ಐತಿಹಾಸಿಕ ‘ಸಾವಿರದ ವಚನ’ ಗಾಯನ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿರುವ ಶಿವಮೊಗ್ಗ

ಬಸವ ಮೀಡಿಯಾ
ಬಸವ ಮೀಡಿಯಾ

ಜಾತ್ಯತೀತ ಉತ್ಸವ; 260 ಅಡಿ ಅಗಲದ ಬೃಹತ್ ವೇದಿಕೆ; 8 ಸಾವಿರಕ್ಕೂ ಹೆಚ್ಚು ಶೋತೃಗಳ ನಿರೀಕ್ಷೆ

ಶಿವಮೊಗ್ಗ

ವಚನ ಚಳುವಳಿಗೆ ಸಂಬಂಧಿಸಿದಂತೆ ಐತಿಹಾಸಿಕ ಸಂಗತಿಗೆ ಶಿವಮೊಗ್ಗ ನಗರ ಸಾಕ್ಷಿಯಾಗಲಿದೆ. ನಗರದ ಅಲ್ಲಮಪ್ರಭು ಬಯಲಿನಲ್ಲಿ ಏಕಕಾಲದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಗಾಯಕರು ಹಾಡಲಿರುವ `ಸಾವಿರದ ವಚನ’ ಕಾರ್ಯಕ್ರಮ ಇದೇ ತಿಂಗಳ 9ರ ಸಂಜೆ 5.30ಕ್ಕೆ ನಡೆಯಲಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಬಸವ ಜಯಂತಿ ಆಚರಣಾ ಸಮಿತಿ ಅಧ್ಯಕ್ಷರಾದ ಮಾಜಿ ಶಾಸಕ ರುದ್ರೇಗೌಡರು ಮಾಹಿತಿ ನೀಡಿ, ಈ ಕಾರ್ಯಕ್ರಮಕ್ಕಾಗಿ ಅಲ್ಲಮ ಬಯಲಿನಲ್ಲಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ವಿವರಿಸಿದರು.

260 ಅಡಿ ಅಗಲ ವೇದಿಕೆ

ಅಲ್ಲಮಪ್ರಭು ಬಯಲಿನಲ್ಲಿ 260 ಅಡಿ ಅಗಲ ಹಾಗೂ 7 ಮೆಟ್ಟಿಲುಗಳ ಬೃಹತ್ ವೇದಿಕೆ ಸಿದ್ಧವಾಗುತ್ತಿದೆ. ಕಾರ್ಯಕ್ರಮಕ್ಕೆ 7-8 ಸಾವಿರಕ್ಕೂ ಹೆಚ್ಚು ಜನ ಬರುವ ನಿರೀಕ್ಷೆಯಿದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಅಂದು ಕಾರ್ಯಕ್ರಮಕ್ಕೆ ಬರುವವರಿಗೆ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿದೆ.

ಸಾಂಸ್ಕೃತಿಕ ನಾಯಕ ಬಸವಣ್ಣನವರ 38 ವಚನಗಳನ್ನು ಸಿ. ಅಶ್ವತ್ ಅವರು 8 ಹಾಡುಗಳ ರೂಪದಲ್ಲಿ `ಕೂಡಲಸಂಗಮ’ ಎಂಬ ಹೆಸರಿನಲ್ಲಿ ಹೊರತಂದಿದ್ದಾರೆ. ವ್ಯಕ್ತಿಯೊಬ್ಬ ಭಕ್ತಿಯ ಶಿಖರ ಏರುವ ರೂಪಕವಾಗಿ “ಕೂಡಲಸಂಗಮ” ದ ವಚನಗಳು ಮೂಡಿ, ಜನಪ್ರಿಯಗೊಂಡಿವೆ ಎಂದರು.

