“ರೊಕ್ಕ ಕೊಟ್ರೆ ‘ಸ್ಮಶಾನ ಗ್ಯಾಂಗ್’ ಸಂಡಾಸ್ ನಲ್ಲೂ ಊಟ ಮಾಡ್ತಾರಾ“
ರಬಕವಿ ಬನಹಟ್ಟಿ
ಬನಹಟ್ಟಿ ಹಿಂದೂ ಸಮಾವೇಶದಲ್ಲಿ ಸ್ಥಿಮಿತ ಕಳೆದುಕೊಂಡಂತೆ ಮಾತನಾಡಿದ ಕನ್ನೇರಿ ಸ್ವಾಮಿ ಲಿಂಗಾಯತ ಪ್ರಮುಖರನ್ನ ‘ನೀಚ’ ‘ಕುಡುಕ’ ‘ಶಿಖಂಡಿ’ ‘ನಾಯಿ’ ‘ತಾಲಿಬಾನ್’ ‘ಹಂದಿ’ ಎಂದೆಲ್ಲಾ ಕರೆದರು.
ಅವರ ಕಾಕದೃಷ್ಟಿ ಬಸವತತ್ವ ಪಾಲಿಸುತ್ತಿರುವ ಕೆಲವು ಸಂಘಟನೆಗಳ ಮೇಲೂ ಬಿತ್ತು. ಮುಖ್ಯವಾಗಿ ಅವರ ಆಕ್ರೋಶ ವ್ಯಕ್ತವಾಗಿದ್ದು ಅವರೇ ಕರೆದಂತೆ ‘ಸ್ಮಶಾನ ಗ್ಯಾಂಗ್’ ಮೇಲೆ.
“ಗೋಕಾಕ್ ನಲ್ಲಿ ಒಂದು ಸಂಘಟನೆ ಸ್ಮಶಾನದಲ್ಲಿ ಪ್ರವಚನ, ಊಟ ಏರ್ಪಡಿಸುತ್ತದೆ. ಊರಿನ ಎಲ್ಲರೂ ಹೆಣ ಸುಡುವ ಹೊಲಸು ಸ್ಥಳ ಸ್ಮಶಾನ. ರೊಕ್ಕ ಕೊಟ್ರೆ ಸಂಡಾಸ್ ನಲ್ಲೂ ಊಟ ಮಾಡ್ತೀರಾ,
ದಕ್ಷಿಣೆ ಕೊಟ್ರೆ ಪಾಯಖಾನೆಯಲ್ಲೂ ಊಟ ಮಾಡ್ತೀರಾ’ ಎಂದು ಕನ್ನೇರಿ ಸ್ವಾಮಿ ಪ್ರಶ್ನಿಸಿದರು.
ಕನ್ನೇರಿ ಸ್ವಾಮಿಯ ಸಿಟ್ಟಿಗೆ ಗುರಿಯಾಗಿದ್ದು ಗೋಕಾಕ್ ಸೇರಿದಂತೆ ರಾಜ್ಯದಲ್ಲಿ ವ್ಯಾಪಕವಾಗಿ ಪ್ರಗತಿಪರ ಚಿಂತನೆ ಮೂಡಿಸುತ್ತಿರುವ ಮಾನವ ಬಂಧುತ್ವ ವೇದಿಕೆ. ರಾಜ್ಯದ ನೂರಾರು ತಾಲೂಕುಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಈ ಸಂಘಟನೆಯ ಹೆಸರು ಹೇಳುವ ಧೈರ್ಯ ಕನ್ನೇರಿ ಸ್ವಾಮಿ ಮಾಡಲಿಲ್ಲ.
2014ರಿಂದ ಕಾರ್ಯಕ್ರಮ
ಮಾನವ ಬಂಧುತ್ವ ವೇದಿಕೆಯ ಕಾರ್ಯಕಾರಿ ಸಮಿತಿ ಸದಸ್ಯ ಭರಮಣ್ಣ ತೋಳಿ 2014ರಿಂದ ಸ್ಮಶಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.
“ಸ್ಮಶಾನ ಎಂದ ತಕ್ಷಣ ಭೂತ, ದೆವ್ವ, ಕೆಟ್ಟ ಸ್ಥಳ ಎಂಬ ಕಲ್ಪನೆ ಜನರಿಗೆ ಬರುತ್ತದೆ. ನಮ್ಮ ಕಾರ್ಯಕ್ರಮಗಳಿಂದ ಜನ ಸ್ಮಶಾನದ ಭಯ, ಮೂಢನಂಬಿಕೆ ನಿವಾರಿಸಿಕೊಂಡು ಎಲ್ಲಾ ವಿಷಯಗಳಲ್ಲೂ ವಿಚಾರವಂತರಾಗುತ್ತಿದ್ದಾರೆ,” ಎಂದು ತೋಳಿ ಹೇಳಿದರು.
ಬಸವಣ್ಣನವರ ಹೆಸರು ಕೆಡಸಬೇಡಿ
“ಸ್ಮಶಾನ ಗ್ಯಾಂಗ್” ಮೇಲೆ ಭಾಷಣ ಮುಂದುವರೆಸಿ ಕನ್ನೇರಿ ಸ್ವಾಮಿ ಶಿವರಾತ್ರಿ ದಿನ ಹೊಸಪೇಟೆ ರುದ್ರಭೂಮಿಯಲ್ಲಿ ಇಷ್ಟಲಿಂಗ ಪೂಜೆ ಮಾಡಿಕೊಂಡ ಇಷ್ಟಲಿಂಗ ಅಧ್ಯಯನ ಕೇಂದ್ರ ಮತ್ತು ಜಾಗತಿಕ ಲಿಂಗಾಯತ ಮಹಾಸಭಾದವರನ್ನೂ ಖಂಡಿಸಿದರು.
