ರಾಯಚೂರು ಜಿಲ್ಲೆಯ ಶರಣರು 2: ಆಯ್ದಕ್ಕಿ ಲಕ್ಕಮ್ಮ, ಮಾರಯ್ಯ ದಂಪತಿಗಳು

ಲೋಕೇಶ ಮಾನ್ವಿ
ಲೋಕೇಶ ಮಾನ್ವಿ

ರಾಯಚೂರು

ಹನ್ನೆರಡನೇ ಶತಮಾನದ ಬಸವಾದಿ ಶರಣರ ಸಾಲಿನಲ್ಲಿ ಕಾಯಕ ನಿಷ್ಠೆ, ದಾಸೋಹ ಭಾವ, ಲಿಂಗ ಸಮಾನತೆಗೆ, ಹೆಸರಾದ  ಮಹತ್ವದ ಶರಣರೇ, ಆಯ್ದಕ್ಕಿ ಲಕ್ಕಮ್ಮ ಹಾಗೂ ಮಾರಯ್ಯ ದಂಪತಿ, ಇವರು ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಅಮರೇಶ್ವರ ಗ್ರಾಮದವರು.

ಆಯ್ದಕ್ಕಿ ಮಾರಯ್ಯನವರ ಅಂಕಿತನಾಮ “ಅಮರೇಶ್ವರಲಿಂಗ” ಲಭ್ಯವಿರುವ ವಚನಗಳು- 31. ಆಯ್ದಕ್ಕಿ ಲಕ್ಕಮ್ಮನವರ ಅಂಕಿತನಾಮ ‘ಮಾರಯ್ಯಪ್ರಿಯ ಅಮರೇಶ್ವರಲಿಂಗ”, ಲಭ್ಯವಿರುವ ವಚನಗಳು- 25. ಲಿಂಗಸೂಗೂರಿನ ಅಮರೇಶ್ವರ ಗ್ರಾಮದವರಾದ ಶರಣ ದಂಪತಿ ಶುದ್ಧ ಭಕ್ತಿ, ಕಾಯಕ ನಿಷ್ಠರಾಗಿದ್ದು, ಅಣ್ಣ ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಕಲ್ಯಾಣಕ್ಕೆ ಬಂದರು.

ಕಲ್ಯಾಣದ ಅನುಭವ ಮಂಟಪದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು‌. ೭೭೦ ಅಮರ ಗಣಂಗಳಲ್ಲಿ ಇವರೂ ಪ್ರಮುಖರು. “ಮಹಾಮನೆ” ಎಂದರೆ ಇದು ಬರಿ ಕಲ್ಲುಗಳಿಂದ ಕಟ್ಟಿದ ಕಟ್ಟಡವಲ್ಲ, ಸಾವಿರಾರು ಜನರು, ಇಷ್ಟಲಿಂಗ ಪೂಜೆ, ಚಿಂತನ ಮಂಥನ ಹಾಗೂ ಪ್ರಸಾದಕ್ಕೆ ಒಟ್ಟುಗೂಡುವ ಸ್ಥಳವೇ ಅಣ್ಣ ಬಸವಣ್ಣನವರ ಪರಿಕಲ್ಪನೆಯ “ಮಹಾಮನೆ”. ಬೇರೆ ಬೇರೆ ಊರು, ರಾಜ್ಯ, ದೇಶಗಳಿಂದ ಬಂದ ಅಸಂಖ್ಯಾತ ಜನ ಎಲ್ಲರೂ ಕಾಯಕ ಮಾಡಿ, ಸಮಾಜಕ್ಕೆ ವಿನಿಯೋಗಿಸುತ್ತಿದ್ದರು ಅದುವೇ ದಾಸೋಹ.

ಯಾವುದೇ ಸಂಪರ್ಕ ಸಾಧನಗಳು, ಸಾರಿಗೆ ವ್ಯವಸ್ಥೆ ಇಲ್ಲದ ಕಾಲದಲ್ಲೂ ಕಲ್ಯಾಣದಲ್ಲಿ ಲಕ್ಷಾಂತರ ಜನ ಸೇರಿದ್ದು ಅಣ್ಣ ಬಸವಣ್ಣನವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ, ಅಪ್ಪ ಬಸವರ ಹೃದಯವು, ಲೋಹ ಚುಂಬಕದಂತೆ, ಮಾನವೀಯ ಮೌಲ್ಯಗಳೆಡೆಗೆ ಸೆಳೆದು, ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದು ಒಪ್ಪಿ ಅಪ್ಪಿಕೊಳ್ಳುವಂತೆ ಮಾಡಿ, ಎಲ್ಲೆಡೆಯಿಂದಲೂ ಬಂದ ಅಸಂಖ್ಯಾತ ಶರಣರ ಜಂಗಮರ ಪ್ರಸಾರಕ್ಕಾಗಿಯೇ ಶರಣರ ಮನೆಯ ಬಾಗಿಲು ಸದಾ ತೆರೆದಿರುತ್ತಿತ್ತು.