ಈ ಎಲ್ಲಾ ವಚನಗಳೂ ಸಾಂಸ್ಕೃತಿಕವಾಗಿ ಮಹತ್ವ ಉಳ್ಳವೂ ಮತ್ತು ಸದಾ ಗುನುಗುತ್ತಾ ಇರುವ ಗುಣವುಳ್ಳವೂ ಆಗಿರುವಂತವು. ಇಂತಹ ವಿಶಿಷ್ಟ ವಚನಗಳನ್ನು ಒಂದೇ ವೇದಿಕೆಯಲ್ಲಿ ಸಾವಿರ ಕಂಠಗಳು ಹಾಡುವ ಹಾಗೂ ಕೇಳುವುದು ರೋಮಾಂಜನಕಾರಿ ಆಗಲಿದೆ ಎಂದು ಅಭಿಪ್ರಾಯಪಟ್ಟರು.

40ಕ್ಕೂ ಹೆಚ್ಚಿನ ಶರಣರ ತವರು

ಶಿವಮೊಗ್ಗ ಅಲ್ಲಮಪ್ರಭುಗಳು, ಅಕ್ಕಮಹಾದೇವಿ, ಗೊಗ್ಗಯ್ಯ, ಸತ್ಯಕ್ಕ ಮೊದಲಾದ 40ಕ್ಕೂ ಹೆಚ್ಚಿನ ಶರಣರ ತವರಾಗಿದೆ. ಶಿವಮೊಗ್ಗ ನಗರವನ್ನು “ಬಸವ ಜಯಂತಿ ಆಚರಣೆಯ ಜಾಗತಿಕ ಕೇಂದ್ರ”ವನ್ನಾಗಿ ರೂಪಿಸುವ ಮಹತ್ವಾಕಾಂಕ್ಷಿ ಚಿಂತನೆಯನ್ನು ಬಸವ ಜಯಂತಿ ಆಚರಣಾ ಸಮಿತಿ ಹೊಂದಿದೆ ಹಾಗೂ ಅದರ ಫಲವಾಗಿ ಬಸವೋತ್ಸವ ರೂಪುಗೊಳ್ಳುತ್ತಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿದ್ದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ಮಾತನಾಡಿ, ಅಣ್ಣ ಬಸವಣ್ಣನವರ ಹಾಗೂ ಇತರ ಶರಣರತತ್ವಗಳು ಹಿಂದೆಂದಿಗಿಂತಲೂ ಇಂದು ಮನುಕುಲಕ್ಕೆ ಅತ್ಯಗತ್ಯವಾಗಿಬೇಕಾಗಿವೆ. ಆ ನಿಟ್ಟಿನಲ್ಲಿ ಈ ತರಹದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಜಾತ್ಯತೀತ ಉತ್ಸವ

ಬಸವಕೇಂದ್ರದ ಡಾ. ಬಸವ ಮರುಳಸಿದ್ದ ಸ್ವಾಮೀಜಿಯವರು, `ಸಾವಿರದ ವಚನ’ ಕಾರ್ಯಕ್ರಮ ಯಾವುದೋ ಒಂದು ಜಾತಿಗೆ ಸೀಮಿತವಾದ ಉತ್ಸವವಲ್ಲ ಬದಲಿಗೆ ಬಸವತತ್ವ ಆರಾಧಕರ, ಒಪ್ಪುವವರ ಮತ್ತು ಬಯಸುವವಲ್ಲರ ಉತ್ಸವ ಎಂದರು.

ಈ ಕಾರ್ಯಕ್ರಮದಲ್ಲಿ ವಚನಗಳನ್ನು ಹಾಡುವವರಿಗಾಗಿ ಆನ್ಲೈನ್ ಮೂಲಕ ನೋಂದಣಿ ಮಾಡಲು ಕೋರಿಕೊಳ್ಳಲಾಗಿತ್ತು.

ಸಾವಿರದ ಇನ್ನೂರಕ್ಕೂ ಹೆಚ್ಚು ಜನ ಈಗಾಗಲೇ ನೋಂದಣಿ ಮಾಡಿಸಿಕೊಂಡಿದ್ದಾರೆ. ದೂರದ ಊರುಗಳಾದ ಚೆನ್ನೈ, ಬೆಂಗಳೂರು, ಕೊಪ್ಪಳ, ಹುಬ್ಬಳ್ಳಿ, ವಿಜಯಪುರ, ರಾಯಚೂರು, ಬೀರೂರು, ದಾವಣಗೆರೆ, ಶಿರಾಳಕೊಪ್ಪ, ಶಿಕಾರಿಪುರ, ತರೀಕೆರೆ, ಭದ್ರಾವತಿ ಹಾಗೂ ಇನ್ನೂ ಹಲವು ಊರುಗಳಿಂದ ಗಾಯಕರು ಬರುತ್ತಿದ್ದಾರೆ ಎಂದು ವಿವರಿಸಿದರು.

ನುರಿತ ತಂಡ

ಸಿ. ಅಶ್ವಥ್ ಅವರ ರಾಗಸಂಯೋಜನೆಯಲ್ಲಿ ಗಾಯಕರಾಗಿ ಹಾಡಿದ್ದ ಮೈಸೂರಿನ ಜನಾರ್ದನ್ (ಜನ್ನಿ) ಅವರು, ಶಿವಮೊಗ್ಗದವರೇ ಆದ ಕೆ ಯುವರಾಜ್ ರವರು, ಸಿ. ಅಶ್ವಥ್ ಅವರ ಸಹಾಯಕರಾಗಿದ್ದ ಬೆಂಗಳೂರಿನ ಸುದರ್ಶನ್‍, ಚಿಕ್ಕಮಗಳೂರಿನ ಮಲ್ಲಿಗೆ ಸುಧೀರ್ ಕಾರ್ಯಕ್ರಮಕ್ಕೆ ಜೊತೆಯಾಗಿದ್ದಾರೆ. ಶಿವಮೊಗ್ಗದ ಪ್ರಖ್ಯಾತ ಸಂಗೀತ ವಿದ್ವಾಂಸರು ಒಟ್ಟಾಗಿ ತರಬೇತಿ ಹಾಗೂ ಕಾರ್ಯಕ್ರಮದ ಸಾರಥ್ಯವಹಿಸಿದ್ದಾರೆ.

ವಿದ್ವಾನ್ ನಾಗರಾಜ್ ಗುರುಗುಹ, ಜಯಶ್ರೀ ಶ್ರೀಧರ್, ನಾಗರತ್ನ ಟಿ ಜೆ, ಪ್ರಹ್ಲಾದ್ ದೀಕ್ಷಿತ್, ಸುರೇಖಾ ಹೆಗ್ಡೆ, ಮಹೇದ್ರ ಗೋರೆ, ವಿನಯ್ ಯಜ್ಞನಾರಾಯಣ, ಉಮಾ ದಿಲೀಪ್ ಹಾಗೂ ಇನ್ನು ಹಲವು ಸಂಗೀತ ವಿದ್ವಾಂಸರು ಸಾವಿರಾರು ಜನರಿಗೆ ಕಳೆದ ಹತ್ತಾರು ದಿನಗಳಿಂದ ತರಬೇತಿ ನೀಡುತ್ತಿದ್ದಾರೆ ಎಂದರು.

ಬಸವ ಜಯಂತಿ ಆಚರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಜ್ಯೋತಿ ಪ್ರಕಾಶ್, ಸಮಿತಿಯ ಖಜಾಂಚಿಗಳಾದ ಹೆಚ್.ಸಿ. ಯೋಗೀಶ್, ಡಾ. ಧನಂಜಯ ಸರ್ಜಿ, ತಮ್ಮಡಿಹಳ್ಳಿ ನಾಗರಾಜ್, ಮೋಹನ್ ಬಾಳೆಕಾಯಿ, ಸಿದ್ದೇಶ್, ಕಿರಣ್, ಶಂಕರಪ್ಪ, ಸಂತೋಷ್ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಕಾರ್ಯಕ್ರಮದ ವೈಶಿಷ್ಟ್ಯಗಳು:

ಈ ಬೃಹತ್ ಯೋಜನೆ ಬಸವ ಕೇಂದ್ರದ ಡಾ. ಬಸವ ಮರುಳಸಿದ್ದ ಸ್ವಾಮೀಜಿಗಳ ಬಹುದಿನದ ಕನಸು.

  • ವಚನಗಳ ಸಾಂಸ್ಕೃತಿಕ, ತಾತ್ವಿಕ ಮತ್ತು ಸಾಮಾಜಿಕ ಅರ್ಥವನ್ನು ಹೊಸ ತಲೆಮಾರಿಗೆ ಪರಿಚಯಿಸುವ ಮಹತ್ವದ ಪ್ರಯತ್ನ.
  • ಸಾಮೂಹಿಕ ಗಾಯನದ ಮೂಲಕ ಸಾಮರಸ್ಯ, ಸೌಹಾರ್ದತೆ ಹಾಗೂ ಶರಣ ಪರಂಪರೆಯ ಮೌಲ್ಯಗಳ ಪ್ರಭಾವಶಾಲಿ ಪ್ರಚಾರ.
  • ಸ್ಥಳೀಯ ಕಲಾವಿದರು, ವಿದ್ಯಾರ್ಥಿಗಳು ಹಾಗೂ ವಚನಾಸಕ್ತರು ಭಾಗವಹಿಸುವ ಬೃಹತ್ ಸಂಘಟಿತಕಾರ್ಯಕ್ರಮ.
  • ಬಸವತತ್ವದೊಂದಿಗೆ ಸಂಗೀತದ ಸಮನ್ವಯ— ಮನಸ್ಸಿಗೆ ಸ್ಪರ್ಶಿಸುವ ಅನನ್ಯ ಅನುಭವ.
  • ಎಲ್ಲ ಜಾತಿ ವರ್ಗ, ವರ್ಣ, ಧರ್ಮ, ಲಿಂಗ, ಕಾಯಕದ ಸಮಾನತೆ ಇರುವ ವೇದಿಕೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia/

Share This Article
9 Comments
  • ಕಾರ್ಯಕ್ರಮ ಅಯೋಜನೆ ಮಾಡಿದ ತಮ್ಮೆಲ್ಲರಿಗೂ ಅಬಿನಂದನೆಗಳು.ಕಾರ್ಯಕ್ರಮ ಯಶಸ್ವಿಯಾಗಲೆಂದು ಶುಭಹಾರೈಕೆಗಳು

    • ಇಂತಹ ಕಾರ್ಯಕ್ರಮ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಆಯೋಜನೆ ಮಾಡಿದರೆ ಚೆನ್ನಾಗಿರುತ್ತದೆ ಆಯೋಜಿಸಿದ ಎಲ್ಲಾ ಶರಣರಿಗೆ ಅಭಿನಂದನೆಗಳು.ಕಾರ್ಯಕ್ರಮ ಯಶಸ್ವಿಯಾಗಲೆಂದು ಬಸವಾದಿ ಶರಣರಲ್ಲಿ ಪ್ರಾರ್ಥಿಸುವೆ

  • ಇಂತಹ ಐತಿಹಾಸಿಕ ಮಹತ್ವದ ಕಾರ್ಯಕ್ರಮದಿಂದ ಬಸವಣ್ಣನವರ ತತ್ವಸಿದ್ದಾಂತಗಳನ್ನ ವಿಶ್ವಕ್ಕೆ ಮುಟ್ಟಿಸಲು ಉಪಯೋಗವಾಗಿದೆ. ಕಾರ್ಯಕ್ರಮದ ಆಯೋಜಕರು ಮತ್ತು ಬಾಗವಹಿಸುವ ಎಲ್ಲರಿಗೂ ಅನಂತ ಶರಣು

  • ನಾಡಿನ ಎಲ್ಲ ಮೂಲೆ ಮೂಲೆಗಳಲ್ಲಿ ಇಂಥ ಪರಿಪಾಠ ನಮ್ಮ ಜನರಲ್ಲಿ ನಡೆಯಬೇಕು.

  • Very good movement of vachana Priya kudal sangam deva.It is collective vachan songs gives effective to Basava devotees.Go ahead good movement and good development.

  • ಚರಿತ್ರೆಯಲ್ಲಿ ದಾಖಲೆ ಆಗುವ ಸಂಗತಿ. ಇಬ್ಬರೂ ಪೂಜ್ಯರಿಗೆ ಮುಂಗಡ ಅಭಿನಂದನೆಗಳು. ಶಿವಮೊಗ್ಗದ ಮಹಾ ಜನಕ್ಕೆ ಹಬ್ಬವೋ ಹಬ್ಬ.1000×34 ವಚನಗಳು. 34000 ವಚನಗಳು. ದೇಶದ ಉದ್ದಗಲಕ್ಕೆ ಪ್ರಸಾರ,ವಿದೇಶಗಳಿಗೂ ಈ ವಚನಗಳ ರಾಶಿ ಹೋಗುತ್ತದೆ. “ಬಸವ ಪೀಠವೆದ್ದು,ಒಸೆದು ನಾಣ್ಯವು ಹುಟ್ಟಿ,ಬಸವನ ಮುದ್ರೆ ಮೆರೆದಾವೊ/ಧರೆಯವಗೆ ವಶವಾಗದಿಹುದೇ ಸರ್ವಜ್ಞ// “ಹೀಗೆ 400 ವರ್ಷಗಳ ಹಿಂದೆಯೇ ಸರ್ವಜ್ಞ ಹೇಳಿದ್ದು,ಈಗ ನಿಜವಾಗುತ್ತಿದೆ. ಧರೆ ಅವಗೆ ವಶ ಆಗುವುದು ಎಂಬುದು ಆಗ ತಿಳಿಯಲಿಲ್ಲ. ಈಗ ಎಲ್ಲವೂ ಸತ್ಯ ದರ್ಶನ ಆಗುತ್ತಿವೆ. ಬಸವಣ್ಣನವರು,ಅವರ ಸಮಕಾಲೀನ ಶರಣರು ಇಂದಿನ ಅಗತ್ಯ,ಅವಶ್ಯಕತೆ ಆಗಿದ್ದಾರೆ. ವಚನ ಪಚನವಾಗಲಿ. ವಚನವೇ ಗುರು,ವಚನವೇ ಲಿಂಗ,ವಚನವೇ ಜಂಗಮ,ವಚನವೇ ಅರಿವು ಆಚಾರ ಅನುಭಾವ ಆಗುವ ಕಾಲ ಕೂಡಿ ಬಂದಿದೆ. ಶಿವಮೊಗ್ಗದ ಜನರೇ ಧನ್ಯರು. ಪ್ರಥಮ ಶೂನ್ಯಪೀಠದ ಅಧ್ಯಕ್ಷ-ಪ್ರಭುದೇವರು,ವೈರಾಗ್ಯ ನಿಧಿ ಅಕ್ಕ ಮಹಾದೇವಿಯವರು,ಸತ್ಯಕ್ಕ ತಾಯಿ ಇನ್ನೂ ಅನೇಕ ಜನ ಶರಣರು ಶಿವಮೊಗ್ಗದ ಪುಣ್ಯ ನೆಲದಲ್ಲಿ ಹುಟ್ಟಿದವರು. ಅಂಥ ಶಿವಮೊಗ್ಗದ ಮಹಾ ಜನತೆ ಇಂಥದೊಂದು ಕಾರ್ಯಕ್ರಮ ಜರುಗಿಸುತ್ತಿರುವುದು,ಕನ್ನಡ ನಾಡಿನ ಪುಣ್ಯ. ನಿಜವಾದ ಕನ್ನಡದ ಧರ್ಮ ಎಂದರೆ “ಅದು ಶರಣರ ಧರ್ಮ,ವಚನಕಾರರ ಧರ್ಮ,ಬಸವ ಧರ್ಮ,ಲಿಂಗಾಯತರ ಧರ್ಮ. ಶರಣ ಪರಂಪರೆ ಮುಂದುವರಿಸಿದ ಶಿವಮೊಗ್ಗದ ಜನತೆಗೆ ಹೃತ್ಪೂರ್ವಕ ಅಭಿನಂದನೆಗಳು.

Leave a Reply

Your email address will not be published. Required fields are marked *