ಮಠಾಧೀಶರ ಸಭೆ: ಹಿಂದೂ ಮಹಾಸಾಗರದ ವಿರುದ್ಧ ಈಸುವ ಸವಾಲು

ನಮ್ಮ ಸಮುದಾಯದ ಮುಂದಿರುವ ಐದು ಮುಖ್ಯ ಸವಾಲುಗಳು

ಬೆಳಗಾವಿ

ಲಿಂಗಾಯತ ಧರ್ಮದ ಮುಂದಿರುವ ಸವಾಲುಗಳನ್ನು ಎದುರಿಸಲು ಜನವರಿ 17ರಂದು ಧಾರವಾಡದಲ್ಲಿ ಸಭೆ ಕರೆದಿರುವುದು ಸ್ವಾಗತಾರ್ಹ ಬೆಳವಣಿಗೆ.

ನನ್ನ ಅಭಿಪ್ರಾಯದಂತೆ ನಮ್ಮ ಸಮುದಾಯದ ಮುಂದೆ ಐದು ಸವಾಲುಗಳಿವೆ. ಅವುಗಳನ್ನು ಎದುರಿಸಲು ಧಾರವಾಡದಲ್ಲಿ ಸೇರುವ ಮಠಾಧೀಶರು ಪ್ರಯತ್ನಿಸಲಿ ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ.

1) ಸರಳ ಧರ್ಮಗ್ರಂಥ ರಚಿಸಿ

ಯಾವುದೇ ಸೈದ್ಧಾಂತಿಕ ಘಟನೆಯು ಧರ್ಮ ಎನ್ನಿಸಿಕೊಳ್ಳಬೇಕಾದರೆ ಅದಕ್ಕೆ ತನ್ನದೇ ಆದ ಗುಣಲಕ್ಷಣಗಳಿರಬೇಕು. ಈ ಲಕ್ಷಣಗಳು ಇದ್ದರೆ ಮಾತ್ರ ಅದು ಧರ್ಮ; ಇಲ್ಲವಾದರೆ ಅದು ಕೇವಲ ಜಾತಿ ಅಥವಾ ಮತ ಆಗಬಹುದು.

ಇದನ್ನು ಹೇಳುವ ಉದ್ದೇಶವೇನೆಂದರೆ, ಲಿಂಗಾಯತಕ್ಕೆ ಸಂಬಂಧಿಸಿದಂತೆ ಇವೆಲ್ಲಕ್ಕೂ ಮೂಲ ಆಧಾರವಾದ ಧರ್ಮಗ್ರಂಥ ಎಂಬುದು ಸ್ಪಷ್ಠವಾಗಿ ಇರಬೇಕು. ಉದಾಹರಣೆಗೆ, ಇಸ್ಲಾಂ ಧರ್ಮದ ಕುರಾಣ, ಕ್ರಿಶ್ಚಿಯನ್‌ರ ಬೈಬಲ್ ಇತ್ಯಾದಿಗಳು ಆಯಾ ಧರ್ಮದ ಅನುಯಾಯಿ ಪಾಲಿಸಬೇಕಾದ ನಡೆ-ನುಡಿ, ಆಚರಣೆಗಳ ಕುರಿತು ಸ್ಪಷ್ಠ ವಿವರಣೆ ಇರುವುದು.

ಆದರೆ ಲಿಂಗಾಯತದಲ್ಲಿ ವಚನಗಳೇ ಧರ್ಮಗ್ರಂಥ ಎಂದು ವಾದಿಸಲಾಗುತ್ತದೆ. ಆದರೆ ಅಂದಾಜಿನ ಪ್ರಕಾರ, ಸುಮಾರು 24 ಸಾವಿರ ವಚನಗಳಿವೆ. ವಚನಸಂಚಯ ವೆಬ್‌ಸೈಟಿನಲ್ಲಿ ಒಟ್ಟು 209876 ವಚನಗಳು ಮತ್ತು ವಚನಸಂಪುಟ ವೆಬ್‌ಸೈಟಿನಲ್ಲಿ ಒಟ್ಟು 22 ಸಾವಿರ ವಚನಗಳು ಇವೆ. ಆದರೆ ಇವುಗಳಲ್ಲಿ ಎಷ್ಟು ಪ್ರಕ್ಷಿಪ್ತ, ಪುನರಾವರ್ತಿತ, ಗೊಂದಲಮಯ ವಚನಗಳು ಸೇರಿವೆ ಗೊತ್ತಿಲ್ಲ.

ಆದ್ದರಿಂದ ಜನಸಾಮಾನ್ಯರ ಬದುಕಿಗೆ ಅನ್ವಯಿಸುವ ಲೌಕಿಕ ಅಂಶಗಳನ್ನು ಒಳಗೊಂಡಿರುವ ವಚನಗಳನ್ನು ಕ್ರೋಢೀಕರಿಸಿ, ವರ್ಗೀಕರಿಸಿ ಒಂದು ಅಧಿಕೃತ ಧರ್ಮಗ್ರಂಥ ಮಾಡಬೇಕು.

ಲಿಂಗಾಯತರು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕಾದ ವಚನಗಳನ್ನು 9 ಶತಮಾನಗಳ ನಂತರವಾದರೂ ಸಂಕಲಿಸಿ ಒಂದು ಸರಳ ಧರ್ಮಗ್ರಂಥ ರಚನೆಯಾಗಬೇಕು. ಅಲ್ಲದೇ ಇಂದಿನವರಿಗೆ ಅರ್ಥೈಸುವ ತಾತ್ಪರ್ಯ ಅಥವಾ ನಿರ್ವಚನದೊಂದಿಗೆ ಆ ಧರ್ಮಗ್ರಂಥ ರೂಪಗೊಳ್ಳಬೇಕು.

2) ಸ್ವತಂತ್ರ ಧರ್ಮ

ಬೌದ್ಧ, ಜೈನ, ಸಿಖ್ಖರು ಕಾನೂನಿನ ಪರಿಭಾಷೆಯಲ್ಲಿ ಮತ್ತು ಸಾಮಾನ್ಯ ಅರ್ಥದಲ್ಲಿ ಹಿಂದೂಗಳೆಂದು ಪರಿಗಣಿತವಾಗಿದ್ದರೂ, ಅವುಗಳಿಗೆ ಪ್ರತ್ಯೇಕ ಧರ್ಮದ ಮಾನ್ಯತೆಯಿದೆ. ಅದೇ ರೀತಿ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ದೊರಕಬೇಕು. ಅದಕ್ಕಾಗಿ ಲಿಂಗಾಯತ ಪ್ರತ್ಯೇಕ ಧರ್ಮ ಎಂಬುದು ಲಿಂಗಾಯತರ ಮಂತ್ರಘೋಷವಾಗಬೇಕೇ ಹೊರತು, ಧರ್ಮಕ್ಕಾಗಲೀ, ಅದರೊಳಗಿನ ಜಾತಿಗಳಿಗಾಗಲೀ ಮೀಸಲಾತಿಗಾಗಿ ಆಸೆ ಮಾಡಬಾರದು.

ಧರ್ಮದ ಮಾನ್ಯತೆ ಸಿಕ್ಕರೆ ಅದಕ್ಕೆ ದಕ್ಕಬೇಕಾದ ಸೌಲಭ್ಯಗಳು ತಂತಾನೇ ದೊರಕುತ್ತವೆ ಎಂಬುದನ್ನು ಗಮನದಲ್ಲಿಡಬೇಕು.

