ಸದ್ಯದಲ್ಲೇ ಬರಲಿದೆ ಬಸವ ತತ್ವದ ಗಟ್ಟಿ ದನಿ: ಬಸವ ರೇಡಿಯೋ

ಬಸವ ಮೀಡಿಯಾ
ಬಸವ ಮೀಡಿಯಾ

ಶರಣ ಸಮಾಜಕ್ಕೆ ಸಂಬಂಧಿಸಿದ ಮಹತ್ತರ ಬೆಳವಣಿಗೆಗಳನ್ನು ಸಾಮೂಹಿಕವಾಗಿ ಚರ್ಚಿಸಲು ಬರುತ್ತಿರುವ ವೇದಿಕೆ

ಬೆಂಗಳೂರು

ಬಸವಾದಿ ಶರಣರ ಸಂದೇಶವನ್ನು ಪ್ರಸಾರ ಮಾಡಲು ಸಿದ್ಧವಾಗುತ್ತಿರುವ ‘ಬಸವ ರೇಡಿಯೋ’ ಇನ್ನು ಕೆಲವೇ ದಿನಗಳಲ್ಲಿ ಲೈವ್ ಆಗಲಿದೆ.

ಡಾ. ಹೆಚ್. ಎಂ. ಸೋಮಶೇಖರಪ್ಪ, ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕ, ಮಂಗಳೂರು ವಿಶ್ವವಿದ್ಯಾಲಯ, ಬಸವ ರೇಡಿಯೋದ ಸಂಪಾದಕರಾಗಿರುತ್ತಾರೆ. ಬಸವ ತತ್ವದ ಕಾರ್ಯಕರ್ತರಾದ ಕುಮಾರಣ್ಣ ಪಾಟೀಲ್, ಕೆ ನಾಗರತ್ನ, ಸಿದ್ದೇಶ್ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಾರೆ.

“ಇಂದು ಶರಣ ಸಮಾಜಕ್ಕೆ ಸಂಬಂಧಿಸಿದಂತೆ ಮಹತ್ತರವಾದ ಬೆಳವಣಿಗೆಗಳು ಬಹಳ ತ್ವರಿತವಾಗಿ ಸಂಭವಿಸುತ್ತಿವೆ. ಅವುಗಳನ್ನು ಸಾಮೂಹಿಕವಾಗಿ ಚರ್ಚಿಸಲು ಒಂದು ವೇದಿಕೆ ಅವಶ್ಯವಿದೆ ಎಂದು ಅನಿಸಿದ್ದರಿಂದ ಬಸವ ರೇಡಿಯೋ ಶುರು ಮಾಡುತ್ತಿದ್ದೇವೆ,” ಎಂದು ಸೋಮಶೇಖರಪ್ಪ ಹೇಳಿದರು.

“ಮೊದಲಿಗೆ ಪ್ರಚಲಿತ ವಿದ್ಯಮಾನಗಳ ಮೇಲೆ ಆನ್ಲೈನ್ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ. ಅನುಭವ ಗಳಿಸಿದಂತೆ ಸಂಶೋಧನೆ, ವಚನ ಗಾಯನ, ಶಿಕ್ಷಣ, ಮಕ್ಕಳು, ಮಹಿಳೆಯರು, ಯುವಕರ ಮೇಲೆ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರಯತ್ನಿಸುತ್ತೇವೆ,” ಎಂದು ಹೇಳಿದರು.

ಬಸವ ರೇಡಿಯೋ ಲೋಗೋ

“ಇಂದು ಜಗತ್ತಿನಾದ್ಯಂತ ಪಾಡ್ಕ್ಯಾಸ್ಟ್ ಸೇವೆಗಳು ಬಹಳ ಜನಪ್ರಿಯವಾಗುತ್ತಿವೆ. ಈ ನಿಟ್ಟಿನಲ್ಲಿ ಸಣ್ಣ ಹೆಜ್ಜೆಯಿಟ್ಟು ಬಸವ ರೇಡಿಯೋ ಶುರು ಮಾಡುತ್ತಿದ್ದೇವೆ. ನಿಮ್ಮ ನಿರೀಕ್ಷೆಯೂ ಸಣ್ಣದಾಗಿರಲಿ. ಬಸವ ತತ್ವ ಬಿತ್ತರಿಸುವ ಸ್ವತಂತ್ರ ಮಾಧ್ಯಮವಾಗಿ ಬಸವ ರೇಡಿಯೋ ಬೆಳೆಯುತ್ತದೆ ಎಂಬ ವಿಶ್ವಾಸ ನಮ್ಮ ತಂಡಕ್ಕಿದೆ,” ಎಂದು ಹೇಳಿದರು.

ಕುಮಾರಣ್ಣ ಪಾಟೀಲ್, “ಲಿಂಗಾಯತ ಧರ್ಮ ಚರ್ಚೆಯಲ್ಲಿ ಹುಟ್ಟಿದ ಧರ್ಮ. ನಿರಂತರ ಸಂವಾದ ನಡೆಸಲು ಒಂದು ವೇದಿಕೆಯ ಕೊರತೆಯಿದೆ. ಅದನ್ನು ನಿವಾರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ. ಇದು ಎಲ್ಲರ ಆನ್ಲೈನ್ ಅನುಭವ ಮಂಟಪವಾಗಬೇಕು,” ಎಂದು ಹೇಳಿದರು.

ಬಸವ ರೇಡಿಯೋಗೆ ಬೆಂಬಲ ವ್ಯಾಪಕವಾಗಿ ಹರಿದು ಬರುತ್ತಿದೆ.

“ಬಸವಣ್ಣನವರನ್ನು ವಿರೋಧಿಸುವ ಪಟ್ಟಭದ್ರ ಶಕ್ತಿಗಳು ನಮ್ಮ ಜನರನ್ನು ತಪ್ಪು ದಾರಿಗೆ ಎಳೆಯುತ್ತಿವೆ. ಆದ್ದರಿಂದ ವಿವಿಧ ಮಾಧ್ಯಮಗಳ ಮೂಲಕ ಬಸವ ತತ್ವವನ್ನು ಲಿಂಗಾಯತ ಸಮುದಾಯದಲ್ಲಿ ಬಿತ್ತುವ ಅವಶ್ಯಕತೆಯಿದೆ. ಈ ಕೆಲಸವನ್ನು ಬಸವ ರೇಡಿಯೋ ಪರಿಣಾಮಕಾರಿಯಾಗಿ ಮಾಡಲಿ ಎಂದು ಹಾರೈಸುತ್ತೇನೆ,” ಎಂದು ಎಸ್ ಎಂ ಜಾಮದಾರ್, ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ, ಹೇಳಿದರು.

ಶರಣ ಸಾಹಿತಿ ಟಿ ಆರ್ ಚಂದ್ರಶೇಖರ್ ಅವರು ವಿಶ್ವವನ್ನು ಶಾಂತಿಮಯ, ಪ್ರಗತಿಪರಗೊಳಿಸುವ ಶಕ್ತಿ ಬಸವ ತತ್ವಕ್ಕಿದೆ. ಅದನ್ನು ಜನರಿಗೆ ತಲುಪಿಸಲು ಮಾಧ್ಯಮಗಳನ್ನು, ತಂತ್ರಜ್ಞಾನವನ್ನು ಬಳಸುವುದು ಅನಿವಾರ್ಯ. ಬಸವ ರೇಡಿಯೋದಂತಹ ಪ್ರಯತ್ನಗಳು ಮತ್ತಷ್ಟು ನಡೆಯಬೇಕು ಎಂದರು.

ಉದ್ಯಮಿ ಶಾಂತಕುಮಾರ್ ಹರ್ಲಾಪುರ ಅವರು ಬಸವ ರೇಡಿಯೋ ವ್ಯವಸ್ಥಿತವಾಗಿ, ಕ್ರಮಬದ್ಧವಾಗಿ ಬೆಳೆಯಬೇಕು. ಬೇರೆ ಬೇರೆ ಕಾರ್ಯಕ್ರಮಗಳು ಬೇರೆ ಬೇರೆ ವೀಕ್ಷಕರ ಬಳಗ ಸೃಷ್ಟಿಸಿಕೊಂಡು, ಅವರಿಗೊಂದು ಪರಿಣಾಮಕಾರಿಯಾದ ವೇದಿಕೆಯಾದರೆ ಬಸವ ರೇಡಿಯೋ ಸಮಾಜದ ದೊಡ್ಡ ಶಕ್ತಿಯಾಗುವುದರಲ್ಲಿ ಸಂದೇಹವಿಲ್ಲ ಎಂದರು.

