ಪಾಂಡವಪುರ
ಲಿಂಗಾಯತ ಧರ್ಮವು ಶ್ರೇಷ್ಠವಾಗಿದ್ದು, ಪ್ರತಿಯೊಬ್ಬರೂ ನಿತ್ಯ ಇಷ್ಟಲಿಂಗ ಪೂಜೆ ಮಾಡಬೇಕು ಎಂದು ಬೇಬಿ ಬೆಟ್ಟದ ಶ್ರೀ ರಾಮಯೋಗೇಶ್ವರ ಮಠದ ಪೀಠಾಧ್ಯಕ್ಷ ಶ್ರೀ ಶಿವಬಸವ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಬೇಬಿಬೆಟ್ಟದ ಶ್ರೀ ರಾಮಯೋಗೇಶ್ವರ ಮಠದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಎಸ್ಎಸ್ಎಲ್ಸಿ , ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ನಿವೃತ್ತ ಶಿಕ್ಷಕರಿಗೆ ಹಾಗೂ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಬಸವಲಿಂಗಪ್ಪ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಇಡೀ ವಿಶ್ವದಲ್ಲೇ ಲಿಂಗಾಯತ ಧರ್ಮ ಶ್ರೇಷ್ಠವಾಗಿದ್ದು, ಬಸವಣ್ಣ ಅವರು ವಿವಿಧ ದಾಸೋಹ, ಸರ್ವಧರ್ಮ ಸಮಾನತೆ ಎಂಬ ಸಂದೇಶವನ್ನು ಇಡೀ ವಿಶ್ವಕ್ಕೆ ಸಾರಿದರು. ಲಿಂಗಾಯತ ಧರ್ಮದವರು ಹಣೆಯಲ್ಲಿ ವಿಭೂತಿ, ಕೊರಳಿನಲ್ಲಿ ಲಿಂಗಧಾರಣೆ, ರುದ್ರಾಕ್ಷಿ ಹಾಕಿಕೊಂಡು ಲಿಂಗಪೂಜೆ ಮಾಡುವ ಮೂಲಕ ಧರ್ಮ ಶ್ರೇಷ್ಠ ಎಂದು ಸಮಾಜಕ್ಕೆ ಸಾರಿದ್ದಾರೆ. ಹಾಗಾಗಿ ಪ್ರತಿಯೊಬ್ಬರು ಇಷ್ಟಲಿಂಗ ಪೂಜೆ ಬಳಿಕ ಉಳಿದ ಕೆಲಸ ಆರಂಭಿಸಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಓದಿ ಕೇವಲ ಅಂಕಗಳಿಸುವುದಕ್ಕೆ ಮಾತ್ರ ಸೀಮಿತವಾಗಬಾರದು, ಓದಿನ ಜತೆ ಧರ್ಮ, ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರ, ಗುರು-ಹಿರಿಯರನ್ನು ಗೌರವಿಸುವ ಮಾನವೀಯ ಗುಣಗಳು ಮೈಗೂಡಿಸಿಕೊಳ್ಳಬೇಕು. ನಮ್ಮ ಓದಿನ ಜತೆಗೆ ಮೌಲ್ಯಗಳನ್ನು ಸಹ ಬೆಳೆಸಿಕೊಳ್ಳಬೇಕು, ನಿವೃತ್ತ ಶಿಕ್ಷಕರು ಮಠಕ್ಕೆ ಹಾಗಾಗೆ ಭೇಟಿ ಕೊಟ್ಟು ಮಠದ ಅಭಿವೃದ್ಧಿಗೆ ಪೂರಕವಾಗಿ ಸಲಹೆ, ಸಹಕಾರ ನೀಡಬೇಕು ಎಂದು ತಿಳಿಸಿದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹದೇವಪ್ಪ ಮಾತನಾಡಿ, ನಮ್ಮ ಸಮಾಜದಲ್ಲಿ ಎಲ್ಲರು ಒಗ್ಗೂಡಿ ನಾವೆಲ್ಲರು ಒಂದೇ ಎಂಬ ಭಾವನೆಯಿಂದ ಸಂಘಟಿತರಾಗಿ ಕೆಲಸ ಮಾಡಬೇಕು. ಪಕ್ಷಬೇಧ ಮರೆತು ಸಮುದಾಯದ ವತಿಯಿಂದ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಎಲ್ಲರು ಭಾಗವಹಿಸುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಬೇಕು. ಧರ್ಮದ ಶ್ರೇಷ್ಠತೆಯನ್ನು ಸಮಾಜಕ್ಕೆ ಸಂದೇಶ ನೀಡಬೇಕು ಎಂದರು.
ನಿವೃತ್ತ ಶಿಕ್ಷಕರಾದ ಎಸ್.ನಾಗೇಂದ್ರ, ಮಲ್ಲೇಶ್, ಭಾಸ್ಕರ್, ಬೇಬಿ ಗ್ರಾಮದ ಪ್ರೌಢಶಾಲಾ ಮುಖ್ಯ ಶಿಕ್ಷಕ ಮಹದವೇಪ್ಪ ಅವರನ್ನು ಸನ್ಮಾನಿಸಲಾಯಿತು.
ಬೇಬಿ ಗ್ರಾಮದ ಪ್ರೌಢಶಾಲಾ ಮುಖ್ಯ ಶಿಕ್ಷಕ ಮಹದೇವಪ್ಪ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಸ್.ಆನಂದ್, ತಾ.ಅಧ್ಯಕ್ಷ ಶಿವಕುಮಾರ್, ಕೆ.ಆರ್.ಪೇಟೆ ತಾ.ಅಧ್ಯಕ್ಷ ಸುಜೇಂದ್ರ, ಜೆಡಿಎಸ್ ತಾಲೂಕು ಅಧ್ಯಕ್ಷ ಬೆಳ್ಳಾಳೆ ಎಸ್.ಎ.ಮಲ್ಲೇಶ್, ಡಿ.ಇ.ಲೋಕೇಶ್, ಡಿಂಕಾ ಕಲಿಗಣೇಶ್, ತಮ್ಮಯ್ಯ, ಸಿದ್ದಪ್ಪ, ರಾಜು, ಹರೀಶ್, ರೈತ ಮುಖಂಡ ಎಂ.ಜಗದೀಶ್, ವೀರೂಪಾಕ್ಷ, ಕೇಬಲ್ ಮಂಜು, ಲಿಂಗರಾಜು, ಸುರೇಶ್, ಶಂಭುಲಿಂಗಪ್ಪ ಇದ್ದರು.