ಸರ್ವೋಚ್ಛ ನ್ಯಾಯಾಯಲದ ತೀರ್ಪುಗಳನ್ನು ಉದಾಹರಿಸುವುದಾದರೆ, 1966ರಲ್ಲಿ ಸ್ವಾಮಿನಾರಾಯಣ ಪಂಥದ ಪ್ರಕರಣದಲ್ಲಿ [AIR 1966 SC 1119] ‘ಬಸವಣ್ಣ ಲಿಂಗಾಯತ ಧರ್ಮದ ಸಂಸ್ಥಾಪಕ’ ಎಂದು ಮೊದಲ ಬಾರಿಗೆ ಸರ್ವೋಚ್ಛ ನ್ಯಾಯಾಯಲ ಹೇಳಿದೆ. ಇದೇ ಮಾತನ್ನು ಮುಂದೆ ಹಲವಾರು ಪ್ರಕರಣಗಳಲ್ಲಿ ಸರ್ವೋಚ್ಛ ನ್ಯಾಯಾಯಲ ಉದಾಹರಿಸಿರುವುದು ಕಂಡುಬರುತ್ತದೆ. ಹೀಗಾಗಿ ಲಿಂಗಾಯತರು ಹಿಂದೂ, ಶೈವ ಮತ್ತು ವೀರಶೈವ ಧರ್ಮಕ್ಕೆ ಹೊರತಾದ ಪ್ರತ್ಯೇಕ ಧರ್ಮವೆಂದು ಪರಿಗಣಿಸಲು ಸರ್ಕಾರಕ್ಕೆ ನಿರ್ದೇಶನ ನೀಡಲು ಸರ್ವೋಚ್ಛ ನ್ಯಾಯಾಯಲದಲ್ಲಿ ಪ್ರಕರಣ ದಾಖಲಿಸಬಹುದು.

ನಿಜವಾಗಿ ನೋಡಿದರೆ ವೀರಶೈವ-ಲಿಂಗಾಯತ ಗೊಂದಲ ಎಂಬುದು ಗುರು ಮತ್ತು ವಿರಕ್ತ ಪೀಠಗಳ ನಡುವೆ ನಡೆಯುತ್ತಿರುವ ಸ್ವಪ್ರತಿಷ್ಟೆಯ, ತಾರ್ಕಿಕ ಮತ್ತು ಸೈದ್ದಾಂತಿಕ ಸಂಘರ್ಷವಾಗಿದೆ. ಆದ್ದರಿಂದ ಗುರು ಮತ್ತು ವಿರಕ್ತ ಪೀಠದವರು ವೀರಶೈವ ಪದವನ್ನು ಬಿಟ್ಟು ಲಿಂಗಾಯತ, ಬಸವಧರ್ಮ ಅಥವಾ ಶರಣಧರ್ಮದ ಹೆಸರಿನಲ್ಲಿ ಸ್ವತಂತ್ರ ಧರ್ಮಕ್ಕಾಗಿ ಹೋರಾಟ ಮಾಡಿದರೆ ಗೊಂದಲ ನಿವಾರಣೆಯಾಗಬಹುದು. ಈ ವಿವಾದಕ್ಕೆ ರಾಜಕೀಯ ಅಥವಾ ಬೇರೆ ರೀತಿಯ ಹೋರಾಟಕ್ಕಿಂತ ಕಾನೂನಿನ ಹೋರಾಟದ ಮೂಲಕ ತೆರೆ ಎಳೆಯಬಹುದು.

3) ಗುರು-ವಿರಕ್ತರ ಆಚರಣೆಗಳು

ಬಸವತತ್ವದ ಪ್ರಕಾರ ‘ಜಂಗಮ’ವೆಂದರೆ ಜೀವಿಯ ಪ್ರಾಣದಲ್ಲಿರುವ ವ್ಯಕ್ತಚೈತನ್ಯ (ಪ್ರಾಣಲಿಂಗ). ಈ ಜಗವೇ ಜಂಗಮವೆಂದು ಶರಣರು ಹೇಳಿದ್ದಾರೆ. ಇದು ನಿರಂತರ ಚಲನೆಯನ್ನು ಪ್ರತಿಪಾದಿಸುತ್ತದೆ. ಜಂಗಮರೆಂದರೆ ನಿತ್ಯಸಂಚಾರಿಯಾಗಿ ಬಸವ ತತ್ವಬೋಧನೆ ಮಾಡುವವರು ಎಂದು ಕೂಡ ಅರ್ಥ. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದು ಶರಣರು ಪ್ರತಿಪಾದಿಸಿದ್ದಾರೆ.

ಆದರೆ ಇಂದು ಜಂಗಮವೆಂದರೆ ಗುರು ಮತ್ತು ವಿರಕ್ತ ಎಂಬ ಎರಡು ರೀತಿಯ ಮಠಾಧೀಶರನ್ನು ನಾವು ಕಾಣುತ್ತೇವೆ. ಈ ಗುರು ಮತ್ತು ವಿರಕ್ತ ಎಂಬ ಎರಡೂ ಪೀಠಗಳು ಮಠ-ಮಾನ್ಯಗಳನ್ನು ಕಟ್ಟಿ ಹಲವಾರು ರೀತಿಯ ವ್ಯಾಪಾರೀ ಪ್ರವೃತ್ತಿಯಲ್ಲಿ ತೊಡಗಿರುವುದು ಬಸವಧರ್ಮಕ್ಕೆ ಮಾನ್ಯವೇ? ಎಂಬುದು ಭಕ್ತರಿಗೆ ಸ್ಪಷ್ಟೀಕರಸಬೇಕಾಗುತ್ತದೆ.

ಗುರುಪೀಠದವರ ಕುರಿತಾಗಿ ಹೇಳುವುದಾದರೆ, ಅವರು ಬಸವಾದಿ ಶರಣರ ಹಾಗೆ ಸಂಸಾರಿಗಳಾಗಿರುವುದು ಸೂಕ್ತ ಕ್ರಮ. ಆದರೆ ಅವರ ನಂಬಿಕೆ ಆಚರಣೆಗಳು ವೈದಿಕ, ಸನಾತನ ಚಿಂತನೆಗಳನ್ನು ಆಶ್ರಯಿಸಿರುವುದು ಬಸವತತ್ವಕ್ಕೆ ವಿರುದ್ಧವಾಗಿದೆ. ಇದಕ್ಕೆ ಈ ಗುರುಪೀಠದವರನ್ನು ಲಿಂಗಾಯತ ಎಂದು ಒಪ್ಪಲು ಹೇಗೆ ಸಾಧ್ಯ ಎಂಬುದನ್ನು ಅವರೇ ವಿವರಿಸಬೇಕು.

ಇನ್ನು ವಿರಕ್ತಪೀಠದವರು ಈ ಗುರುಪೀಠದವರ ತದ್ವಿರುದ್ಧ ಆಚರಣೆ ಹೊಂದಿದ್ದಾರೆ. ಅವರ ನಂಬಿಕೆ ಆಚರಣೆಗಳು ವೈದಿಕ, ಸನಾತನ ಚಿಂತನೆಗಳನ್ನು ವಿರೋಧಿಸಿ ಬಸವತತ್ವವನ್ನೇ ಪ್ರಚಾರ ಮಾಡುತ್ತಾರೆ. ಆದರೆ ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿ ಎಂಬ ಬಸವತತ್ವಕ್ಕೆ ವಿರುದ್ಧವಾಗಿ ಸನ್ಯಾಸವನ್ನು ಆಚರಿಸುತ್ತಾರೆ. ಈ ಬಸವತತ್ವದಲ್ಲಿ ವೈರಾಗ್ಯ ಸಂಪ್ರದಾಯ ಹೇಗೆ ಹುಟ್ಟಿತು? ಅದನ್ನುಈ ಮಠಾಧೀಶರು ಹೇಗೆ ಸಮರ್ಥಿಸುತ್ತಾರೆ ಎಂಬುದು ಸ್ಪಷ್ಟವಾಗಬೇಕು.

4) ಹಿಂದೂ ಮಹಾಸಾಗರದ ವಿರುದ್ಧ ಈಸುವ ಸವಾಲು

ಈಗಾಗಲೇ ಹೇಳಿರುವಂತೆ, ಬಸವಧರ್ಮ ಒಂದು ಸ್ವತಂತ್ರ ಧರ್ಮ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನು ಸಾಧಿಸಲು ಇರುವ ಸವಾಲುಗಳ ಪಟ್ಟಿ ಬಹಳ ದೊಡ್ಡದಿದೆ. ಮೊದಲಿಗೆ, ಹರಿದು ಹಂಚಿಹೋಗಿರುವ ಜಾತಿಗಳನ್ನು ಒಗ್ಗೂಡಿಸಬೇಕು.

