ಶಿವಮೊಗ್ಗ :
ಬಸವ ಸಂಗಮ ವತಿಯಿಂದ ಬಸವ ಜಯಂತಿ ಅಂಗವಾಗಿ ಆಯೋಜಿಸಲಾದ ಪ್ರತಿಷ್ಠಿತ “ಬಸವ ಕಪ್ – 2026” ಕ್ರಿಕೆಟ್ ಟ್ರೋಫಿ ಹಾಗೂ ಟಿ-ಶರ್ಟ್ ಅನಾವರಣ ಕಾರ್ಯಕ್ರಮ ಶನಿವಾರ ಬೆಕ್ಕಿನಕಲ್ಮಠದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬೆಕ್ಕಿನಕಲ್ಮಠದ ಪೂಜ್ಯ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡುತ್ತ, ಯುವಜನತೆಯಲ್ಲಿ ಕ್ರೀಡಾ ಮನೋಭಾವ, ಶಿಸ್ತು, ಒಗ್ಗಟ್ಟು ಹಾಗೂ ಸಮಾಜಮುಖಿ ಚಿಂತನೆ ಬೆಳೆಸುವಲ್ಲಿ ಇಂತಹ ಕ್ರೀಡಾ ಚಟುವಟಿಕೆಗಳು ಮಹತ್ವಪೂರ್ಣ ಪಾತ್ರವಹಿಸುತ್ತವೆ ಎಂದು ಆಶೀರ್ವಚನ ನೀಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ “ಬಸವ ಕಪ್ – 2026” ಕ್ರೀಡಾಕೂಟದ ಟ್ರೋಫಿ ಹಾಗೂ ಅಧಿಕೃತ ಟಿ-ಶರ್ಟ್ಗಳನ್ನು ಅನಾವರಣಗೊಳಿಸಿ ಮಾತನಾಡುತ್ತ, ಕ್ರೀಡೆಗಳು ದೈಹಿಕ ಸದೃಢತೆ ಮಾತ್ರವಲ್ಲದೆ, ನಾಯಕತ್ವ ಗುಣ, ಶಿಸ್ತು ಮತ್ತು ಒಗ್ಗಟ್ಟಿನ ಮನೋಭಾವ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಬಸವ ಸಂಗಮ ಸಂಸ್ಥೆಯು ಯುವಜನತೆಯಲ್ಲಿ ಕ್ರೀಡಾ ಸ್ಫೂರ್ತಿ ಮತ್ತು ಒಗ್ಗಟ್ಟನ್ನು ಬೆಳೆಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ಕ್ರೀಡಾ ಸರಣಿ ಶ್ಲಾಘನೀಯವಾಗಿದೆ ಎಂದು ಸಮಾಜದ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಸದಸ್ಯರುಗಳಾದ ರೇಣುಕಾರಾಧ್ಯ, ಪಿ. ರುದ್ರೇಶ, ಅನಿತಾ ರವಿಶಂಕರ, ಬಸವ ಸಂಗಮದ ಅಧ್ಯಕ್ಷರಾದ ಚೇತನ್ ದುಮಳ್ಳಿ, ಧ್ರುವಕುಮಾರ, ಅವಿನಾಶ ಬಿದರೆ, ನವೀನ ವಾರದ, ಗೀತಾ ರವೀಂದ್ರ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
