ಮುರುಘಾ ಮಠದಲ್ಲಿ ಅಲ್ಲಮಪ್ರಭುದೇವರ ಶರಣೋತ್ಸವ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ

ಆಧ್ಯಾತ್ಮಿಕ ಪರಂಪರೆಯಲ್ಲಿ ಅಲ್ಲಮಪ್ರಭು ಅವರನ್ನು ತಾತ್ವಿಕವಾಗಿ ಸರಿಗಟ್ಟಲು ಸಾಧ್ಯವಿಲ್ಲವೇನೋ ಎಂಬ ಪ್ರಶ್ನೆ ಶಿಶುನಾಳ ಶರೀಫರದಾಗಿದೆ. ಅವರಿಗೆ ಅವರೇ ಸಾಟಿ ಎನ್ನುವಂತಹ ಆಧ್ಯಾತ್ಮಿಕ ಪರುಷ ಅವರು. ಅಂತಹ ಪ್ರಚಂಡ ಶಕ್ತಿ ಅನುಭವ ಮಂಟಪದ ಅಧ್ಯಕ್ಷರಾಗಿದ್ದು ಒಂದು ವಿಸ್ಮಯ. ಅಂದಿನ ಆ ಸಂಸತ್ತನ್ನು ಮುನ್ನಡೆಸಿದ ಪರಿಯೇ ರೋಮಾಂಚನಕಾರಿ ಎಂದು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆ ಎಂ ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಅವರು ಭಾನುವಾರ ಸಂಜೆ ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶೂನ್ಯಪೀಠ ಪರಂಪರೆಯ ಪ್ರಥಮಾಧ್ಯಕ್ಷರಾದ ಅಲ್ಲಮಪ್ರಭುದೇವರ ಜಯಂತಿ (ಶರಣೋತ್ಸವ) ಹಾಗೂ ನೂತನ ವರ್ಷಾರಂಭ ಸಮಾರಂಭ ಶ್ರೀಮಠದ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಕರ್ತೃವಿನ ಸನ್ನಿಧಾನಲ್ಲಿ ಏರ್ಪಡಿಸಲಾಗಿದ್ದ
ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡುತ್ತಾ, ಈ ನಾಡಿನಲ್ಲಿ ಅಲ್ಲಮರ ವಚನಗಳಿಗೆ ನಿರ್ವಚನ ಮಾಡಿದವರನ್ನು ನಾನು ಕಂಡಿಲ್ಲ. ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳವರಿಂದ ಒಂದೆರಡು ಕೃತಿಗಳು ಬಂದದ್ದು ಬಿಟ್ಟರೆ ಪರಿಪೂರ್ಣವಾದ ಸಾರವತ್ತಾದ ವಚನ-ನಿರ್ವಚನ ಕೃತಿಗಳು ಬಂದಿಲ್ಲ.

ಮಾತಿಗೆ ಜ್ಯೋತಿರ್ಲಿಂಗ ಅಂದವರು ಪ್ರಭುದೇವರು ಶಬ್ದದೆಂಜಲು ಅನ್ನುವ ಪದ ಕಂಡುಹಿಡಿದವರು ಅದಕ್ಕೆ ಅವರೇ ಹೇಳುವಂತೆ ಶಬ್ದದಲ್ಲಿ ನಿಶ್ಯಬ್ದವಿಲ್ಲದೆ ಹೋದಾಗ ಅದು ಶಬ್ದದೆಂಜಲು ಎಂದು ವ್ಯಾಖ್ಯಾನಿಸಿದ್ದಾರೆ.

ಶೂನ್ಯ-ಸಂಪಾದನೆ ಆಗಬೇಕು ಆದರೆ ಸಂಪಾದನೆ ಶೂನ್ಯವಾಗಿರಬಾರದು ಎಂದು ಲಿಂಗೈಕ್ಯ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳವರು ವಿದ್ವಾಂಸರೊಬ್ಬರಿಗೆ ಹೇಳಿದ ಮಾತನ್ನು ನೆನಪಿಸಿದ ಶ್ರೀಗಳವರು ಶೂನ್ಯಪೀಠ ಪರಂಪರೆಯು ಬೌದ್ಧಿಕತೆಗೆ ಒತ್ತು ಕೊಟ್ಟಿದ್ದನ್ನು ನಾವು ಕಾಣಬಹುದಾಗಿದೆ ಅಲ್ಲಿ ದ್ವೇಷ, ಅಸೂಯೆ ಗುಣಕ್ಕಿಂತ ಜೀವನ ಮೌಲ್ಯವನ್ನು ಬಸವಾದಿ ಶರಣರು ಅನುಭವ ಮಂಟಪದ ಮೂಲಕ ನಮಗೆ ಬಿಟ್ಟು ಹೋಗಿದ್ದಾರೆ.

ಅಂತಹ ಪೀಠ ಪರಂಪರೆಯಲ್ಲಿ ಸಾಗಿ ಬಂದ ಮುರುಘಾಮಠದ ಮೂಲಕ ಸಾಗಿ ಬಂದ ಮಹಾಸ್ವಾಮಿಗಳವರೆಲ್ಲರೂ ಸಮಾಜ ಸೇವೆಯೇ ಪರಮ ಗುರಿ ಎಂದು ನಡೆದ ಮಾರ್ಗವನ್ನು ನಾವು ಅನುಸರಿಸಿ ನಡೆಯಬೇಕಾಗುತ್ತದೆ ಎಂದು ನುಡಿದರು. ಜೀವನದಲ್ಲಿ ಬರುವ ಸಿಹಿ ಕಹಿ ಅನುಭವವನ್ನು ಬೇವು ಬೆಲ್ಲಕ್ಕೆ ಹೋಲಿಸಿ ಪ್ರಕೃತಿ ಸಹಜ ನಡೆಯನ್ನು ಹಿಂದಿನವರು ನಮಗೆ ಕಲಿಸಿಕೊಟ್ಟಿದ್ದಾರೆ ಎಂದು ನುಡಿದರು.

ಸಮಾರಂಭದ ಸಮ್ಮುಖ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಮಹಾಸ್ವಾಮಿಗಳವರು ಅಲ್ಲಮರದು ಅನುಭವ ಮಾರ್ಗ ನಡೆ ಆಧ್ಯಾತ್ಮಿಕದ ಮೌಂಟ್ ಎವರೆಸ್ಟ್ ಇದ್ದಂತೆ. ಅವರ ರಚನೆಯ ಬೆಡಗಿನ, ಒಗಟಿನಂತಿರುವ ವಚನಗಳು ಸಾಮಾನ್ಯರಿಗೆ ಅರ್ಥವಾಗುವುದೇ ಕಷ್ಟ. ಅಂಥವರ ನೆರಳಿನಲ್ಲಿ ನಾವು ಇರುವುದು ಮತ್ತು ನಡೆಯುತ್ತಿರುವುದು ವೈಶಿಷ್ಟ ಪೂರ್ಣ ಮತ್ತು ನಮ್ಮಗಳ ಸೌಭಾಗ್ಯವೇ ಸರಿ.

ಸಾಮಾಜಿಕ ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ಮನುಷ್ಯರು ಸಾಗಬೇಕಿದೆ ನಮ್ಮ ಪಂಚೇಂದ್ರಿಯಗಳನ್ನು ಶುದ್ಧವಾಗಿಸುವುದೇ ಶ್ರೇಷ್ಠತೆ. ಇವನ್ನ ಪರಿಶುದ್ಧವಾಗಿಟ್ಟುಕೊಂಡು ಅವುಗಳಿಂದ ಆಗುವ ಪರಿಣಾಮವನ್ನು ಪರಿಭಾವಿಸಬೇಕಾಗಿದೆ, ಮನಸನ್ನು ಬೇರೆ ಕಡೆ ಹರಿಯದಂತೆ ಏಕಾಗ್ರಚಿತ್ತದಲ್ಲಿರಿಸಿ ದ್ವಂದ್ವ ನಿಲುವುಗಳನ್ನು ಅನುಸರಿಸದೇ ಒಂದೇ ಮನದಲ್ಲಿ ಇರಿಸುವುದು ಕಷ್ಟವಾದರೂ ಅದನ್ನು ಹಿಡಿತದಲ್ಲಿಟ್ಟುಕೊಳ್ಳುವುದು ನಮ್ಮ ಆದ್ಯತೆಯಾಗಬೇಕೆಂದು ಪ್ರಭುದೇವರ ಮೂರ್ನಾಲ್ಕು ವಚನಗಳಿಗೆ ಅರ್ಥ ವಿವರಣೆಯನ್ನು ಸಂಕ್ಷಿಪ್ತವಾಗಿ ನೀಡುವ ಮೂಲಕ ಶ್ರೀಗಳು ಚಿಂತನೆಗೆ ಇಂಬು ನೀಡಿದರು.

ಗುರುಮಠಕಲ್ ಖಾಸಮಠದ ಶ್ರೀಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮಿಗಳವರು ಸಮಾರಂಭದ ಸಮ್ಮುಖ ನುಡಿಗಳನ್ನಾಡುತ್ತಾ, ನಮ್ಮಲ್ಲಿ ಬರುವ ಯುಗಾದಿ ಮತ್ತು ಸಂಕ್ರಾಂತಿ ಹಬ್ಬಗಳು ಯಾವುದೇ ದೈವಾರಾಧನೆ ಇಲ್ಲದೆ ನೇರವಾಗಿ ರೈತ ಮತ್ತು ಪ್ರಕೃತಿ ನಡುವೆ ನಡೆಯುವ ಪರಿವರ್ತನೆಯ ವಿಶಿಷ್ಟದ ಆಚರಣೆಗಳು.

ಪ್ರಕೃತಿಯಲ್ಲಾಗುವ ಹೊಸತನ ಮನುಷ್ಯರ ಜೀವನದಲ್ಲಿಯೂ ಆಗಬೇಕೆಂಬುದು ನಮ್ಮ ಪೂರ್ವಿಕರ ಆಶಯ. ಅದರಂತೆ ಸದಾ ಹೊಸತನ್ನು ಕಲಿಯುತ್ತಾ ಅದಕ್ಕೆ ಹೊಂದಿಕೊಳ್ಳುವ ಮೂಲಕ ಆರೋಗ್ಯಪೂರ್ಣ ಸಮಾಜಕ್ಕೆ ಅವರು ನಾಂದಿ ಹಾಡಿದ್ದಾರೆ. ಅಕ್ಕ, ಅಲ್ಲಮರು ಈ ನಾಡಿನ ದೊಡ್ಡ ಆಧ್ಯಾತ್ಮ ಜೀವಿಗಳು. ಮಲೆನಾಡಿನ ಶಿವಮೊಗ್ಗದಿಂದ ಕಲ್ಯಾಣದವರೆಗೆ ಇಬ್ಬರು ಸಾಗಿ ಅಲ್ಲಿ ಮಹಾನ್ ಸಾಧನೆಯನ್ನು ಮಾಡಿ, ಜೀವನ ಮೌಲ್ಯಗಳನ್ನು ನೀಡಿ ಕೊನೆಯಲ್ಲಿ ಶ್ರೀಶೈಲದಲ್ಲಿ ಇಬ್ಬರು ಬಯಲಾದದ್ದು ಕುತೂಹಲಕಾರಿ ಎಂದು ಸ್ಮರಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಚಿತ್ರದುರ್ಗದ ಹಿರಿಯ ಪತ್ರಕರ್ತರು, ಕಥೆಗಾರರು, ಕವಿಗಳು, ಸಂಗೀತಗಾರರು ಆದ ಜಿ. ಎಸ್. ಉಜ್ಜನಪ್ಪ ಮಾತನಾಡಿ ನಾವು ನಾಳೆ ಎಂಬ ಚಿಂತೆ ಇಲ್ಲದ ನಿರ್ಲಿಪ್ತ ಜೀವನ ಸಾಗಿಸುವುದರ ಮೂಲಕ ಇವತ್ತಿನ ಜೀವನವೇ ಮುಖ್ಯ ಎನ್ನುವ ಪರಿಕಲ್ಪನೆಯ ಮೌಲ್ಯ ಪ್ರತಿಪಾದನೆಯನ್ನು ನೀಡಿದವರು ನಮ್ಮ 12ನೇ ಶತಮಾನದ ಬಸವಾದಿ ಶಿವಶರಣರು. ಅನುಭವ ಮಂಟಪದಲ್ಲಿ ಲೌಕಿಕತೆಗೆ ಅಷ್ಟಾಗಿ ಗಮನ ಹರಿಸದೆ ಪಾರಮಾರ್ಥಿಕ ಜೀವನಕ್ಕೆ ಅವರು ಏನು ಬೇಕೋ ಎಲ್ಲವನ್ನು ನೀಡಿ ಹೋಗಿದ್ದಾರೆ. ಇಂದಿನ ಆಧುನಿಕ ಪ್ರಪಂಚಕ್ಕೆ ಅದು ರಾಜಮಾರ್ಗ ಎಂದು ಎಂದು ವಿಶ್ಲೇಷಿಸಿದರು.

ಕವಿ ಮತ್ತು ಸಾಹಿತಿಯೂ ಆದ ಎಚ್. ಆನಂದಕುಮಾರ್ ಚಿತ್ರದುರ್ಗ ಮತ್ತು ಮುರುಘಾ ಪರಂಪರೆಯ ಮೇಲೆ ಬೆಳಕು ಚೆಲ್ಲುವಂತ ಸ್ಮರಣೀಯ ಮಾತುಗಳನ್ನಾಡಿದರು.

ಸಮಾರಂಭದಲ್ಲಿ ಸಮಾಜದ ಗಣ್ಯರುಗಳಾದ ಎಸ್. ಷಣ್ಮುಖಪ್ಪ, ಕೆ.ಎಂ. ವೀರೇಶ್, ಡಿ.ಎಸ್. ಸುರೇಶಬಾಬು, ಕಣಿವೆ ಮಾರಮ್ಮ ತಿಪ್ಪೇಸ್ವಾಮಿ, ರುದ್ರಮುನಿ, ಆನಂದ, ವಿನಯ, ನವೀನ ಸಜ್ಜನ್, ಪತ್ರಕರ್ತ ಮಾಲತೇಶ ಅರಸ್, ರವಿ ಅಂಬೇಕರ್, ಸೇರಿದಂತೆ ಎಸ್ ಜೆ ಎಂ ವಿದ್ಯಾಪೀಠದ ಶಾಲಾ ಕಾಲೇಜಿನ ಪ್ರಾಂಶುಪಾಲರು ಸಿಬ್ಬಂದಿ ವರ್ಗ ಹಾಗೂ ನಗರದ ಗಣ್ಯರು ಸೇರಿದಂತೆ, ವಿವಿಧ ಸಮಾಜಗಳ ಮುಖಂಡರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ನೂತನ ವರ್ಷಾರಂಭದ ಸಮಾರಂಭಕ್ಕೆ ಜಮುರಾ ಕಲಾವಿದರಾದ ತೋಟಪ್ಪ ಉತ್ತಂಗಿ, ಉಮೇಶ ಪತ್ತಾರ, ಶಶಿಕಲ ಬಸವರಾಜ, ಕರಿಬಸಪ್ಪ ಅವರು ಸುಶ್ರಾವ್ಯ ವಚನ ಗಾಯನ, ಭಾವಗೀತೆ ಹಾಡಿ ಸಮಾರಂಭ ಕಳೆಗಟ್ಟಿಸಿದರು.

ಡಾ. ನವೀನ ಮಸ್ಕಲ್ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭ ಎಸ್.ಜೆ.ಎಂ. ನರ್ಸಿಂಗ್ ಕಾಲೇಜಿನ ಸಹಯೋಗದಲ್ಲಿ ನಡೆಯಿತು. ಆ ಕಾಲೇಜಿನ ಎನ್. ಬಸವರಾಜ್ ಸ್ವಾಗತಿಸಿದರು. ಮೌನೇಶ ಎಂ. ಶರಣು ಸಮರ್ಪಣೆ ಮಾಡಿದರು. ಬಂದ ಎಲ್ಲರಿಗೂ ಬೇವು ಬೆಲ್ಲ, ಕೋಸಂಬರಿ ಹಾಗೂ ಪಾನಕ ವಿತರಿಸಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FEOgQepEXSP8R5OtHvcD7O

Share This Article
Leave a comment

Leave a Reply

Your email address will not be published. Required fields are marked *