ಇಂದು ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶದ ವಿರುದ್ಧ ಮಹತ್ವದ ಸಭೆ
ಬಸವ ಕಲ್ಯಾಣ
ಕನ್ನೇರಿ ಸ್ವಾಮಿ ನೇತೃತ್ವದಲ್ಲಿ ಜೂನ್ 28 ಪಟ್ಟಣದಲ್ಲಿ ಆಯೋಜಿತವಾಗಿರುವ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶವನ್ನು ಪ್ರಬಲವಾಗಿ ವಿರೋಧಿಸಲು ಇಂದು ಬಸವಪರ ಸಂಘಟನೆಗಳ ಪೂರ್ವಭಾವಿ ಸಭೆ ನಡೆಯಲಿದೆ.
‘ಬಸವದ್ರೋಹಿ ಕನ್ನೇರಿ ಸ್ವಾಮಿಯ ಬಸವಕಲ್ಯಾಣ ಪ್ರವೇಶವನ್ನು ವಿರೋಧಿಸಲು’ ಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಿರುವ ಸಭೆಗೆ ಬರಲು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲೆಯ ಬಸವಪರ, ಕನ್ನಡಪರ, ಪ್ರಗತಿಪರ ಸಂಘಟನೆಗಳಿಗೆ ಅಹ್ವಾನ ಕಳಿಸಿದೆ.

ಇಂದಿನ ಮಹತ್ವದ ಸಭೆ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷರಾದ ಪೂಜ್ಯ ಡಾ. ಬಸವಲಿಂಗ ಪಟ್ಟದೇವರ ಸಾನಿಧ್ಯದಲ್ಲಿ ಹಾಗು ಜಿಲ್ಲೆಯ ಸಮಸ್ತ ಮಠಾಧೀಶರ, ಪೂಜ್ಯರ ನೇತೃತ್ವದಲ್ಲಿ ನಡೆಯಲಿದೆ.
“ಕನ್ನೇರಿ ಸ್ವಾಮಿ ಕಲ್ಯಾಣ ಪ್ರವೇಶ ಮಾಡಲು ಬಿಡುವುದಿಲ್ಲ. ಇದು ನಮ್ಮ ಒಂದು ಅಂಶದ ಕಾರ್ಯಕ್ರಮ. ಇದು ನಮ್ಮ ಮೂಲ ಉದ್ದೇಶ,” ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.
“ಕಲ್ಯಾಣ ಎಲ್ಲರಿಗೂ ಸೇರಿದ್ದು. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಜನ ಬರುತ್ತಾರೆ, ಕನ್ನೇರಿ ಸ್ವಾಮಿ ಕಲ್ಯಾಣಕ್ಕೆ ಬರುವುದನ್ನು ತಡೆಯುತ್ತಾರೆ. ರಂಭಾಪುರಿ ಸ್ವಾಮೀಜಿ ಅಡ್ಡಪಲ್ಲಕ್ಕಿ ಮಾಡಲೂ ನಾವು ಇಲ್ಲಿ ಬಿಡಲಿಲ್ಲ, ನೆನಪಿರಲಿ,” ಎಂದು ಹೇಳಿದರು.
ಇಂದಿನ ಸಭೆಗೆ ಬಸವಪರ ಸಂಘಟನೆಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

“ಬೀದರಿನ ಎಲ್ಲಾ ಬಸವಪರ ಸಂಘಟನೆಗಳು ಸೇರಿ ವಿರೋಧಿಸುತ್ತೇವೆ. ಹಿಂದೂ ಸಮಾವೇಶದ ನೆಪದಲ್ಲಿ ಇವರು ಎಲ್ಲಾ ಕಡೆ ಬಸವಾದಿ ಶರಣರ ಬಗ್ಗೆ ತಪ್ಪು ಕಲ್ಪನೆ ಮೂಡಿಸುತ್ತಿದ್ದಾರೆ. ಇದನ್ನ ಹ್ಯಾಂಗ ಎದರಿಸಬೇಕು, ಯಾವ ರೀತಿ ಅದರ ವಿರುದ್ಧ ಹೋರಾಟ ಮಾಡಬೇಕು,” ಎನ್ನುವುದು ಇಂದಿನ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಲಿಂಗಾಯತ ಮಹಾಮಠದ ರಮೇಶ ಮಠಪತಿ ಹೇಳಿದರು.
“ಇವರು ಕನ್ನೇರಿ ಸ್ವಾಮಿ ನೇತೃತ್ವದಲ್ಲಿ ಈ ಸಮಾವೇಶಗಳನ್ನು ಕಲಬುರ್ಗಿ, ಶಹಾಪುರ, ಗದಗದಲೆಲ್ಲಾ ಮಾಡಿದ್ದಾರೆ. ಆದರೆ ಬಸವಣ್ಣನವರ ಪುಣ್ಯ ಭೂಮಿಯಲ್ಲಿ ಈ ಸಮಾವೇಶ ನಡೆದರೆ ಅದರ ಮಹತ್ವವೇ ಬೇರೆ ಇರುತ್ತದೆ. ಇಲ್ಲಿ ಯಾವುದೇ ಕಾರಣಕ್ಕೂ ಅದನ್ನು ನಡೆಯಲು ನಾವು ಬಿಡುವುದಿಲ್ಲ, ಎಂದು ಕಲ್ಯಾಣ ಮಹಾಮನೆಯ ಪೂಜ್ಯ ಬಸವಪ್ರಭು ಸ್ವಾಮೀಜಿ ಹೇಳಿದರು.

“ಈ ಸಮಾವೇಶಗಳಲ್ಲಿ ನಮ್ಮನ್ನು ಬಸವ ತಾಲಿಬಾನ್ ಎಂದು ಕರೆಯುತ್ತಿದ್ದಾರೆ. ಆದರೆ ಈ ಪದಬಳಕೆಯಲ್ಲಿ ಅವರು ನಿಂದಿಸುತ್ತಿರುವುದು ಬಸವಣ್ಣನವರನ್ನೇ. ಬಸವಣ್ಣನವರೇ ತಾಲಿಬಾನ್ ಎಂದು ಇದರ ಅರ್ಥ. ನಿಮ್ಮ ಹೆಸರ ಮುಂದೆ ತಾಲಿಬಾನ್ ಅಂತ ಜೋಡಿಸಿದರೆ ತಾಲಿಬಾನ್ ನೀವು ಆಗ್ತಿರೋ ಅಥವಾ ಬೇರೆಯವರು ಆಗ್ತಾರೋ?,” ಎಂದು ಪ್ರಶ್ನಿಸಿದರು.
“ವಿರೋಧ ದೊಡ್ಡ ಪ್ರಮಾಣದಲ್ಲಿ ಮಾಡ್ತೀವಿ, ಮುಟ್ಟಿ ನೋಡಿಕೊಳ್ಳೋ ಹಾಗೆ ಮಾಡ್ತೀವಿ. ಅವನು ಡಿಸಿಯಿಂದ ಪರ್ಮಿಷನ್ ತಗೊಂಡು ಬಂದರೂ ನಾವು ಬಿಡುವುದಿಲ್ಲ,” ಎಂದು ಇನ್ನೊಬ್ಬರು ಪೂಜ್ಯರು ಹೇಳಿದರು.
ಕನ್ನೇರಿ ಸ್ವಾಮಿ ಸಮಾವೇಶದ ವಿರುದ್ಧ ಪೂರ್ವಭಾವಿ ಸಭೆ ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಬಸವಲಿಂಗ ಪಟ್ಟದೇವರ ಸಾನಿಧ್ಯದಲ್ಲಿ ನಡೆಯುತ್ತಿರುವುದು ಎಲ್ಲರಲ್ಲಿಯೂ ಹುರುಪು ಮೂಡಿಸಿದೆ.
“ಈ ಹಿಂದೂ ಸಮಾವೇಶಗಳು ಶುರುವಾಗಿದ್ದು ಬಸವ ಸಂಸ್ಕೃತಿ ಅಭಿಯಾನದ ನಂತರ. ಲಿಂಗಾಯತ ಒಕ್ಕೂಟದ ಅಧ್ಯಕ್ಷರಾಗಿರುವ ಪೂಜ್ಯರು ಟಾರ್ಗೆಟ್ ಆಗಿದ್ದಾರೆ. ವೈಯಕ್ತಿಕ ನಿಂದನೆಯನ್ನೂ ಎದುರಿಸಿದ್ದಾರೆ. ಭಾಲ್ಕಿ ಶ್ರೀಗಳೇ ಈ ಪ್ರತಿರೋಧದ ಮುಂದಾಳತ್ವ ವಹಿಸಿಕೊಳ್ಳುವುದು ಬಹಳ ಮುಖ್ಯ ಇತ್ತು,” ಎಂದು ಬಸವಪ್ರಭು ಸ್ವಾಮೀಜಿ ಹೇಳಿದರು.

