ಬೆಳಗಾವಿ
ಅವಹೇಳನಕಾರಿ ಹೇಳಿಕೆಯನ್ನು ನೀಡಿರುವ ಕನ್ನೇರಿ ಕಾಡಸಿದ್ದೇಶ್ವರ ಮಠದ ಸ್ವಾಮಿಯನ್ನು ಬೆಳಗಾವಿ ಸೇರಿದಂತೆ ಕರ್ನಾಟಕ ರಾಜ್ಯ ಪ್ರವೇಶಿಸದಂತೆ ನಿರ್ಬಂಧ ಹೇರಬೇಕು ಎಂದು ಬಸವಪರ ಸಂಘಟನೆ ಒಕ್ಕೂಟದ ಸದಸ್ಯರು ಶುಕ್ರವಾರ ಒತ್ತಾಯಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿ, ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೇರಿದ ನೂರಾರು ಪ್ರತಿಭಟನಾಕಾರರು, ಕನ್ನೇರಿ ಕಾಡಸಿದ್ದೇಶ್ವರ ಮಠದ ಸ್ವಾಮೀಜಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸ್ವಾಮೀಜಿಯವರ ಅವಹೇಳನಕಾರಿ ಹಾಗೂ ಪ್ರಚೋದನಾತ್ಮಕ ಹೇಳಿಕೆ ಸಮಾಜದಲ್ಲಿ ಶಾಂತಿ ಕದಡಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಸಂಭವವಿದ್ದು, ಹೀಗಾಗಿ ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ವೇಳೆ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಅವರು ಮಾತನಾಡಿ, ಇತ್ತೀಚೆಗೆ ಮಹಾರಾಷ್ಟ್ರದ ಬೀಳೂರು ಮಠದಲ್ಲಿ ಜರುಗಿದ ಧಾರ್ಮಿಕ ಸಮಾರಂಭದಲ್ಲಿ ಕನ್ನೇರಿ ಕಾಡಸಿದ್ದೇಶ್ವರ ಮಠದ ಸ್ವಾಮೀಜಿ ಬಸವ ಸಂಸ್ಕೃತಿ ಅಭಿಮಾನವನ್ನು ಅಪಮಾನಿಸಿದ್ದಾರೆ. ಅಲ್ಲದೇ, ಲಿಂಗಾಯತ ಮಠಾಧೀಶರ ವಿರುದ್ಧ ಅವಾಚ್ಯ, ಆಶ್ಲೀಲ ಪದಬಳಕೆ ಮಾಡಿದ್ದಾರೆ.
ಒಬ್ಬ ಸ್ವಾಮೀಜಿ ಆಗಿ ಈ ರೀತಿ ಪದಬಳಕೆ ಮಾಡಿರುವುದು ಖಂಡನೀಯ. ಇದು ಲಿಂಗಾಯತ ಧರ್ಮಿಯರಿಗೆ ಹಾಗೂ ಬಸವಣ್ಣನವರ ಅನುಯಾಯಿಗಳಿಗೆ ನೋವುಂಟು ಮಾಡಿದೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಪ್ರತಿಭಟನೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ಪ್ರವೀಣ ಚಿಕಲಿ, ಮುರುಗೇಶ ಶಿವಪೂಜಿ, ಮುರಿಗೆಪ್ಪ ಬಾಳಿ, ಲಿಂಗಾಯತ ಸಂಘಟನೆ ಅಧ್ಯಕ್ಷ ಈರಣ್ಣ ದೇಯಣ್ಣವರ, ಸಂಗಮೇಶ ಅರಳಿ, ಸುಜಾತ ಮತ್ತಿಕಟ್ಟಿ, ಶೋಭಾ ಶಿವಳ್ಳಿ, ರತ್ನಾ ಬೆಣಚಿನಮರಡಿ, ಶಶಿಭೂಷಣ ಪಾಟೀಲ, ಸದಾಶಿವ ದೇವರಮನಿ, ರಮೇಶ ಕಳಸಣ್ಣವರ, ಸದಾನಂದ ಬಶೆಟ್ಟಿ, ಮಲ್ಲಿಕಾರ್ಜುನ ಶಿರಗುಪ್ಪಿ, ಬಸವರಾಜ ಕರಡಿಮಠ, ಸತೀಶ್ ಪಾಟೀಲ, ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಎಸ್.ಜಿ. ಸಿದ್ನಾಳ, ಶಂಕರ ಗುಡಾಸ್, ಆರ್.ಪಿ. ಪಾಟೀಲ, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ಸೇರಿದಂತೆ ಇತರರು ಇದ್ದರು.
ನಾಗನೂರು ಗ್ರಾಮದ ಭಕ್ತರಿಂದ ಮನವಿ
ನಾಗನೂರು ಗ್ರಾಮದಿಂದ ಹಲವು ವಾಹನಗಳಲ್ಲಿ ಆಗಮಿಸಿದ ನೂರಾರು ಬಸವ ಭಕ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ, ಪ್ರತ್ಯೇಕ ಮನವಿಪತ್ರ ಸಲ್ಲಿಸಿ, ಸ್ವಾಮೀಜಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.
ಇಂತಹ ಪ್ರತಿಭಟನೆಗಳ ಅಗತ್ಯವಿತ್ತು. ಅವರು ಬಸವ ತಾಲಿಬಾನಿಗಳು ಎಂದು ಹೇಳಿದಾಗಲೇ ನಾವು ಎಚ್ಚೆತ್ತುಕೊಂಡಿದ್ದರೆ ಈಗ ಅವರು ಇಂತಹ ಹೇಳಿಕೆ ಕೊಡುವ ಮಟ್ಟಕ್ಕೆ ಬಹುಷಃ ಹೋಗುತ್ತಿರಲಿಲ್ಲ. ಆದರೂ ಈಗ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ.