ಕಲಘಟಗಿ:
ತಾಲ್ಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಬಸವತತ್ವ ಲಿಂಗಾನುಭಾವಿ ಶರಣರ ಬಳಗದಿಂದ 893ನೇ ವಿಶ್ವಗುರು ಬಸವಣ್ಣ ಜಯಂತ್ಯೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ತಾಲ್ಲೂಕು ಮಟ್ಟದ ವಚನ ಕಂಠಪಾಠ ಸ್ಪರ್ಧೆ ಏರ್ಪಡಿಸಲಾಗಿದೆ.
ಏಪ್ರಿಲ್ 19ರಂದು ಬೆಳಿಗ್ಗೆ 6 ಗಂಟೆಗೆ ಸಾಮೂಹಿಕ ಇಷ್ಟಲಿಂಗಾರ್ಚನೆ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ವಚನ ಕಂಠಪಾಠ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯನ್ನು ಪ್ರಾಥಮಿಕ ವಿಭಾಗ, ಪ್ರೌಢ ವಿಭಾಗ ಹಾಗೂ ಕಾಲೇಜು ವಿಭಾಗ ಎಂದು ವಿಂಗಡಿಸಲಾಗಿದೆ.
ಸಂಜೆ 6 ಗಂಟೆಗೆ ವಚನ ನೃತ್ಯ, ವಚನ ಗಾಯನ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಬಸವ ಜಯಂತಿಯಂದು ಏಪ್ರಿಲ್ 20ರಂದು ಬೆಳಿಗ್ಗೆ 8 ಗಂಟೆಗೆ ಬಸವಣ್ಣನವರ ಭಾವಚಿತ್ರದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಚನ ಪಠಣದೊಂದಿಗೆ ಮೆರವಣಿಗೆ ನಡೆಯಲಿದೆ.
ನಂತರ ಅನುಭವ ಮಂಟಪದ ಆವರಣದಲ್ಲಿ ಧ್ವಜಾರೋಹಣ, ಸಾಮೂಹಿಕ ಪ್ರಾರ್ಥನೆ ಹಾಗೂ ಅನುಭಾವ ಇರುತ್ತದೆ. ಕೊನೆಗೆ ಮಹಾಪ್ರಸಾದ ಜರುಗಲಿದೆ.
ತಾಲೂಕು ಮಟ್ಟದ ವಚನ ಸ್ಪರ್ಧೆಗೆ ಹೆಸರು ನೋಂದಾಯಿಸಲು ಮೊ: 9902995780 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
