ಬಸವೇಶ್ವರ ಪ್ರತಿಮೆ ಅವ್ಯವಹಾರ ಆರೋಪ: ಜಿಲ್ಲಾಧಿಕಾರಿಯಿಂದ ಉನ್ನತ ತನಿಖೆಗೆ ಮನವಿ

ಬಸವ ಮೀಡಿಯಾ
ಬಸವ ಮೀಡಿಯಾ

‘ಪ್ರತಿಮೆ ನಿರ್ಮಾಣಕ್ಕೆ 12 ವರ್ಷಗಳಲ್ಲಿ ನಡೆದ ಕಾಮಗಾರಿಯಲ್ಲಿ ಪ್ರಗತಿಯಿಲ್ಲ. ಮುಂದಿನ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಕೂಡ ವಿರಳ’

ಚಿತ್ರದುರ್ಗ

ಮುರುಘಾ ಮಠದ ಆವರಣದಲ್ಲಿ ನಿರ್ಮಾಣವಾಗಬೇಕಿರುವ 325 ಅಡಿಯ ಬೃಹತ್‌ ಬಸವೇಶ್ವರರ ಪ್ರತಿಮೆಗೆ ಬಿಡುಗಡೆಯಾಗಿರುವ ಅನುಧಾನದ ಬಳಕೆಯ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕೆಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಈಗಾಗಲೇ ಜಿಲ್ಲಾಧಿಕಾರಿಗಳು ನೇಮಿಸಿದ್ದ ಜಿಲ್ಲಾ ಮಟ್ಟದ ಸಮಿತಿ ವರದಿ ನೀಡಿದೆ.

ಒಂದು ದಶಕದ ಹಿಂದೆ ಶುರುವಾದ ಪುತ್ಥಳಿ ನಿರ್ಮಾಣದ ಯೋಜನೆಗೆ ರೂ.282 ಕೋಟಿ ರೂ. ವೆಚ್ಚವಾಗುವ ಅಂದಾಜಿದೆ. ರಾಜ್ಯ ಸರ್ಕಾರ ಇಲ್ಲಿಯವರೆಗೆ ರೂ.35.00 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಈವರೆಗೆ 26 ಕೋಟಿ 35 ಲಕ್ಷ 33 ಸಾವಿರ 503 ರೂ. ಬಳಕೆ ಆಗಿದೆ.

“ಉಳಿದ ಹಣದ ಬಗ್ಗೆ ಬ್ಯಾಂಕ್‌ ಪಾಸ್‌ ಪುಸ್ತಕ ಸಮೇತ ದಾಖಲೆ ಒದಗಿಸುವಂತೆ ಮಠದ ಆಡಳಿತ ಮಂಡಳಿಗೆ ಕೋರಲಾಗಿತ್ತು. ಆದರೆ ಮಠದವರು ಯಾವುದೇ ಮಾಹಿತಿ ನೀಡಿಲ್ಲ, ಹೀಗಾಗಿ ಉನ್ನತ ಮಟ್ಟದ ತನಿಖೆ ನಡೆಯಬೇಕು,” ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಜಿಲ್ಲಾಧಿಕಾರಿ ಟಿ ವೆಂಕಟೇಶ್

ಬಿಡುಗಡೆಯಾಗಿರುವ ಹಣದ ಬಳಕೆಯಲ್ಲೂ ಸ್ಪಷ್ಟತೆ ಇಲ್ಲ ಎಂಬ ಆರೋಪ ಕೇಳಿ ಬಂದಿದೆ.

ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಬಿಡುಗಡೆ ಮಾಡಿದ್ದ ₹ 35 ಕೋಟಿ ಹಣ ದುರ್ಬಳಕೆಯಾಗಿದೆ ಎಂದು ಆರೊಪಿಸಿ ಕಾಂಗ್ರೆಸ್‌ ಮುಖಂಡ ಎಚ್‌.ಏಕಾಂತಯ್ಯ ಜಿಲ್ಲಾಧಿಕಾರಿಗೆ 2023ರಲ್ಲಿ ದೂರು ನೀಡಿದ್ದರು.

ದೂರು ಆದರಿಸಿ ಜಿಲ್ಲಾಧಿಕಾರಿಗಳು ರಚಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನೊಳಗೊಂಡಿದ್ದ ತನಿಖಾ ಸಮಿತಿ ಮೇ 7 2024ರಂದು ತನ್ನ ವರದಿ ನೀಡಿತ್ತು.

‘ಸರ್ಕಾರ ನೀಡಿದ ಅನುದಾನದಲ್ಲಿ ಈಗಾಗಲೇ ₹ 24.5 ಕೋಟಿ ಅನುದಾನ ವೆಚ್ಚವಾಗಿರುವುದಾಗಿ ಮಠದಿಂದ ಮಾಹಿತಿ ನೀಡಲಾಗಿದೆ. ಆದರೆ, ಖರ್ಚಿನ ಬಗ್ಗೆ ನಂಬಲರ್ಹ ದಾಖಲೆಗಳು ಲಭ್ಯವಾಗಿಲ್ಲ. ಮಠದ ಬ್ಯಾಂಕ್‌ ಖಾತೆಯಿಂದ ಹಲವು ಸಂಸ್ಥೆ ಮತ್ತು ವ್ಯಕ್ತಿಗಳಿಗೆ ಹಣ ಪಾವತಿಯಾಗಿದೆ. ಈ ವೆಚ್ಚ ಯೋಜನೆಗೆ ಸಂಬಂಧಿಸಿದ್ದೇ ಎಂಬುದು ಖಚಿತವಾಗಿಲ್ಲ’ ಎಂದು ಸಮಿತಿ ಹೇಳಿತ್ತು.

‘ಪ್ರತಿಮೆ ನಿರ್ಮಾಣಕ್ಕೆ ಸರ್ಕಾರಿ ಅನುದಾನ ಹೊರತುಪಡಿಸಿ ಉಳಿದ ₹ 240.2 ಕೋಟಿ ಹಣದ ಕ್ರೋಡೀಕರಣಕ್ಕೂ ಮಠದ ಬಳಿ ಸರಿಯಾದ ಯೋಜನೆಗಳಿಲ್ಲ. ಸಂಪನ್ಮೂಲ ಸಂಗ್ರಹಕ್ಕೆ ಮಠ ಪ್ರಯತ್ನಿಸದೇ ಇರುವುದರಿಂದ ಸರ್ಕಾರದ ಅನುದಾನ ಫಲಪ್ರದವಾಗಿಲ್ಲ ಎಂದೇ ಪರಿಗಣಿಸಬಹುದಾಗಿದೆ. ದಶಕದಿಂದ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆ’ ಎಂಬ ಅಸಮಾಧಾನವನ್ನು ಸಮಿತಿ ವರದಿಯಲ್ಲಿ ವ್ಯಕ್ತಪಡಿಸಿತ್ತು.

‘ಬಸವೇಶ್ವರ ಪ್ರತಿಮೆ ನಿರ್ಮಾಣಕ್ಕೆ 12 ವರ್ಷಗಳಲ್ಲಿ ನಡೆದ ಕಾಮಗಾರಿ ಪ್ರಗತಿ ಸಾಧಿಸಿದ್ದು ತೀರಾ ಕಡಿಮೆ. ಮುಂದಿನ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಕೂಡ ವಿರಳ’ ಎಂಬ ಅನುಮಾನ ಸಮಿತಿಯ ವರದಿಯಲ್ಲಿ ವ್ಯಕ್ತವಾಗಿತ್ತು.

‘ಬಸವೇಶ್ವರ ಪ್ರತಿಮೆ ನಿರ್ಮಾಣ ಕಾರ್ಯವನ್ನು ₹ 280.2 ಕೋಟಿ ಯೋಜನಾ ವೆಚ್ಚದಲ್ಲಿ ಮುರುಘಾ ಮಠ ಕೈಗೆತ್ತಿಕೊಂಡಿದೆ. ಪೀಠಕ್ಕೆ ₹ 90.2 ಕೋಟಿ ಹಾಗೂ ಪ್ರತಿಮೆಗೆ ₹ 190 ಕೋಟಿ ವಿನಿಯೋಗಿಸಲು ಅಂದಾಜು ಪಟ್ಟಿ ಸಿದ್ಧಪಡಿಸಿದೆ.

ರಾಜ್ಯ ಸರ್ಕಾರ ಪ್ರತಿಮೆಗೆ 2011ರಿಂದ 2023ರವರೆಗೆ ₹ 40 ಕೋಟಿ ಅನುದಾನ ನೀಡಿದೆ. ಇದರಲ್ಲಿ ₹ 35 ಕೋಟಿಯನ್ನು ಮುರುಘಾ ಮಠಕ್ಕೆ ಹಸ್ತಾಂತರಿಸಲಾಗಿದ್ದು, ₹ 5 ಕೋಟಿ ಪಂಚಾಯತ್‌ರಾಜ್‌ ಎಂಜಿನಿಯರಿಂಗ್ ವಿಭಾಗದಲ್ಲಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಪ್ರತಿಮೆ ಯೋಜನೆಯ ರೂವಾರಿ ಶಿವಮೂರ್ತಿ ಮುರುಘಾ ಶರಣರಿಗೆ ಜಗತ್ತಿನಲ್ಲೇ ಅತೀ ಎತ್ತರದ ಬಸವ ಪುತ್ಥಳಿ ನಿರ್ಮಾಣ ಯೋಜನೆಯಿತ್ತು. ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಆಗುತ್ತದೆ ಜನರಿಗೆ ಉದ್ಯೋಗ ಸಿಗಲಿದೆ ಎಂದು ಹೇಳಿ ಸರಕಾರದ ಬೆಂಬಲ ಪಡೆದುಕೊಂಡಿದ್ದರು.

Share This Article
1 Comment
  • ಪ್ರತಿಮೆ ಹಣವನ್ನು ನುಂಗಿದರೆ ಹೇಗೆ ಇದನ್ನು ನಿವ೯ಹಣೆ ಮಾಡುವವರು ಉತ್ತರ ನೀಡಬೇಕು ಸಾವ೯ಜನಿಕರ ಹಣ ಮೌಲ್ಯ ಗೊತ್ತಿರಬೇಕು.

Leave a Reply

Your email address will not be published. Required fields are marked *