ಚಿತ್ರದುರ್ಗ :
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಡಿ. ಸುಧಾಕರ ಅವರು ಅಕಾಲಿಕವಾಗಿ ನಮ್ಮನ್ನಗಲಿರುವುದು ನೋವನ್ನುಂಟು ಮಾಡಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ ಸಂತಾಪ ವ್ಯಕ್ತಪಡಿಸಿದ್ದಾರೆ.
ಬಡವರ ಬಂಧು ಎಂದೇ ಹೆಸರಾಗಿದ್ದ ಶ್ರೀಯುತರು ಜನಸೇವೆಯನ್ನು ಧ್ಯೇಯವಾಗಿಸಿಕೊಂಡು ಸರಳತೆ, ಸೌಜನ್ಯ ಹಾಗೂ ಕಾಳಜಿಯಿಂದ ಜನರ ಮನ ಗೆದ್ದಿದ್ದರು. ಸಾರ್ವಜನಿಕರ ಬದುಕಿನಲ್ಲಿ ತಮ್ಮದೇ ಆದ ಸೇವಾ ಮನೋಭಾವದಿಂದ ಜನಸೇವೆಯಲ್ಲಿ ಅಪಾರ ಕಾಳಜಿ ಮತ್ತು ಬದ್ಧತೆಯುಳ್ಳವರಾಗಿದ್ದರು ಹಾಗೂ ಜನಾನುರಾಗಿ ಹೆಸರು ಮಾಡಿದವರು.
ಅವರು ಶ್ರೀಮಠದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು ಹಾಗೂ ನಮ್ಮ ವಿದ್ಯಾಸಂಸ್ಥೆಯ ಚಂದ್ರವಳ್ಳಿ ಪದವಿ ಕಾಲೇಜಿನ ಹಳೆಯ ವಿದ್ಯಾರ್ಥಿಯೂ ಕೂಡ ಆಗಿದ್ದನ್ನು ಸ್ಮರಿಸಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಮೃತರ ಅಗಲಿಕೆಯಿಂದ ಕುಟುಂಬ ವರ್ಗದವರಿಗೆ ಮತ್ತು ಹಿತೈಷಿಗಳಿಗೆ ಆಗಿರುವ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಬಸವಾದಿ ಪ್ರಮಥರು ಕರುಣಿಸಲಿ ಎಂದು ಡಾ. ಪಿ.ಎಸ್. ಶಂಕರ, ಡಾ. ಬಸವಕುಮಾರ ಸ್ವಾಮಿಗಳು, ಎನ್.ಎಸ್. ಚಂದ್ರಶೇಖರ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