“ಇವರೇನು ಅಘೋರಿಗಳ ಸ್ಮಶಾನದಲ್ಲಿ ಪೂಜೆ ಮಾಡಿಕೊಳ್ಳಲು? ಇವರ ಮನೆಗಳೇನು ಸ್ಮಶಾನಗಳಾಗಿದ್ದಾವ? ಅಂಧಶ್ರದ್ಧೆ ವಿರೋಧಿಸುವ ಹೆಸರಿನಲ್ಲಿ ಇವರೆಲ್ಲಾ ಯಾವ ಪರಂಪರೆ ಹುಟ್ಟು ಹಾಕುತ್ತಿದ್ದಾರೆ, ಯಾವ ಸಂದೇಶ ಕಳಿಸುತ್ತಿದ್ದಾರೆ. ಹಿಂಗ್ ಮಾಡಿ ಬಸವಣ್ಣನವರ ಹೆಸರು ಕೆಡಸಬೇಡಿ,” ಎಂದು ಕನ್ನೇರಿ ಸ್ವಾಮಿ ಹೇಳಿದರು.
ವೈದಿಕ ಧರ್ಮ ನಿಂತಿರುವುದೇ ಮೂಢನಂಬಿಕೆಗಳ ಮೇಲೆ
ಕನ್ನೇರಿ ಸ್ವಾಮಿ ಮಾತಿಗೆ ಪ್ರಗತಿಪರ ಚಿಂತಕರಿಂದ ತೀಕ್ಷ್ಣ ಪ್ರತಿಕ್ರಿಯೆ ಬರುತ್ತಿದೆ.
“ವೈದಿಕ ಧರ್ಮ ನಿಂತಿರುವುದೇ ಸ್ಮಶಾನಗಳಂತಹ ಭೀತಿ, ಮೂಢನಂಬಿಕೆಗಳ ಮೇಲೆ. ಅದು ಹೋದರೆ ಜನ ಬುದ್ದಿವಂತರಾಗುತ್ತಾರೆ. ಆರೆಸ್ಸೆಸ್ ನವರಿಗೆ ಲಿಂಗಾಯತ ಧರ್ಮ ಮಾತ್ರ ಸಮಸ್ಯೆಯಲ್ಲ. ಯಾರೇ ಕಂದಾಚಾರ ಪ್ರಶ್ನಿಸಿದರೂ ಅವರಿಗೆ ಸಮಸ್ಯೆಯಾಗುತ್ತದೆ,” ಎಂದು ಬೆಂಗಳೂರು ಮೂಢನಂಬಿಕೆ ವಿರೋಧಿ ಒಕ್ಕೂಟದ ಮುಖಂಡ ಹೆಚ್. ಸಿ. ಉಮೇಶ ಹೇಳಿದರು.
ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ ಬಸವಣ್ಣ ವೈದಿಕ ವ್ಯವಸ್ಥೆಯನ್ನು ವಿರೋಧಿಸುವುದರ ಜೊತೆಗೆ ಅದಕ್ಕೆ ಪರ್ಯಾಯ ಕೂಡ ಕಟ್ಟಿದರು, ಎಂದು ಬಸವ ಮೀಡಿಯಾಕ್ಕೆ ಹೇಳಿದ್ದರು.
ಹುತ್ತಕ್ಕೆ ಹಾಲು ಸುರಿಯುವ ನಾಗಪಂಚಮಿಗೆ ಬದಲಾಗಿ ಮಕ್ಕಳಿಗೆ ಹಾಲು ಕೊಡುವ ‘ಬಸವ ಪಂಚಮಿ’ಯನ್ನು ಮಾನವ ಬಂಧುತ್ವ ವೇದಿಕೆ ಹಲವು ವರ್ಷಗಳಿಂದ ಆಚರಿಸಿಕೊಂಡು ಬಂದಿದೆ.

ಬರಿ ಬರ್ಕೊಂತ ಇರ್ರೀ, ಅವ ಊರ ತುಂಬ ವೈಕ್ಕೊಂತ ಹೊಕ್ಕಾನ, ವಿಡಿಯೋ ಕ್ಲಿಪ್ ಸಾಕ್ಷಿ ಇರುವಾಗ, ಅವ ಯಾರ್ಯಾರ ಮೇಲೆ ಆರೋಪ ಮಾಡ್ಯಾನ ಎಲ್ಲರು ಸೇರಿ ಮಾನ ನಷ್ಡ ಮೊಕದ್ದಮೆ ಹೂಡಿ. ಇದೆ ಕ್ಲುಪ ಸಾಕ್ಷಿಯಾಗಿ ಇಟ್ಕೊಂಡ ಹಿಂದಿನ ಕೋರ್ಟಿನ್ ಜಡ್ಜಮೆಂಟ ಇಟ್ಕೊಂಡ, ನೀಷೇದ ತೆರವು ಮಾಡಿರಿ ಈಗ ಇವನ ಚಲಕದಿಮ್ಮಿನ ಮತ್ತೊಮ್ಮೆ ನ್ಯಾಯಾಲಯದ ಮುಂದೆ ತನ್ನಿ.