕಾಲ ಭಕ್ತಿ ಶೃದ್ಧೆಯಿಂದ ನಡೆದ ಕಾರ್ಯಕ್ರಮದಲ್ಲಿ ಅಕ್ಕ ಅವರು ಇಷ್ಟಲಿಂಗಯೋಗದ ಪ್ರಾತ್ಯಕ್ಷಿಕೆಯ ಮೂಲಕ ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗದ ವಿಧಿವಿಧಾನಗಳನ್ನು ತೋರಿಸಿಕೊಟ್ಟು ಮಾತನಾಡಿದರು.

ಗುರುಬಸವಣ್ಣನವರು ಕೊಟ್ಟ ಮಾನವ ಕುಲದ ಉದ್ಧಾರದ ಸರ್ವಶ್ರೇಷ್ಠ ಕೊಡುಗೆ ಎಂದರೆ ಲಿಂಗಾಯತ ಧರ್ಮ ಸ್ಥಾಪನೆ ಮತ್ತು ಅದರ ಉಪಸನಾ ಪದ್ಧತಿ ಇಷ್ಟಲಿಂಗ ಪೂಜಾಯೋಗ. ಇದು ಪೂಜೆ ಮತ್ತು ಯೋಗವು ಆಗಿದೆ. ಮಾನವನ ಪಾರಮಾರ್ಥಿಕ ಮತ್ತು ಐಹಿಕ ಉನ್ನತಿಯ ಅತ್ಯಂತ ಸಹಜ, ಸರಳವಾಗಿ ಮಾಡುವ ವೈಜ್ಞಾನಿಕ ಸಾಧನ ವಿಧಾನ ಇದಾಗಿದೆ.

ಇಷ್ಟಲಿಂಗ ಯೋಗದಲ್ಲಿ ಸಾಧಕ ದೃಷ್ಟಿಯಿಂದ ನೋಡುತ್ತಾ, ಮನದ ಬಲದಿಂದ ಪ್ರಜ್ಞೆ ಆಳಕ್ಕೆ ಇಳಿದು ಅಲ್ಲಿ ಅರಿವಿಗೆ ಬಾರದೆ ಗುಪ್ತವಾಗಿ ನೆಲೆಸಿದ್ಧ ಮಹಾಪ್ರಜ್ಞೆಯ ನಿಧಿಯ ಜೊತೆಗೆ ತನ್ನ ಪ್ರಜ್ಞೆಯ ಸಾಮರಸ್ಯದ ಕ್ರಿಯಾತ್ಮಕ ಸಂಬಂಧ ಪ್ರಸ್ತಾಪಿಸುತ್ತಾನೆ. ಪೂಜೆಯಿಂದ ಆರೋಗ್ಯ, ಆಯುಷ್ಯ, ಆಲೋಚನೆ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ಅಕ್ಕ ನುಡಿದರು.
ಸಾವಿರಾರು ಶರಣ ಶರಣೆಯರು ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಬಸವ ಓಂ ನಮಃ ಶಿವಾಯ ಎಂಬ ಮಂತ್ರ ಝೇಂಕರಿಸಿತು. ನೀಲಮ್ಮನ ಬಳಗದ ಶರಣೆಯರು ಪ್ರಾರ್ಥನೆ ನಡೆಸಿಕೊಟ್ಟರು. ಶಿವಕುಮಾರ ಪಂಚಾಳ ಮತ್ತು ಸಂಗಡಿಗರಿಂದ ವಚನ ಸಂಗೀತ ಜರುಗಿತು.
