ಬೆಂಗಳೂರು
ಮರ್ಯಾದೆ ಹತ್ಯೆ ನಿಷೇಧಿಸುವ ‘ಇವ ನಮ್ಮವ, ಇವ ನಮ್ಮವ’ ವಿಧೇಯಕ ವಿಧಾನಸಭೆಯಲ್ಲಿ ಸೋಮವಾರ ಅಂಗೀಕಾರವಾಯಿತು.
ಸಚಿವ ಹೆಚ್.ಕೆ. ಪಾಟೀಲ್ ‘ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯ ಹೆಸರಿನಲ್ಲಿನ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ’ ಮಸೂದೆಯನ್ನು ವಿಧಾನಸಭೆಯಲ್ಲಿ ವಿವರಿಸಿದರು.
ಅನ್ಯ ಜಾತಿಗಳ, ಧರ್ಮದ ಯುವಕ, ಯುವತಿಯರು ಮದುವೆಯಾಗಲು ಸ್ವಾತಂತ್ರ್ಯ ನೀಡಬೇಕು. ಆದರೆ ಕೆಲವರು ಮರ್ಯಾದೆ ಹತ್ಯೆ ಮಾಡುವ ಕೆಲಸ ಮಾಡ್ತಿದ್ದಾರೆ. ತಮ್ಮದೇ ಮಕ್ಕಳನ್ನು ಕೊಲ್ಲುವ, ಹಿಂಸೆ ನೀಡುವ ಕೆಲಸ ಮಾಡ್ತಿದ್ದಾರೆ. ಈ ವಿಧೇಯಕ ಒಪ್ಪಿ, ಇತರೆ ರಾಜ್ಯಗಳಿಗೆ ಮಾದರಿಯಾಗಬೇಕು ಅಂತ ಮನವಿ ಮಾಡಿದರು.
ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾತನಾಡುತ್ತಾ, ಸದನದಲ್ಲಿ ಚರ್ಚೆ ಮಾಡಿ ಕಾನೂನು ಮಾಡಬೇಕು. ಹತ್ಯೆ ಮಾಡಿದವರಿಗೆ ಏನು ಶಿಕ್ಷೆ?. ಪರ್ಯಾಯ ವ್ಯವಸ್ಥೆ ಏನು ತಂದಿದ್ದೀರಿ?. ಕಾಯ್ದೆಯ ಉಪಯೋಗ ಏನಿದೆ?. ಬಿಎನ್ಎಸ್ ಕಾಯ್ದೆಯಲ್ಲಿ ಹತ್ಯೆಗೆ ಶಿಕ್ಷೆ ಇದೆ. ಈ ಮಸೂದೆಯಲ್ಲಿ ವಿಶೇಷ ಏನು ತಂದಿದ್ದೀರಿ ಎಂದು ಪ್ರಶ್ನಿಸಿದರು.
ಇದೇ ವೇಳೆ ಶಾಸಕ ಸುರೇಶ್ ಕುಮಾರ್ ಮಾತನಾಡುತ್ತಾ, ಈಗಾಗಲೇ BNS ಕಾನೂನು ಇದೆ. ಇದರ ಹೊರತಾಗಿ ಏನು ಮಾಡಿದ್ದೀರಾ?. ಕೇವಲ ಬಸವಣ್ಣನ ಉದಾಹರಣೆ ಕೊಡೋದು ಬಿಟ್ಟು, ಬೇರೇನು ಹೊಸತಿದೆ ಎಂದು ಪ್ರಶ್ನಿಸಿದರು.
ಶಾಸಕ ಸುನಿಲ್ ಕುಮಾರ್ ಮಾತನಾಡಿ, ಇವ ನಮ್ಮವ, ಇವ ನಮ್ಮವ ಅನ್ನೋದು ಸೇರಿಸಿದ್ದೀರಿ ಅಷ್ಟೇ. ಎಲ್ಲದಕ್ಕೂ ಒಂದು ಮಸೂದೆ ತರುತ್ತಿದ್ದೀರಿ. ದ್ವೇಷ ಭಾಷಣಕ್ಕೆ ಒಂದು ಮಸೂದೆ, ರೋಹಿತ್ ವೇಮುಲ ಕಾಯ್ದೆ ತರುತ್ತಿದ್ದೀರಿ. ಈ ಮಸೂದೆಗಳಲ್ಲಿ ಬೇರೆ ಹೊಸತೇನಿದೆ ಎಂದು ಪ್ರಶ್ನೆ ಮಾಡಿದರು.
