ಬೆಂಗಳೂರು
ನಾಡಗೀತೆಯಲ್ಲಿ ಇರುವ ಸರ್ವಜನಾಂಗದ ಶಾಂತಿಯ ತೋಟ ಎನ್ನುವ ಸಾಲು, ಇಡೀ ಬಹುತ್ವ ಭಾರತದ ಘನತೆ,
ಗೌರವವನ್ನು ಕಾಪಾಡುವ ರೀತಿಯಲ್ಲಿ ಬೆಳೆದುಕೊಂಡು ಬಂದಿದೆ ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಗಾಂಧಿಭವನದಲ್ಲಿ ಭಾನುವಾರ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಬಸವ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.
ಕನ್ನಡ ಪ್ರಜ್ಞೆಯನ್ನು ಔನ್ಯತ್ಯಕ್ಕೆ ಏರಿಸಿದ ಶರಣ ಚಳವಳಿಯ ಒಂದು ಸಂಘಟನಾತ್ಮಕ ಶಕ್ತಿಯೇ ಬಸವಣ್ಣನವರು. ಬಸವಣ್ಣ ಅವರು ಸಂಘಟನಾತ್ಮಕ ಶಕ್ತಿಯಾಗಿ ಸ್ವೀಕಾರರ್ಹವಾಗಲು ಕಾರಣ ಏನೆಂದರೆ ದೇಶಕ್ಕೆ ಅಂಟಿದ ಚಾತುರ್ವರ್ಣ ವ್ಯವಸ್ಥೆಯ ಶಾಪದಿಂದ ಮುಕ್ತವಾಗಿಸಲು ಚಳವಳಿಯನ್ನು ಕಟ್ಟಿದ್ದು ಎಂದು ತಿಳಿಸಿದರು.
‘12ನೇ ಶತಮಾನದ ಶರಣ ಚಳವಳಿಯಲ್ಲಿ ಮೂಡಿ ಬಂದ ವಚನಗಳೇ ನಿಜವಾದವು. ಚಾತುರ್ವಣ್ಯದ ಶಾಪಮುಕ್ತಿಯ ಆಶಯದೊಂದಿಗೆ ವಚನಗಳು ಒಡಮೂಡಿದವು. ಆಗ ಬಸವಪ್ರಜ್ಞೆಯನ್ನು ಮಹಾಮನೆ ಹುಟ್ಟುಹಾಕಿತು. ತಮ್ಮ ಮನೆಯನ್ನೇ ಅನುಭವ ಮಂಟಪ ಮಾಡಿಕೊಂಡವರು ಶರಣರು’ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ಪತ್ನಿ ಪ್ರೇಮಲೀಲ, ಜಯಶ್ರೀ ವೀರಣ್ಣ ದಂಡೆ, ಬಿ.ಆರ್. ಪಾಟೀಲ, ವೂಡೇ ಪಿ. ಕೃಷ್ಣ, ಮಹಾಂತ ಸ್ವಾಮೀಜಿ, ಶರಣಗೌಡ ಪಾಟೀಲ ಪಾಳಾ ಉಪಸ್ಥಿತರಿದ್ದರು.