“ನಾಳಿನ ಬೀದರ ಸಭೆಯಲ್ಲಿ ನಾವು ಭಾಗವಹಿಸುತ್ತಿದ್ದೇವೆ. ಬಾಲ್ಕಿ ಶ್ರೀಗಳು ಭಾಗವಹಿಸುತ್ತಿರುವುದು ಬಹಳ ಮುಖ್ಯವಾದದ್ದು. ಈ ಸಭೆಗೆ ಒಂದು ದೊಡ್ಡ ಶಕ್ತಿ, ಮಹತ್ವ ಬರಲಿದೆ,” ಎಂದು ಹುಲಸೂರ ತಾಲೂಕು ಬಸವ ಕೇಂದ್ರದ ಅಧ್ಯಕ್ಷ ಆಕಾಶ ಖಂಡಾಳೆ ಹೇಳಿದರು.
ಇಂದಿನ ಸಭೆಯಲ್ಲಿ ಭಾಲ್ಕಿ ಶ್ರೀಗಳ ಜೊತೆ, ಹುಲಸೂರ ಶ್ರೀಗಳು, ಗಂಗಾಬಿಕೆ ಅಕ್ಕಾವರು, ಬೆಲ್ದಾಳ ಶರಣರು ಸೇರಿದಂತೆ ಜಿಲ್ಲೆಯ ಎಲ್ಲಾ ಪೂಜ್ಯರೂ ಇರುತ್ತಾರೆ. ಮುಂದೆ ಎಲ್ಲರೂ ಪತ್ರಿಕೆ ಗೋಷ್ಠಿ ನಡೆಸಿ ಮಾಧ್ಯಮಗಳಲ್ಲಿ, ಜನರಲ್ಲಿ ಜಾಗೃತಿ ಮೂಡಿಸಬೇಕೆಂದು’ ಮನವಿ ಮಾಡುತ್ತೇವೆ, ಎಂದು ಧನ್ನೂರ ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ, ಭಾರತೀಯ ಬಸವ ಬಳಗ, ಬಸವ ಕೇಂದ್ರ, ಬಸವ ಸೇವಾ ಪ್ರತಿಷ್ಠಾನ, ಲಿಂಗಾಯತ ಮಹಾಮಠ, ಬಸವ ಬ್ರಿಗೇಡ್ ಸೇರಿದಂತೆ ಎಲ್ಲಾ ಸಂಘಟನೆಗಳು ಇಂದಿನ ಸಭೆಯಲ್ಲಿ ಭಾಗವಹಿಸುತ್ತಿವೆ ಎಂದು ಹೇಳಿದರು.


ಬಸವ ಧರ್ಮ ರಕ್ಷಕ ಬಳಗಕ್ಕೆ ಜಯವಾಗಲಿ 💐👏🏻
ಬಸವ ವಿರೋದ್ಧಿ ಗಳಿಗೆ ದಿಕ್ಕಾರವಾಗಲಿ
ನಿಜಕ್ಕೂ ಒಳ್ಳೆಯ ಬೆಳವಣಿಗೆ
ಜಯವಾಗಲಿ ಬಸವಾದಿ ಶರಣರ ಸಕಲ ಜೀವಿಗಳ ಲೇಸ ಬಯಸುವ ಜಾಗೃತಾ ಸಮಾವೇಶಕ್ಕೆ.
ಬಸವಾದಿ ಶರಣರ ಕೊಲೆಗಳಿಗೆ ಮತ್ತು ವಚನ ಸಾಹಿತ್ಯದ ವಿನಾಶಕ ಕಾರಣರಾದ ಪಟ್ಟಭದ್ರರ ಕುಡಿಗಳ ಕೈಗೊಂಬೆಯಾಗಿ ಜನರ ದಿಕ್ಕು ತಪ್ಪಿಸುವ ಬಸವಾದಿ ಶರಣರ ಹಿಂದು ಸಮಾವೇಶ ಆಯೋಜನೆಗೆ ಧಿಕ್ಕಾರ!