ವೈರಲ್ ಆಗಿರುವ ಬಸವ ರೇಡಿಯೋ ಪೋಸ್ಟರುಗಳು

Share This Article
11 Comments
  • ಸೋಮಶೇಖರಪ್ಪ ಮತ್ತು ತಂಡಕ್ಕೆ ಶುಭ ಹಾರೈಕೆಗಳು ನಿರ್ಬೀತಿಯಿಂದ ನಿಷ್ಪಕ್ಷಪಾತವಾಗಿ ಕೆಲಸ ಮಾಡಿ

  • ಬಹಳ ಸಂತೋಷಕರ ವಿಷಯ. ಬಸವ ಮೀಡಿಯಾ ನಂತರ ಶರಣ ವಾಣಿ ರೇಡಿಯೋ ಬರುತ್ತಿರುವುದು ತುಂಬ ಖುಷಿ ತಂದಿದೆ

  • ಶರಣರ ಮಹತ್ತರವಾದ ರೇಡಿಯೋ ಕಾರ್ಯಕ್ರಮ ಯಶಸ್ವಿಯಾಗಿ ಕೈಗೊಡಲಿ,ಬಸವಾದಿ ಶರಣರ ಆದರ್ಶ ತತ್ವಗಳು ಎಲ್ಲಾ ಕಡೆ ಪಸರಿಸಲಿ ಎಂದು ಆಶಿಸುವೆ.

  • ನಮ್ಮ ಜನರು ತಾವೇ ಸ್ವತಃ ವೈದಿಕರಿಗೆ ಶರಣಾಗಿ, ಅವರನ್ನು ಹೊಗಳಲು, ಹೊತ್ತು ತಿರುಗಾಡಲು ಪ್ರಾರಂಭಿಸಿದ್ದಾರೆ. ಇಂಥಾ ಸಮಯದಲ್ಲಿ ಬಸವ ಕಿರಣಗಳು ಅಲ್ಲಲ್ಲಿ ಕಾಣುತ್ತಿರುವುದು ತುಂಬಾ ಆಶಾದಾಯಕವಾಗಿ ಬರುತ್ತಿವೆ. ತಾವು ಪ್ರಾರಂಭಿಸಿರುವ ‘ಶರಣ ವಾಣಿ ‘ ಚೆನ್ನಾಗಿ ಮೂಡಿಬರಲಿ ಮತ್ತು ವೈಧಿಕ ಕತ್ತಲು ಮರೆಯಾಗಲಿ ಎಂದು ಹಾರೈಸುತ್ತೇನೆ.

  • ಬಸವ ರೇಡಿಯೋ ಬರುತ್ತಿರುವುದು ಸಂತೋಷಕರ
    ವಿಷಯ ಇದರ ಜವಾಬ್ದಾರಿ ಹೊತ್ತಿರುವ ಡಾ.ಸೋಮಶೇಖರಪ್ಪಾ ಮತ್ತು ಅವರ ತಂಡಕ್ಕೆ
    ಯಶಸ್ಸು ಸಿಗಲಿ ಬಸವ ತತ್ವ ಎಲ್ಲಾ ರಂಗಗಳಲ್ಲೂ
    ಪ್ರಸರಿಸಲಿ ಎಂದು ಆಶಿಸುತ್ತೇನೆ

  • ಸಧ್ಯಕ್ಕೆ ಬಹಳ ಅವಶ್ಯಕತೆ ಇರುವ ಈ ಬಸವ ರೇಡಿಯೋ ರೂಪು ಗೊಳ್ಳುತ್ತಿರುವದು ಸಂತೋಷದ ಸಂಗತಿ.

    • ನೀಲಕಂಠ ಗೌಡ ಪಾಟೀಲ ,ಗಡ್ಡಿಕರವಿನಕೊಪ್ಪ, ಬೈಲಹೊಂಗಲ ತಾಲೂಕ್. says:

      ಸಂತೋಷದ ವಿಷಯ ಬಸವ ತತ್ವ ಜಗತ್ತಿನ ಎಲ್ಲಾ ಕಿವಿಗಳನ್ನು ಮುಟ್ಟುವಂತಾಗಲಿ ಬೆಳವಣಿಗೆಯನ್ನು ನೋಡಿ ತುಂಬಾ ಖುಷಿ ಆಯಿತು.
      ಶರಣು ಶರಣಾರ್ಥಿಗಳು 🙏🙏🙏

  • ನೀಲಕಂಠ ಗೌಡ ಪಾಟೀಲ ,ಗಡ್ಡಿಕರವಿನಕೊಪ್ಪ, ಬೈಲಹೊಂಗಲ ತಾಲೂಕ್. says:

    ಸಂತೋಷದ ವಿಷಯ ಬಸವ ತತ್ವ ಜಗತ್ತಿನಲ್ಲಿ ಎಲ್ಲಾ ಕಿವಿಗಳನ್ನು ಮುಟ್ಟುವಂತಾಗಲಿ. ಬೆಳವಣಿಗೆಯನ್ನು ನೋಡಿ ತುಂಬಾ ಖುಷಿ ಆಯಿತು.
    ಶರಣು ಶರಣಾರ್ಥಿಗಳು 🙏🙏🙏

Leave a Reply

Your email address will not be published. Required fields are marked *