ಬಸವ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಬೀಗ, ಅರ್ಧಕ್ಕೆ ನಿಂತಿರುವ ಮ್ಯೂಸಿಯಂ ಕಟ್ಟಡ

ಅಂತಾರಾಷ್ಷ್ರೀಯ ಕೇಂದ್ರವನ್ನು ಮುಕ್ತಾಯಗೊಳಿಸಲು ವಿಫಲವಾಗಿರುವುದು ಬಸವಾದಿ ಶರಣರಿಗೆ ತೋರಿಸಿರುವ ಅಗೌರವ

ಕೂಡಲ ಸಂಗಮ

ಸಾಂಸ್ಕೃತಿಕ ನಾಯಕ ಬಸವಣ್ಣನವರ ತತ್ವಗಳನ್ನು ಜನಮನದಲ್ಲಿ ಬಿತ್ತಲು ವಿಶೇಷ ಕಾರ್ಯಕ್ರಮ ರೂಪಿಸಿ ಬಜೆಟಿನಲ್ಲಿ ಅನುದಾನ ಕೋರಲು ಲಿಂಗಾಯತ ಸಮಾಜದ ಪ್ರಮುಖರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಫೆಬ್ರವರಿ 24 ಭೇಟಿ ಮಾಡುತ್ತಿದ್ದಾರೆ.

ಇದೇ ಉದ್ದೇಶದಿಂದ ಇಲ್ಲಿ ಕೆಲವು ವರ್ಷಗಳ ಹಿಂದೆ ಶುರುವಾಗಿದ್ದ ಎರಡು ಮಹತ್ವದ ಯೋಜನೆಗಳು ಅರ್ಧಕ್ಕೆ ನಿಂತು ದೂಳು ಕುಡಿಯುತ್ತಿವೆ. ಇವುಗಳ ಬಗ್ಗೆಯೂ ಗಮನ ಕೊಟ್ಟು ಹಂತ ಹಂತವಾಗಿಯಾದರೂ ಅವುಗಳ ಉದ್ದೇಶ ಪೂರೈಸುವಂತೆ ನೋಡಿಕೊಳ್ಳಬೇಕು ಎನ್ನುವುದು ರಾಜ್ಯದ ಬಸವ ಅನುಯಾಯಿಗಳ ಆಗ್ರಹವಾಗಿದೆ.

ಕೇಂದ್ರಕ್ಕೆ ಬೀಗ, ಅರ್ಧಕ್ಕೆ ನಿಂತಿರುವ ಕಟ್ಟಡ

ಬಸವಾದಿ ಶರಣರ ವಿಚಾರಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿತ್ತರಿಸಬೇಕೆಂಬ ಕಾರಣಕ್ಕೆ ನಿರ್ಮಿಸಲಾದ ಏಳು ಅಂತಸ್ತಿನ ಬಸವ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಬೀಗ ಬಿದ್ದು ಹಲವು ವರ್ಷಗಳೇ ಗತಿಸಿವೆ.

ಅಕ್ಷರಧಾಮ ಮಾದರಿಯಲ್ಲಿ ಆರಂಭವಾದ ಕೇಂದ್ರದ ಮತ್ತೊಂದು ಮ್ಯೂಸಿಯಂ ಕಟ್ಟಡವೂ ಅರ್ಧಕ್ಕೆ ನಿಂತು ಮೂರು ವರ್ಷಗಳೇ ಕಳೆದಿವೆ.

ಸದ್ಯ ಈ ಎರಡೂ ಬೃಹತ್ ಕಟ್ಟಡಗಳು ವಿಜಯಪುರದ ಬಾರಾ ಕಮಾನಿನಂತಾಗಿವೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಯದೇ ಇರುವುದರಿಂದ ಯೋಜನಾ ವೆಚ್ಚವೂ ಅಧಿಕವಾಗುತ್ತಿದೆ.

ಹಣ ಕೊಡದ ಬಿಜೆಪಿ ಸರಕಾರ

ಬಸವ ಅಂತಾರಾಷ್ಟ್ರೀಯ ಕೇಂದ್ರದ ಯೋಜನೆ ಹಳೆಯದಾಗಿದ್ದು, ಈ ಕೇಂದ್ರದ ಪಕ್ಕದಲ್ಲೇ ದೆಹಲಿ ಅಕ್ಷರಧಾಮ ಮಾದರಿಯಲ್ಲಿ ಮ್ಯೂಸಿಯಂ ನಿರ್ಮಿಸಲು ಸಿದ್ಧರಾಮಯ್ಯ ಸರಕಾರ ೨೦೧೮ರಲ್ಲಿ ೧೩೯ ಕೋಟಿ ಬಿಡುಗಡೆ ಮಾಡಿ ಕಾಮಗಾರಿಗೆ ಚಾಲನೆ ನೀಡಿತ್ತು.

ನಂತರ ಬಂದ ಬಿಜೆಪಿ ಸರಕಾರ ಗಮನ ಹರಿಸದ ಪರಿಣಾಮ ಕಾಮಗಾರಿ ಪೂರ್ಣಗೊಳ್ಳಲಿಲ್ಲ.

ರಾಜ್ಯ ಸರಕಾರ ಬಿಡುಗಡೆ ಮಾಡಿದ ೧೩೯ ಕೋಟಿಯಲ್ಲಿ ಮಂಡಳಿ ಕೇವಲ ಭೌತಿಕ ಕಟ್ಟಡಗಳನ್ನೇ ನಿರ್ಮಿಸಿದೆ. ಮ್ಯೂಸಿಯಂ ಒಳಗೆ ಏನು ಅಳವಡಿಸಬೇಕು ಎಂಬ ಯೋಜನೆ ಇನ್ನೂ ಆಗಿಲ್ಲ.

ಗಮನ ಕೊಡದ ಸಿದ್ದರಾಮಯ್ಯ

ಪುನ: ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗುತ್ತಿದಂತೆ ಬಸವ ಭಕ್ತರು ಬಸವ ಅಂತಾರಾಷ್ಟ್ರೀಯ ಕೇಂದ್ರದ ಕಾಮಗಾರಿ ಮುಕ್ತಾಯಗೊಳ್ಳುವುದು ಎಂಬ ನಂಬಿಕೆಯನ್ನು ಬಸವ ಭಕ್ತರು ಹೊಂದಿದರು.

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಎರಡು ವರ್ಷ ಕಳೆಯಲು ಬಂದರು ಬಸವ ಅಂತಾರಾಷ್ಟ್ರೀಯ ಕೇಂದ್ರದ ಕಡೆ ಗಮನ ಹರಿಸದೆ ಇರುವುದು ಬಸವ ಭಕ್ತರಿಗೆ ನಿರಾಸೆ ಮೂಡಿಸಿದೆ.

ಸಮಿತಿ ಸದಸ್ಯರ ರಾಜೀನಾಮೆ

೨೦೧೮ರಲ್ಲಿ ಮೊದಲ ಹಂತದ ಕಾಮಗಾರಿಗೆ ಬಿಡುಗಡೆಯಾಗಿದ್ದ ೧೩೯ ಕೋಟಿ ಅನುದಾನ ಬಹುತೇಕ ಖರ್ಚಾಗಿದ್ದು, ಮುಕ್ತಾಯಕ್ಕೆ ಹಣದ ಅಗತ್ಯ ಇದೆ.

ಆದರೆ ಮೂಲ ಆಶಯದತ್ತ ಅಧಿಕಾರಿಗಳು ಹೆಜ್ಜೆ ಹಾಕದೇ ಬರೀ ಕಟ್ಟಡ ಕಟ್ಟುವ ಕಡೆಗೆ ತಮ್ಮ ಗಮನ ಕೇಂದ್ರೀಕರಿಸಿ, ಸಮಿತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಇದರಿಂದ ಬೇಸತ್ತ ಸಮಿತಿ ಸದಸ್ಯರು ಸಾಮೂಹಿಕ ರಾಜೀನಾಮೆಯನ್ನು ೨೦೨೨ರಲ್ಲಿ ಸಲ್ಲಿಸಿದ್ದಾರೆ. ಈ ಬಗ್ಗೆ ಹಿಂದಿನ ಬಿಜೆಪಿ ಸರ್ಕಾರ ಸ್ವಲ್ಪವು ಗಮನ ಹರಿಸಲಿಲ್ಲ.

ಕಾಶಪ್ಪನವರ ಸಮಿತಿ

ಶಾಸಕ ವಿಜಯಾನಂದ ಕಾಶಪ್ಪನವರ ಹಿಂದೆ ನಮ್ಮ ಸರ್ಕಾರ ಇದ್ದಾಗಲೇ ಮುಖ್ಯಮಂತ್ರಿಗಳು, ಅಂದಿನ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹಾಗೂ ನಾನು ಸೇರಿಕೊಂಡು ಅಕ್ಷರಧಾಮ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕೆಲಸಕ್ಕೆ ಚಾಲನೆ ನೀಡಿದ್ದೇವು.

ಬಳಿಕ ಬಂದ ಬಿಜೆಪಿ ಸರ್ಕಾರ ಕಾಮಗಾರಿ ಪೂರ್ಣಗೊಳಿಸಲೇ ಇಲ್ಲ. ನಮ್ಮ ಸರ್ಕಾರ ಬಿಡುಗಡೆ ಮಾಡಿದ ಅನುದಾನದಲ್ಲಿ ಕೆಲವು ಭಾಗವನ್ನು ವಾಪಸ್ ಪಡೆದಿತ್ತು.

ಇದೀಗ ನನ್ನ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿ ಹೊಸ ಸಮಿತಿ ರಚಿಸಿದ್ದಾರೆ. ಈ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಒದಗಿಸುವ ಅಭಯವನ್ನು ನೀಡಿದ್ದಾರೆ. ಕೂಡಲಸಂಗಮ ಅಭಿವೃದ್ಧಿ ಮಂಡಳಿ ಕಾಮಗಾರಿ ಮುಕ್ತಾಯಕ್ಕೆ ಇನ್ನೂ ೩೧೦ ಕೋಟಿ ಹಣ ಬೇಕು ಎಂದು ಅಂದಾಜು ಪಟ್ಟಿಯನ್ನು ಸರ್ಕಾರಕ್ಕೆ ನೀಡಿದೆ.

ಎಷ್ಟು ಅನುದಾನ ನೀಡುತ್ತಾರೆ ನೋಡಿಕೊಂಡು ಅಭಿವೃದ್ಧಿ ಕೆಲಸ ಆರಂಭಿಸುತ್ತೇವೆ ಎಂದು ಹೇಳಿದರು.

ಬಸವ ಅಂತಾರಾಷ್ಟ್ರೀಯ ಕೇಂದ್ರವನ್ನು ಕಟ್ಟಡಕ್ಕೆ ಸೀಮಿತಗೊಳಿಸದೇ ಬಸವಾದಿ ಶರಣರ ವಿಚಾರಧಾರೆಗಳು ಬಿತ್ತರಿಸುವ ಮ್ಯೂಸಿಯಂ ಮಾಡುವ ಕಡೆಗೆ ಸರಕಾರ ಗಮನಿಸಬೇಕು. ಇಲ್ಲಿಯವರೆಗೂ ಕಟ್ಟಡ ನಿರ್ಮಿಸಿ ಹಣ ಖರ್ಚು ಮಾಡಿದ್ದಾರೆಯೇ ಹೊರತು ಮ್ಯೂಸಿಯಂ ಕಾರ್ಯ ಆಗಿಲ್ಲ. ಸರಕಾರ ಮ್ಯೂಸಿಯಂನ ರೂಪುರೇಷಗಳನ್ನು ಶೀಘ್ರ ಸಿದ್ದಪಡಿಸಿ, ಅನುಷ್ಠಾನಕ್ಕೆ ತರಬೇಕು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ಹೇಳಿದರು.

ಹಳೆಯ ಯೋಜನೆ

ಬಸವಣ್ಣನವರ ಐಕ್ಯ ಸ್ಥಳ ಕೂಡಲಸಂಗಮವನ್ನು ಅಂತಾರಾಷ್ಟ್ರೀಯ ಕೇಂದ್ರವಾಗಿಸುವ ಉದ್ಧೇಶದಿಂದ ೧೯೯೫ರಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಯಿತು. ೧೯೯೭ರಲ್ಲಿ ಮುಖ್ಯಮಂತ್ರಿಯಾಗಿದ್ದ ಜೆ.ಎಚ್. ಪಟೇಲ ಮತ್ತು ಆಯುಕ್ತರಾಗಿದ್ದ ಎಸ್.ಎಂ. ಜಾಮದಾರ ಅವರ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಕೇವಲ ೪ ವರ್ಷದಲ್ಲಿ ಕೂಡಲಸಂಗಮ ಅಭಿವೃದ್ಧಿಯ ಮಹಾವೇಗ ಕಂಡಿತ್ತು.

ನಂತರ ಬಂದ ಸರಕಾರಗಳ ಉದಾಸೀನತೆ, ನಿರ್ಲಕ್ಷ್ಯತನದಿಂದ ಅಭಿವೃದ್ಧಿಯ ವೇಗಕ್ಕೆ ತಡೆ ಬಿದ್ದಿದ್ದು, ಎಲ್ಲ ಕೆಸಲಗಳು ಅರ್ಧಬರ್ಧವಾಗಿವೆ.

ಕೂಡಲಸಂಗಮ ಕ್ಷೇತ್ರ ಜೆ.ಎಚ್. ಪಟೇಲರ ನಂತರದ ೨೦ ವರ್ಷಗಳ ಕಾಲ ಯಾವುದೇ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ. ನಂತರದ ಅವಧಿಯಲ್ಲಿ ೮ ಮುಖ್ಯ ಮಂತ್ರಿಗಳು ಆಡಳಿತ ಚುಕ್ಕಾಣಿ ಹಿಡಿದರೂ ಕೂಡಲಸಂಗಮದ ಬಸವ ಅಂತಾರಾಷ್ಷ್ರೀಯ ಕೇಂದ್ರವನ್ನು ಮುಕ್ತಾಯಗೊಳಿಸಲು ಆಗದೇ ಇರುವುದು ಬಸವಾದಿ ಶರಣರಿಗೆ ಮಾಡಿದ ಅಗೌರವ, ಮುಖ್ಯಮಂತ್ರಿ ಸಿದ್ದರಾಮಯ್ಯ ಸುಕ್ಷೇತ್ರ ಅಭಿವೃದ್ಧಿಗೆ ದಿಟ್ಟ ಹೆಜ್ಜೆ ಇಡಬೇಕು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

Share This Article
2 Comments
  • ಸ್ಥಳೀಯ ಲಿಂಗವಂತರು ಸೂಕ್ತವಾಗಿ ಗಮನಹರಿಸಬೇಕು.

  • ಬಸವಪರ ಸಂಘಟನೆಗಳ ಕೆಲಸವೇನು? ಬಸವ ಪರ ಸಂಘ, ಸಂಸ್ಥೆಗಳು, ಮಠಗಳ ಕೆಲಸವೇನು? ಒತ್ತಡ ತರುವ ಕಾರ್ಯಕ್ರಮಗಳನ್ನು ರೂಪಿಸಬಾರದೇಕೆ? ಉತ್ತಮ ನಾಯಕತ್ವದ ಕೊರತೆ ಇದೆ.

Leave a Reply

Your email address will not be published. Required fields are marked *