ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶೇಷ ಉಪನ್ಯಾಸ
ಹೊಸಪೇಟೆ :
12ನೇ ಶತಮಾನದಲ್ಲಿ ಬಸವಾದಿ ಶರಣರು ಪ್ರತಿಪಾದಿಸಿದ ತತ್ವ ಸಿದ್ಧಾಂತಗಳು ಸಂವಿಧಾನದ ಆಶಯಗಳಾಗಿವೆ. ಇಂದಿನ ಸಂವಿಧಾನದ ಪೂರ್ವ ಪೀಠಿಕೆಯಲ್ಲಿರುವ ಸ್ವತಂತ್ರ, ಸಮಾನತೆ, ಭ್ರಾತೃತ್ವ, ನ್ಯಾಯ ಈ ಅಂಶಗಳನ್ನು ಬಸವಾದಿ ಶರಣರು ಪ್ರತಿಪಾದಿಸಿದ್ದಾರೆ ಎಂದು ಶರಣ ಚಿಂತಕರಾದ ಡಾ. ಕೆ ರವೀಂದ್ರನಾಥ್ ಅವರು ಹೇಳಿದರು.

ವಿಜಯನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಾಗೂ ಹೊಸಪೇಟೆಯ ನ್ಯಾಷನಲ್ ಬಿಎಡ್ ಕಾಲೇಜ್ ಸಹಯೋಗದೊಂದಿಗೆ ಆಯೋಜಿಸಿದ್ದ 893ನೇ ಬಸವ ಜಯಂತಿ ಪ್ರಯುಕ್ತ ಇಲ್ಲಿನ ನ್ಯಾಷನಲ್ ಬಿಎಡ್ ಕಾಲೇಜು ವಿದ್ಯಾರ್ಥಿಗಳಿಗೆ ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಶರಣರು 12ನೇ ಶತಮಾನದಲ್ಲಿಯೇ ಸಮ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಿದ್ದರು. ಆದ್ದರಿಂದ ಅವರುಗಳು ಪ್ರತಿಪಾದಿಸಿದ ತತ್ವ ಸಿದ್ಧಾಂತಗಳು ಕನ್ನಡದ ಅಸ್ಮಿತೆಯಾಗಿದ್ದು, ಈ ಸಿದ್ಧಾಂತಗಳು ಸರ್ವಕಾಲಕ್ಕೂ ಶ್ರೇಷ್ಠವಾಗಿವೆ. ಆದ್ದರಿಂದ ವಿದ್ಯಾರ್ಥಿಗಳು ಈ ತತ್ವಗಳನ್ನು ಅನುಸರಿಸುವುದರ ಮೂಲಕ ಸಮಾಜವನ್ನು ಪರಿವರ್ತನೆಗೊಳಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