ಆ ಮಹಾನ್ ದಾಸೋಹದ ಕಾರ್ಯದಲ್ಲಿ  ತೊಡಗಿದವರಲ್ಲಿ ಶರಣ ದಂಪತಿ ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯ ಶರಣರು.

ಕಾಯಕ: ಲಕ್ಕಮ್ಮನವರು ಶರಣರ ಮನೆಯಲ್ಲಿ, ಅಕ್ಕಿಯನ್ನು ಅಸನ ಮಾಡುವ ಕಾಯಕ ಮಾಡುತ್ತಿದ್ದರೆ, ಮಾರಯ್ಯನವರು  ಭತ್ತದ ಹಾಗೂ ಅಕ್ಕಿಯ ಮೂಟೆಗಳನ್ನು ಹೊತ್ತು ತಂದು ಮಹಾಮನೆಗೆ ತಲುಪಿಸುವುದು ಇವರ ಕಾಯಕವಾಗಿತ್ತು.

ಕಾಯಕದಿಂದ ಬರುವ ‘ಸಂಬಳ’ ಅಥವಾ ಆದಾಯಕ್ಕೆ (ಆಯಾ) ಎಂದು ಕರೆಯುತ್ತಿದ್ದರು, ಆ ಕಾಲದಲ್ಲಿ ಸಂಬಳವಿರಲಿಲ್ಲ, ಬದಲಾಗಿ ದವಸ ಧಾನ್ಯಗಳನ್ನು ನೀಡುತ್ತಿದ್ದರು, ರಾಶಿ ಮಾಡಿದ ನಂತರ, ಅಳಿದುಳಿದ ಧಾನ್ಯಗಳನ್ನು ಅಲ್ಲಿಯೇ ಬಿಟ್ಟು, ಕೆಲ‌ಸಗಾರರಿಗೆ ಕೂಲಿಯಾಗಿ ನೀಡುತ್ತಿದ್ದರು, ಅದುವೇ ಆದಾಯ (ಆಯಾ) ಸಂಬಳ, ಆ ಸಂಬಳದ ಅಕ್ಕಿಯನ್ನು ನಾನು ಆವಶ್ಯಕ್ಕಿಂತ ಹೆಚ್ಚಾಗಿ ತಂದರೆ, ಮತ್ತೊಬ್ಬರಿಗೆ ಸಲ್ಲಬೇಕಾದ ಆಯಾ ಕೂಲಿಯ ಅಕ್ಕಿ ಕಡಿಮೆಯಾಗಬಹುದು ಎಂಬ ಹಿತಚಿಂತನೆ ಶರಣೆ ಲಕ್ಕಮ್ಮನದ್ದು. ಹೀಗಾಗಿಯೇ ಪ್ರತಿದಿನ ಕಾಯಕದ ನಂತರ  ಸಂಬಳದ ಅಕ್ಕಿಯನ್ನು ಅವಶ್ಯ ಇರುವಷ್ಟೇ ತಂದು, ಅದನ್ನು ದಾಸೋಹದಲ್ಲಿ ವಿನಿಯೋಗಿಸುತ್ತಿದ್ದರು ಆಯ್ದಕ್ಕಿ ಲಕ್ಕಮ್ಮ ಮಾರಯ್ಯ ದಂಪತಿ.

ಅಣ್ಣಬಬಸವಣ್ಣನವರ ಕಲ್ಯಾಣದಲ್ಲಿ ಅತ್ಯಂತ ಶಿವಭಕ್ತರೂ, ಜ್ಞಾನಿಗಳಾಗಿದ್ದ ಶರಣ ದಂಪತಿ, ಅದರಲ್ಲೂ ಶರಣೆ ಲಕ್ಕಮ್ಮನವರು ಅತ್ಯಂತ ಕಾಯಕ ನಿಷ್ಠೆಯುಳ್ಳ ಶರಣೆಯಾಗಿ,

ಕಾಯಕ ನಿಂದಿತ್ತು ಹೋಗಯ್ಯಾ ಎನ್ನಾಳ್ದನೆ

ಭಾವಶುದ್ಧವಾಗಿ ಮಹಾಶರಣರ

ತಿಪ್ಪೆಯ ತಪ್ಪಲ ಅಕ್ಕಿಯ ತಂದು ನಿಶ್ಚೈಸಿ ಮಾಡಬೇಕು

ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ಬೇಗ ಹೋಗು ಮಾರಯ್ಯಾ. ಎಂದು ಹೇಳುತ್ತಾ ಪತಿಯನ್ನು ಎಚ್ಚರಿಸುತ್ತಾ,

ಮೈಮರೆದು ಇಲ್ಲಿಯೇ ಕೂಡಬೇಡಿ ಹೋಗಿ ಕಾಯಕ ಮಾಡಿ, ಕೂಲಿಗೆ ತಕ್ಕಷ್ಟೇ ಅಕ್ಕಿಯನ್ನು ಆಯ್ದು ತನ್ನಿರಿ, ಬೇಗ ಬನ್ನಿರಿ, ದಾಸೋಹವ ಮಾಡಬೇಕು, ಎಂದು ಹೇಳುವಲ್ಲಿ ಒಂದೊಮ್ಮೆ ಮಾರಯ್ಯನು ಕಾಯಕವ ಮಾಡಿ ಬರುವಾಗ, ಅಣ್ಣ ಬಸವಣ್ಣನವರು ಹೆಚ್ಚು ಅಕ್ಕಿಯನ್ನು ರಾಶಿಯಲ್ಲೇ ಬಿಟ್ಟು ಬರಲು ಹೇಳಿದ್ದರು, ಮಾರಯ್ಯನವರು ಅಕ್ಕಿ  ಬಹಳ ಉಳಿದಿದೆ, ವ್ಯರ್ಥವಾದೀತು ಎಂದು ಭಾವಿಸಿ ತುಸು ಅಕ್ಕಿಯನ್ನು ಆದಾಯಕ್ಕಿಂತ ಹೆಚ್ಚಾಗಿಯೇ, ಗಂಟುಕಟ್ಟಿಕೊಂಡು ತಂದರು.

ಇದನ್ನು ಕಂಡ ಶರಣೆ ಲಕ್ಕಮ್ಮನವರು ಗಾಬರಿಯಾಗಿ, ನೋಡುತ್ತಾ, ಬಾಗಿಲಲ್ಲೇ ನಿಂತು, ಪತಿ ಮಾರಯ್ಯನಿಗೆ ಎಚ್ಚರಿಸುತ್ತಾಳೆ.ಇಂದಿಗೆ ನಾಳಿಂಗೆ ಎಂಬ ಆಸೆಯು ರಾಜ್ಯವನ್ನು ಆಳುವ ಅರಸನಿಗೆ ಅಲ್ಲದೆ,  ನಮ್ಮಂತಹ ಶಿವ ಭಕ್ತರಿಗೆ ಸಲ್ಲುವುದೇ ನೀವು ತಂದ ಅಕ್ಕಿಯು ಆದಾಯಕ್ಕಿಂತ ಹೆಚ್ಚಿನದ್ದಾಗಿದೆ, ಹಾಗಾಗಿ ಇದು ಮತ್ತೊಬ್ಬರಿಗೆ ಸಲ್ಲಬೇಕಾಗಿದ್ದು, ಅತಿಯಾಸೆ, ರೋಷ, ಆವೇಶದಿಂದ ತರುವುದು ನಮಗೆ ಸಲ್ಲದು, ಶರಣರಾದವರು ಸೋಹಂ ಎನ್ನದೇ, ದಾಸೋಹಂ ಎನ್ನುವವರು.

ಈಸಕ್ಕಿ ಆಸೆ ನಿಮಗೇಕೆ, ಇದು ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ ದೂರ ಮಾರಯ್ಯ.

ಆಸೆಯೆಂಬುದು ಅರಸಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ

ರೋಷವೆಂಬುದು ಯಮದೂತರಿಗಲ್ಲದೆ ಅಜಾತರಿಗುಂಟೆ ಅಯ್ಯಾ

ಈಸಕ್ಕಿಯಾಸೆ ನಿಮಗೇಕೆ ಈಶ್ವರನೊಪ್ಪ

ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ದೂರ ಮಾರಯ್ಯ.

ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ

ಇದು ನಿಮ್ಮ ಮನವೊ ಬಸವಣ್ಣನ ಅನುಮಾನದ ಚಿತ್ತವೊ

ಈ ಮಾತು ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ಸಲ್ಲದ ಬೋನ

ಅಲ್ಲಿಯೇ ಸುರಿದು ಬನ್ನಿ ಮಾರಯ್ಯಾ ಎಂದು ಹೇಳಿದಾಗ ಆಯ್ದಕ್ಕಿ ಮಾರಯ್ಯನು ಆದಾಯಕ್ಕಿಂತ ಹೆಚ್ಚಾಗಿ ತಂದಿರುವ ಅಕ್ಕಿಯನ್ನು ಮರಳಿ ಅಲ್ಲಿಯೇ ಸುರಿದು ಬರುತ್ತಾನೆ.

