ಹೇ ಬಸವಾ,ಬಸವಾ,ಬಸವಾ
ನೀನಾದೆ ನಮ್ಮೆಲ್ಲರ ದೈವಾ!
ನೀ ಹುಟ್ಟಿದುದು ನಮ್ಮ ನಾಡಿನಲಿ
ಅದು ನಮ್ಮೆಲ್ಲರ ಸುದೈವಾ! ಸುದೈವಾ!!
ಮಾದರಸ ಮಾದಲಾಂಬಿಕೆಯರ ಮಗನಾದೆ,
ಗಂಗಾಂಬಿಕೆ,ನೀಲಾಂಬಿಕೆಯರ ಪತಿಯಾದೆ,
ದೀನ ದಲಿತರ ಪಾಲಿಗೆ ವರವಾದೆ,
ಜಗದೊಳೇಕೈಕ ಭಕ್ತಿ ಭಂಡಾರಿಯಾದೆ!
ಸ್ತ್ರೀ ಕುಲೋದ್ಧಾರಕ್ಕೆಂದೇ ನೀ ಮನೆಯ ತ್ಯಜಿಸಿದೆ,
ಸಂಗಮನಾಥನ ಸಾನಿಧ್ಯದಿ ಶಿಕ್ಷಣವ ಪಡೆದೆ,
ಬಿಜ್ಜಳನ ಭಂಡಾರದ ಒಡೆಯನಾದೆ,
ಕಲ್ಯಾಣವ ಬೆಳಗಿದ ಪರಂಜ್ಯೋತಿಯಾದೆ!
ನಿತ್ಯ ನಿರಂತರ ಕಾಯಕ ಯೋಗಿಯಾದೆ,
ನಿತ್ಯ ತ್ರಿವಿಧ ದಾಸೋಹಿಯಾದೆ,
ಇಷ್ಟಲಿಂಗ ಪೂಜೆಯ ಜನಕನಾದೆ,
‘ಎನಗಿಂತ ಕಿರಿಯರಿಲ್ಲ,ಶಿವಭಕ್ತರಿಗಿಂತ ಹಿರಿಯರಿಲ್ಲೆಂದರುಹಿದೆ”!
ಸಮಾಜ ಸುಧಾರಕನಾಗಿ,ಜನರ ಅಂಧಕಾರದ ಕಣ್ಣು ತೆರೆಸಿದೆ,
ವರ್ಣಾಶ್ರಮದ ವಿರುದ್ಧ ನೀ ಕ್ರಾಂತಿ ಯೋಗಿಯಾದೆ,
ಅನುಭವಗಳನ್ನು ವಚನಗಳ ಮೂಲಕ ಜಗಕೆ ಸಾರಿದೆ,
ಆತ್ಮೋದ್ಧಾರಕ್ಕೆಂದು ಅಷ್ಟಾವರಣಗಳನ್ನು ಅನುಷ್ಠಾನಗೊಳಿಸಿದೆ!
ಬಸವಾ ಬಸವಾ ಎಂಬುದೇ ‘ಲಿಂಗ’!
ಬಸವಾ ಬಸವಾ ಎಂಬುದೇ ‘ಗುರು’!
ಬಸವಾ ಬಸವಾ ಎಂಬುದೇ ‘ಜಂಗಮ’!
ಈ ತ್ರಿವಿಧವ ಕಾಣುವೆ ಶ್ರೀ ಬಸವನಲ್ಲಿಯೇ!
ಕರೆಯುವರು ನಿನ್ನ ವಿಶ್ವಗುರು ಬಸವಣ್ಣನೆಂದು,
ನೀನಾದೆ ಜಗದ ಜ್ಞಾನಜ್ಯೋತಿ ಎಂದೆಂದೂ,
ಜನ ಪೂಜಿಸುವರು ನಿನ್ನ ಮನೆ,ಮನಗಳಲಿ
ಎಂದೆಂದಿಗೂ ಮರೆಯರು ನೀ ಹಾಕಿಕೊಟ್ಟ ವಚನ ಮಾರ್ಗವ!
ಕಲ್ಯಾಣವೆಂಬುದೇ ಬಸವ,ಬಸವನೆಂಬುದೇ ಕಲ್ಯಾಣ,
ಅಂತರಂಗದಲ್ಲಿಯೂ ಕಲ್ಯಾಣ, ಬಹಿರಂಗದಲ್ಲಿಯೂ ಕಲ್ಯಾಣ.
ವಿಶ್ವ ಸಾಂಸ್ಕೃತಿಕ ನಾಯಕ ನನ್ನಪ್ಪ ಬಸವಪ್ಪ!
ಶರಣ ಕುಲಕೋಟಿಗೆಲ್ಲ ಶರಣು ಶರಣು!!