ಕಲಬುರಗಿ:
ಬಸವ ಸಮಿತಿ ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ವತಿಯಿಂದ ಜುಲೈ 12ರಿಂದ ಆಗಸ್ಟ್ 6ರವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ವಚನ ಆಷಾಢ-2026ರ ಪ್ರಭುಲಿಂಗಲೀಲೆ ಪ್ರವಚನ ಕಾರ್ಯಕ್ರಮ ಜರುಗಲಿದೆ ಎಂದು ಬಸವ ಸಮಿತಿ ಜಿಲ್ಲಾಧ್ಯಕ್ಷೆ ಡಾ. ವಿಲಾಸವತಿ ಖೂಬಾ ತಿಳಿಸಿದರು.
ನಾಡಿನ ಹೆಸರಾಂತ ಅನುಭಾವಿಗಳಾದ ಪ್ರವಚನಯೋಗಿ ಮುದಗಲ್ಲ-ತಿಮ್ಮಾಪುರ ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳು ಪ್ರವಚನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶರಣಬಸವೇಶ್ವರ ದೇವಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಪ್ರವಚನ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೇಂದ್ರ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಬಸವರಾಜ ದೇಶಮುಖ, ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ದಂಡೆ, ಬಸವ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎಸ್. ವಾಲಿ ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.

ಡಾ. ಜಯಶ್ರೀ ದಂಡೆ, ಡಾ. ವೀರಣ್ಣ ದಂಡೆ, ಎಚ್.ಕೆ. ಉದ್ದಂಡಯ್ಯ, ಡಾ.ಕೆ.ಎಸ್. ವಾಲಿ ಸುದ್ದಿಗೋಷ್ಠಿಯಲ್ಲಿ ಇದ್ದರು.
ಬಸವ ಸಮಿತಿ ಕಾರ್ಯಕ್ರಮಗಳು:
ಕಲಬುರಗಿ ಬಸವ ಸಮಿತಿ ವತಿಯಿಂದ ವರ್ಷದಲ್ಲಿ ಮಹಾದೇವಿಯಕ್ಕಗಳ ಸಮ್ಮೇಳನ, ವಚನ ಆಷಾಢ, ವಚನ ಸಂಗೀತ ಕಾರ್ಯಕ್ರಮ, ಸಂಸ್ಥಾಪಕರ ದಿನಾಚರಣೆ ಮುಂತಾದ ನಾಲ್ಕು ಮಹತ್ವದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
2002ರಿಂದ ಇಲ್ಲಿಯವರೆಗೆ ಆಷಾಢ ಮಾಸದಲ್ಲಿ ಪ್ರತಿವರ್ಷ ತಿಂಗಳ ಪರ್ಯಂತ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬರಲಾಗಿದೆ. ಬಸವ ಸಮಿತಿ ವತಿಯಿಂದ ಈವರೆಗೆ ಜಗತ್ತಿನ 41 ಭಾಷೆಗಳಲ್ಲಿ ವಚನಗಳನ್ನು ಅನುವಾದ ಮಾಡಲಾಗಿದೆ ಎಂದು ಡಾ. ವೀರಣ್ಣ ದಂಡೆ ತಿಳಿಸಿದರು.