ಕಾಯಕದಲ್ಲಿ ನಿರತನಾದಡೆ,

ಗುರುದರ್ಶನವಾದಡೂ ಮರೆಯಬೇಕು,

ಲಿಂಗಪೂಜೆಯಾದಡೂ ಮರೆಯಬೇಕು,

ಜಂಗಮ ಮುಂದೆ ನಿಂದಿದ್ದರೂ ಹಂಗ ಹರಿಯಬೇಕು.

ಕಾಯಕವೇ ಕೈಲಾಸವಾದ ಕಾರಣ.

ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು.

ಎಂದು ಯಾವ ಕಾಯಕವೂ ಮೇಲಲ್ಲ, ಕೀಳಲ್ಲ, ಎಂದು  ಕಾಯಕಕ್ಕೆ ಹೆಚ್ಚಿನ ಮಹತ್ವಕೊಟ್ಟ, ಮಾರಯ್ಯನವರು ಗುರು ಲಿಂಗ ಜಂಗಮ ಈ ತ್ರಿವಿಧಕ್ಕೂ ಕಾಯಕವೇ ಆಧಾರವೆಂದು ಹೇಳಿದರು.

ಜಗತ್ತಿನಲ್ಲೇ ಪ್ರಪ್ರಥಮವಾಗಿ ದುಡಿಮೆಯನ್ನು ದೈವತ್ವಕ್ಕೇರಿಸಿ , ಕಾಯಕವೇ ಕೈಲಾಸ ಎಂಬ ನುಡಿಯನ್ನು ನುಡಿದು, ಅದನ್ನು ಅನುಷ್ಠಾನಕ್ಕೆ ತಂದವರು ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯನವರು.

ಇವರ ಕಾಯಕ ನಿಷ್ಠೆಯನ್ನು ಕಂಡು ಅಣ್ಣ ಬಸವಣ್ಣನವರು ಮೆಚ್ಚಿ ಹೊಗಳುತ್ತಾರೆ, ಹೀಗೆ ಸತ್ಯಶುದ್ಧ ಕಾಯಕವ ಮಾಡಿ ಅದರಿಂದ ಬಂದ ದ್ರವ್ಯವನ್ನು ದಾಸೋಹಕ್ಕೆ ಅರ್ಪಿಸಿ, ಅತ್ಯಂತ ಸಮಾಜಮುಖಿಗಳಾಗಿ, ಆದರ್ಶ ಜೀವನವನ್ನು ನಡೆಸಿ, ನಮ್ಮೆಲ್ಲರಿಗೆಯೂ ಮಾದರಿಯಾಗಿ ಉಳಿದಿದ್ದಾರೆ.

ಇವರ ಕಾಯಕ ನಿಷ್ಠೆ, ದಾಸೋಹ ತತ್ವ, ಸದಾ ಅನುಕರಣೀಯ , ಹಾಗೂ ಸ್ಪೂರ್ತಿದಾಯಕವಾಗಿದೆ, ಇಂದಿನ ದಿನಮಾನಗಳಲ್ಲಿ, ಆಯ್ದಕ್ಕಿ ಲಕ್ಕಮ್ಮನ ನಿಲುವು ಎಲ್ಲೆಡೆಯೂ ಹರಡಿದಲ್ಲಿ, ಲಂಚ ಮುಕ್ತ ರಾಜ್ಯ, ರಾಷ್ಟ್ರ ನಿರ್ಮಾಣ ಆಗಬಹುದು. ಗಂಡನಿಗೂ ತಿದ್ದಿ ಬುದ್ಧಿವಾದ ಹೇಳುವ ದಿಟ್ಟ ನಿಲುವು ಲಕ್ಕಮ್ಮನ  ಜ್ಞಾನದ ಉನ್ನತ ಸ್ಥಿತಿಯನ್ನು, ಸೂಚಿಸುತ್ತದೆ.

ಕಲ್ಯಾಣದ ಕಲಶವಾಗಿ, ಕಾಯಕರತ್ನವಾಗಿ, ಸದಾ ಹೊಳೆಯುತ್ತಿರುವ ಅವರ ವಚನಗಳು ಇಂದಿಗೂ, ಎಂದಿಗೂ, ಜೀವಂತವಾಗಿರಲಿವೆ. ಬಸವಾದಿ ಶರಣರ ಜೀವ, ವಚನಗಳಲ್ಲಿ ಮಿಡಿಯುತ್ತಿವೆ ಸದಾ ಓದುಗರಿಗಾಗಿ.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *