ಬಸವಣ್ಣನವರನ್ನು ಅನುಸರಿಸುವ ಬಹುಪಾಲು ಲಿಂಗಾಯತರು ಪಂಚಾಚಾರ್ಯರನ್ನು ತೊರೆದಿದ್ದಾರೆ.
ಬೆಳಗಾವಿ
ಕಳೆದ ಒಂದು ವಾರದಿಂದ ಪಂಚಾಚಾರ್ಯರು ವೀರಶೈವ ಪ್ರಾಚೀನ, ಲಿಂಗಾಯತ ಧರ್ಮವಲ್ಲ, ಎರಡೂ ಹಿಂದೂ ಧರ್ಮದ ಭಾಗ ಎಂದು ಎರಡು ಸಂದರ್ಭಗಳಲ್ಲಿ ಹೇಳಿಕೆ ನೀಡಿದ್ದಾರೆ.
ಇದನ್ನು ಲಿಂಗಾಯತ ಮಠಾಧೀಶರ ಒಕ್ಕೊಟ ಮಂಗಳವಾರ ಖಂಡಿಸಿತ್ತು. ಈಗ ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು ನಗರದಲ್ಲಿ ಸುದ್ದಿಘೋಷ್ಠಿ ನಡೆಸಿ ವಿವರವಾದ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಬೆಳಗಾವಿ ಜಿಲ್ಲಾ ಅಧ್ಯಕ್ಷ ಬಸವರಾಜ ರೊಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಮಳಗಲಿ, ಖಜಾಂಚಿ ಮುರುಗೆಪ್ಪ ಬಾಳಿ, ಮಹಾನಗರ ಘಟಕದ ಅಧ್ಯಕ್ಷ ಸಿ.ಎಂ. ಬೂದಿಹಾಳ, ಮುಖಂಡರಾದ ಪ್ರವೀಣ ಚಿಕ್ಕಲಿ ಉಪಸ್ಥಿತರಿದ್ದರು.
“ವೀರಶೈವರ ಐವರು ಪಂಚಾಚಾರ್ಯರಲ್ಲಿ ಪೂಜ್ಯ ಶ್ರೀ ರಂಭಾಪುರಿ ಸ್ವಾಮಿಗಳು ಮತ್ತು ಕೇದಾರ ಸ್ವಾಮಿಗಳು ಒಂದು ಬಣವಾಗಿದ್ಧರೆ, ಉಳಿದ ಮೂವರು ಎರಡನೇಯ ಬಣವಾಗಿದ್ದಾರೆ.
ಮೊದಲನೆಯ ಗುಂಪಿನ ರಂಭಾಪುರಿ ಸ್ವಾಮಿಗಳು ಮತ್ತು ಕೇದಾರ ಸ್ವಾಮಿಗಳು ಕೂಡಿಕೊಂಡು ಲಿಂಗಸಗೂರಿನಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಸಮಸ್ತ ಲಿಂಗಾಯತ ಸಂಘಟನೆಗಳು ಒಂದಾಗಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯನ್ನು ಕೇಳುತ್ತಿರುವುದು ತಪ್ಪು ಎಂದು ಟೀಕಿಸಿ ಹೇಳಿಕೆ ನೀಡಿದ್ದಾರೆ.
ಅದೇ ರೀತಿ ಮೊನ್ನೆ ಎರಡನೆ ಗುಂಪಿಗೆ ಸೇರಿದ ಶ್ರೀ ಶೈಲ, ಕಾಶಿ ಮತ್ತು ಉಜೈನಿ ಮಠಗಳ ಮೂರು ಸ್ವಾಮಿಗಳು ಲಿಂಗಾಯತರ ಬೇಡಿಕೆಯನ್ನು ವಿರೋಧಿಸುತ್ತಾ ತಮ್ಮ ವೀರಶೈವ ಧರ್ಮದ ಶ್ರೇಷ್ಠತೆಯ ಬಗ್ಗೆ ಪತ್ರಿಕಾ ಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.
ಈ ಎರಡು ಗುಂಪುಗಳ ಹೇಳಿಕೆಗಳ ಬಗ್ಗೆ ಕೆಲವು ಮಹತ್ವದ ಸಂಗತಿಗಳನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಈ ಕೆಳಗಿನ ಕೆಲವು ಮಹತ್ವದ ಸಂಗತಿಗಳನ್ನು ಸ್ಪಷ್ಟಪಡಿಸುತ್ತಿದ್ದೇವೆ.

1) ವೀರಶೈವರ ಪವಿತ್ರ ಗ್ರಂಥ ಸಿದ್ಧಾಂತ ಸಿಖಾಮಣಿಯ ಪ್ರಕಾರ ರೇಣುಕ (ಈಗ ರಂಭಾಪುರಿ ಸ್ವಾಮೀಜಿ ಪ್ರತಿನಿಧಿಸುತ್ತಾರೆ) ಮಾತ್ರ ವೀರಶೈವರ ಏಕೈಕ ಗುರು ಆಗಿದ್ದಾರೆ. ಇತರ ನಾಲ್ವರು ಯಾವಾಗ ಮತ್ತು ಎಲ್ಲಿಂದ ಬಂದರು ಎಂಬುದು ಒಂದು ಸೋಜಿಗದ ಸಂಗತಿಯಾಗಿದೆ.
2) ಇತ್ತೀಚೆಗೆ ಬರೆಸಲ್ಪಟ್ಟ ಎರಡು “ಉತ್ತರ ಆಗಮಗಳು”-“ಸುಪ್ರಭೇದ ಮತ್ತು ಸ್ವಯಂಭು”- ಇತರ ನಾಲ್ವರ ಮೂಲದ ಬಗ್ಗೆ ಪರಸ್ಪರ ವಿರುದ್ಧವಾದ ಎರಡು ವಿಭಿನ್ನ ವಿಷಯಗಳನ್ನು ಉಲ್ಲೇಖಿಸಿವೆ. 13ನೇ ಶತಮಾನದ ಹರಿಹರನ ರೇವಣಸಿದ್ದ ರಗಳೆಯೂ ಈ ನಾಲ್ಕರ ಬಗ್ಗೆ ಏನನ್ನೂ ಉಲ್ಲೇಖಿಸುವದಿಲ್ಲ. ಆದ್ದರಿಂದ ಈ ನಾಲ್ವರ ಪ್ರಸ್ತುತತೆ ಅನುಮಾನಾಸ್ಪದವಾಗಿದೆ. ಆದರೂ ಅವರು ಬಹಳ ನಂತರ ಕೆಲವು ಪುರಾಣಗಳನ್ನು ಬರೆಸಿಕೊಂಡಿದ್ದಾರೆ ಈ ಸಂಗತಿಯು ಪಂಚಾಚಾರ್ಯರು ಇಬ್ಬಾಗವಾಗಲು ಮೂಲ ಕಾರಣವಾಗಿದೆ.
3) 12ನೇ ಶತಮಾನದ ಬಸವಣ್ಣನವರು ಮತ್ತು ನೂರಾರು ಶರಣರ ಇಪ್ಪತ್ತಮೂರು ಸಾವಿರ ವಚನಗಳು ಜನಪ್ರಿಯವಾಗುತ್ತಿವೆ. ಅದರಿಂದ ಪಂಚಾಚಾರ್ಯರಲ್ಲಿನ ಲಿಂಗಾಯತರ ನಂಬಿಕೆ ಮತ್ತು ಗೌರವ ಕಡಿಮೆ ಆಗುತ್ತಿವೆ.
4) ಈ ಪಂಚಾಚಾರ್ಯರ ಉಗಮದ ಬಗೆಗಿನ ಪುರಾಣಗಳ ಕಾಲ್ಪನಿಕ ಕಥೆಗಳು ತಮ್ಮ ಮಹತ್ವ ಕಳೆದುಕೊಂಡಿವೆ. ಹಾಗೂ ಅವರ ಕೆಲವು ಆಚರಣೆಗಳಲ್ಲಿ ಶಿವಲಿಂಗದ ಪ್ರತಿಮೆಯ ಮೇಲೆ ತಮ್ಮ ಪಾದಗಳನ್ನು ಇಡುವಂತಹ ವಿಚಿತ್ರ ಆಚರಣೆಗಳು ಲಿಂಗಾಯತರ ಮತ್ತು ಹಿಂದೂ ಶೈವರ ಆಕ್ರೋಶಕ್ಕೆ ಕಾರಣವಾಗಿದೆ.
5) ಬಸವಣ್ಣನವರನ್ನು ಅನುಸರಿಸುವ ಬಹುಪಾಲು ಲಿಂಗಾಯತರು ಪಂಚಾಚಾರ್ಯರನ್ನು ತೊರೆದಿದ್ದಾರೆ. ವಿಶೇಷವಾಗಿ ಕಳೆದ ಹತ್ತು ವರ್ಷಗಳಲ್ಲಿ ಅಂತವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆದ್ದರಿಂದ ಪಂಚಾಚಾರ್ಯರ ಜೀವನೋಪಾಯಕ್ಕೆ ಬೆದರಿಕೆ ಉಂಟಾಗಿದೆ. ಮತ್ತು ಅವರ ಕಟ್ಟು ಕಥೆಗಳನ್ನು ಪ್ರಶ್ನಿಸಲಾಗುತ್ತಿದೆ. ಹೀಗಾಗಿ ಅವರಲ್ಲಿ ಹತಾಶ ಭಾವನೆ ಸೇಡುತೀರಿಸಿಕೊಳ್ಳುವ ಮನೋಭಾವ ಬೆಳೆಯುತ್ತಿದೆ. ಅವರ ಮಾಧ್ಯಮ ಹೇಳಿಕೆಗಳು ಹೀಗೆ ಅವರ ಹತಾಶೆಯನ್ನು ಬಹಿರಂಗಪಡಿಸುತ್ತವೆ ಮತ್ತು ಇನ್ನೇನೂ ಇಲ್ಲ.
6) ಲಿಂಗಾಯತರು ತಮ್ಮ ಧರ್ಮದ ನಿಜವಾದ ಸ್ವರೂಪದ ಬಗ್ಗೆ ಅರಿತುಕೊಳ್ಳುತ್ತಿದ್ದಾರೆ. ಹೀಗಾಗಿ ಬಹುತೇಕರು ಬಸವ ತತ್ವದತ್ತ ವಾಲುತ್ತಿದ್ದಾರೆ. ಕಳೆದ ನಾಲ್ಕು ನೂರು ವರ್ಷಗಳಿಂದ ಶರಣರ ವಚನಗಳನ್ನು ಅವುಗಳು ಬರೆಯಲ್ಪಟ್ಟ ತಾಡೋಲೆಗಳನ್ನು ಯಾರು ಮತ್ತು ಏಕೆ ಬಚ್ಚಿಟ್ಟಿದ್ದಾರೆಂದು ಈಗ ಬಹುತೇಕ ಲಿಂಗಾಯತರಿಗೆ ತಿಳಿದಿದೆ.
7) ಪಂಚಾಚಾರ್ಯರು ಅಡ್ಡ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿಸಿಕೊಳ್ಳಲು ಬಹಳ ಇಷ್ಟಪಡುತ್ತಾರೆ. ಆದರೆ ಅಡ್ಡಪಲ್ಲಕ್ಕಿಯನ್ನು ಹೊತ್ತುಕೊಳ್ಳುವುದು ಗುಲಾಮಗಿರಿಯ ಸಂಕೇತವಾಗಿದೆ. ಈಗ ಲಿಂಗಾಯತರು ಈ ಪಂಚಾಚಾರ್ಯರ ಗುಲಾಮಗಿರಿಯಿಂದ ಹೊರಗೆ ಬಂದಿದ್ದಾರೆ. ಅವರ ಅಡ್ಡಪಲ್ಲಕ್ಕಿಯನ್ನು ಹೊರಲು ತಿರಸ್ಕರಿಸುತ್ತಿದ್ದಾರೆ. ಬಸವಣ್ಣನವರ ಶರಣ ಧರ್ಮದಲ್ಲಿ ಅಡ್ಡ ಪಲ್ಲಕ್ಕಿಯಂತಹ ಗುಲಾಮಗಿರಿಗೆ ಅವಕಾಶ ಇಲ್ಲ. ಆದ್ದರಿಂದ ಪ್ರತಿ ವರ್ಷ ನಡೆಯುತ್ತಿದ್ದ ನೂರಾರು ಅಡ್ಡಪಲ್ಲಕ್ಕಿ ಮೆರವಣಿಗೆಗಳು ನಿಂತು ಹೋಗಿವೆ. ಅದರಿಂದ ಪಂಚಾಚಾರ್ಯರ ಆದಾಯವು ಗಣನೀಯವಾಗಿ ಕಡಿಮೆ ಆಗಿದೆ.
8) ಶರಣ ಧರ್ಮವು ಎಲ್ಲ ಜನರನ್ನು ಸಮಾನವಾಗಿ ಪರಿಗಣಿಸುತ್ತದೆ. ಮತ್ತು ಆದ್ದರಿಂದ ಅದರಲ್ಲಿ ಯಾರೂ ಮೇಲಲ್ಲ ಅಥವಾ ಕೆಳಗಿಲ್ಲ ಆದರೆ ಪಂಚಾಚಾರ್ಯರು ಎಲ್ಲ ಸಭೆ ಸಮಾರಂಭಗಳಲ್ಲಿ ಎಲ್ಲರಿಗಿಂತ ಎತ್ತರದ ವಿಶೇಷ ಆಸನಗಳಲ್ಲಿ ಕುಳಿತುಕೊಳ್ಳುವ ರೂಢಿಯನ್ನು ಕಡ್ಡಾಯಗೊಳಿಸಿದ್ದಾರೆ. ಲಿಂಗಾಯತರು ಅದನ್ನು ಒಪ್ಪದೆ ಇತರ ಸ್ವಾಮಿಗಳ ರೀತಿಯಲ್ಲಿ ಸಮಾನ ಆಸನಗಳಲ್ಲಿ ಪಂಚಾಚಾರ್ಯರನ್ನು ಕೂರಿಸುತ್ತಾರೆ. ಇದು ತಮಗೆ ಅಪಮಾನವೆಂದು ಪಂಚಾಚಾರ್ಯರು ದೂಷಿಸುತ್ತಿದ್ದಾರೆ. ಹೀಗಾಗಿ ಲಿಂಗಾಯತರು ಅವರಿಂದ ದೂರ ನಡೆದಿದ್ದಾರೆ.
9) ಲಿಂಗಾಯತರು ತಮ್ಮ ಜನನ, ಮರಣ, ವಿವಾಹ ಇತ್ಯಾದಿ ಸಂದರ್ಭಗಳಲ್ಲಿ ಅವರ ನಿಜಾಚರಣೆಗಳು ವೈದಿಕರ ವಿಧಿ ವಿಧಾನಗಳಿಂದ ಏಕೆ ಮತ್ತು ಹೇಗೆ ಸಂಪೂರ್ಣವಾಗಿ ಭಿನ್ನವಾಗಿವೆ ಎಂಬುದನ್ನು ತಿಳಿದುಕೊಂಡಿದ್ದಾರೆ.
10) ಪಂಚಾಚಾರ್ಯರು ಮತ್ತು ಅವರ ಕೆಲವು ಅನುಯಾಯಿಗಳು ನಡೆಸುತ್ತಿರುವ ಶಿವಯಜ್ಞಗಳು, ಶಿವಹೋಮಗಳು ಮತ್ತು ಇತರ ಆಚರಣೆಗಳನ್ನು ಈಗ ಲಿಂಗಾಯತರು ತಿರಸ್ಕರಿಸಲು ಪ್ರಾರಂಭಿಸಿದ್ದಾರೆ.
11) ಈ ಜಗತ್ತಿನಲ್ಲಿ ಯಾವುದೇ ಪ್ರಾಣಿ ಅಥವಾ ಮನುಷ್ಯ ಕಲ್ಲಿನಲ್ಲಿ ಹುಟ್ಟಲು ಸಾಧ್ಯವಿಲ್ಲ. ಆದ್ದರಿಂದ ಈ ಐದೂ ಪಂಚಾಚಾರ್ಯರು ಐದು ಕಲ್ಲುಗಳಿಂದ ಹುಟ್ಟಿದರು ಎಂಬ ಕಟ್ಟು ಕಥೆಗಳನ್ನು ಲಿಂಗಾಯತರು ತಿರಸ್ಕರಿಸುತ್ತಿದ್ದಾರೆ.
12) ಬಸವ ಧರ್ಮವು ಸಂಪೂರ್ಣವಾಗಿ ವಚನಗಳನ್ನು ಆಧರಿಸಿದೆ. ಮತ್ತು ವೀರಶೈವರ ಸಿದ್ಧಾಂತ ಶಿಖಾಮಣಿಯನ್ನು ಅದು ಒಪ್ಪುವದಿಲ್ಲ. ಆದರೆ ವೀರಶೈವರು ಅದನ್ನು ನಂಬಲು ಸ್ವತಂತ್ರರು ಆದರೆ ಲಿಂಗಾಯತರು ಅದರೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ.
