ಬಸವಕಲ್ಯಾಣ
ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ಶಿಕ್ಷಣ ನೀಡುವುದು ತಾಯಂದಿರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ಪಾಲಕರು ಆಸ್ತಿ ಅಂತಸ್ತುಗಳಿಗಿಂತ ಮಕ್ಕಳ ಶಿಕ್ಷಣ ಮತ್ತು ಸಂಸ್ಕಾರದ ಕಡೆ ಹೆಚ್ಚು ಗಮನ ನೀಡಬೇಕು ಮನೆಯೇ ಮಕ್ಕಳ ಸಂಸ್ಕಾರ ಕೇಂದ್ರವಾಗಿದೆ ಎಂದು ಹರಳಯ್ಯ ಗವಿಯ ಪೂಜ್ಯಶ್ರೀ ಡಾ. ಗಂಗಾಂಬಿಕಾ ಅಕ್ಕ ನುಡಿದರು.
ನಗರದ ಪರುಷಕಟ್ಟೆಯಲ್ಲಿ ಅಂತರ್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ನಡೆದ ಬಸವ ಜಯಂತೋತ್ಸವ ಮಕ್ಕಳಲ್ಲಿ ಜ್ಞಾನ ಬಿತ್ತಣಿಕೆಯ ಶುಭ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿಕೊಂಡು ಮಾತನಾಡಿ, ಜ್ಞಾನದ ಬಾಗಿಲು ತೆರೆದಾಗ, ಜ್ಞಾನದ ಸಂಪತ್ತು ಒಳಗೆ ಬಂದಾಗ, ಪರಮಾತ್ಮನ ಅನುಗ್ರಹ ನಮ್ಮ ಮೇಲೆ ಆದಾಗ ಭಾಗ್ಯೋದಯ ದಿನವಾಗಿದೆ. ಮಕ್ಕಳಿಗೆ ವಿವಿಧ ಭಾಷೆ ಕಲಿಸುವುದರಿಂದ ಅವರಲ್ಲಿ ಅದ್ಬುತ್ ಜ್ಞಾನ ಬರುತ್ತದೆ. ಜ್ಞಾನದಿಂದ ಸರ್ವರ ಉದ್ಧಾರ, ಲಿಂಗವಂತರಿಗೆ ಅಕ್ಷರ ಬಿತ್ತಣಿಕೆ ಒಂದು ಶಾಸನವಾಗಿದೆ.

ಬಸವ ಜಯಂತಿಯ ಮಾನವ ಮಂಗಳದ ಅಕ್ಷಯ ತೃತೀಯದಂದು ಆರಂಭಿಸಿ ಅವರಲ್ಲಿ ಪವಿತ್ರ ಅಕ್ಷರಗಳ ಬಿತ್ತಣಿಕೆಯೊಂದಿಗೆ ಜ್ಞಾನದ ಮಹಾದ್ವಾರವನ್ನು ತೆರೆಯುವುದಾಗಿದೆ. ಜ್ಞಾನವೆಂಬ ಭೂಮಿಯಲ್ಲಿ ಬೀಜ ಬಿತ್ತಿ ಮೊಳಕೆಯಾಗಿ ಅಂಕುರಿಸಿ ಮಹಾಜ್ಞಾನ ವೃಕ್ಷವಾಗಿ ಬೆಳೆಯುತಲಿದ್ದಾನೆ. ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು ಅವರನ್ನು ಶ್ರೇಷ್ಠವಾಗಿ ಬೆಳೆಸಿದರೆ ಎಲ್ಲರ ಭವಿಷ್ಯ ಸುರಕ್ಷಿತವಾಗಿ ಸಮಾಜ, ದೇಶ, ಜಗತ್ತು ಶಾಂತಿಮಯವಾಗುತ್ತದೆ. ಇನ್ನು ಸಾಕ್ಷರರಾಗುತ್ತಿರುವ ಶರಣ ಸಂತತಿಗೆ ಅಕ್ಷರಾಭ್ಯಾಸ ಪ್ರಸಾದಿಕರನ್ನಾಗಿ ಮಾಡಿರೆಂದು ಶುಭ ಹಾರೈಸಿದರು.
ಪಾಲಕರು ನಮ್ಮ ಮಕ್ಕಳನ್ನು ಜ್ಞಾನಿಗಳಾಗಿ, ಸುಜ್ಞಾನಿಗಳಾಗಿ, ಮಹಾಜ್ಞಾನಿಗಳಾಗಿ ಕರುಣಿಸು ಬಸವ ಎಂದು ಪ್ರಾರ್ಥಿಸಿದರು. ಮಕ್ಕಳ ಮೇಲೆ ಲಿಂಗೋದಕ ಸಿಂಪಡಿಸಿ ಕೈಗೆ ರುದ್ರಾಕ್ಷಿ ಕಂಕಣ ಕಟ್ಟಿ ಅವರಿಗೆ ಕಿವಿಯಲ್ಲಿ ಮಂತ್ರ ಹೇಳಿ ಪಾಟಿಯ ಮೇಲೆ ಓಂ ಬಸವ ಎಂದು ಬರೆಯಿಸಿ ಅವರಿಗೆ ಅಕ್ಷರಾಬ್ಯಾಸ ಮಾಡಿಸಿದರು.
ಇದಕ್ಕೂ ಮೊದಲು ಶರಣೆಯರಿಂದ ಸಾಮೂಹಿಕವಾಗಿ ಬಸವ ಸ್ತವನ ಸತತಂ ಪಠಣ ನಡೆಯಿತು. ಶಾಸಕ ಶರಣು ಸಲಗರ, ಶ್ರೀ ಬಸವೇಶ್ವರ ದೇವಸ್ಥಾನ ಪಂಚಕಮಿಟಿ ನಿರ್ದೇಶಕ ರೇವಣಪ್ಪಾ ರಾಯವಾಡೆ, ಅಕ್ಕಮಹಾದೇವಿ ಗವಿಯ ಪೂಜ್ಯ ಸತ್ಯಕ್ಕತಾಯಿ, ಲಿಂಗರಾಜ ಶಾಶೆಟ್ಟಿ, ಸಿದ್ದು ಬಿರಾದಾರ, ಶಿವಕುಮಾರ ಅಗ್ರೆ, ಕೃಷ್ಣ ಗೋಣೆ, ಜಯಶ್ರೀ ಬಿರಾದಾರ, ಕವಿತಾ ಮೂಲಗೆ, ಸರಸ್ವತಿ ಬಿರಾದರ, ಗಣಪತಿ ಕಾಸ್ತೆ, ವಿದ್ಯಾವತಿ ಶೇರಿಕಾರ, ಸುಲೋಚನಾ ಗುದಗೆ, ಸವಿತಾ ರಗಟೆ, ಸುಜಾತಾ ತೋಗರಖೇಡೆ, ಸುಮಿತ್ರಾ ದಾವಣಗಾಂವೆ ಸೇರಿದಂತೆ ನೂರಾರು ಮಕ್ಕಳು ಮತ್ತು ಅವರ ಪಾಲಕರು ಭಾಗವಹಿಸಿದ್ದರು. ಉದ್ಯಮಿ ಪರಮೇಶ್ವರ ಬಿರಾದಾರ ಭಕ್ತಿ ದಾಸೋಹಗೈದರು.