ಬೆಳಗಾವಿಯಲ್ಲಿ ‘ಮಿಥ್ಯ ಸತ್ಯ’ ಲೋಕಾರ್ಪಣೆ; ಲಿಂಗಾಯತರೆಲ್ಲ ಒಂದಾಗಲು ಕರೆ

ಬಸವ ಮೀಡಿಯಾ
ಬಸವ ಮೀಡಿಯಾ

‘ಉಪಜಾತಿ, ಒಳಪಂಗಡಗಳ ರಾಜಕಾರಣದಿಂದಾಗಿ ಲಿಂಗಾಯತರೆಲ್ಲ ದಿಕ್ಕಾಪಾಲಾಗಿದ್ದಾರೆ, ಮಠಗಳಲ್ಲಿ ಹರಿದು ಹಂಚಿಹೋಗಿರುವವರನ್ನು ಒಗ್ಗೂಡಿಸಬೇಕಿದೆ.’

ಬೆಳಗಾವಿ

ಒಳಪಂಗಡಗಳ ಜಗಳ ಬಿಟ್ಟು ಲಿಂಗಾಯಿತರೆಲ್ಲ ಒಂದಾಗಬೇಕು ಮತ್ತು ಲಿಂಗಾಯತರ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ಹಿಮ್ಮೆಟ್ಟಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಎಂ. ಜಾಮದಾರ ಹೇಳಿದರು.

ಅವರಿಂದು ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ರಾಷ್ಟ್ರೀಯ ಬಸವದಳ, ಲಿಂಗಾಯತ ಸಂಘಟನೆ ಮತ್ತು ಬಸವಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ “ವಚನದರ್ಶನ ಮಿಥ್ಯ VS ಸತ್ಯ” ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಲಿಂಗಾಯತರನ್ನು ವೈದಿಕ ಶೈವರೆಂದು ಬಿಂಬಿಸುವ ಪ್ರಯತ್ನ ನಡೆದಿದೆ, ಲಿಂಗಾಯತ ತತ್ವಗಳಿಗೆ ವಿರೋಧವಾದ ವಿಷಯಗಳನ್ನು ಪ್ರಚಾರ ಮಾಡಲಾಗುತ್ತಿದೆ, ಬಸವಾದಿ ಶರಣರ ಮತ್ತು ವಚನ ಸಾಹಿತ್ಯದ ಕುರಿತು ನಡೆಯುತ್ತಿರುವ ಅಪಪ್ರಚಾರ ನಿಲ್ಲಬೇಕು. ಉಪಜಾತಿ, ಒಳಪಂಗಡಗಳ ರಾಜಕಾರಣದಿಂದಾಗಿ ಲಿಂಗಾಯತರೆಲ್ಲ ದಿಕ್ಕಾಪಾಲಾಗಿದ್ದಾರೆ, ಅವರನ್ನೆಲ್ಲ ಒಗ್ಗೂಡಿಸುವ ಕಾರ್ಯ ನಡೆಯಬೇಕಿದೆ. ಎಲ್ಲ ಮಠಗಳಲ್ಲಿ ಹರಿದು ಹಂಚಿಹೋಗಿರುವ ಲಿಂಗಾಯತರನ್ನೆಲ್ಲಾ ಒಗ್ಗೂಡಿಸಬೇಕಿದೆ ಎಂದು ಕರೆ ನೀಡಿದರು.

ರಾಜಕಾರಣಿಗಳ ಬೆನ್ನು ಹತ್ತಿ ಹಾಳಾಗಿದ್ದೆ ಹೆಚ್ಚು ಅವರಿಂದ ಲಿಂಗಾಯತ ಸಮಾಜಕ್ಕೆ ಲಾಭಕ್ಕಿಂತ ಹಾನಿಯೇ ಹೆಚ್ಚಾಗಿದೆ. ರಾಜ್ಯದಲ್ಲಿ ಲಿಂಗಾಯತರ ಸಂಖ್ಯೆ 1.35 ಕೋಟಿ, ಅದರ ಬದಲಾಗಿ ತಪ್ಪು ಮಾಹಿತಿಯನ್ನು ನೀಡಲಾಗುತ್ತಿದೆ, ಮಹಾರಾಷ್ಟ್ರದಲ್ಲಿ 1.25 ಕೋಟಿ ಅದೇ ರೀತಿ ಬೇರೆ ಬೇರೆ ರಾಜ್ಯಗಳಲ್ಲಿ ಕೋಟ್ಯಾಂತರ ಲಿಂಗಾಯತರು ಇದ್ದಾರೆ. ಮತಗಳಿಕೆ ರಾಜಕಾರಣಕ್ಕಾಗಿ ಕಾಂಗ್ರೆಸ್ , ಬಿಜೆಪಿ, ಜೆಡಿಎಸ್ ಪಕ್ಷಗಳಿಂದ ಲಿಂಗಾಯತ ಸಮಾಜ ಛಿದ್ರ ಛಿದ್ರಗೊಂಡಿದೆ, ವಚನಗಳನ್ನು ಭಾರತದ ಪರಂಪರೆಗೆ ವಿರುದ್ಧವೆಂದು ಬಿಂಬಿಸುವ ಪ್ರಯತ್ನ ನಡೆಯಿತು.

ಇಲ್ಲೇ ಹುಟ್ಟಿ ಇಲ್ಲೇ ಬೆಳೆದ ಲಿಂಗಾಯತರಿಗೆ ಬೇರೆಯವರು ರಾಷ್ಟ್ರೀಯತೆಯನ್ನು ಕಲಿಸುವ ಅಗತ್ಯ ಇಲ್ಲ. ಲಿಂಗಾಯತ ಮಠಗಳು ಮತ್ತು ಲಿಂಗಾಯಿತ ಸಂಸ್ಥೆಗಳು ಮಾಡಿದ ಶಿಕ್ಷಣ ದಾಸೋಹದಿಂದಾಗಿ ಇಂದು ಇಡೀ ದೇಶದಲ್ಲಿಯೇ ಅತಿ ಹೆಚ್ಚು ಸುಶಿಕ್ಷಿತರು ಯಾರಾದರೂ ಇದ್ದರೆ ಅದು ಲಿಂಗಾಯಿತರು ಮಾತ್ರ ಎಂದವರು ಹೇಳಿದರು.

ಇತಿಹಾಸವನ್ನು ಓದಿ ತಿಳಿದುಕೊಳ್ಳಬೇಕು, ಲಿಂಗಾಯತರು ಈ ನಾಡಿಗೆ ನೀಡಿದ ಕೊಡುಗೆಯನ್ನು ಅರ್ಥಮಾಡಿಕೊಳ್ಳಬೇಕು, ಅನುಭವ ಮಂಟಪವೇ ಇರಲಿಲ್ಲ ಎಂದವರಿಗೆ ಬಹಳ ಹಿಂದೆಯೇ ಉತ್ತರ ಕೊಟ್ಟು ಆಗಿದೆ. ಲಿಂಗಾಯತರ ವಿರುದ್ಧ, ಲಿಂಗಾಯಿತ ಧರ್ಮದ ವಿರುದ್ಧ , ವಚನ ಸಾಹಿತ್ಯದ ವಿರುದ್ಧ ಬಸವಣ್ಣನವರ ವಿರುದ್ಧ ಮಾಡಲಾಗುತ್ತಿರುವ ಸುಳ್ಳುಗಳ ಪ್ರಚಾರ ನಿಲ್ಲಬೇಕು ಎಂದವರು ಎಚ್ಚರಿಕೆ ನೀಡಿದರು.

ಮುಖ್ಯ ಅತಿಥಿಗಳಾಗಿದ್ದ ವಚನ ಟಿವಿ ಪ್ರಧಾನ ಸಂಪಾದಕ ಪ್ರೊ. ಸಿದ್ದು ಯಾಪಲಪರವಿ ಮಾತನಾಡಿ, ಕೆಲವರು ಅನಗತ್ಯ ಸಮಸ್ಯೆಗಳನ್ನು ಸೃಷ್ಟಿಸಿ ಜಾಗತಿಕ ಲಿಂಗಾಯತ ಮಹಾಸಭೆಯ ಬೆಳವಣಿಗೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ.

ಬದಲಾದ ವಾತಾವರಣಕ್ಕೆ ತಕ್ಕಂತೆ ನಾವು ಕೂಡ ಸಾಮಾಜಿಕ ಜಾಲತಾಣದ ಮೂಲಕ , ಡಿಜಿಟಲ್ ಮಾಧ್ಯಮದ ಮೂಲಕ ಸತ್ಯವನ್ನು ತಿಳಿಸುವ ಕಾರ್ಯ ಮಾಡಬೇಕು, ವಿಚಾರ ಸಂಕಿರಣಗಳು, ಚರ್ಚೆಗಳು ನಡೆಯುವಂತಾಗಬೇಕು. ಅಧಿಕಾರಕ್ಕೆ ಬೆನ್ನು ಹತ್ತದೆ ಈ ಕಾರ್ಯ ಕೈಗೊಳ್ಳುವಂತಾಗಬೇಕು. ಇಷ್ಟಲಿಂಗದ ಮಹತ್ವವನ್ನು ಯುವ ಜನಾಂಗಕ್ಕೆ ತಿಳಿಸಬೇಕು. ಲಿಂಗವನ್ನು ಧರಿಸಿಕೊಳ್ಳಲು ಅದಕ್ಕಿರುವ ನಿಯಮಗಳನ್ನು ಸಡಿಲಿಸಿ ಸರಳೀಕರಣ ಗೊಳಿಸುವಂತಹ ಕಾರ್ಯಕ್ರಮ ಆಗಬೇಕು ಎಂದು ನುಡಿದರು.

ಸಾನಿಧ್ಯ ವಹಿಸಿದ್ದ ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು “ವಚನದರ್ಶನ ಮಿಥ್ಯ VS ಸತ್ಯ” ಗ್ರಂಥ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿ, ವಚನದರ್ಶನ ಗ್ರಂಥದಲ್ಲಿ ಬಸವಾದಿ ಶಿವಶರಣರ ಆಶಯಕ್ಕೆ ವಿರುದ್ಧವಾದ ವಿಚಾರವನ್ನು ಮುದ್ರಿಸಿ, ಪ್ರಚಾರ ಮಾಡಲಾಗಿದೆ, ಜಾತಿ ವ್ಯವಸ್ಥೆಯನ್ನು ಮುಂದುವರೆಸುವ ಪ್ರಯತ್ನ ಮಾಡಲಾಗಿದೆ, ಪುನ: ಪುರೋಹಿತಶಾಹಿ ವ್ಯವಸ್ಥೆಯನ್ನು ಜಾರಿಗೆ ತರುವ ಪ್ರಯತ್ನವನ್ನು ಕೆಲವು ಶಕ್ತಿಗಳು ಮಾಡುತ್ತಿವೆ. ವೈದಿಕ ವಿಚಾರಧಾರೆಗಳನ್ನು ಜಾರಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಬಸವಣ್ಣನವರ ಕ್ರಾಂತಿಯನ್ನು ವಿಫಲಗೊಳಿಸಿದ ವಿಚಾರಧಾರೆಯೇ ಇಲ್ಲಿಯೂ ಕಾರ್ಯನಿರ್ವಹಿಸುತ್ತಿದೆ, ತನ್ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಅದಕ್ಕೆ ನಾವು ವಚನ ದರ್ಶನದಲ್ಲಿ ಇರುವ ದೋಷಗಳನ್ನು ಜನಕ್ಕೆ ತಿಳಿಸುವ ಕಾರ್ಯ ಮಾಡಬೇಕಿದೆ ಅದರ ಅಂಗವಾಗಿಯೇ ಇಂದು ವಚನದರ್ಶನ ಮಿಥ್ಯ ಸತ್ಯ ಗ್ರಂಥವನ್ನು ಲೋಕಾರ್ಪಣೆ ಗೊಳಿಸಲಾಗಿದೆ ಅದರ ಮೂಲಕ ಸತ್ಯವನ್ನು ಸಾಮಾನ್ಯ ಜನತೆಗೆ ತಲುಪಿಸುವ ಕಾರ್ಯ ಆಗಬೇಕಿದೆ ಎಂದರು.

ಹಂದಿಗುಂದ ಸಿದ್ದೇಶ್ವರ ಮಠದ ಶ್ರೀ. ಶಿವಾನಂದ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ವಚನ ದರ್ಶನ ಗ್ರಂಥವೇ ಮಿಥ್ಯ, ಬಸವಣ್ಣನವರ ಲಿಂಗಾಯತ ಧರ್ಮವೇ ಸತ್ಯ, ಈ ಕುರಿತು ಜನರಿಗೆ ತಿಳಿಸುವ ಕಾರ್ಯವಾಗಬೇಕು, ನಾವು ಎಚ್ಚೆತ್ತುಕೊಳ್ಳಬೇಕು ಇಲ್ಲವಾದಲ್ಲಿ ಕಷ್ಟ ತಪ್ಪಿದ್ದಲ್ಲ , ಶರಣ ಪರಂಪರೆಯ ಮಠದ ವಾರಸುದಾರರು ವಿಭೂತಿ ಬಿಟ್ಟು ಹಣೆಗೆ ಕುಂಕುಮ ಹಚ್ಚಿಕೊಂಡು ಓಡಾಡುತ್ತಿದ್ದಾರೆ, ಇದು ಅತ್ಯಂತ ನೋವಿನ ಸಂಗತಿ ಎಂದ ಅವರು ಗುರು ವಿರಕ್ತರು ಒಂದಾಗಬೇಕು ಎಂದರೆ ಅದು ಹೇಗೆ ಸಾಧ್ಯ? ಅವರು ಏನು ಹೇಳುತ್ತಾರೋ ಹೇಳಲಿ ನಮ್ಮ ವಿಚಾರವನ್ನು ನಾವು ಸ್ಪಷ್ಟಪಡಿಸುವುದು ಮುಖ್ಯ ಎಂದು ನುಡಿದ ಅವರು ಇತ್ತೀಚಿಗೆ ಶಂಕರ ಬಿದರಿ ಅವರು ನೀಡಲಾದ ಹೇಳಿಕೆ ಉಲ್ಲೇಖಿಸಿ ನೀವು ವೀರಶೈವರೋ- ಲಿಂಗಾಯಿತರೋ ಸ್ಪಷ್ಟವಾಗಿ ಹೇಳಿ, ವೀರಶೈವರಾದರೆ ಅಲ್ಲಿಯೇ ಇರಿ ಲಿಂಗಾಯತರಾದರೆ ಇಲ್ಲಿಗೆ ಬನ್ನಿ ಎರಡನ್ನು ಏಕಕಾಲಕ್ಕೆ ಹೇಳಬೇಡಿ ಎಂದವರು ಸಲಹೆ ನೀಡಿದರು.

ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಕಾರ್ಯಕ್ರಮದ ನೇತೃತ್ವ ವಹಿಸಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.

ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹುಬ್ಬಳ್ಳಿಯ ಪ್ರೊ. ಕೆ.ಎಸ್. ಕೌಜಲಗಿ ಅವರು ಗ್ರಂಥ ಪರಿಚಯ ಮಾಡಿಕೊಟ್ಟರು. ರಾಷ್ಟ್ರೀಯ ಬಸವದಳ ಬೆಳಗಾವಿ ಅಧ್ಯಕ್ಷ ಅಶೋಕ ಬೆಂಡಿಗೇರಿ, ಬೆಳಗಾವಿ ಲಿಂಗಾಯತ ಸಂಘಟನೆ ಅಧ್ಯಕ್ಷ ಈರಣ್ಣ ದೇಯಣ್ಣವರ, ಲಿಂಗಾಯತ ಮಹಾಸಭೆಯ ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ. ಚಂದ್ರಶೇಖರ ಗುಡಿಸಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಲಿಂಗಾಯತ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್ ಮಳಗಲಿ ಸ್ವಾಗತಿಸಿದರು. ಪ್ರೊ.ಮಂಜುನಾಥ ಶರಣಪ್ಪನವರ ಕಾರ್ಯಕ್ರಮವನ್ನು ನಿರ್ವಹಿಸಿದರು. ಲಿಂಗಾಯತ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ. ಪ್ರೇಮಾ ಅಂಗಡಿ ವಂದಿಸಿದರು. ಶ್ರೀಮತಿ ನೈನಾ ಗಿರಿಗೌಡರ ಮತ್ತು ಸಂಗಡಿಗರಿಂದ ವಚನ ಪ್ರಾರ್ಥನೆ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/CbYKNyyLfPXA0Br4Dli0d8

Share This Article
1 Comment
  • ಲಿಂಗಾಯತರೆಲ್ಲ ಒಂದಾಗುವುದರಿಂದ ಜಾತಿಗಣತಿಯಲ್ಲಿ ಉದ್ಭವಿಸಿರುವ ಸಮಸ್ಯೆಗಳಿಗೂ ಉತ್ತರವಿದೆ. ನಮ್ಮ ಎಲ್ಲಾ ಉಪಪಂಗಡಗಳನ್ನು ಒಂದು ಮಾಡಿ ಎಲ್ಲರನ್ನೂ ಲಿಂಗಾಯತರು ಎಂದೂ ಸಂಭೋದಿಸುವಂತೆ 900 ವರ್ಷಗಳ ನಂತರವೂ ಮಾಡಲು ಸಾಧ್ಯವಾಗಿಲ್ಲ ಎಂದರೆ ನಾವುಗಳು ಬಸವ/ಶರಣ/ಲಿಂಗಾಯತ ಧರ್ಮೀಯರು ಎಂದು ಕರೆದುಕೊಳ್ಳಲು ನಮಗೆ ಯಾವುದೇ ಅರ್ಹತೆಯಿಲ್ಲ. ಇನ್ನಾದರೂ ಬೇರೆ ಎಲ್ಲಾ ಸಮಸ್ಯೆಗಳನ್ನೂ ಬದಿಗೆ ಸರಿಸಿ ಆದ್ಯತೆಯಮೇರೆಗೆ ಈ ಕೆಲಸವನ್ನು ಮಾಡುವ ಯೋಜನೆಗಳನ್ನು ಎಲ್ಲಾ ಬಸವಪರ ಮಠಗಳು, ಮಠಾಧೀಶರುಗಳು ಹಾಗೂ ಬಸವಪರ ಸಂಘಟನೆಗಳು ಮಾಡಬೇಕು.

Leave a Reply

Your email address will not be published. Required fields are marked *