13) ಈ ಎಲ್ಲಾ ಬದಲಾವಣೆಗಳು ಪಂಚಾಚಾರ್ಯರ ಜೀವನೋಪಾಯದ ಮೇಲೆ ಕೆಟ್ಟ ಪರಿಣಾಮ ಬೀರಿವೆ. ಆದ್ದರಿಂದ ಅವರು ಮಾಧ್ಯಮಗಳಿಗೆ ವಿಚಿತ್ರ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಂತಹ ಹೇಳಿಕೆಗಳು ಅವರು ಹತಾಶರಾಗಿದ್ದಾರೆ. ಮತ್ತು ನಿರಾಶೆಗೊಂಡಿದ್ದಾರೆ ಎಂಬುದನ್ನು ಮಾತ್ರ ಸೂಚಿಸುತ್ತವೆ. ಇದು ವರ್ಷದಿಂದ ವರ್ಷಕ್ಕೆ ಇನ್ನಷ್ಟು ಹದಗೆಡುತ್ತಲೆ ಇದೆ ಎಲ್ಲಾ ಜನರನ್ನು ಎಲ್ಲ ಕಾಲಕ್ಕೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ.
14) ಪಂಚಾಚಾರ್ಯರು ತಮ್ಮ ಶ್ರೇಷ್ಠ ವೀರಶೈವ ಧರ್ಮವನ್ನು ಅನುಸರಿಸಲು ಪ್ರತಿಪಾದಿಸಲು ಮತ್ತು ಪ್ರಚಾರ ಮಾಡಲು ಸ್ವತಂತ್ರರು. ಅದು ಪ್ರಾಚೀನವಾಗಿದೆಯೋ ಅಥವಾ ಇತ್ತೀಚಿನದಾಗಿದೆಯೋ, ಅದರಲ್ಲಿ ಶಾಸನಗಳನ್ನು ಹೊಂದಿದೆಯೋ ಅಥವಾ ಇಲ್ಲವೋ ಎನ್ನುವುದು ಬಸವಣ್ಣನವರ ಅನುಯಾಯಿಗಳಿಗೆ ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ.
15) ನಾಲ್ಕು ಹಿಂದೂ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ವೀರಶೈವವನ್ನು ಲಿಂಗಾಯತದಿಂದ ಬೇರ್ಪಡಿಸಿ ಪ್ರತ್ಯೇಕವಾಗಿ ತೋರಿಸಲಾಗಿದೆ. ಅದೇ ರೀತಿ ಬ್ರಹ್ಮಸಮಾಜ ಮತ್ತು ಆರ್ಯ ಸಮಾಜವನ್ನು ಬೇರ್ಪಡಿಸಿದೆ. ಈ ಪಂಚಾಚಾರ್ಯರು ವೀರಶೈವ ಮತ್ತು ಲಿಂಗಾಯತ ಒಂದೆ ಎಂದು ತೋರಿಸಲಾಗಿದೆ ಎಂಬ ಸುಳ್ಳನ್ನು ತೇಲಿ ಬಿಟ್ಟಿದ್ದಾರೆ. ಯಾರು ಬೇಕಾದರು ಹಿಂದೂ ಉತ್ತರಾಧಿಕಾರ ಕಾಯ್ದೆ ಕಲಂ 2ನ್ನು ಓದಬಹುದು. ಅದೇ ವ್ಯಾಖ್ಯಾನವನ್ನು ಇತರ ಮೂರು ಹಿಂದೂ ಕಾನೂನುಗಳಲ್ಲಿಯು ಪುನರ್ ಉಚ್ಛರಿಸಲಾಗಿದೆ.
16) ಎಲ್ಲ ಐದೂ ಪಂಚಾಚಾರ್ಯರು 2002ರಲ್ಲಿ ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಮಾನ್ಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಒಂದು ದೀರ್ಘವಾದ ಪತ್ರವನ್ನು ಬರೆದು ಎಲ್ಲ “ಜಂಗಮ”ರನ್ನು ಪರಿಶಿಷ್ಟ ಪಂಗಡದಲ್ಲಿರುವ “ಬೇಡ ಜಂಗಮರ”ನ್ನಾಗಿ ಎಂದು ಪರಿಗಣಿಸಿಲು ವಿನಂತಿಸಿಕೊಂಡಿದ್ದರು. ಏಕೆಂದರೆ ಪಂಚಾಚಾರ್ಯರೆಲ್ಲರು ಕರ್ನಾಟಕದವರೇ ಆಗಿದ್ದು ಅಲ್ಲದೆ ಅವರೆಲ್ಲರು ಜಾತಿಯಿಂದ “ಜಂಗಮ” ಆಗಿದ್ದಾರೆ. ಆದರೆ ಸೋಜಿಗವೆನ್ನುವಂತೆ ಈಗ ಪಂಚಾಚಾರ್ಯರು ಮೀಸಲಾತಿಯ ಹೋರಾಟವನ್ನು ವಿರೋದಿಸುತ್ತಿದ್ದಾರೆ.
17) ಪಂಚಾಚಾರ್ಯರು ಮತ್ತು ಅವರ ಅನುಯಾಯಿಗಳು ವೈದಿಕ ಧರ್ಮದ ಎಲ್ಲ ನಂಬಿಕೆಗಳನ್ನು ನಂಬಲು ಮತ್ತು ಆಚರಿಸಲು ಅವರು ಸ್ವತಂತ್ರರು ಅವರು ಯಾವುದೇ ವೈದಿಕ ಗ್ರಂಥಗಳನ್ನು ಓದಲು ಪ್ರಸ್ತಾಪಿಸಲು ಸಂಪೂರ್ಣ ಅಧಿಕಾರ ಉಳ್ಳವರು ಆದರೆ ಶರಣ ತತ್ವಗಳ ವಿರೂಪಗೊಳಿಸುವುದು ತಪ್ಪಾಗಿ ಅರ್ಥೈಸುವುದು ಹಾಗೂ ಶರಣ ಧರ್ಮದಲ್ಲಿ ಮಧ್ಯ ಪ್ರವೇಶಿಸುವುದನ್ನು ನಿಲ್ಲಿಸಬೇಕು. ತಾವು ಸ್ವರ್ಗದಿಂದ ನೇರವಾಗಿ ಭೂಮಿಗೆ ಇಳಿದು ಬಂದವರೆಂದು ಹೇಳಿಕೊಳ್ಳುವ ಈ ಪಂಚಾಚಾರ್ಯರು ಲಿಂಗಾಯತ ಧರ್ಮದಲ್ಲಿ ಹಸ್ತಕ್ಷೇಪ ಮಾಡುವುದನ್ನು ಮತ್ತು ಅದನ್ನು ವಿರೂಪಗಳಿಸುವದನ್ನು ಲಿಂಗಾಯತರು ಸಹಿಸುವುದಿಲ್ಲ.”
super…. ಇದಕಿಂತಲೂ ಅವರಿಗೆ ಹೆಚ್ಚಿಗೆ ಏನು ಹೇಳೋದಿದೆ.
ಬೆಳಗಾವಿಯಲ್ಲಿ ಜಾ. ಲಿಂ. ಮ. ದ ಪದಾಧಿಕಾರಿಗಳು ಅತ್ಯಂತ ಸೂಕ್ತ ರೀತಿಯಲ್ಲಿ ಉತ್ತರ ಕೊಟ್ಟಿದ್ದಾರೆ. ಪಂಚ ಪೀಠಗಳ ನಿಲುವು ಹೇಗಿದೆ ಎಂದರೆ ಜಟ್ಟಿ ಸೋತರೂ ಮೀಸೆ ಮಣ್ಣಾಗಿಲ್ಲ ಎಂಬಂತಿದೆ. ನಾನು ನಮ್ಮ JLM ಪದಾಧಿಕಾರಿಗಳಲ್ಲಿ ಕೇಳಿಕೊಳ್ಳುವುದೇನೆಂದರೆ, ನಮ್ಮ ರಾಜ್ಯದ ಪ್ರತಿ ಗ್ರಾಮಗಳಲ್ಲಿ ಬಸವ ತತ್ವದ ಪ್ರಕಾರ ಕ್ರಿಯೆಗಳನ್ನು ಮಾಡುವ “ಕ್ರಿಯಾಮೂರ್ತಿಗಳನ್ನು ” ತರಬೇತುಗೊಳಿಸಿದರೆ ಬಸವಧರ್ಮ / ಲಿಂಗಾಯತ ಧರ್ಮ ವೇಗವಾಗಿ ಜನಮಾನಸಕ್ಕೆ ತಲುಪುತ್ತದೆ. ನಮ್ಮ ಜನ ಬಸವ ತತ್ವದಕ್ರಿಯಾಮೂರ್ತಿ ಗಳು ಲಭ್ಯ ವಿಲ್ಲದ ಕಾರಣ ಅನಿವಾರ್ಯವಾಗಿ ಜಂಗಮಮೂರ್ತಿ ಗಳನ್ನು ಕರೆಯುತ್ತಾರೆ. ಆದ್ದರಿಂದ ಬಸವತತ್ವ ಕ್ರಿಯಾಮೂರ್ತಿಗಳ ತಯಾರಿ ತುರ್ತಾಗಿ ಆಗಬೇಕಿದೆ.