ವಿಜಯನಗರ
ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.
ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.
ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಶಿಬಿರ, ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.
ಇಂದು ಹರಪ್ಪನಹಳ್ಳಿ ತಾಲೂಕಿನ ಅಖಂಡ ಲಿಂಗಾಯತ ಸಂಘದ ಬಸವರಾಜ ಪೂಜಾರ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
- ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಪ್ರಭಾವ ಬೆಳೆಸಿಕೊಳ್ಳಬೇಕೆ? ಇದರಿಂದ ಲಿಂಗಾಯತ ದರ್ಮದ ಹೋರಾಟ ಬಲವಾಗುತ್ತದೆಯೇ?
ಬಸವಶಕ್ತಿ ಶಿಬಿರ, ಸಮಾವೇಶ ಮಾಡಲೇಬೇಕು. ಈಗಿನ ಪರಿಸ್ಥಿತಿಯಲ್ಲಿ ಇದರ ಅಗತ್ಯವಿದೆ. ಬಸವಭಕ್ತರು ವಚನಕಾರರ ರಾಜಕೀಯ ವಿಶ್ಲೇಷಣೆಯನ್ನು ಅರ್ಥಮಾಡಿಕೊಳ್ಳಬೇಕು. ಇದಕ್ಕೆ ಪೂರಕವಾದ ಕಾರ್ಯಕ್ರಮ ರೂಪಿಸಬೇಕು. ಇದು ಲಿಂಗಾಯತ ಧರ್ಮದ ಹೋರಾಟಕ್ಕೆ ಬಲನೀಡುತ್ತದೆ.
- ಎದ್ದೇಳು ಕರ್ನಾಟಕ ಪ್ರಗತಿಪರ ಸಂಘಟನೆಗಳಿಗೆ ರಾಜಕೀಯ, ಚುನಾವಣೆಗೆ ಸಂಬಂಧಿಸಿದ ತರಬೇತಿ ನೀಡುತ್ತದೆ. ಇದೇ ರೀತಿ ಬಸವ ಸಂಘಟನೆಗಳಿಗೆ ತರಬೇತಿ ನೀಡಬೇಕೆ?
ತರಬೇತಿ ಅತೀ ಅವಶ್ಯವಿದೆ. ತರಬೇತಿಯಲ್ಲಿ ರಾಜಕೀಯದ ಜೊತೆಗೆ ಬಸವತತ್ವ ಕುರಿತಾದ ವಿಚಾರ ಸಂಕಿರಣ ನಡೆಸಬೇಕು ಹಾಗೂ ಯುವಕರನ್ನು ಬಸವತತ್ವದೆಡೆಗೆ ಆಕರ್ಷಿಸಲು ಬೇಕಾದ ಸಿದ್ಧತೆ ಮಾಡಬೇಕು. ಮನೆ ಮನೆಗೆ ತೆರಳಿ ವಚನ ಸಾಹಿತ್ಯದ ಅರಿವು ನೀಡಿ ಅವರನ್ನು ತರಬೇತಿಯಲ್ಲಿ ತೊಡಗಿಸಬೇಕು.
- ಈ ನಿಟ್ಟಿನಲ್ಲಿ ಬಸವ ಶಕ್ತಿ ಶಿಬಿರ ಸಮಾವೇಶಗಳನ್ನು ಆಯೋಜಿಸಬೇಕೆ? ಇದರ ಸಾಧಕ ಬಾದಕಗಳೇನು?
ಗ್ರಾಮ ಪಂಚಾಯತಿಗಳಿಂದ ಹೋಬಳಿ ಮಟ್ಟದವರೆಗೆ ಹಾಗೂ ತಾಲೂಕು ಮಟ್ಟದಲ್ಲಿ ಎಲ್ಲರನ್ನು ಕ್ರೊಢೀಕರಿಸಬೇಕು. ಮೊದಲು ತಾಲೂಕು ಮಟ್ಟದ ಸಮಾವೇಶ ಮಾಡಬೇಕು. ಇದರ ಸಾಧಕ ಬಾಧಕಗಳನ್ನು ತಾಲೂಕು ಮಟ್ಟದ ಮುಖಂಡರು ಕಾರ್ಯಕರ್ತರಿಗೆ ನಿರ್ವಹಿಸುವಂತೆ ಸೂಚಿಸಬೇಕು.
- ನಿಮ್ಮ ಜಿಲ್ಲೆ ತಾಲೂಕಿನಲ್ಲಿ ಬಸವಶಕ್ತಿ ಶಿಬಿರ, ಸಮಾವೇಶಗಳನ್ನು ಆಯೋಜಿಸಲು, ನೆರವಾಗಲು ನಿಮಗೆ ಆಸಕ್ತಿ ಇದೆಯೇ, ಹೇಗೆ ಕೈ ಜೋಡಿಸುತ್ತೀರಿ?
ಖಂಡಿತ ನೇರವಾಗುತ್ತೇನೆ. ನನ್ನಲ್ಲಿ ಆರ್ಥಿಕ ಸಾಮರ್ಥ್ಯ ಇಲ್ಲದಿದ್ದರೂ, ದೈಹಿಕ ಮತ್ತು ಮಾನಸಿಕವಾಗಿ ಕ್ರಿಯಾಶೀಲವಾಗಿ ಕೈಜೋಡಿಸುತ್ತೇನೆ. ಇದನ್ನು ನಮ್ಮ ವಿಜಯನಗರ ಜಿಲ್ಲಾ ಅಧ್ಯಕ್ಷರು, ಜಿಲ್ಲಾ ಮುಖಂಡರ ಜೊತೆ ಮಾತನಾಡಿ ಇನ್ನೂ ಹೆಚ್ಚಿನ ಬೆಂಬಲವನ್ನು ಒದಗಿಸುತ್ತೇನೆ.
