ಬೈಲಹೊಂಗಲ:
ಅಷ್ಟ ತನುವಿನಿಂದ ಆವೃತವಾದ ಬ್ರಹ್ಮಾಂಡ ಮತ್ತು ಪಿಂಡಾಂಡದ ಸಾಮರಸ್ಯದ ಕುರುಹುಗಳಾದ ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ ಪ್ರಸಾದಗಳು ವಿಶ್ವಚೈತನ್ಯ ಹಾಗೂ ವ್ಯಕ್ತಿ ಚೈತನ್ಯದ ಸಾಮರಸ್ಯ ಸಾಧಿಸಿ ವ್ಯಕ್ತಿತ್ವ ವಿಕಾಸದ ಗುರಿ ಹೊಂದಿವೆ ಎಂದು ಬೈಲಹೊಂಗಲ ರುದ್ರಾಕ್ಷಿಮಠದ ಪೂಜ್ಯ ಬಸವಲಿಂಗ ಶ್ರೀಗಳು ನುಡಿದರು.
ಪಟ್ಟಣದ ಪತ್ರಿ ಬಸವೇಶ್ವರ ಅನುಭವ ಮಂಟಪದಲ್ಲಿ ಶ್ರಾವಣ ಮಾಸದ ಎರಡನೇ ಸೋಮವಾರದ ವಿಶೇಷ ಕಾರ್ಯಕ್ರಮ ಅಷ್ಟಾವರಣ ಚಿಂತನೆಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಅಷ್ಟಾವರಣ ಕುರಿತು ಉಪನ್ಯಾಸ ನೀಡಿದ ಬಸವರಾಜ ಬ್ಯಾಳಿ, ಮರುಗೋಡದ ಮಹಾಂತ ಶಿವಯೋಗಿಗಳು, ಧಾರವಾಡದ ಮೃತ್ಯುಂಜಯ ಅಪ್ಪಗಳು, ಅಥಣಿಯ ಮುರುಗೇಂದ್ರ ಶಿವಯೋಗಿಗಳು, ನಾಗನೂರು ಶಿವಬಸವ ಸ್ವಾಮಿಗಳು, ಜೇವರಗಿ ಷಣ್ಮುಖ ಶಿವಯೋಗಿಗಳು ಅನೇಕ ಸಂತ, ಮಹಾಂತರು ಅಷ್ಟಾವರಣಗಳನ್ನು ಅರಿತು ಆಚರಿಸಿ ಭಕ್ತರನ್ನು ಉದ್ದರಿಸಿದರೆಂದರು.
ಪತ್ರಿ ಬಸವೇಶ್ವರ ಅನುಭವ ಮಂಟಪದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ, ಜೇವರಗಿ ಷಣ್ಮುಖ ಶಿವಯೋಗಿಗಳ ಜೀವನ ದರ್ಶನ ಪ್ರವಚನ ನೀಡಿದರು.

ಸುವರ್ಣ ಬಿಜುಗುಪ್ಪಿ ವಚನ ಚಿಂತನೆ ಮಾಡಿದರು. ಸಾಕ್ಷಿ ಕಾಡನ್ನವರ ವಚನ ಪಠಣ ನಡೆಸಿದರು. ಪ್ರಸಾದ ದಾಸೋಹಿ ಕಾಡಪ್ಪ ರಾಮಗುಂಡಿ ಅವರನ್ನು ಸನ್ಮಾನಿಸಲಾಯಿತು. ಮುಕ್ತಾಯಕ್ಕ ಹಾಗೂ ಅಜಗಣ್ಣ ಬಳಗದ ನೂರಾರು ಶರಣರು ಉಪಸ್ಥಿತರಿದ್ದರು.
ಗೀತಾ ಅರಳಿಕಟ್ಟಿ ಸ್ವಾಗತಿಸಿದರು. ವೀರಭದ್ರಪ್ಪ ಕಾಪಿಸಿ ಶರಣು ಸಮರ್ಪಿಸಿದರು. ಪತ್ರಯ್ಯ ಕುಲಕರ್ಣಿ ಪ್ರಾರ್ಥಿಸಿದರು. ರಾಜೇಶ್ವರಿ ದ್ಯಾಮನಗೌಡರ ನಿರೂಪಿಸಿದರು.
