ಲಿಂಗಾಯತ ಶಿಬಿರಗಳಿಂದ ಯುವಕರಿಗೆ ನೈತಿಕ ಶಕ್ತಿ: ಸಾಣೇಹಳ್ಳಿ ಶ್ರೀ

ಹರಿಹರ

ಪ್ರಸ್ತುತ ಯುವಪೀಳಿಗೆ ಮೊಬೈಲ್ ಗೆ ದಾಸರಾಗುತ್ತಿದ್ದು, ಅಂಥವರಿಗೆ ಲಿಂಗಾಯತ ಧರ್ಮದ ಅಧ್ಯಯನ ಶಿಬಿರಗಳು ತುರ್ತು ಅಗತ್ಯವಾಗಿವೆ ಎಂದು ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಅವರು ಪ್ರೊ. ಕೃಷ್ಣಪ್ಪ ಮೈತ್ರಿ ವನದಲ್ಲಿ ಶನಿವಾರ ಶರಣ ಸಾಹಿತ್ಯ ಪರಿಷತ್ತು, ಮಾನವ ಬಂಧುತ್ವ ವೇದಿಕೆ ಹಾಗೂ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಹಮ್ಮಿಕೊಂಡ ಲಿಂಗಾಯತ ಧರ್ಮದ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ, ಇಂದಿನ ಯುವಕರಿಗೆ ನೈತಿಕ ಶಕ್ತಿ ಮತ್ತು ಧಾರ್ಮಿಕ ಭಾವನೆ ಮೂಡಿಸಲು ಲಿಂಗಾಯತ ಧರ್ಮ ಮತ್ತು ಸಿದ್ಧಾಂತದ ಮಾಹಿತಿ ಅಗತ್ಯವಾಗಿದೆ ಎಂದರು.

ಶರಣರು ಕಂಡ ವ್ಯಕ್ತಿಯ ಕಲ್ಯಾಣದ ಪರಿಕಲ್ಪನೆಯ ಮೂಲಕ ನಾಡಿನ ಕಲ್ಯಾಣವಾಗಿಸುವುದು ಶಿಬಿರದ ಧ್ಯೇಯವಾಗಬೇಕು. ಆಗ ಬಡವ ಶ್ರೀಮಂತ ಎಂಬ ಅಂತರವಿಲ್ಲದೇ, ಮೇಲು-ಕೀಳು, ಜಾತಿಯ ಸಂಘರ್ಷಗಳು ದೂರವಾಗಿ ಸಮ ಸಮಾಜದ ನಿರ್ಮಾಣ ಸಾಧ್ಯವಿದೆ. ಲಿಂಗಾಯತ ಧರ್ಮದವರೇ ಶರಣ ತತ್ವವನ್ನು ಪರಿಪಾಲನೆ ಮಾಡದಿದ್ದಲ್ಲಿ ಲಿಂಗಾಯತ ಸಂಘಟನೆ ಎಂಬುದು ಬರಿ ಸಂಖ್ಯೆಯಾಗಿ ರೂಪುಗೊಳ್ಳುತ್ತದೆ ಎಂದು ಬೇಸರ ವ್ಯಕ್ತಪಡಿಸಿದ ಶ್ರೀಗಳು, ಲಿಂಗಾಯತ ಎಂಬುದು ಜಾತಿ ಅಲ್ಲದೆ ತತ್ವ ಸಿದ್ಧಾಂತ ಒಳಗೊಂಡ ಒಂದು ಧರ್ಮವಾಗಿದೆ ಎಂದು ಅಭಿಮತ ವ್ಯಕ್ತಪಡಿಸಿದರು.

ಪ್ರಸ್ತುತ ಸಮಾಜದಲ್ಲಿ ಒಳ್ಳೆಯ ಕಾರ್ಯಗಳಿಗೆ ಕಿಚ್ಚು ಹಚ್ಚುವ ಜನರು ಹೆಚ್ಚಾಗಿದ್ದಾರೆ, ವೈದಿಕ ಪರಂಪರೆ ಮೆರೆಯುತ್ತಿದೆ, ಇಂತಹುದರಿಂದ ಸಮಾಜ ಜಾಗೃತವಾಗಬೇಕೆಂದು ಪಂಡಿತಾರಾಧ್ಯ ಸ್ವಾಮೀಜಿ ಕರೆ ನೀಡಿದರು.

ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಇಂದಿನ ಸಮಾಜ ಬಸವಣ್ಣನವರನ್ನು ಓದುತ್ತಿಲ್ಲ, ಬರೀ ಮಾಧ್ಯಮಗಳಲ್ಲಿ ಮಾತ್ರ ಓದುವಂತಹ ಪರಿಸ್ಥಿತಿ ಇದೆ, ಜಾತಿಯಿಂದ ಅವರನ್ನು ಗುರುತಿಸಲಾಗಿದೆ, ಸುಳ್ಳು ಹೇಳುವವರೇ ಹೆಚ್ಚಾಗಿದ್ದಾರೆ, ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಬರೀ ಘೋಷಣೆ ಮಾಡಿದೆ, ಪಠ್ಯಪುಸ್ತಕಗಳು, ವಿಶ್ವವಿದ್ಯಾಲಯಗಳು ದೇವರನ್ನು ಸಾಂಸ್ಥೀಕರಿಸಿ ಹೇಳುವಂತಾಗಿರುವುದು ಬೇಸರದ ಸಂಗತಿ ಎಂದರು.

ಶಿಬಿರ ಸಂಪನ್ಮೂಲ ವ್ಯಕ್ತಿ ವಿಜಯಪುರದ ಡಾ. ಜೆ. ಎಸ್. ಪಾಟೀಲ ಅವರು ಲಿಂಗಾಯತ ಧರ್ಮದ ಸಿದ್ಧಾಂತ, ಸಂಘಟನೆ ಕುರಿತು ಉಪನ್ಯಾಸ ನೀಡಿದರು.

‘ಬಸವಾದಿ ಶರಣರು ವೈದಿಕತೆಗಿಂತ ಭಿನ್ನವಾಗಿ ಲಿಂಗಾಯತ ಪರಂಪರೆಯನ್ನು ರೂಪಿಸಿದರು. ಆದರೆ, ಆ ಪರಂಪರೆಯ ನಾಯಕತ್ವ ವಹಿಸಿದ ಕೆಲವರು ಮತ್ತೆ ವೈದಿಕತೆಯತ್ತ ಹೊರಳುತ್ತಿದ್ದಾರೆ,’ ಎಂದರು.

‘ಬಸವಣ್ಣನ ತತ್ವ ಪಾಲಕರೆಂದು ಗುರುತಿಸಿಕೊಂಡಿರುವ ನಾಡಿನ ಕೆಲವು ಮಠಗಳು ಹಾಗೂ ಅನುಯಾಯಿಗಳು ಪೂಜೆ, ಪ್ರಚಾರ ಮತ್ತು ಪಲ್ಲಂಗದ ವಿಷಯಗಳಲ್ಲಿ ಕಳೆದು ಹೋಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಆವರಗೆರೆ ರುದ್ರಮುನಿ, ಹನಗವಾಡಿ ರುದ್ರಪ್ಪ, ವಿಶ್ವೇಶ್ವರಯ್ಯ, ಹನಿಸ್ ಪಾಷಾ, ರುದ್ರೇಗೌಡ, ಕುಸುಮಾ ಲೋಕೇಶ, ಪರಮೇಶ್ವರಪ್ಪ, ಶಿವಮೂರ್ತಯ್ಯ, ಭರಮನಗೌಡ, ಎನ್.ಎಸ್. ರಾಜು, ಮುದೇಗೌಡರ ನಾಗರಾಜ, ಶರಣ ಬಸಣ್ಣಗೌಡ, ನಾಗರಾಜ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಯ ನೂರಾರು ಶರಣ ಶರಣೆಯರು ಭಾಗವಹಿಸಿದ್ದರು. ಶಿಬಿರ ಇಂದೂ ಮುಂದುವರೆಯಲಿದೆ.

Share This Article
Leave a comment

Leave a Reply

Your email address will not be published. Required fields are marked *