ವಿಜಯಪುರ(ದೇವನಹಳ್ಳಿ):
ಲಿಂಗಾಯತ ಗಾಣಿಗರನ್ನು 2ಎ ಮೀಸಲಾತಿ ಪಟ್ಟಿಗೆ ಸೇರಿಸಬಾರದೆಂದು ನೆಲಮಂಗಲ ಕ್ಷೇತ್ರ ತೈಲೇಶ್ವರ ಗಾಣಿಗ ಮಹಾಸಂಸ್ಥಾನದ ಪೀಠಾಧಿಪತಿ ಪೂರ್ಣಾನಂದಪುರಿ ಸ್ವಾಮೀಜಿ ಆಗ್ರಹಿಸಿದ್ದಾರೆ.
‘ಉತ್ತರ ಕರ್ನಾಟಕದ ಲಿಂಗಾಯತ ಗಾಣಿಗರು 2ಎ ಮೀಸಲಾತಿಗಾಗಿ ಒತ್ತಾಯಿಸುತ್ತಿದ್ದಾರೆ. ಅವರನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಅವಕಾಶ ನೀಡದರೆ ನಮ್ಮ ಮೀಸಲಾತಿಯನ್ನು ಅವರು ಕಸಿದುಕೊಳ್ಳುತ್ತಾರೆ’ ಎಂದು ಇತ್ತೀಚಿಗೆ ನಗರದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಗಾಣಿಗ ಸಮುದಾಯವನ್ನು ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿ ಹೊಂದಿರುವ ಸಮುದಾಯಗಳ ಪಟ್ಟಿಗೆ ಸೇರ್ಪಡೆಗೊಳಿಸಿದ್ದರು. ನಾವು ಬಹಳಷ್ಟು ಹೋರಾಟ ನಡೆಸಿ, ಹಿಂದುಳಿದ ಸಮುದಾಯದ ಸಾಲಿಗೆ ಸೇರ್ಪಡೆಗೊಳಿಸಿದೆವು. ಈಗ ಉತ್ತರ ಕರ್ನಾಟಕದ ಲಿಂಗಾಯಿತ ಗಾಣಿಗರು 2ಎ ಮೀಸಲಾತಿ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅವರನ್ನು ಹಿಂದುಳಿದ ವರ್ಗಗಳ ಮೀಸಲಾತಿಯಡಿ ಸೇರಿಸಲು ಅವಕಾಶ ನೀಡಬಾರದು. ನಾವೆಲ್ಲರೂ ಹೋರಾಟ ಮಾಡಬೇಕು’ ಎಂದು ಹೇಳಿದರು.
ಕಾರ್ಯಾಧ್ಯಕ್ಷ ವಿ.ಆಂಜಿನಪ್ಪ, ಗೌರವಾಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಆರ್.ವಸಂತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎನ್.ಲಕ್ಷ್ಮಣ್, ರಾಮುಭಗವಾನ್, ಜಿ.ಮಂಜುನಾಥ್, ಆರ್.ಗಗನ್, ಆರ್. ವರುಣ್, ರಮೇಶ್ ಹಾಜರಿದ್ದರು.
							
			