ಇದಕ್ಕೆ ಪರಿಹಾರವೆಂದರೆ, ಜಾತಿಗೊಬ್ಬ ಮಠಾಧೀಶರಾಗುವುದು ಕೊನೆಗಾಣಬೇಕು. ಈ ಮೊದಲೇ ಹೇಳಿದಂತೆ, ಮಠಾಧೀಶರ ನಡುವೆ ಇರುವ ಹಲವಾರು ಗೊಂದಲಗಳು ಬಗೆಹರಿಯಬೇಕು. ಅದಕ್ಕೆ ಶರಣರ ಸಂದೇಶಗಳೇ ಮಾರ್ಗದರ್ಶಿಯಾಗಬೇಕು. ಯಾವ ರೀತಿ ಅಂದು ಅನುಭಾವ ಮಂಟಪವನ್ನು ರಚಿಸಿ ಎಲ್ಲರನ್ನೂ ಒಗ್ಗೂಡಿಸಿದ್ದರೋ ಅದೇ ರೀತಿ ಇಂದು ಕೂಡ ಬಸವಣ್ಣನವರ ಹೆಸರು, ಭಾವಚಿತ್ರ ಬಳಸುವ ಮಠಾಧೀಶರೆಲ್ಲ ಒಂದಾಗಬೇಕು. ಒಂದೇ ಧರ್ಮಲಾಂಛನದಡಿಯಲ್ಲಿ ಬಾಳುವುದಾಗಿ ವಚನ ನೀಡಬೇಕು.

5) ಲಿಂಗಾಯತ ಬೋರ್ಡ ರಚನೆಯಾಗಬೇಕು

ಯಾವ ರೀತಿ ವಕ್ಫ ಬೋರ್ಡ ಇದೆಯೋ ಅದೇ ರೀತಿ, ಲಿಂಗಾಯತ ಬೋರ್ಡ ರಚನೆಯಾಗುವಂತೆ ಕಾನೂನು ಜಾರಿಯಾಗಬೇಕು. ಲಿಂಗಾಯತ ಸಮಾಜದ ಪರಿಶ್ರಮದ ದೇಣಿಗೆಯಿಂದ ಬೆಳೆದು ನಿಂತಿರುವ ಲಿಂಗಾಯತ ಮಠ-ಮಾನ್ಯಗಳು, ಧಾರ್ಮಿಕ ಕೇಂದ್ರಗಳ ಸ್ವತ್ತುಗಳನ್ನು ನಿಯಂತ್ರಿಸಲು, ಕಾಪಾಡಿಕೊಳ್ಳಲು ಮತ್ತು ಲಿಂಗಾಯತ ಸಮಾಜಕ್ಕೆ ಅವುಗಳ ಸದ್ಭಳಕೆ ಮಾಡುವಂತೆ ನೋಡಿಕೊಳ್ಳಲು ಒಂದು ಸಮರ್ಥ ಲಿಂಗಾಯತ ಮಂಡಳಿಯ ರಚನೆಯಾಗಬೇಕು.

ಈ ಬೋರ್ಡು ಈ ಸಂಸ್ಥೆಗಳ ಆಸ್ತಿ-ಪಾಸ್ತಿಗಳ ಹೊಣೆಗಾರಿಕೆ ಅಷ್ಟೇ ಅಲ್ಲದೇ ಲಿಂಗಾಯತ ಸಮಾಜದ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿ ಕಾರ್ಯಯೋಜನೆಗಳನ್ನು ಹಾಕಿಕೊಂಡು ಅವನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸಶಕ್ತವಾಗಿರಬೇಕು.

ಇದರಲ್ಲಿ ಕೆಲವು ಪ್ರಮುಖ ಅಂಶಗಳನ್ನು ಈ ರೀತಿ ಸೇರಿಸಬಹುದು –

1) ಮಂಡಳಿಯ ಧ್ಯೇಯೋದ್ದೇಶಗಳ, ಕಾರ್ಯ ಚಟುವಟಿಕೆಗಳ ಕುರಿತು ಸ್ಪಷ್ಟ ಚಿತ್ರಣ ಹೊಂದಬೇಕು. ಲಿಂಗಾಯತ ಧರ್ಮದ ಕುರಿತು ಜಾಗೃತಿ ಮೂಡಿಸುವುದು ಬೋರ್ಡನ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿರಬೇಕು.

