ಚಾಮರಾಜನಗರ:
ತಾಲೂಕಿನ ಮರಿಯಾಲ ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನ ಶ್ರೀಮಠದಲ್ಲಿ ರವಿವಾರ ಶ್ರೀಮಠ, ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಚಾಮರಾಜೇಶ್ವರಿ ಅಕ್ಕನ ಬಳಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಶಿವಾನುಭೂತಿ 32ನೇ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀ ಮಠದ 20 ವಿದ್ಯಾರ್ಥಿಗಳು, ಗ್ರಾಮಾಂತರ ಪ್ರದೇಶಗಳ 10 ಜನ ಸೇರಿದಂತೆ ಒಟ್ಟು 30 ವಟುಗಳಿಗೆ ಲಿಂಗದೀಕ್ಷೆಯನ್ನು ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮಿಗಳವರು ನೀಡಿದರು.
ಗ್ರಾಮಾಂತರ ಭಜನಾ ಕಾರ್ಯಕ್ರಮವನ್ನು ಸಹ ಏರ್ಪಡಿಸಲಾಗಿತ್ತು. ಲಿಂಗದೀಕ್ಷೆಯ ನಂತರ ಮೈಸೂರಿನ ಚಾಮರಾಜೇಶ್ವರಿ ಅಕ್ಕನ ಬಳಗದ ವತಿಯಿಂದ ವಚನ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಹಿರಿಯ ಪ್ರಾಥಮಿಕ ಶಾಲೆಯಿಂದ ಕಾಲೇಜು ಹಂತದ ವರೆಗೆ ಬಸವಾದಿ ಶರಣರ ವಚನಗಳನ್ನು ಹೇಳಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿಪತ್ರ ಮತ್ತು ಫಲಕಗಳನ್ನು ನೀಡಿ ಗೌರವಿಸಲಾಯಿತು.

ತದನಂತರ ಸಾಮೂಹಿಕ ಲಿಂಗಪೂಜಾ ಕಾರ್ಯಕ್ರಮವನ್ನು ಪೂಜ್ಯರ ಸಾನಿಧ್ಯದಲ್ಲಿ ನಡೆಸಲಾಯಿತು.
ಲಿಂಗಪೂಜೆಯ ವಿಧಾನಗಳು, ಬಸವಾದಿ ಶರಣರ ತತ್ವಗಳು, ಪಂಚಾಚಾರ, ಷಟಸ್ಥಲ ಹಾಗೂ ಧರ್ಮದ ವಿಚಾರಧಾರೆಗಳನ್ನು ಪೂಜ್ಯರು ಭಕ್ತರಿಗೆ ಅನುಭಾವಗೊಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವೀರಶೈವ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಚಾಮರಾಜೇಶ್ವರಿ ಅಕ್ಕನ ಬಳಗ ಮೈಸೂರು ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಬಸವೇಶ್ವರ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳು, ಸಂಗಮ ಗೃಹ ನಿರ್ಮಾಣ ನಿಗಮದ ಪದಾಧಿಕಾರಿಗಳು, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಗ್ರಾಮಾಂತರ ಪ್ರದೇಶಗಳಿಂದ ಬಂದ ಭಕ್ತಾದಿಗಳು, ಮರಿಯಾಲ ಗ್ರಾಮಸ್ಥರು, ವಿದ್ಯಾಸಂಸ್ಥೆಯ ನೌಕರ ವರ್ಗದವರು ಹಾಜರಿದ್ದು ಕಾರ್ಯಕ್ರಮ ಅತ್ಯಂತ ಯಶಸ್ವಿಗೊಳಿಸಿದರು.
