ಗುಳೇದಗುಡ್ಡ:
ಬಸವ ಕೇಂದ್ರದ ವತಿಯಿಂದ ಬಸವ ತಂದೆಗಳ ಜಯಂತಿ ಆಚರಣೆಯ ಪೂರ್ವಭಾವಿ ಸಭೆ ಈಚೆಗೆ ಸ್ಥಳೀಯ ಶ್ರೀಮತಿ ಬಸಮ್ಮ ಮಂಗಳಗುಡ್ಡ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿ ಸಹ ಆಚರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಅಕ್ಕಮಹಾದೇವಿ ಮಂದಿರದ ಶರಣಮ್ಮ ತಾಯಿಯವರು ವಹಿಸಿ ಮಾತನಾಡಿ, ಬಸವ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಹಾಗೂ ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತೆ ಸೂಚಿಸಿದರು.

ಮಹಾಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಪ್ರೊ. ಬಸವರಾಜ ಚವಡಿಯವರು ಮಾತನಾಡುತ್ತ, ಸ್ತ್ರೀ ಸಮಾನತೆ, ಅಹಿಂಸೆ, ಅನುಕಂಪ, ಮಾನವೀಯತೆ ಇತ್ಯಾದಿಗಳಲ್ಲಿ ಬುದ್ಧ, ಬಸವ, ಅಂಬೇಡ್ಕರ ಅವರು ಸದಾ ಸ್ಮರಣೀಯರಾಗಿದ್ದಾರೆ. ಅದರಲ್ಲೂ ಬಸವಣ್ಣನವರ ವೈಚಾರಿಕ ನಿಲುವನ್ನು ಸಂವಿಧಾನಕ್ಕಿಳಿಸಿದ ಅಂಬೇಡ್ಕರ್ ಸಮಸಮಾಜ ಆಶಯದ ಕಣ್ಣಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಬಸವ ಜಯಂತಿಯನ್ನು 20-04-2026, ಸೋಮವಾರ ಸಂಜೆ 5 ಗಂಟೆಗೆ ಶ್ರೀ ಶೆಟ್ಟರ ಸಮಸ್ತ ಸಮಾಜದ ಶ್ರೀಮತಿ ಬಸಮ್ಮ ಮಂಗಳಗುಡ್ಡ ಕಲ್ಯಾಣ ಮಂಟಪದಲ್ಲಿ ಜರುಗಿಸುವುದೆಂದು, ಅಂದು ಬೆಳ್ಳಿಗೆ 7 ಗಂಟೆಗೆ ಸಹಜ ಶಿವಯೋಗದೊಂದಿಗೆ ಪ್ರಾರಂಭಿಸಿ, ಅನಂತರ ಪ್ರಸಾದ. ಎರಡನೇಯ ಹಂತದಲ್ಲಿ 9 ಗಂಟೆಗೆ ಅನುಭಾವ ಕಾರ್ಯಕ್ರಮ ಜರುಗಿಸುವುದೆಂದೂ, ಈ ಕಾರ್ಯಕ್ರಮ ಬಸವ ಧ್ವಜಾರೋಹಣದೊಂದಿಗೆ ಪ್ರಾರಂಭವಾಗಿ ಚಿಂತನಶೀಲ ಶಿಕ್ಷಕ, ಸಾಹಿತಿ ರವಿ ಕಂಗಳ ಅವರಿಂದ ಅನುಭವವನ್ನೂ ಜರುಗಿಸುವುದೆಂದೂ ನಿರ್ಧರಿಸಲಾಯಿತು.

ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಶರಣಮ್ಮ ತಾಯಿಯವರು ವಹಿಸಿಕೊಳ್ಳುವುದೆಂದು ತೀರ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಬಸವ ಕೇಂದ್ರದ ಗೌರವಾಧ್ಯಕ್ಷ ಎಚ್. ಎಸ್. ಹುಳಿಪಲ್ಲೇದ ವಹಿಸಿಕೊಳ್ಳುವುದಾಗಿ ನಿರ್ಧರಿಸಲಾಯಿತು.
ಸಭೆಯಲ್ಲಿ ಬಸವ ಕೇಂದ್ರ, ಜಾಗತಿಕ ಲಿಂಗಾಯತ ಮಹಾಸಭಾ ಒಳಗೊಂಡಂತೆ ವಿವಿಧ ಸಮಾಜದ ಗುರುಹಿರಿಯರು, ಬಸವಾಭಿಮಾನಿಗಳು ಹಾಜರಿದ್ದರು.