2) ಬೋರ್ಡನ ಆಡಳಿತ ಮಂಡಳಿಯು ಧಾರ್ಮಿಕ ಮುಖಂಡರು, ಸಾಮಾಜಿಕ ಮುಖಂಡರು ಮತ್ತು ಲಿಂಗಾಯತ ಚಿಂತಕರು ಮತ್ತು ಹೋರಾಟಗಾರರನ್ನು ಒಳಗೊಂಡಿರಬೇಕು.

3) ಲಿಂಗಾಯತರಿಗೆ ಮತ್ತು ಲಿಂಗಾಯತಕ್ಕೆ ಸೇರಲಿಚ್ಛಿಸುವವರಿಗೆ ಲಿಂಗ ದೀಕ್ಷೆ ನೀಡುವ ಕೇಂದ್ರಗಳನ್ನು ತೆರೆಯಬೇಕು. ಲಿಂಗಾಯತಕ್ಕೆ ವಿರುದ್ಧವಾಗಿ ನಡೆದುಕೊಳ್ಳುವವರನ್ನು ಲಿಂಗಾಯತದಿಂದ ಅವರನ್ನು ದೂರವಿಡುವುದು, ಲಿಂಗಾಯತ ಧರ್ಮವನ್ನು ಬಳಸದಂತೆ ನಿರ್ಬಂಧಿಸುವ ವ್ಯವಸ್ಥೆ ಬರಬೇಕು.

4) ಸರ್ಕಾರದಿಂದ ಲಿಂಗಾಯತ ಸಮಾಜಕ್ಕೆ ದೊರಕಬೇಕಾದ ಸೌಲಭ್ಯಗಳನ್ನು ಒದಗಿಸುವುದು, ಅದಕ್ಕಾಗಿ ಬೇಡಿಕೆ/ಹಕ್ಕೊತ್ತಾಯ ಮಾಡುವುದು ಮತ್ತು ಈ ಸೌಲಭ್ಯಗಳ ಕುರಿತು ಸಮಾಜಕ್ಕೆ ಅರಿವು ಮೂಡಿಸುವುದು,

5) ಚುನಾವಣೆಗಳಲ್ಲಿ ಮತ್ತು ಸರ್ಕಾರ ರಚನೆಯಲ್ಲಿ ಲಿಂಗಾಯತ ಸಮಾಜದಲ್ಲಿ ಒಕ್ಕಟ್ಟು ಮೂಡುವಲ್ಲಿ ಮತ್ತು ಸಮಾಜಕ್ಕೆ ಆದ್ಯತೆ ದೊರಕುವಂತೆ ನೋಡಿಕೊಳ್ಳುವಲ್ಲಿ ಸಂಘಟನಾ ಕಾರ್ಯ ಮಾಡುವುದು. ಇತ್ಯಾದಿ, ಇತ್ಯಾದಿ..

Share This Article
3 Comments
  • ಹೌದು, ಮೇಲೆ ತಿಳಿಸಿರುವ ಏದು ಪ್ರಮುಖ ಸಂಗತಿಗಳ ಬಗ್ಗೆ ಎಲ್ಲ ಮಠಾದೀಶರು ಚಚಿ೯ಸಬೇಕು.

  • ಮೊದಲು ಭಕ್ತರು ಬಂದಾಗ ಕಾಲೊಡ್ಡುವುದು, ಪಾದಪೂಜೆ ಮಾಡಿಸಿ ಪಾದೋದಕ ಸೇವಿಸುವಂತೆ ಮಾಡುವುದನ್ನು ಮಠಾಧಿಪತಿಗಳು ತೊರೆಯುವ ಧೈರ್ಯವನ್ನು ತೋರುವರೇ?!

Leave a Reply

Your email address will not be published. Required fields are marked *

ನ್ಯಾಯವಾದಿ, ಲೇಖಕ, ಬೆಳಗಾವಿ, ದೂ-9964546763, 8762492089