ಬಾಗಲಕೋಟೆ
ಚಿನ್ನ ಕಳ್ಳಸಾಗಾಣಿಕೆಯ ಆರೋಪದ ಮೇಲೆ ಬಂಧನವಾಗಿರುವ ನಟಿ ರನ್ಯಾರಾವ್ ಗೆ ಮಂಜೂರಾಗಿದ್ದ ಕೆಐಎಡಿಬಿ ಜಮೀನಿನ ಬಗ್ಗೆ ಮುರುಗೇಶ ನಿರಾಣಿ ಸ್ಪಷ್ಟನೆ ನೀಡಿದ್ದಾರೆ.
‘ನಾನು ಕೈಗಾರಿಕಾ ಸಚಿವನಾಗಿದ್ದ ಅವಧಿಯಲ್ಲಿ ಕಾನೂನು ಪ್ರಕಾರ, ಜಮೀನು ಮಂಜೂರು ಮಾಡಲಾಗಿತ್ತು. ನನ್ನಿಂದ ಅಥವಾ ಅಧಿಕಾರಿಗಳಿಂದ ಯಾವುದೇ ಲೋಪವಾಗಿಲ್ಲ’ ಎಂದು ಅವರು ಮಾಜಿ ಸಚಿವ ಮುರುಗೇಶ ನಿರಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ರನ್ಯಾ ರಾವ್ ಅವರು 2022ರಲ್ಲಿ 12 ಎಕರೆ ಜಮೀನಿಗಾಗಿ ಮನವಿ ಸಲ್ಲಿಸಿದ್ದರು. ತುಮಕೂರು ಜಿಲ್ಲೆ ಶಿರಾ ಕೈಗಾರಿಕಾ ಪ್ರದೇಶದಲ್ಲಿನ ಜಮೀನಿನಲ್ಲಿ ₹138 ಕೋಟಿ ವೆಚ್ಚದ ಕಬ್ಬಿಣದ ಟಿಎಂಟಿ ಬಾರ್ ಮತ್ತು ಕಬ್ಬಿಣ ಉತ್ಪನ್ನ ಉತ್ಪಾದಿಸುವ ಕಾರ್ಖಾನೆ ಆರಂಭಿಸಲಾಗುವುದು. 160 ಜನರಿಗೆ ಉದ್ಯೋಗ ಸಿಗಲಿದೆಯೆಂದು ತಿಳಿಸಿದ್ದರು. 30 ಅಧಿಕಾರಿಗಳ ತಂಡವು ಸಾಧಕ–ಬಾಧಕ ಅಂಶಗಳನ್ನು ಚರ್ಚಿಸಿ, ಜಮೀನು ಮಂಜೂರು ಮಾಡಿತ್ತು’ ಎಂದು ಅವರು ತಿಳಿಸಿದ್ದಾರೆ.
‘ನಟಿ ರನ್ಯಾರಾವ್ ಕಂಪನಿಗೆ ಮಂಜೂರು ಮಾಡಿದ್ದ ಜಮೀನಿಗೆ ಹಣ ಪಾವತಿಸದ ಕಾರಣ ಜಮೀನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವಶದಲ್ಲಿದೆ’ ಎಂದು ತಿಳಿಸಿದ್ದಾರೆ.