ಇಳಕಲ್
ಇದೇ 29, 30 ರಂದು ಕೂಡಲಸಂಗಮದಲ್ಲಿ ನಡೆಯಲಿರುವ ರಾಜ್ಯಮಟ್ಟದ ಬಸವ ಜಯಂತಿ ಕಾರ್ಯಕ್ರಮದ ನಿಮಿತ್ತ ‘ಅನುಭವ ಮಂಟಪ – ಬಸವಾದಿ ಶರಣರ ವೈಭವ’ ಅಭಿಯಾನ ರಥದ ಮೆರವಣಿಗೆ ಶುಕ್ರವಾರ ನಗರದಲ್ಲಿ ನಡೆಯಿತು.

ಬಸವಣ್ಣನವರ ಪುತ್ಥಳಿಗೆ ಪುಷ್ಪಾರ್ಪಣೆ ಮಾಡಿ, ವಚನ ಸಾಹಿತ್ಯದ ಪುಸ್ತಕ ಹೊತ್ತು ಮೆರವಣಿಗೆಯಲ್ಲಿ ಸಾಗುವ ಮೂಲಕ ಶಾಸಕ ವಿಜಯಾನಂದ ಕಾಶಪ್ಪನವರ ಮೆರವಣಿಗೆಗೆ ಚಾಲನೆ ನೀಡಿದರು.

ಅವರು ಮಾತನಾಡಿ, ‘ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣನವರು ಹಾಗೂ ಇತರ ಶರಣರು ಸಮಾನತೆಗಾಗಿ ಶ್ರಮಿಸಿದರು. ಅವರ ಸಂದೇಶಗಳು ವಚನ ಸಾಹಿತ್ಯದಲ್ಲಿವೆ. ಪ್ರತಿಯೊಬ್ಬರು ವಚನ ಓದಿ, ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ’ ಎಂದರು.



ಸಾನ್ನಿಧ್ಯ ವಹಿಸಿದ್ದ ಗುರು ಮಹಾಂತ ಶ್ರೀಗಳ ನೇತೃತ್ವದಲ್ಲಿ ಬಸವ ಕೇಂದ್ರ, ವಿಜಯ ಮಹಾಂತೇಶ ತರುಣ ಸಂಘ, ಅಕ್ಕನ ಬಳಗ, ಕದಳಿ ವೇದಿಕೆ, ಜಾಗತಿಕ ಲಿಂಗಾಯತ ಮಹಾಸಭಾ ಪದಾಧಿಕಾರಿಗಳು, ಎಸ್.ಜೆ.ಜಿ.ಎಂ. ಐಟಿಐ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಿಬ್ಭಂದಿ, ಮುಖಂಡ ಶರಣಪ್ಪ ಆಮದಿಹಾಳ, ಎಸ್.ಎಚ್. ಮುಚಖಂಡಿ, ತಹಶೀಲ್ದಾರ್ ಸತೀಶ ಕೂಡಲಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ಚಲವಾದಿ, ಸಹಾಯಕ ನಿರ್ದೇಶಕ ಕರ್ಣಕುಮಾರ ಸೇರಿದಂತೆ ನೂರಾರು ಬಸವಾನುಯಾಯಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.