ಮಂಡ್ಯ:
ತಾಲ್ಲೂಕಿನ ತುಂಬಕೆರೆ ಗ್ರಾಮದ ಅಲೆಮಾರಿ ಜನಾಂಗದ ಕಾಲೊನಿಯಲ್ಲಿ ಬಸವ ಪಂಚಮಿಯ ಅಂಗವಾಗಿ ಮಕ್ಕಳಿಗೆ ಹಾಲು, ಬಿಸ್ಕೆಟ್, ಬಾಳೆಹಣ್ಣು ವಿತರಿಸಲಾಯಿತು.
ಮಾನವ ಬಂಧುತ್ವ ವೇದಿಕೆ, ಕಾಯಕಯೋಗಿ ಫೌಂಡೇಷನ್, ಬಸವ ಫೌಂಡೇಷನ್, ಲಿಂಗಾಯತ ಮಹಾಸಭಾ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಇಂದು ಸಮಾನತೆಯ ಹರಿಕಾರ, ವಿಶ್ವಗುರು ಬಸವಣ್ಣ ಅವರು ಲಿಂಗೈಕ್ಯವಾದ ಪುಣ್ಯದಿನ, ಆದರೆ ವೈದಿಕಶಾಹಿಗಳು ಬಸವಣ್ಣ ಅವರ ಮಹತ್ವ ಕುಗ್ಗಿಸುವ ಸಲುವಾಗಿ ಈ ದಿನವನ್ನು ನಾಗರ ಪಂಚಮಿ ಎಂದು ಆಚರಿಸುವ ಪದ್ಧತಿಯನ್ನು ಜಾರಿಗೆ ತಂದರು, ಇತಿಹಾಸ ತಿಳಿದ ಮೇಲೂ ನಾವು ನಾಗರಪಂಚಮಿ ಎಂದು ಆಚರಣೆ ಮಾಡುವುದು ಇತಿಹಾಸಕ್ಕೆ ಮಾಡುವ ಅಪಚಾರ ಎಂದರು.
ನಾಗರಹಾವು ಹಾಲು ಕುಡಿಯುವುದಿಲ್ಲ, ಅದು ಮಾಂಸಹಾರಿ ಸರಿಸೃಪ, ಇಲಿ, ಕಪ್ಪೆ, ಕ್ರಿಮಿ, ಕೀಟಗಳು ಹಾವಿನ ಆಹಾರ, ಹಾಲನ್ನು ಹುತ್ತಕ್ಕೆ ಸುರಿದರೆ ಹಾಲು ಮಣ್ಣುಪಾಲಾಗುತ್ತದೆ, ಹುತ್ತದಲ್ಲಿನ ಹಾವಿನ ಮರಿಗಳು ಸಾಯುತ್ತವೆ ಇದು ವೈಜ್ಙಾನಿಕ ಸತ್ಯ ಎಂದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು ಮಾತನಾಡಿ, ಮೌಢ್ಯದಿಂದ ಕೂಡಿದ ಆಚರಣೆಗಳನ್ನು ಹಿಂದೆ ಅನಕ್ಷರಸ್ತರಾಗಿದ್ದಾಗ ಮಾಡುತ್ತಿದ್ದೆವು ಆದರೆ ವಿದ್ಯಾವಂತರಾದ ಮೇಲೂ ಆಚರಿಸುವುದು ಸರಿಯಲ್ಲ, ಇನ್ನು ಮುಂದೆ ನಾಗರಪಂಚಮಿ ಕೈಬಿಟ್ಟು ಬಸವಣ್ಣನನ್ನು ಸ್ಮರಿಸೋಣ ಎಂದರು.
ಕಾರ್ಯಕ್ರಮವನ್ನುದ್ದೇಶಿಸಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಉಪನ್ಯಾಸಕ ಕಲ್ಲಹಳ್ಳಿ ಲೋಕೇಶ್, ಮಾನವ ಬಂಧುತ್ವ ವೇದಿಕೆ ಮಹಿಳಾ ವಿಭಾಗದ ಜಿಲ್ಲಾ ಸಂಚಾಲಕಿ ಜಯಸುಧಾ, ಹಿರಿಯರಾದ ಸಿದ್ಧಶೆಟ್ಟಿ, ಹನಿಯಂಬಾಡಿ ವೈರಮುಡಿ, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಡಿ.ದೇವರಾಜ್ ಕೊಪ್ಪ ಉಪಸ್ಥಿತರಿದ್ದರು.
