ಬೀದರ:
ದೇಶದ ಸಂಸ್ಕೃತಿ, ಸಂಸ್ಕಾರ, ಕಲೆ ಹಾಗೂ ಸಾಹಿತ್ಯದ ಉಳಿವಿಗೆ ಹಾಗೂ ಬೆಳವಣಿಗೆಗೆ ವಚನ ಸಾಹಿತ್ಯದ ಅಧ್ಯಯನ ಅವಶ್ಯಕವಾಗಿದೆ ಎಂದು ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ ಬಿರಾದಾರ ಅಭಿಪ್ರಾಯಪಟ್ಟರು.
ವಚನಾಮೃತ ಕನ್ನಡ ಸಂಘದಿಂದ ಇಲ್ಲಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿಯ ಮಹಾಲಕ್ಷ್ಮಿ ಸಭಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ಬಸವಾದಿ ಶರಣ ಹಡಪದ ಅಪ್ಪಣ್ಣ ಹಾಗೂ ಮೈದುನ ರಾಮಯ್ಯ ಅವರುಗಳ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ವಚನ ಸಾಹಿತ್ಯ ಅನುಭಾವದ ಸಾಗರವಾಗಿದೆ. ಅದನ್ನು ಅಧ್ಯಯನ ಮಾಡಿ ನಮ್ಮ ಶಕ್ತಿಗೆ ಅನುಗುಣವಾಗಿ ಅದನ್ನು ಬಳಸಿಕೊಂಡು ಬಲಿಷ್ಠ ಸಮಾಜ ಕಟ್ಟಬಹುದಾಗಿದೆ.
ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, 12ನೇ ಶತಮಾನದ ಶರಣರು ಸಮಸಮಾಜ ಕಟ್ಟಿದ್ದರು. ಅವರ ತತ್ವಾದರ್ಶಗಳನ್ನು ಯುವ ಪೀಳಿಗೆಗೆ ತಿಳಿಸಲು ಸಂಘದಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸಂಘದಿಂದ ಇದೇ ಜೂನ್ 10ರಂದು ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶರಣ ಅಲ್ಲಮಪ್ರಭುದೇವರ ಕುರಿತ ವಿಚಾರ ಸಂಕಿರಣ ನಡೆಯಲಿದೆ. ಸಾರ್ವಜನಿಕರು ಭಾಗವಹಿಸಬೇಕೆಂದು ಮನವಿ ಮಾಡಿಕೊಂಡರು.
ಶಿವಶರಣ ಹಡಪದ ಅಪ್ಪಣ್ಣ ಅವರ ಕುರಿತು ಪ್ರೊ. ರಮಾಕಾಂತ ಕಾರಾಮುಂಗೆ ಉಪನ್ಯಾಸ ನೀಡುತ್ತ, ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಒಳ್ಳೆಯ ಹೆಸರು ಗಳಿಸಿದ್ದರು. ಅಪ್ಪಣ್ಣ ಬಸವಪ್ರಿಯ ಕೂಡಲಚನ್ನಬಸವಣ್ಣ ಎಂಬ ವಚನಾಂಕಿತದೊಂದಿಗೆ ವಚನಗಳನ್ನು ರಚಿಸಿದ್ದರು. ಅವರವು 250 ವಚನಗಳು ಲಭ್ಯ ಇವೆ. ಮಾನವೀಯ ಮೌಲ್ಯಗಳ ಭಂಡಾರವಾಗಿದ್ದವರು ಇವರು ಎಂದರು.

ಉಪನ್ಯಾಸಕಿ, ಚಿಂತಕಿ ಡಾ. ವೀಣಾ ಜಲಾದೆ ಅವರು ಶರಣ ಮೈದುನರಾಮಯ್ಯ ಅವರ ವಚನಗಳಲ್ಲಿ ಸಂಬಂಧಗಳ ಮಹತ್ವ ಕಾಣಬಹುದು ಎಂದು ಅವರ ಕುರಿತು ಉಪನ್ಯಾಸ ನೀಡಿದರು.
ಚಿಂತಕ ಎಸ್.ಎಸ್. ಹೊಡಮನಿ ಮಾತನಾಡಿದರು. ಕವಿರತ್ನ ಕಾಳಿದಾಸ ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕ ಓಂಕಾರ ಮಾಶೆಟ್ಟಿ ಉಪಸ್ಥಿತರಿದ್ದರು. ರೇಣುಕಾ ಮಳ್ಳಿ ಹಾಗೂ ನಾಗಶ್ರೀ ನರೇಂದ್ರ ಸುಶ್ರಾವ್ಯವಾಗಿ ವಚನ ಗಾಯನ ಮಾಡಿದರು.

ಶ್ರೀದೇವಿ ಸೋಮಶೆಟ್ಟಿ ಸ್ವಾಗತಿಸಿದರು. ಶಿಲ್ಪಾ ಮಜಗೆ ನಿರೂಪಿಸಿದರು. ಬಸವರಾಜ ಬಿರಾದಾರ ಶರಣು ಸಮರ್ಪಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U
