ವಿಜಯಪುರ
2ಎ ಮೀಸಲಾತಿಗಾಗಿ ನಡೆಯುತ್ತಿರುವ ಪಂಚಮಸಾಲಿ ಹೋರಾಟದ ನಾಯಕತ್ವ ವಹಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
‘ಲಿಂಗಾಯತ ಪಂಚಮಸಾಲಿ ಸಮಾಜ ಎಂದೂ 2ಎ ಮೀಸಲಾತಿ ಬೇಡಿಲ್ಲ, ಈಗಾಗಲೇ 2ಎ ಪ್ರವರ್ಗದಲ್ಲಿರುವ 104 ಹಿಂದುಳಿದ ಸಮಾಜಗಳ ಹಕ್ಕು ಕಸಿದುಕೊಳ್ಳಲು ನಾವು ತಯಾರಿಲ್ಲ, ಅನ್ಯಾಯ ಮಾಡುವುದಿಲ್ಲ, ಅವರ ಬುಟ್ಟಿಗೆ ಕೈಹಾಕುವುದಿಲ್ಲ’ ಎಂದು ರವಿವಾರ ಮಾಧ್ಯಮಗಳಿಗೆ ಹೇಳಿದರು.
‘ಮೊದಲಿನಿಂದಲೂ ನಾವು 2ಎ ಮೀಸಲಾತಿ ಕೇಳಿಲ್ಲ, ಪಂಚಮಸಾಲಿಗೆ 2ಎ ಮೀಸಲಾತಿ ಬೇಕು ಎಂದು ಆರಂಭದಲ್ಲಿ ಬೆಂಕಿ ಹಚ್ಚಿದವರೇ ಕಾಂಗ್ರೆಸ್ನವರು’ ಎಂದು ಆರೋಪಿಸಿದರು.
ನಾವು, ನರೇಂದ್ರ ಮೋದಿ, ಅಮಿತ್ ಷಾ, ನಡ್ಡಾ ಶೋಭಾ ಕರಂದ್ಲಾಜೆ, ಬೊಮ್ಮಾಯಿ ಸೇರಿ ಒಂದು ಸೂತ್ರ ಕಂಡು ಹಿಡಿದಿವಿ ಅದರಂತೆ ಮಾಡಿದ್ರೆ ಸಾಕು ಎಂದು ಹೇಳಿದ್ದಾರೆ.
‘ಕಾಂಗ್ರೆಸ್ ಸರ್ಕಾರ ಮುಸ್ಲಿಮರಿಗೆ ಸಂವಿಧಾನ ವಿರೋಧಿಯಾಗಿ ನೀಡಿದ್ದ ಶೇ 4ರಷ್ಟು ಮೀಸಲಾತಿಯನ್ನು ತೆಗೆದುಹಾಕಿ, ಆ ಮೀಸಲಾತಿಯನ್ನು 2 ಸಿ ಮತ್ತು 2 ಡಿ ಎಂಬ ಹೊಸ ಪ್ರವರ್ಗಗಳನ್ನು ಸೃಷ್ಟಿಸಿ, ಲಿಂಗಾಯತರು, ಒಕ್ಕಲಿಗರು, ಮರಾಠರು, ಜೈನರು, ಕ್ರೈಸ್ತರು, ವೈಷ್ಣವರು, ಕುರುಬರು ಸೇರಿದಂತೆ ವಿವಿಧ ಸಮಾಜಗಳಿಗೆ ಹಂಚಿಕೆ ಮಾಡುವ ಸಂಬಂಧ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೊಸ ಸೂತ್ರ ಕಂಡುಹಿಡಿಯಲಾಗಿತ್ತು.
ಸದ್ಯ ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣ ಇದ್ದು, ಕಾನೂನು ಹೋರಾಟ ಮುಂದುವರಿಸುತ್ತೇವೆ. ಮುಸ್ಲಿಮರಿಗೆ ಸಂವಿಧಾನ ಬಾಹಿರವಾಗಿ ನೀಡಿರುವ ಮೀಸಲಾತಿ ರದ್ದುಗೊಳಿಸಿ, ಅದರಲ್ಲಿ ನಾವು ಮೀಸಲಾತಿ ಪಡೆದುಕೊಳ್ಳುತ್ತೇವೆ’ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡುವುದು ಬೇಡ, ಇನ್ನು ಮುಂದೆ ಅವರ ಬಳಿ ನಾವು ಕೇಳುವುದೂ ಇಲ್ಲ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಪಂಚಮಸಾಲಿಗಳ ಮೀಸಲಾತಿಗೆ ಹೋರಾಟಕ್ಕೆ ಹಿಂದುಳಿದ ವರ್ಗಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಪಂಚಮಸಾಲಿ ಬೇಡಿಕೆಗೆ ಪ್ರತ್ಯಕ್ಶ ಬೆಂಬಲ ನೀಡಿರುವ ಬಿಜೆಪಿ ಹಿಂದುಳಿದ ವರ್ಗಗಳ ಮತ ಕಳೆದುಕೊಳ್ಳುವ ಅಪಾಯವಿದ್ದುದ್ದರಿಂದ ಹೋರಾಟಕ್ಕೆ ಹೊಸ ತಿರುವು ನೀಡುವ ಅನಿವಾರ್ಯತೆಯಿದೆ ಎನ್ನಲಾಗಿದೆ.
ಪಂಚಮಸಾಲಿ ಹೋರಾಟದ ವಿರುದ್ಧ ಅಹಿಂದ ಸಂಘಟನೆಗಳು, ಡಿ.18ರಂದು ಶಿವಮೊಗ್ಗ ನಗರದಲ್ಲಿ ಬೃಹತ್ ಪ್ರತಿಭಟನೆಗೆ ಸಜ್ಜಾಗಿವೆ.