ಕೊಪ್ಪಳದಲ್ಲಿ ಸಂಭ್ರಮದ ಮಡಿವಾಳ ಮಾಚಿದೇವರ ಜಯಂತಿ

ಬಸವ ಮೀಡಿಯಾ
ಬಸವ ಮೀಡಿಯಾ

ವಿಶಿಷ್ಟ ವಚನಗಳ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡಿ ಕಾಯಕ ಯೋಗಿ ಎಂದು ಮಡಿವಾಳ ಮಾಚಿದೇವರು ಎನಿಸಿಕೊಂಡರು

ಕೊಪ್ಪಳ

ಮಡಿವಾಳ ಸಮಾಜವು ಉನ್ನತಮಟ್ಟದ ಸ್ಥಾನ ಸಾಧಿಸಲು ಶರಣ ಮಡಿವಾಳ ಮಾಚಿದೇವರು ಹೇಳಿಕೊಟ್ಟಿರುವ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ ಪಟೇಲ್ ಹೇಳಿದರು.

ಅವರು ಬುಧವಾರ ಕೊಪ್ಪಳ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಶರಣ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಡಿವಾಳ ಮಾಚಿದೇವ ಅವರು 12ನೇ ಶತಮಾನದಲ್ಲಿ ಬಿಜಾಪುರ ಜಿಲೆಯ ಸಿಂದಗಿ ತಾಲೂಕಿನ ದೇವರ ಹಿಪ್ಪರಗಿಯಲ್ಲಿ, ಪರುವತಯ್ಯ ಮತ್ತು ಸುಜ್ಞಾನವ್ವ ದಂಪತಿಗಳಿಗೆ ಜನಿಸಿದರು. ಮಡಿವಾಳ ಮಾಚಿದೇವ ಕನ್ನಡದ ಶಿವಶರಣರಲ್ಲಿಯೆ ಅತ್ಯಂತ ಹಿರಿಯರು. ಬಸವಣ್ಣನವರು ಕಲ್ಯಾಣದಲ್ಲಿ ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಅತಿ ಮಹತ್ವದ್ದು. ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಬರುವವರಿಗೆ ಪರೀಕ್ಷಿಸಿ, ಸ್ವಾಗತಿಸುವ ಕೆಲಸ ಅವರದಾಗಿತ್ತು.

ಅವರು ಕೇವಲ ಬಟ್ಟೆಯ ಮೇಲಿನ ಮೈಲಿಗೆಯನ್ನ ತೊಳೆಯದೇ, ಅದ್ಭುತ ವಚನಗಳ ಮೂಲಕ ಸಮಾಜದ ಮನಸ್ಸಿಗೆ ಅಂಟಿಕೊಂಡಿರುವ ಕೊಳೆಯನ್ನ ತೊಳೆಯುವ ಕಾಯಕ ಮಾಡಿದರು. ಅವರು ರಚಿಸಿರುವ 300 ವಚನಗಳು ದೊರಕಿವೆ ಎಂದರು.

ಮಡಿವಾಳ ಸಮಾಜದವರು ಎಲ್ಲಾ ಸಮಾಜದ ಭಾಂಧವರೊಂದಿಗೆ ಉತ್ತಮ ಸಂಬಂಧದೊಂದಿಗೆ ಇತರರ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಎಲ್ಲರೂ ಆರ್ಥಿಕವಾಗಿ ಸಬಲರಾಗಬೇಕಾದರೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು.

ನಗರಸಭೆ ವತಿಯಿಂದ ತಮ್ಮ ಯಾವುದೇ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಳ ಕುರಿತು ಮನವಿ ಇದ್ದಲ್ಲಿ ನಾನು ಅದನ್ನ ಸ್ವೀಕರಿಸಿ ಅನುದಾನವನ್ನು ಬಿಡುಗಡೆ ಮಾಡುತ್ತೆನೆ. ತಮಗೆಲ್ಲರಿಗೂ ಮಡಿವಾಳ ಮಾಚಿದೇವ ಜಯಂತಿ ಶುಭಾಶಯಗಳು ಎಂದು ಹೇಳಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ ಚಿತ್ರದುರ್ಗ ಸಂಸ್ಥಾನ ಮಠದ ಡಾ. ಬಸವ ಮಾಚಿದೇವ ಸ್ವಾಮಿಜಿ ಅವರು ಮಾತನಾಡಿ, ಕಾಯಕ ಮತ್ತು ವಿಶಿಷ್ಟ ವಚನಗಳ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡುವುದರ ಮೂಲಕ ಕಾಯಕ ಯೋಗಿ ಎನಿಸಿಕೊಂಡವರು ಶ್ರೀ ಮಡಿವಾಳ ಮಾಚಿದೇವರು. ಅವರ ಬದುಕಿನ ಚಿಂತನೆಗಳನ್ನು ನಾವು ತಿಳಿದುಕೊಳ್ಳಬೇಕು ಮತ್ತು ಇತರರಿಗೂ ತಿಳಿಸಬೇಕು.

ಮಡಿವಾಳ ಮಾಚಿದೇವ ಅವರು ತಮ್ಮ ಕಾಯಕ ಮತ್ತು ವಚನಗಳ ಮೂಲಕ, ಸಮಸ್ತ ಮಾನವ ಕುಲಕ್ಕೆ ಆದರ್ಶವಾಗಿದ್ದಾರೆ. ಅದಕ್ಕೆ ಒಂದು ನಿದರ್ಶನ ಎಂದರೆ ಇವತ್ತು ಮೆರವಣಿಗೆ ಸಮಯದಲ್ಲಿ ಮುಸ್ಲಿಂ ಸಮುದಾಯದ ಯುವಕರು, ಕುಂಬ ಹೊತ್ತ ಹೆಣ್ಣು ಮಕ್ಕಳಿಗೆ ನೀರು ಮತ್ತು ಮಜ್ಜಿಗೆ ಕೊಡುತ್ತಿರುವ ದೃಶ್ಯ ಸಾಕಲ್ಲವೆ. ಮಡಿವಾಳ ಮಾಚಿದೇವರ ತತ್ವ ವಿಶ್ವಕ್ಕೆ ಸಾರುವಂತದ್ದು ಎಂದರು.

ಅನೇಕ ಶರಣರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಬೆಳಕನ್ನು ನೀಡಿದ್ದಾರೆ. ಅಂತಹ ಮಹನೀಯರುಗಳಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ವಿಶಿಷ್ಟ ವಚನಕಾರರಾಗಿ ರೂಪುಗೊಂಡವರು ಮಹಾನ್ ಶರಣ ಮಡಿವಾಳ ಮಾಚಿದೇವರು. ಜಯಂತಿ ಆಚರಣೆಯ ಜೊತೆಗೆ, ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಯಂತಿ ಆಚರಣೆಯಿಂದ ನಮ್ಮ ಜೀವನ ಶೈಲಿಯನ್ನು ಬದಾಲಿಸಿಕೋಳ್ಳುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.

ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನ ಸಹಾಯಕ ಪ್ರಾಧ್ಯಾಪ ಡಾ.ನವೀನಕುಮಾರ್ ಬಿ. ಅವರು ಮಡಿವಾಳ ಮಾಚಿದೇವರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಮಡಿವಾಳ ಸಮಾಜದ ಪ್ರಮುಖಕರಾದ ಯೋಗೇಶ ಮಡಿವಾಳರ ಹಿಟ್ನಾಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಕೊಪ್ಪಳ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರಪಾಶ ಪಲ್ಟನ್, ನಗರ ಸಭೆ ಸದಸ್ಯರಾದ ಅಜೀಮುದ್ದಿನ್ ಅತ್ತಾರ, ಅರುಣ ಶೆಟ್ಟಿ, ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ ಮೈನಳ್ಳಿ, ಉದ್ಯಮಿ ಸೋಮಶೇಖರ್ ಹಿಟ್ನಾಳ್, ಸಲೀಮ ಅಳವಂಡಿ ಹಾಗೂ ಮಡಿವಾಳ ಸಮಾಜದ ಮುಖಂಡರಾದ ಕೃಷ್ಣ ಎಸ್, ಎಮ್.ಕೆ.ಹನುಮಂತಪ್ಪ, ಶಂಕ್ರಪ್ಪ ಹಾಲ್ಕೆರಿ, ರಾಮಣ್ಣ ಮಡಿವಾಳರ, ಬಸವರಾಜ ಬೆಳಗಲಿ, ದುರಗೇಶ ಮಡಿವಾಳರ, ಹುಲಗಪ್ಪ ಜಿ. ಮಡಿವಾಳರ, ಡಾ. ಸಂಗಮೇಶ ಕಲಹಾಳ, ಮಂಜುಳಾ ಮಲ್ಲಿಕಾರ್ಜುನ ಮಡಿವಾಳರ, ಕನಕಪ್ಪ ಹೊನ್ನಪ್ಪ ಮಡಿವಾಳರ, ಶಂಕ್ರಪ್ಪ ಮಡಿವಾಳರ, ಯಮನೂರಪ್ಪ ಬುಡ್ಡಪ್ಪ ಮಡಿವಾಳರ ಹಾಗೂ ಮತ್ತಿತರರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಅದ್ದೂರಿ ಮೇರವಣಿಗೆ

ಜಯಂತಿ ನಿಮಿತ್ತ ಶರಣು ಮಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆಗೆ ಕೊಪ್ಪಳ ತಹಶೀಲ್ದಾರ ವಿಠ್ಠಲ ಚೌಗಲಾ ಅವರು ಚಾಲನೆ ನೀಡಿದರು.

ಮೆರವಣಿಗೆಯು ನಗರದ ಕೋಟೆ ರಸ್ತೆಯ ಶ್ರೀ ಅಕ್ಕಮಹಾದೇವಿ ದೇವಾಲಯದಿಂದ ಪ್ರಾರಂಭಗೊಂಡು, ಗಡಿಯಾರ ಕಂಬ, ಜವಾಹರ ರಸ್ತೆ ಮೂಲಕ ಅಶೋಕ ಸರ್ಕಲ್ ಬಳಿಯ ಸಾಹಿತ್ಯ ಭವನದವರೆಗೆ ಅದ್ದೂರಿಯಾಗಿ ನಡೆಯಿತು. ಈ ಮೆರವಣಿಗೆಯಲ್ಲಿ ಮಹಿಳೆಯರು ತಲೆಯ ಮೇಲೆ ಕುಂಭ ಹೊತ್ತು ಸರತಿ ಸಾಲಿನಲ್ಲಿ ನಡೆಯುತ್ತಿರುವುದು ವಿಶೇಷವಾಗಿತ್ತು. ಮಡಿವಾಳ ಸಮಾಜದವರು ಸೇರಿದಂತೆ ಹಲವಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IxxC2m7AXyW84KPf73t5iL

Share This Article
Leave a comment

Leave a Reply

Your email address will not be published. Required fields are marked *