ಕುಷ್ಟಗಿ ಬಸವ ಭವನ ಕಾಂಪೌಂಡ್ ಮರುನಿರ್ಮಿಸಲು ಒತ್ತಾಯ

ಬಸವ ಮೀಡಿಯಾ
ಬಸವ ಮೀಡಿಯಾ

ಕುಷ್ಟಗಿ

ಪುರಸಭೆಯಿಂದ ಏಕಾಏಕಿ ತೆರವುಗೊಳಿಸಿದ ಇಲ್ಲಿನ ಬಸವ ಭವನದ ಕಾಂಪೌಂಡ್ ಅನ್ನು ಮರುನಿರ್ಮಿಸುವಂತೆ ಒತ್ತಾಯಿಸಿ ಬಸವ ಸಮಿತಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ಪ್ರಮುಖರು ಒತ್ತಾಯಿಸಿದ್ದಾರೆ.

ಪುರಸಭೆ ಕಚೇರಿಯಲ್ಲಿ ಮಂಗಳವಾರ ಬಸವ ಸಮಿತಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ಪ್ರಮುಖರು ಸಮಾವೇಶಗೊಂಡು, ಪುರಸಭೆ ಅಧ್ಯಕ್ಷರಾದ ಮಹಾಂತೇಶ ಕಲಭಾವಿ ಅವರಿಗೆ ಮನವಿ ಪತ್ರ ಸಲ್ಲಿಸಿ ಬಸವ ಭವನದ ಕಾಪೌಂಡ್ ಅನ್ನು ಮರುನಿರ್ಮಿಸಲು ಕೋರಿದರು.

ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಟಿ.ಬಸವರಾಜ ಅವರು ಮಾತನಾಡಿ, ಬಸವ ಭವನದ ಪೂರ್ವ ಭಾಗದ ರಸ್ತೆ ಅಭಿವೃದ್ಧಿ ನೆಪದಲ್ಲಿ ಪುರಸಭೆಯಿಂದ ಮೂರು ವರ್ಷಗಳ ಹಿಂದೆ ರಸ್ತೆ ಅಭಿವೃದ್ಧಿ ಕಾಮಗಾರಿ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ, ಅಧಿಕಾರಿಗಳ ಸಮ್ಮುಖದಲ್ಲಿ ಬಸವ ಸಮಿತಿಯ ಗಮನಕ್ಕೆ ತರದೆ ಕಾಂಪೌಂಡ್ ಅನ್ನು ತೆರವುಗೊಳಿಸಿದ್ದಾರೆ. ಜೊತೆಗೆ ಕಾಂಪೌಂಡ್ ಹೊಂದಿಕೊಂಡು ನಿರ್ಮಿಸಿದ್ದ ಶೌಚಗೃಹವನ್ನು ಸಹ ತೆರವುಗೊಳಿಸಿದ್ದಾರೆ. ಇದರಿಂದ ಕಾಂಪೌಂಡ್ ಇರದೇ ಬಸವ ಭವನದ ಆವರಣ ಅಕ್ರಮ ಚಟುವಟಿಕೆಗಳ ತಾಣವಾಗಿ ಮಲೀನಗೊಳ್ಳುತ್ತಿದೆ.

ಈ ಬಗ್ಗೆ ಈ ಹಿಂದೆ ಪುರಸಭೆಯ ಅಧ್ಯಕ್ಷರು, ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಆಗ ಭರವಸೆ ಸಿಕ್ಕಿತ್ತು, ಆದರೆ, ಬೇಡಿಕೆ ಈಡೇರಲಿಲ್ಲ. ಹೀಗಾಗಿ ಬಸವ ಭವನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಬರುವ ನೂರಾರು ವಯೋವೃದ್ಧರು, ಮಹಿಳೆಯರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ತೆರವುಗೊಳಿಸಿದ್ದ ಬಸವ ಭವನದ ಪೂರ್ವ ಭಾಗದ ಕಾಂಪೌಂಡ್ ಹಾಗೂ ಶೌಚಗೃಹವನ್ನು ಮರುನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.

ಬಳಿಕ ಪುರಸಭೆ ಅಧ್ಯಕ್ಷರು ಪ್ರತಿಕ್ರಿಯಿಸಿ, ಇದೇ ವಾರದೊಳಗೆ ನಡೆಯಲಿರುವ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಬಸವ ಭವನದ ಕಾಂಪೌಂಡ್ ನಿರ್ಮಾಣದ ಬೇಡಿಕೆ ಕುರಿತು ಚರ್ಚಿಸಿ ಪರವಾನಗಿ ಪಡೆಯಲಾಗುವುದು. ಬಳಿಕ ಅಗತ್ಯ ಅನುದಾನದೊಂದಿಗೆ ಶೀಘ್ರದಲ್ಲೇ ಕಾಂಪೌಂಡ್ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಪುರಸಭೆ ಸದಸ್ಯರಾದ ಬಸವರಾಜ ಬುಡಕುಂಟಿ, ಜೆ.ಜೆ. ಆಚಾರ, ಬಸವ ಸಮಿತಿಯ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್, ಪ್ರಮುಖರಾದ ಎಂ.ಎಂ. ಮಹಾಲಿಂಗಪುರ, ಜೆ. ಶರಣಪ್ಪ ಕಡೇಕೊಪ್ಪ, ಜೆ.ಡಿ. ಪಾಟೀಲ, ಸಿದ್ರಾಮಪ್ಪ ವಂದಾಲಿ, ಸಂಗನಗೌಡ, ಕಳಕಪ್ಪ ರಡ್ಡೇರ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *