ಮೊಳಕಾಲ್ಮೂರು:
“ದಾಸೋಹ ಸೇವೆಯನ್ನೇ ಜೀವನದ ಮೌಲ್ಯವನ್ನಾಗಿಸಿಕೊಂಡು, ಬಡ ವಿದ್ಯಾರ್ಥಿಗಳಿಗೆ ತಾಯಿಯಾಗಿ ಮಾರ್ಗದರ್ಶನ ಮಾಡುತ್ತಿರುವ ಶ್ರೀಗಳ ಸೇವೆ ಸಮಾಜಕ್ಕೆ ಮಾದರಿಯಾಗಿದೆ” ಎಂದು ಬಿಸಿನೀರು ಜೀವ ರತ್ನಮ್ಮ ಅಭಿಪ್ರಾಯಪಟ್ಟರು.

ತಾಲೂಕಿನ ಶ್ರೀವಿಜಯಮಹಾಂತೇಶ್ವರ ವಿದ್ಯಾಪೀಠದ ಶ್ರೀ ವಿಜಯಮಹಾಂತೇಶ್ವರ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ, ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಶಾಲಾ ಬ್ಯಾಗ್ಗಳನ್ನು ವಿತರಿಸಿ ಅವರು ಮಾತನಾಡಿದರು.
“ಸಿದ್ದಯ್ಯನ ಕೋಟೆಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಹಗಲಿರುಳು ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಅನನ್ಯ. ಬಯಲು ಸೀಮೆಯ ತ್ರಿವಿಧ ದಾಸೋಹಿಗಳಾಗಿ ನೂರಾರು ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ ಮತ್ತು ವಸತಿ ಕಲ್ಪಿಸುತ್ತಿರುವುದು ಶ್ಲಾಘನೀಯ. ಈ ಸತ್ಕಾರ್ಯದಲ್ಲಿ ನಮ್ಮ ಕುಟುಂಬದ ವತಿಯಿಂದ ಅಳಿಲು ಸೇವೆ ಸಲ್ಲಿಸುತ್ತಿರುವುದು ನಮಗೆ ಸಂತಸ ತಂದಿದೆ” ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕಾಯಕಯೋಗಿ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ, “ಕೋನಸಾಗರದ ಜೀವರತ್ನಮ್ಮ ತಾಯಿಯವರು ಕಳೆದ ಎರಡು ದಶಕಗಳಿಂದಲೂ ನಮ್ಮ ಮಠದ ಮಕ್ಕಳಿಗೆ ನೋಟ್ಪುಸ್ತಕ, ಸಮವಸ್ತ್ರ ಸೇರಿದಂತೆ ಅನೇಕ ರೀತಿಯಲ್ಲಿ ನೆರವು ನೀಡುತ್ತಾ ಬಂದಿದ್ದಾರೆ. ಇವರಂತಹ ಭಕ್ತರ ಪ್ರೋತ್ಸಾಹದಿಂದಲೇ ಹೆಚ್ಚಿನ ಸಂಖ್ಯೆಯ ಬಡ ಮಕ್ಕಳಿಗೆ ಶಿಕ್ಷಣ ನೀಡುವ ನಮ್ಮ ಆಶಯಕ್ಕೆ ಬಲ ಬಂದಿದೆ” ಎಂದು ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮಠದ ಕಾರ್ಯದರ್ಶಿ ಪಿ.ಆರ್. ಕಾಂತರಾಜ ಮಾತನಾಡಿ, “ಬಿಸಿನೀರು ಮನೆತನದವರು ನಿರಂತರವಾಗಿ ನೀಡುತ್ತಿರುವ ಬೆಂಬಲ ಈ ಭಾಗದ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಿದೆ” ಎಂದರು.

ಬಸವ ಕೇಂದ್ರದ ಅಧ್ಯಕ್ಷ ಎಂ.ಬಿ. ಭೋಗೇಶಗೌಡ ಮಾತನಾಡಿ, “ಶ್ರೀಗಳ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಸಮಾಜದ ಇತರ ದಾನಿಗಳು ಕೈಜೋಡಿಸುವುದು ಅವಶ್ಯಕ” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿ.ಎಸ್. ವಿಜಯೇಂದ್ರಣ್ಣ, ಕೋನಸಾಗರದ ಶರಣೇಶ, ಚಳ್ಳಕೆರೆಯ ಮನೋಹರ, ಸಂಧ್ಯಾ, ಯಶಸ್ವಿನಿ ಸೇರಿದಂತೆ ಶಿಕ್ಷಕ ವೃಂದದವರಾದ ಮಂಜಯ್ಯ, ಕಾಮಯ್ಯ, ನವೀನ್, ಲೋಕಮ್ಮ, ಚೇತನ, ನಾಗಮ್ಮ, ರೂಪ, ಕಾವ್ಯ ಮತ್ತು ಇತರರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP
